‘ಪೆದ್ದಿ’ಗೆ ಶುರುವಾಯ್ತು ಸಂಕಷ್ಟ, ಸಂಧಾನದ ಬಳಿಕವೂ ವಿರೋಧ

Peddi movie: ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರ ನಡುವೆ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ. ಲಾಭ ಹಂಚಿಕೆ ವಿಚಾರವಾಗಿ ಪದೇ-ಪದೇ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಮಾಪಕರು, ಪ್ರದರ್ಶಕರು ಲಾಭ ಹಂಚಿಕೆ ಷರತ್ತಿಗೆ ಒಪ್ಪಿಕೊಂಡಿದ್ದರು. ಆದರೆ ಲಾಭ ಹಂಚಿಕೆಯು ‘ಪೆದ್ದಿ’ ಸಿನಿಮಾ ಬಿಡುಗಡೆ ನಂತರ ಎನ್ನಲಾಗಿತ್ತು. ಸರಿ ಎಂದು ಒಪ್ಪಿಕೊಂಡಿದ್ದ ಪ್ರದರ್ಶಕರು ಈಗ ಮತ್ತೆ ತಕರಾರು ತೆಗೆದಿದ್ದಾರೆ.

‘ಪೆದ್ದಿ’ಗೆ ಶುರುವಾಯ್ತು ಸಂಕಷ್ಟ, ಸಂಧಾನದ ಬಳಿಕವೂ ವಿರೋಧ
Peddi Movie

Updated on: May 23, 2026 | 10:40 PM

ತೆಲುಗು ಚಿತ್ರರಂಗದಲ್ಲಿ (Tollywood) ಕಳೆದ ಒಂದೆರಡು ವರ್ಷಗಳಿಂದಲೂ ಸಿನಿಮಾ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರ ನಡುವೆ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ. ಲಾಭ ಹಂಚಿಕೆ ವಿಚಾರವಾಗಿ ಪದೇ-ಪದೇ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತಲೇ ಇವೆ. ಹಲವು ಸುತ್ತುಗಳ ಚರ್ಚೆಗಳು ಸಹ ನಡೆದಿವೆ. ಇತ್ತೀಚೆಗಂತೂ ಕೆಲ ನಿರ್ಮಾಪಕರು, ವಿತರಕರು ಬಹಿರಂಗವಾಗಿ ಏಕವಚನದಲ್ಲಿ ಬೈದಾಡಿಕೊಂಡಿದ್ದೂ ಸಹ ಇದೆ. ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಮಾಪಕರು, ಪ್ರದರ್ಶಕರು ಲಾಭ ಹಂಚಿಕೆ ಷರತ್ತಿಗೆ ಒಪ್ಪಿಕೊಂಡಿದ್ದರು. ಆದರೆ ಲಾಭ ಹಂಚಿಕೆಯು ‘ಪೆದ್ದಿ’ ಸಿನಿಮಾ ಬಿಡುಗಡೆ ನಂತರ ಎನ್ನಲಾಗಿತ್ತು. ಸರಿ ಎಂದು ಒಪ್ಪಿಕೊಂಡಿದ್ದ ಪ್ರದರ್ಶಕರು ಈಗ ಮತ್ತೆ ತಕರಾರು ತೆಗೆದಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಆದರೆ ಇದೀಗ ತೆಲಂಗಾಣ ಸಿನಿಮಾ ಪ್ರದರ್ಶಕರು ಸಿನಿಮಾದ ವಿರುದ್ಧ ನಿಂತಿದ್ದಾರೆ. ‘ಪೆದ್ದಿ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ತೆಲಂಗಾಣದ ಪ್ರದರ್ಶಕರು ವಿರೋಧಿಸಿರುವುದು ಮಾತ್ರವೇ ಅಲ್ಲದೆ, ‘ಪೆದ್ದಿ’ ಸಿನಿಮಾ ಮೂಲಕವೇ ಲಾಭಾಂಶ ಹಂಚಿಕೆ ಪ್ರಾರಂಭವಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ತೆಲಂಗಾಣ ಪ್ರದರ್ಶಕರ ಸಂಘವು ಪತ್ರಿಕಾಗೋಷ್ಠಿ ನಡೆಸಿ, ಏಕ-ಪರದೆ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ದೊಡ್ಡ ಸಿನಿಮಾಗಳ ಟಿಕೆಟ್ ದರಗಳನ್ನು ಹೆಚ್ಚಿಸುವುದಿಲ್ಲ ಎಂದಿದ್ದಾರೆ. ಟಿಕೆಟ್ ದರಗಳನ್ನು ಅತಿಯಾಗಿ ಹೆಚ್ಚಿಸುವುದರಿಂದ ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಸೆಳೆಯಲು ಟಿಕೆಟ್ ದರಗಳನ್ನು ಸಾಮಾನ್ಯ ಮಟ್ಟದಲ್ಲೇ ಇಡಲು ನಿರ್ಧರಿಸಲಾಗಿದ್ದು, ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೂ ಪತ್ರ ಬರೆಯಲಾಗಿದ್ದು, ‘ಪೆದ್ದಿ’ ಸೇರಿದಂತೆ ಯಾವುದೇ ದೊಡ್ಡ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸದಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ

