ಎದುರು ಬದುರಾದ ಗೆಳತಿಯರು: ಹಣಕ್ಕೆ ಗೆಳತಿಗೆ ಕೈಕೊಟ್ಟರಾ ಕಾರ್ತಿಕ್?

Bigg Boss: ಸಂಗೀತಾಗೆ ಬಿಗ್​ಮಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಬಿಟ್ಟರೆ, ತನಿಷಾ ಒಬ್ಬರೇ ಗೆಳತಿ, ಕಾರ್ತಿಕ್ ಸಹ ಬಹುತೇಕ ದೂರಾಗಿದ್ದಾರೆ. ಈಗ ತನಿಷಾ ಸಹ ಸಂಗೀತಾಗೆ ಎದುರಾಳಿಯಾಗದ್ದಾರೆ.

ಎದುರು ಬದುರಾದ ಗೆಳತಿಯರು: ಹಣಕ್ಕೆ ಗೆಳತಿಗೆ ಕೈಕೊಟ್ಟರಾ ಕಾರ್ತಿಕ್?
ಬಿಗ್​ಬಾಸ್

Updated on: Dec 19, 2023 | 11:25 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಪ್ರಾರಂಭವಾಗಿ 70ಕ್ಕೂ ಹೆಚ್ಚು ದಿನಗಳಾಗಿವೆ. ಬಿಗ್​ಬಾಸ್ ಮನೆಯ ಸದಸ್ಯರ ನಡುವೆ ಗೆಳೆತನದ ಜೊತೆಗೆ ದ್ವೇಷವೂ ಗಾಢವಾಗಿದೆ. ಸಂಗೀತಾ ವಾರಗಳು ಕಳೆದಂತೆ ತಮ್ಮ ಗೆಳೆಯರನ್ನು ಕಳೆದುಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಹಲವು ಗೆಳೆಯರನ್ನು ಹೊಂದಿದ್ದ ಸಂಗೀತಾಗೆ ಈಗ ಡ್ರೋನ್ ಪ್ರತಾಪ್ ಒಬ್ಬರೇ ಗೆಳೆಯರಾಗಿದ್ದಾರೆ. ತನಿಷಾ ಸಹ ಸಂಗೀತಾಗೆ ಗೆಳೆಯರಾಗಿದ್ದರು, ಆದರೆ ಈ ವಾರ ಪೂರ್ತಿ ತನಿಷಾ, ಸಂಗೀತಾಗೆ ಎದುರಾಳಿಯಾಗಿದ್ದಾರೆ.

ನಾಮಿನೇಷನ್ ಪ್ರಕ್ರಿಯೆ ಬಳಿಕ ಈ ವಾರದ ಟಾಸ್ಕ್​ಗಳಿಗೆ ಬಿಗ್​ಬಾಸ್ ಆರಂಭ ನೀಡಿದರು. ತನಿಷಾ ಹಾಗೂ ಸಂಗೀತಾ ಅವರ ತಂಡಗಳನ್ನು ರಚಿಸಿ, ತಮ್ಮ ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದರು. ಇಬ್ಬರಿಗೂ 11 ಸಾವಿರ ರೂಪಾಯಿ ಹಣ ನೀಡಿ, ಪ್ರತಿ ಆಟಗಾರನಿಗೂ ಇಂತಿಷ್ಟೆಂದು ಹಣ ಕೊಟ್ಟು ತಲಾ ನಾಲ್ಕು ಜನರನ್ನು ಖರೀದಿಸಬೇಕು ಎಂದು ಷರತ್ತು ಹಾಕಲಾಯ್ತು.

ಸಂಗೀತಾ, ತಮಗೆ ಆಗದ ವಿನಯ್ ಹಾಗೂ ತುಕಾಲಿ ಅವರುಗಳನ್ನು ಬಿಟ್ಟು ಉಳಿದ ಕೆಲವರನ್ನು ಸಂಪರ್ಕಿಸಿ ತಲಾ ಒಂದು ಸಾವಿರ ರೂಪಾಯಿ ಕೆಲವರಿಗೆ ಇನ್ನೂ ಕಡಿಮೆ ಆಫರ್ ನೀಡಿದರು. ತನಿಷಾ ಸಹ ಅದೇ ಮಾಡಿದರು. ವಿನಯ್ ಅವರು, ತಮ್ಮನ್ನು ಕ್ಯಾಪ್ಟೆನ್ಸಿ ಟಾಸ್ಕ್​ಗೆ ಕಳಿಸುವಷ್ಟು ಹಣವನ್ನು ನೀಡುವುದಾದರೆ ಮಾತ್ರವೇ ಆಡುವುದಾಗಿ ಷರತ್ತು ಇಟ್ಟರು. ಅದಕ್ಕೆ ಒಪ್ಪಿ ಅವರನ್ನು ತಂಡಕ್ಕೆ ತೆಗೆದುಕೊಂಡರು ತನಿಷಾ.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ವಿನ್ನರ್-ರನ್ನರ್ ಅಪ್ ಅಭಿಮಾನಿಗಳ ನಡುವೆ ಗಲಾಟೆ, ಕಾರು, ಬಸ್ಸುಗಳು ಜಖಂ

