ಶೈನ್ ಶೆಟ್ಟಿಯಿಂದಾಗಿ ಬದಲಾದ್ರು ವಿನಯ್, ಸಂಗೀತಾನೂ ಜಾಗೃತೆ

Bigg Boss: ಬಿಗ್​ಬಾಸ್ ಮನೆಯ ಅಗ್ರೆಸ್ಸಿವ್ ಆಟಗಾರ ವಿನಯ್. ಆದರೆ ಅವರು ತಮ್ಮ ವರ್ತನೆ ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಶೈನ್ ಶೆಟ್ಟಿ!

ಶೈನ್ ಶೆಟ್ಟಿಯಿಂದಾಗಿ ಬದಲಾದ್ರು ವಿನಯ್, ಸಂಗೀತಾನೂ ಜಾಗೃತೆ

Updated on: Dec 31, 2023 | 11:53 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಅತ್ಯಂತ ಅಗ್ರೆಸ್ಸಿವ್ ಆಟಗಾರ ವಿನಯ್ ಗೌಡ. ಶೋ ಆರಂಭವಾದಾಗಿನಿಂದಲೂ ವಿನಯ್ ತಮ್ಮ ಅಗ್ರೆಸ್ಸಿವ್ ಆಟದಿಂದ ಗಮನ ಸೆಳೆದಿದ್ದಾರೆ, ಟೀಕೆಗೂ ಗುರಿಯಾಗಿದ್ದಾರೆ. ಕೆಲವರ ಮೇಲಂತೂ ಬಹಳ ಹದ್ದು ಮೀರಿ ವರ್ತಿಸಿದ್ದೂ ಇದೆ. ಆದರೆ ಹಠಾತ್ತನೆ ವಿನಯ್ ತುಸು ಮೃದುವಾದಂತೆ ಕಂಡು ಬಂದರು ವೀಕೆಂಡ್​ ಎಪಿಸೋಡ್​ನಲ್ಲಿ.

ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಸ್ಪರ್ಧಿಗಳಿಂದ ಹಾವು-ಏಣಿ ಆಟ ಆಡಿಸಿದರು. ಪ್ರತಿಯೊಬ್ಬ ಸ್ಪರ್ಧಿಯೂ ಮನೆಯಲ್ಲಿ ತನಗೆ ಬೆಂಬಲವಾಗಿ ನಿಂತು ಏಣಿಯಾದವರ್ಯಾರು? ತಮಗೆ ಅಡ್ಡಗಾಲಾಗಿ ಹಾವಿನಂತೆ ಆಗಿರುವವರು ಯಾರು ಎಂದು ಹೇಳಬೇಕಿತ್ತು. ಸ್ಪರ್ಧಿಗಳು ತಾವು ಯಾರ ಹೆಸರನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಮೊದಲೇ ಊಹಿಸಬಹುದಾಗಿತ್ತು. ಆದರೆ ಈ ಊಹೆಯನ್ನು ಸುಳ್ಳು ಮಾಡಿದರು ವಿನಯ್ ಹಾಗೂ ಸಂಗೀತಾ.

ವಿನಯ್ ಅವರು ಏಣಿಯನ್ನು ನಮ್ರತಾಗೆ ನೀಡಿದರು. ಅವರು ತಮ್ಮನ್ನು ಅರ್ಥ ಮಾಡಿಕೊಂಡು ತನಗೆ ಸ್ಪೂರ್ತಿ ತುಂಬುತ್ತಿದ್ದಾರೆ ಎಂದರು. ಹಾವು, ಸಂಗೀತಾಗೆ ನೀಡಲಿದ್ದಾರೆ ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಆದರೆ ಅದನ್ನು ಅವರು ಕಾರ್ತಿಕ್​ಗೆ ನೀಡಿದರು. ಮಾತ್ರವಲ್ಲದೆ, ಕಾರ್ತಿಕ್ ಬಗ್ಗೆ ಬಹಳ ಮೃದುವಾಗಿ, ಕಾರ್ತಿಕ್ ಅನ್ನು ಹೊಗಳುವ ರೀತಿಯಲ್ಲಿ ಮಾತನಾಡಿದರು. ಇದು ಸ್ವತಃ ಸುದೀಪ್​ಗೆ ಆಶ್ಚರ್ಯ ತಂದಿತು. ಸುದೀಪ್ ಮತ್ತೊಂದು ಅವಕಾಶ ಕೊಟ್ಟರೂ ಸಹ ಕಾರ್ತಿಕ್​ ಬಗ್ಗೆ ನೆಗೆಟಿವ್ ಆಗಿ ಮಾತನಾಡಲಿಲ್ಲ. ಇದು ವಿನಯ್ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ಅನುಮಾನ ಉಂಟಾಗುವಂತಾಯ್ತು. ಅದಾದ ಬಳಿಕ ಸಂಗೀತಾ ಸಹ ವಿನಯ್​ಗೆ ಹಾವು ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು ಆದರೆ ಅವರು ಅದನ್ನು ನೀಡಿದ್ದು ತನಿಷಾಗೆ. ಇದು ಸಹ ಆಶ್ಚರ್ಯಕ್ಕೆ ಕಾರಣವಾಯ್ತು. ತನಿಷಾ ಸಹ ಸಂಗೀತಾಗೆ ಹಾವು ನೀಡಿದ್ದರು.