ಈ ವಿವಾದದ ಮುಖ್ಯ ಕಾರಣ ‘ಬಾಡಿಗೆ ಪದ್ಧತಿ’ ಮತ್ತು ‘ಲಾಭ ಹಂಚಿಕೆ ಪದ್ಧತಿ’ ನಡುವಿನ ಸಂಘರ್ಷವಾಗಿದೆ. ಚಿತ್ರಮಂದಿರಗಳ ಮಾಲೀಕರು ಹಳೆಯ ಬಾಡಿಗೆ ಪದ್ಧತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದು, ಮಲ್ಟಿಪ್ಲೆಕ್ಸ್‌ಗಳಂತೆ ತಮಗೂ ಶೇಕಡಾವಾರು ಆದಾಯ ಹಂಚಿಕೆ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮೊದಲ ವಾರದಲ್ಲಿ ಶೇಕಡಾ 60, ಎರಡನೇ ವಾರದಲ್ಲಿ ಶೇಕಡಾ 50 ಮತ್ತು ಆನಂತರ ಶೇಕಡಾ 40 ರಷ್ಟು ಆದಾಯದ ಪಾಲನ್ನು ತಮಗೆ ನೀಡಬೇಕು, ಇಲ್ಲದಿದ್ದರೆ ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಅವರು ಕಟ್ಟುನಿಟ್ಟಾದ ಆದೇಶವನ್ನು ನೀಡಿದ್ದಾರೆ.

ಇತ್ತೀಚೆಗಷ್ಟೇ ತೆಲುಗು ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಮತ್ತು ‘ಪೆದ್ದಿ’ ಚಿತ್ರದ ಬಿಡುಗಡೆಗೆ ಹಾದಿ ಸುಗಮವಾಗಿದೆ ಎಂದು ಹೇಳಲಾಗಿತ್ತು. ಆದರೆ, ಆ ನಂತರ ತೆಲಂಗಾಣ ರಾಜ್ಯ ಚಲನಚಿತ್ರ ಚೇಂಬರ್ ಅಧ್ಯಕ್ಷ ಸುನಿಲ್ ನಾರಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚಿತ್ರರಂಗದೊಳಗಿನ ಭಿನ್ನಾಭಿಪ್ರಾಯಗಳು ಮತ್ತೆ ಬಹಿರಂಗಗೊಂಡಿವೆ. ಪ್ರದರ್ಶಕರು ತಮ್ಮ ಪಟ್ಟು ಸಡಿಲಿಸದ ಕಾರಣ ‘ಪೆದ್ದಿ’ ಚಿತ್ರದ ವಿವಾದವು ಮತ್ತೆ ಮೊದಲಿನ ಸ್ಥಿತಿಗೆ ಬಂದು ತಲುಪಿದೆ.

ತೆಲಂಗಾಣವು ತೆಲುಗು ಚಿತ್ರರಂಗಕ್ಕೆ ಅತ್ಯಂತ ದೊಡ್ಡ ಮಾರ್ಕೆಟ್ ಆಗಿರುವುದರಿಂದ, ಪ್ರದರ್ಶಕರ ಈ ಹಠಾತ್ ನಿರ್ಧಾರವು ‘ಪೆದ್ದಿ’ ಚಿತ್ರದ ಆರಂಭಿಕ ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ. ಆಂಧ್ರಪ್ರದೇಶದಲ್ಲಿ ಚಿತ್ರದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಸಿಕ್ಕಿದ್ದರೂ, ತೆಲಂಗಾಣದಲ್ಲಿ ಹಳೆಯ ದರದಲ್ಲೇ ಟಿಕೆಟ್ ಮಾರಾಟ ಮಾಡಿದರೆ ನಿರ್ಮಾಪಕರಿಗೆ ನಷ್ಟವಾಗಲಿದೆ. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಎದುರಾಗಿರುವ ಈ ಬಿಕ್ಕಟ್ಟನ್ನು ಬಗೆಹರಿಸಲು ಮೆಗಾಸ್ಟಾರ್ ಚಿರಂಜೀವಿ ಅವರು ಮಧ್ಯಸ್ಥಿಕೆ ವಹಿಸುತ್ತಾರೆಯೇ ಎಂಬುದನ್ನು ಇಡೀ ಚಿತ್ರರಂಗ ಕುತೂಹಲದಿಂದ ನೋಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Sat, 23 May 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us