ಬಿಗ್​ಬಾಸ್: ಯಾವ ಸ್ಪರ್ಧಿಗಳಿಗೆ ಬಿತ್ತು ಕಿಚ್ಚ ಸುದೀಪ್​ರ ಮಾತಿನ ಚಾಟಿ ಏಟು

Bigg Boss: ಬಿಗ್​ಬಾಸ್​ನ ವೀಕೆಂಡ್ ಪಂಚಾಯ್ತಿಯ ಭಾನುವಾರದ ಎಪಿಸೋಡ್​ನಲ್ಲಿ ಸ್ಪರ್ಧಿಗಳ ಮೇಲೆ ಸುದೀಪ್ ಮಾತಿನ ಚಾಟಿ ಬೀಸಿದರು. ಕಾರಣವೇನು?

ಬಿಗ್​ಬಾಸ್: ಯಾವ ಸ್ಪರ್ಧಿಗಳಿಗೆ ಬಿತ್ತು ಕಿಚ್ಚ ಸುದೀಪ್​ರ ಮಾತಿನ ಚಾಟಿ ಏಟು
Follow us
|

Updated on:Dec 31, 2023 | 11:35 PM

ಬಿಗ್​ಬಾಸ್​ (BiggBoss) ಕನ್ನಡ ಸೀಸನ್ 10ರ ವೀಕೆಂಡ್ ಪಂಚಾಯ್ತಿಯ ಭಾನುವಾರದ ಎಪಿಸೋಡ್​ ಅನ್ನು ತುಸು ಖಡಕ್ ಆಗಿ ನಿರ್ವಹಿಸಿದರು. ಸುದೀಪ್​ರ ಪ್ರಶ್ನೆಗಳಿಗೆ, ಇಂದು ನಡೆದ ಪ್ರತಿಕ್ರಿಯೆಯಲ್ಲಿ ಸ್ಪರ್ಧಿಗಳು ಪೂರ್ವನಿರ್ಧರಿತ ಉತ್ತರಗಳನ್ನು, ಡಿಪ್ಲೋಮ್ಯಾಟಿಕ್ ಉತ್ತರಗಳನ್ನು ನೀಡಿದ್ದೇ ಇದಕ್ಕೆ ಕಾರಣ. ಕೆಲವು ಸ್ಪರ್ಧಿಗಳಗೆ ನೇರವಾಗಿಯೇ ಎಚ್ಚರಿಕೆ ನೀಡಿದ ಸುದೀಪ್ ಇನ್ನು ಕೆಲವರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಎಪಿಸೋಡ್​ ಅನ್ನು ತಮಾಷೆಯಾಗಿ ಆರಂಭ ಮಾಡಿದರು ಸುದೀಪ್, ಪ್ಲೇ-ಪಾಸ್ ಟಾಸ್ಕ್​ನಲ್ಲಿ ಎಲ್ಲರನ್ನೂ ಬಹುವಾಗಿ ಕಾಡಿದ ತುಕಾಲಿ ಸಂತೋಷ್ ಅವರನ್ನು ಕಾಡುವ ಅವಕಾಶವನ್ನು ಸ್ಪರ್ಧಿಗಳಿಗೆ ಒದಗಿಸಿದರು. ತುಕಾಲಿಯನ್ನು ಚೇರೊಂದರ ಮೇಲೆ ಮಲಗಿಸಿ, ನಮ್ರತಾ, ಸಿರಿ, ಕಾರ್ತಿಕ್ ಅವರುಗಳು ಮೇಣದ ಸ್ಟ್ರಿಪ್ ಅನ್ನು ಕಾಲಿಗೆ ಅಂಟಿಸಿ ಕೂದಲು ಸಮೇತ ಕಿತ್ತರು. ಆ ಸಮಯದಲ್ಲಿ ತುಕಾಲಿ ತೋರುತಿದ್ದ ಮುಖಭಾವ ತಮಾಷೆಯಾಗಿತ್ತು.

ಅದಾದ ಬಳಿಕ ಎಸ್ ಆರ್ ನೋ ಗೇಮ್ ಅನ್ನು ಸುದೀಪ್ ಆಡಿಸಿದರು. ಈ ವಾರ ಮನೆಯ ಇತರೆ ಸ್ಪರ್ಧಿಗಳ ಬಗ್ಗೆ ಮನೆಯವರೇ ಆಡಿದ ಮಾತುಗಳನ್ನು ಹೇಳಿದ ಸುದೀಪ್ ಮನೆಯ ಸ್ಪರ್ಧಿಗಳ ಅಭಿಪ್ರಾಯ ಸಂಗ್ರಹಿಸಿದರು. ಮನೆಯಲ್ಲಿ ಯಾರೋ ಒಬ್ಬರ ಮುಂದೆ ತಾವೇ ಹೇಳಿದ್ದ ಮಾತಿಗೆ ವಿರುದ್ಧವಾದ ಅಭಿಪ್ರಾಯವನ್ನು ಕೆಲವರು ಹಂಚಿಕೊಂಡರು. ಇದನ್ನು ನೋಡಿ ಸುಮ್ಮನೆ ನಕ್ಕರು ಸುದೀಪ್.

