ಬಿಗ್ಬಾಸ್ ಮನೆಯಲ್ಲಿ ಪ್ರೇಮಕತೆಗಳು ಬಹಳ ಮಾಮೂಲು. ಪ್ರತಿ ಸೀಸನ್ನಲ್ಲೂ ಒಂದಲ್ಲ ಒಂದು ಪ್ರೇಮಕತೆ ಇದ್ದೇ ಇರುತ್ತದೆ. ಕೆಲವು ನಿಜಕ್ಕೂ ಪ್ರೇಮವಾಗಿದ್ದರೆ ಇನ್ನು ಕೆಲವೇ ಕೆಲವೇ ದಿನ, ವಾರದ್ದಾಗಿರುತ್ತದೆ. ಚಂದನ್-ನಿವೇದಿತಾ, ದಿವ್ಯಾ-ಅರವಿಂದ್ ಕೆಪಿ ಅವರುಗಳು ಬಿಗ್ಬಾಸ್ ಮನೆಯಲ್ಲಿ ಪ್ರೇಮವಾಗಿ ಅದನ್ನು ಹೊರಗಡೆಯೂ ಮುಂದುವರೆಸಿದರು. ಇನ್ನೂ ಕೆಲವರು ಬಿಗ್ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣ ನಡೆಸಿದವರೇ. ಇದೀಗ ಹೊಸ ಸೀಸನ್ ಪ್ರಾರಂಭ ಆಗಿದ್ದು, ಈ ಸೀಸನ್ನಲ್ಲಿಯೂ ಪ್ರೇಮಕತೆಯೊಂದು ಶುರುವಾಗಿದೆ. ವಿಶೇಷವೆಂದರೆ ಇದು ತ್ರಿಕೋನ ಪ್ರೇಮಕತೆ! ಹಾಗಾಗಿ ಒಬ್ಬರ ಹೃದಯ ಒಡೆಯುವುದಂತೂ ಪಕ್ಕಾ.
ನಾಯಕ ನಟ ಧರ್ಮ ಕೀರ್ತಿರಾಜ್ ಮನೆಯಲ್ಲಿರುವ ಸ್ಮಾರ್ಟ್ ಯುವಕರಲ್ಲಿ ಒಬ್ಬರು. ಕೆಲವು ಸುಂದರ ಯುವತಿಯರು ಸಹ ಬಿಗ್ಬಾಸ್ ಮನೆಯಲ್ಲಿದ್ದಾರೆ. ನಿನ್ನೆ ರಾತ್ರಿ, ಸ್ಪರ್ಧಿಗಳನ್ನೆಲ್ಲ ಪಕ್ಕದ ಕೋಣೆಯಲ್ಲಿ ಕೂರಲು ಸೂಚಿಸಿದ್ದರು ಬಿಗ್ಬಾಸ್. ಈ ವೇಳೆ ಉಗ್ರಂ ಮಂಜು ‘ಟ್ರೂತ್ ಆಂಡ್ ಡೇರ್’ ಆಡಿಸುತ್ತಿದ್ದರು. ಆಗ ಅಕ್ಷತಾ, ತಮಗೆ ಧರ್ಮ ಮೇಲೆ ಕ್ರಶ್ ಆಗಿದೆ ಎಂದರು. ಎಷ್ಟು ಕ್ರಶ್ ಆಗಿದೆ ಎಂದು ಕೇಳಿದಾಗ, ‘ಮಳೆ ಬರುವಾಗ ಧರ್ಮ, ಐಶ್ವರ್ಯಾಗೆ ಕೊಡೆ ಹಿಡಿದಿದ್ದರು, ಅದನ್ನು ನೋಡಿ ನನಗೆ ಸಹಿಸಿಕೊಳ್ಳಲು ಆಗದೆ ಹೊರಟು ಹೊದೆ ಅಷ್ಟು ಕ್ರಶ್ ಆಗಿದೆ’ ಎಂದರು.
ಇದನ್ನೂ ಓದಿ:ಯಾರೂ ಊಹಿಸದ ವ್ಯಕ್ತಿಗೆ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು
ಇದನ್ನು ಕೇಳಿಸಿಕೊಂಡ ಐಶ್ವರ್ಯಾಗೆ ತುಸು ಬೇಜಾರಾಯ್ತು. ಅಕ್ಷತಾಗೆ ಧರ್ಮ ಮೇಲೆ ಕ್ರಶ್ ಇರುವುದು, ತಾನು ಧರ್ಮಗೆ ಹತ್ತಿರವಿದ್ದರೆ ಅಕ್ಷತಾ ಬೇಸರ ಮಾಡಿಕೊಳ್ಳುವುದು ಕೇಳಿ ಸಹಜವಾಗಿಯೇ ತುಸು ಇರುಸು-ಮುರುಸಾಯ್ತು. ಈ ವಿಷಯವನ್ನು ಐಶ್ವರ್ಯಾ, ಲಾಯರ್ ಜಗದೀಶ್ ಬಳಿ ಹೇಳಿಕೊಂಡರು. ತಮಗೆ ಈ ವಿಷಯ ಗೊತ್ತೇ ಇರಲಿಲ್ಲ. ನಾನು ಧರ್ಮ ಜೊತೆ ಹತ್ತಿರ ಇರುವುದು ಅಕ್ಷತಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವಳಿಗೆ ಕ್ರಶ್ ಇರುವ ವಿಷಯವನ್ನು ಆಕೆ ನನ್ನ ಬಳಿ ಹೇಳಿಕೊಂಡಿಲ್ಲ ಎಂದಿದ್ದಾರೆ. ಇಲ್ಲಿ, ಅಕ್ಷತಾಗೆ ಧರ್ಮ ಮೇಲೆ ಕ್ರಶ್ ಇದೆ. ಆದರೆ ಧರ್ಮ, ಐಶ್ವರ್ಯಾಗೆ ಹತ್ತಿರವಾಗಿದ್ದಾರೆ. ಇದು ಅಕ್ಷತಾಗೆ ಇಷ್ಟವಾಗುತ್ತಿಲ್ಲ. ಈ ತ್ರಿಕೋನ ಪ್ರೇಮಕತೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡಬೇಕಿದೆ.
ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಅವರು ಈ ವಿಷಯವನ್ನು ಚರ್ಚೆ ಮಾಡಲಿಲ್ಲ. ಬಹುತೇಕ ಗಂಭೀರವಾದ ವಿಚಾರಗಳನ್ನೇ ಸುದೀಪ್ ಮಾತನಾಡಿದರು. ಆದರೆ ಭಾನುವಾರದ ಎಪಿಸೋಡ್ನಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಭಾನುವಾರದ ಎಪಿಸೋಡ್ ಅನ್ನು ಸಾಮಾನ್ಯವಾಗಿ ಹಾಸ್ಯಮಯವಾಗಿಸುತ್ತಾರೆ ಸುದೀಪ್. ಹಾಗಾಗಿ ಭಾನುವಾರ ಅಕ್ಷತಾ-ಧರ್ಮ ಹಾಗೂ ಐಶ್ವರ್ಯಾರ ವಿಚಾರ ಚರ್ಚೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