ಕಾರ್ತಿಕ್ ಮೊದಲಿಗೆ ಸಂಗೀತಾ ಬಳಿ ಬಂದು ಭಾರಿ ಮೊತ್ತಕ್ಕೆ ಡಿಮ್ಯಾಂಡ್ ಮಾಡಿದರು. ಅಷ್ಟೋಂದು ಹಣ ನನ್ನಿಂದ ಕೊಡಲಾಗಲ್ಲ ಎಂದ ಸಂಗೀತಾ ಕೊನೆಗೆ 4000 ರೂಪಾಯಿಗೆ ಫಿಕ್ಸ್ ಮಾಡಿ ಹಣ (ಕಾರ್ಡ್) ಅನ್ನು ಕಾರ್ತಿಕ್​ಗೆ ನೀಡಿದರು. ಬಳಿಕ ತನಿಷಾ, ಕಾರ್ತಿಕ್​ಗೆ ಇನ್ನೂ ಹೆಚ್ಚಿನ ಆಫರ್ ನೀಡಿದರು. ಬಳಿಕ ಕಾರ್ತಿಕ್, ತಾನು ಈಗ ಹಣ ಪಡೆದು, ತನಿಷಾ ತಂಡಕ್ಕೆ ಹೋಗುವುದು ಸರಿಯಾ ಎಂದು ಸಿರಿ ಅವರ ಬಳಿ ಚರ್ಚಿಸಿದರು. ಸಿರಿ ಸಹ ಅದು ಸರಿಯಲ್ಲ ಎಂದೇ ಹೇಳಿದರು. ಆದರೆ ಗೇಮ್ ದೃಷ್ಟಿಯಿಂದ ಯೋಚಿಸುವುದಾದರೆ ಎಲ್ಲವೂ ಸರಿ ಎಂದರು.

ಬಳಿಕ ಕಾರ್ತಿಕ್, ಸಂಗೀತಾ ಬಳಿ ಹೋಗಿ ಮಾತುಕತೆಗೆ ಕೂತರು, ತಮ್ಮ ಹಣ ಮರಳಿಸಲು ಬಂದ ಕಾರ್ತಿಕ್ ಮೇಲೆ ಸಂಗೀತಾ ತುಸು ಅಸಮಾಧಾನದಿಂದ ಮಾತನಾಡಿದರು. ಇದಕ್ಕೇ ಕಾಯುತ್ತಿದ್ದ ಕಾರ್ತಿಕ್, ಹಣವನ್ನು ವಾಪಸ್ ಕೊಟ್ಟು, ತನಿಷಾ ತಂಡಕ್ಕೆ ಹೊರಟರು. ಅಲ್ಲಿಗೆ ತನಿಷಾ ತಂಡದಲ್ಲಿ ಕಾರ್ತಿಕ್, ವಿನಯ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಅವರುಗಳು ಸೇರಕೊಂಡರು.

ಸಂಗೀತಾ ತಂಡಕ್ಕೆ ಅವಿನಾಶ್, ನಮ್ರತಾ, ಮೈಖಲ್, ಡ್ರೋನ್ ಪ್ರತಾಪ್ ಅವರುಗಳು ಸೇರಿಕೊಂಡರು. ಸಿರಿ ಅವರನ್ನು ಎರಡೂ ತಂಡದವರು ಸೇರಿಸಿಕೊಳ್ಳಲಿಲ್ಲ. ಆದರೆ ಮೊದಲ ಟಾಸ್ಕ್​ನಲ್ಲಿ ಸಿರಿ ಅವರಿಗೆ ಆಡುವ ಅವಕಾಶ ನೀಡಲಾಯ್ತು. ಯಾವುದೇ ತಂಡ ಗೆದ್ದರು ಅವರಿಗೆ 3000 ರೂಪಾಯಿ ನೀಡಲಾಗುತ್ತದೆ ಎಂದು ಬಿಗ್​ಬಾಸ್ ಘೋಷಿಸಿದರು. ಸಿರಿ ಅವರು ಒಬ್ಬರೇ ತಂಡವಾಗಿ ಆಡುವ ಅವಕಾಶ ನೀಡಲಾಯ್ತು, ಅವರು ಗೆದ್ದಲ್ಲಿ ಇಡೀ 3000 ಪಾಯಿಂಟ್ಸ್ ಅವರಿಗೆ ನೀಡಲಾಗುತ್ತದೆ ಎಂದು ಬಿಗ್​ಬಾಸ್ ಘೋಷಿಸಿದ್ದಾರೆ. ಈ ವಾರ ತನಿಷಾ ಮತ್ತು ಸಂಗೀತಾ ನಡುವೆ ಯಾರು ಗೆಲ್ಲುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us