ಇದನ್ನೂ ಓದಿ:ಕಿಚ್ಚ ಸುದೀಪ್​ ಬಿಡುಗಡೆ ಮಾಡಿದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್

ಅದಾದ ಬಳಿಕ ಹಾವು-ಏಣಿ ಆಟವನ್ನು ಸುದೀಪ್ ಆಡಿಸಿದರು. ಯಾವ ಸ್ಪರ್ಧಿಗಳು ಯಾರಿಗೆ ಏಣಿ, ಯಾರಿಗೆ ಹಾವು ನೀಡಲಿದ್ದಾರೆ ಎಂಬುದನ್ನು ಮೊದಲೇ ನಿರ್ಧರಿಸಬಹುದಿತ್ತು, ಅಷ್ಟು ಪೂರ್ವನಿರ್ಧರಿತ ಉತ್ತರಗಳನ್ನು ಸ್ಪರ್ಧಿಗಳು ನೀಡಿದರು. ತುಕಾಲಿ ಸಂತು, ವರ್ತೂರುಗೆ ಏಣಿ, ಡ್ರೋನ್​ಗೆ ಹಾವು ಕೊಟ್ಟರು, ವರ್ತೂರು, ತುಕಾಲಿಗೆ ಏಣಿ, ನಮ್ರತಾಗೆ ಹಾವು ಕೊಟ್ಟರು. ಮೈಖಲ್, ನಮ್ರತಾ ವಿನಯ್​ಗೆ ಏಣಿ ನೀಡಿದರು. ಸಿರಿ, ಡ್ರೋನ್ ಸಂಗೀತಾಗೆ ಏಣಿ ನೀಡಿದರು. ತನಿಷಾ ಕಾರ್ತಿಕ್​ಗೆ ಏಣಿ, ಸಂಗೀತಾಗೆ ಹಾವು ನೀಡಿದರು. ವಿನಯ್, ನಮ್ರತಾಗೆ ಏಣಿ, ಕಾರ್ತಿಕ್​ಗೆ ಹಾವು ನೀಡಿದರು. ಕಾರ್ತಿಕ್​ ವಿನಯ್​ಗೆ ಹಾವು ನೀಡಿ, ತನಿಷಾಗೆ ಏಣಿ ನೀಡಿ, ಋಣ ತೀರಿಸಿದರು.

ವಿನಯ್, ಕಾರ್ತಿಕ್ ಅವರನ್ನು ಹಾವಿನ ಸ್ಥಾನದಲ್ಲಿ ನಿಲ್ಲಿಸಿ ಆಡಿದ ನೋವಾಗದ ಮಾತುಗಳ ಬಗ್ಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು. ‘ನೀವು ನೀಡುತ್ತಿರುವ ಕಾರಣ ನೋಡಿದರೆ ಕಾರ್ತಿಕ್ ಅವರನ್ನು ಏಣಿಯ ಬಳಿ ನಿಲ್ಲಿಸಬೇಕಾಗುತ್ತದೆ’ ಎಂದರು. ಅದಕ್ಕೆ ವಿನಯ್ ಬೇರೆ ಬೇರೆ ಸ್ಪಷ್ಟನೆಗಳನ್ನು ನೀಡಲು ಯತ್ನಿಸಿದರಾದರೂ ಸುದೀಪ್ ಅವನ್ನು ಒಪ್ಪಲಿಲ್ಲ ಅಥವಾ ಆ ಸಮಯಕ್ಕೆ ಒಪ್ಪಿದಂತೆ ನಟಿಸಿದರಷ್ಟೆ.

ಇದನ್ನೂ ಓದಿ:ಬಿಗ್​ಬಾಸ್ ಗೆಲ್ಲುವ ಕ್ಷಮತೆ ಇರುವ ಸ್ಪರ್ಧಿ ಯಾರು? ಮನೆಯವರೇ ಕೊಟ್ಟರು ಉತ್ತರ

ಆ ರೌಂಡ್ ಮುಗಿದ ಬಳಿಕ, ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡಿದ ಸುದೀಪ್, ‘ನೀವು ಒಬ್ಬರಿಗೊಬ್ಬರಿಗೆ ಫೇವರ್ ಮಾಡುತ್ತಿದ್ದೀರ ಅಷ್ಟೆ, ನೀವು ಯಾರೂ ಸಹ ಗೇಮ್ ಆಡುತ್ತಿಲ್ಲ’ ಎಂದು ಕಠುವಾಗಿ ಹೇಳಿದರು. ‘ಇಂಥಹವರು ನನ್ನೊಟ್ಟಿಗೆ ಕೂತು ಮಾತನಾಡುತ್ತಾರೆ, ಇಂಥಹವರು ನನ್ನ ಹೆಸರು ತೆಗೆದುಕೊಂಡಿದ್ದಾರೆ, ನಾನೂ ಸಹ ಅವರ ಹೆಸರು ತೆಗೆದುಕೊಳ್ಳಬೇಕು ಇಲ್ಲವಾದರೆ ಬೇಜಾರು ಮಾಡಿಕೊಳ್ಳುತ್ತಾರೆ’ ಎಂದು ಹೆದರಿಕೊಂಡು ನೀವು ಹೆಸರುಗಳನ್ನು ಹೇಳುತ್ತಿದ್ದೀರಿ. ಈ ಹಾವು-ಏಣಿ ಟಾಸ್ಕ್​ನಲ್ಲಿ ಯಾರ ಹೆಸರನ್ನು ಹೇಳಲಿದ್ದೀರಿ ಎಂಬುದು ನನಗೆ ಸೇರಿದಂತೆ ಪ್ರೇಕ್ಷಕರೆಲ್ಲರಿಗೂ ಮೊದಲೇ ಗೊತ್ತಿತ್ತು. ನೀವು ಅದೇ ಹೆಸರುಗಳನ್ನು ಹೇಳಿದ್ದೀರಿ, ಸುಮ್ಮನೆ ಈ ಪ್ರಕ್ರಿಯೆ ನಡೆಸಿ ಸಮಯ ವ್ಯರ್ಥವಾಯಿತು ಅಷ್ಟೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 pm, Sun, 31 December 23