ಬಿಗ್​​ಬಾಸ್ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ, ಪಾಠ ಕಲಿಸಿದ ಬೆಂಗಳೂರು ಪೊಲೀಸರು

Bigg Boss Kannada house: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭಕ್ಕೆ ಕೆಲವು ಗಂಟೆಗಳಷ್ಟೆ ಬಾಕಿ ಇದೆ. ಹೀಗಿರುವಾಗ ಬಿಗ್​​ಬಾಸ್ ಮನೆಗೆ ಬಾಂಬ್ ಇಡುವುದಾಗಿ ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ. ನನ್ನನ್ನು ಬಿಗ್​​ಬಾಸ್ ಮನೆಯ ಒಳಗೆ ಕಳಿಸಲಿಲ್ಲವೆಂದರೆ ನಾನು ಬಿಗ್​​ಬಾಸ್ ಮನೆಗೆ ಬಾಂಬ್ ಇಡುತ್ತೇನೆ ಎಂದು ಆ ಯುವಕ ಬೆದರಿಕೆ ಹಾಕಿದ್ದು, ಆತನಿಗೆ ತಕ್ಕ ಪಾಠವನ್ನು ಪೊಲೀಸರು ಕಲಿಸಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ, ಪಾಠ ಕಲಿಸಿದ ಬೆಂಗಳೂರು ಪೊಲೀಸರು
Bigg Boss Kannada 12

Updated on: Sep 27, 2025 | 6:15 PM

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭಕ್ಕೆ ಕೆಲವೇ ಗಂಟೆಗಳಷ್ಟೆ ಬಾಕಿ ಇದೆ. ನಾಳೆ ಅಂದರೆ ಭಾನುವಾರ ಸಂಜೆ 6 ಗಂಟೆಯಿಂದ ಬಿಗ್​​ಬಾಸ್ ಸೀಸನ್ 12 ರಿಯಾಲಿಟಿ ಶೋ ಪ್ರಸಾರ ಆರಂಭ ಆಗಲಿದೆ. 18 ಮಂದಿ ಬಿಗ್​​ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗಲಿದ್ದಾರೆ. ಬಿಗ್​​ಬಾಸ್ ಮನೆಗೆ ಹೋಗಬೇಕು ಎಂಬುದು ಹಲವಾರು ಮಂದಿಯ ಆಸೆ, ಕನಸು, ಆದರೆ ಎಲ್ಲರ ಕನಸು ನನಸಾಗುವುದಿಲ್ಲ. ಆದರೆ ಇಲ್ಲೊಬ್ಬ ನನ್ನನ್ನು ಬಿಗ್​​ಬಾಸ್ ಮನೆಗೆ ಕಳಿಸದಿದ್ದರೆ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿ, ಈಗ ಇಕ್ಕಟ್ಟಿಗೆ ಸಿಲುಕಿದ್ದಾನೆ.

‘ಮಮ್ಮಿ ಅಶೋಕ್19’ ಹೆಸರಿನ ಇನ್​​ಸ್ಟಾಗ್ರಾಂ ಖಾತೆ ಹೊಂದಿರುವ ಅಶೋಕ್ ಹೆಸರಿನ ಯುವಕ, ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ, ‘ನನ್ನನ್ನು ಬಿಗ್​​ಬಾಸ್​​ಗೆ ಕರೆದುಕೊಳ್ಳದಿದ್ದರೆ ಬಿಗ್​​ಬಾಸ್ ಮನೆಗೆ ಬಾಂಬ್ ಇಡುತ್ತೀನಿ’ ಎಂದು ಆತ ವಿಡಿಯೋನಲ್ಲಿ ಹೇಳಿದ್ದ. ಬಿಗ್​​ಬಾಸ್ ಮನೆಯ ಮುಂದೆಯೇ ಈ ವಿಡಿಯೋವನ್ನು ಆತ ಮಾಡಿದ್ದಾನೆ ಎನ್ನಲಾಗಿತ್ತು. ಯುವಕನ ವಿಡಿಯೋವನ್ನು ಪೊಲೀಸರು ಗಮನಿಸಿದ್ದು, ಯುವಕನಿಗೆ ತಕ್ಕ ಪಾಠ ಕಲಿಸಿದ್ದಾರೆ.

ವಿಡಿಯೋ ಗಮನಿಸಿದ ಕುಂಬಳಗೋಡು ಸಾಮಾಜಿಕ ಜಾಲತಾಣದ ಸಿಬ್ಬಂದಿ, ಯುವಕನ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ ಯುವಕನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಸೂಕ್ತ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಸ್ತುತ ಎನ್​​ಸಿಆರ್ ಮಾತ್ರವೇ ದಾಖಲಿಸಲಾಗಿದ್ದು, ಎಚ್ಚರಿಕೆಯನ್ನಷ್ಟೆ ನೀಡಿ ಕಳಿಸಲಾಗಿದೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ ಸೀಸನ್ 12: ಈ ಬಾರಿಯ ಮನೆ ಹೀಗಿದೆ ನೋಡಿ

ಯುವಕ, ವಿಡಿಯೋ ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿರುವ ಬೆಂಗಳೂರು ಪೊಲೀಸರು, ‘ಆನ್‌ಲೈನ್‌ನಲ್ಲಿ ಮಾಡಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟೈಪ್ ಮಾಡುವ ಮೊದಲು ಯೋಚಿಸಿ — ಏಕೆಂದರೆ ನಿಮ್ಮ ಪೋಸ್ಟ್‌ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ದರ್ಶನ್ ಪ್ರಕರಣದ ಸಂದರ್ಭದಲ್ಲಿಯೂ ಸಹ ಸಹ ಆನ್​​ಲೈನ್​​​ನಲ್ಲಿ ಬೆದರಿಕೆ ಹಾಕಿದ, ಸುಳ್ಳು ಮಾಹಿತಿಗಳನ್ನು ಹಂಚಿಕೆ ಮಾಡಿದ, ಗಲಾಟೆಗೆ ಪ್ರೇರಣೆ ನೀಡಿದ ಹಲವರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದರು ಪೊಲೀಸರು. ಈಗ ಬಿಗ್​​ಬಾಸ್​​ಗೆ ಬಾಂಬ್ ಇಡಲು ಮುಂದಾದ ವ್ಯಕ್ತಿಗೂ ಸಹ ಪೊಲೀಸರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ಆತ ಮಾಡಿದ್ದ ವಿಡಿಯೋಗೆ ಪೊಲೀಸರು ಕೆಲ ಮೀಮ್​​ಗಳನ್ನು ಸೇರಿಸಿ ಹಂಚಿಕೊಂಡಿರುವುದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:11 pm, Sat, 27 September 25

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us