ಇದನ್ನೂ ಓದಿ:ಬಿಗ್​ಬಾಸ್: ಯಾವ ಸ್ಪರ್ಧಿಗಳಿಗೆ ಬಿತ್ತು ಕಿಚ್ಚ ಸುದೀಪ್​ರ ಮಾತಿನ ಚಾಟಿ ಏಟು

ಈ ಪ್ರಕ್ರಿಯೆ ಮುಗಿದ ಬಳಿಕ ಸಂಗೀತಾ ಹಾಗೂ ವಿನಯ್ ಮಾತನಾಡುತ್ತಾ ಕುಳಿತು, ಹಿಂದಿನ ವಾರ ಆಗಿದ್ದರೆ ಹಾವಿಗೆ ನಾನು ನಿನ್ನ ಹೆಸರು, ನೀನು ನನ್ನ ಹೆಸರು ತೆಗೆದುಕೊಳ್ಳುತ್ತಿದ್ದೆ ಎಂದರು ಸಂಗೀತಾ, ನಿಜ ಎಂದರು ವಿನಯ್. ಆಗ ಅಲ್ಲಿಗೆ ಬಂದ ಮೈಖಲ್, ‘ಮಗಾ ನೀನು ಚುಚ್ಚಿ ಮಾತನಾಡಿದರೇನೇ ಚೆಂದ, ಅದೇ ನಿನ್ನ ಸ್ಟೈಲ್, ಅದನ್ನು ನೋಡಿಯೇ ಜನ ಇಷ್ಟಪಡುತ್ತಾರೆ, ನೀನು ಹಾಗೆಯೇ ಇರಬೇಕು’ ಎಂದರು.

ಆಗ ವಿನಯ್, ಅಗ್ರೆಸ್ಸಿವ್ ಎಲ್ಲ ಬೇಡ ಎಂದರು, ಈ ಬದಲಾವಣೆಗೆ ಕಾರಣವೇನು? ಎಂದು ಕೇಳಿದಾಗ, ಕಳೆದ ಬಂದ ಎಚ್ಚರಿಕೆಗಳು ಇದಕ್ಕೆ ಕಾರಣ ಎಂದರು ವಿನಯ್, ‘ಶೈನ್ ಶೆಟ್ಟಿಗೆ ಅದರ ಕ್ರೆಡಿಟ್ ಹೋಗಬೇಕು’ ಎಂದರು. ಕಳೆದ ವೀಕೆಂಡ್​ನಲ್ಲಿ ಮನೆಗೆ ಬಂದಿದ್ದ ಶೈನ್ ಶೆಟ್ಟಿ, ಪರೋಕ್ಷವಾಗಿ ವಿನಯ್​ಗೆ ಎಚ್ಚರಿಕೆ ನೀಡಿದ್ದರು. ‘ಅಗ್ರೆಸ್ಸಿವ್ ಆಗಿ ಆಡಿದರೆ ಬಹಳ ಕಠಿಣ ಕ್ರಮವನ್ನು ಬಿಗ್​ಬಾಸ್ ತೆಗೆದುಕೊಳ್ಳುತ್ತಾರೆ ಎಚ್ಚರಿಕೆ’ ಎಂದು ಒತ್ತಿ ಒತ್ತಿ ಹೇಳಿದ್ದರು. ಅದೂ ಸಹ ವಿನಯ್​ಗೆ ಖುದ್ದಾಗಿ ಹೇಳಿದ್ದರು. ಹಾಗಾಗಿ ವಿನಯ್ ತಮ್ಮ ಆಟದ ವರಸೆ ಬದಲಾಯಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us