ನನ್ನನ್ನು ಟಾರ್ಗೆಟ್ ಮಾಡಲಾಯ್ತು, ಮನುಷ್ಯರಿಗಿಂತ ಪ್ರಾಣಿಗಳು ಮೇಲು: ಸ್ನೇಕ್ ಶ್ಯಾಮ್

Snake Shyam: ಬಿಗ್​ಬಾಸ್ ಕನ್ನಡ ಸೀಸನ್ 10ರಿಂದ ಮೊದಲ ವಾರವೇ ಹೊರ ಬಂದಿರುವ ಸ್ನೇಕ್ ಶ್ಯಾಮ್, ಬಿಗ್​ಬಾಸ್ ಮನೆಯ ಇತರೆ ಸದಸ್ಯರ ಬಗ್ಗೆ ಮಾತನಾಡಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಲಾಯ್ತು ಎಂದಿದ್ದಾರೆ ಸಹ.

ನನ್ನನ್ನು ಟಾರ್ಗೆಟ್ ಮಾಡಲಾಯ್ತು, ಮನುಷ್ಯರಿಗಿಂತ ಪ್ರಾಣಿಗಳು ಮೇಲು: ಸ್ನೇಕ್ ಶ್ಯಾಮ್
ಸ್ನೇಕ್ ಶ್ಯಾಮ್
Edited By:

Updated on: Oct 16, 2023 | 7:49 PM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10ರ ಮೊದಲ ಎಲಿಮಿನೇಶನ್ ನಿನ್ನೆ (ಅಕ್ಟೋಬರ್ 15) ನಡೆದಿದೆ. ಉತ್ಸಾಹದಿಂದ ಬಿಗ್​ಬಾಸ್ ಮನೆ ಪ್ರವೇಶಿಸಿದ್ದ ಸ್ನೇಕ್ ಶ್ಯಾಮ್ ಅವರು ಮನೆಯಿಂದ ಒಂದೇ ವಾರಕ್ಕೆ ಹೊರಗೆ ನಡೆದಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ವಯಸ್ಸಿನಲ್ಲಿ ಹಿರಿಯರಾಗಿದ್ದ ಸ್ನೇಕ್ ಶ್ಯಾಮ್ ಅವರು ಮನೆಯಲ್ಲಿ ಕೆಲವು ವಾರಗಳಾದರೂ ಇರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮೊದಲ ದಿನವೇ ಹೊರಬಿದ್ದಿದ್ದಾರೆ. ಹೊರಗೆ ಬಂದಿರುವ ಸ್ನೇಕ್ ಶ್ಯಾಮ್, ಇತರೆ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ನನ್ನನ್ನು ಟಾರ್ಗೆಟ್ ಮಾಡಲಾಯ್ತು ಎಂದಿದ್ದಾರೆ.

ಹದಿನಾರು ಭಿನ್ನ-ಭಿನ್ನ ವ್ಯಕ್ತಿ, ವ್ಯಕ್ತಿತ್ವ, ಮೈಂಡ್​ಗಳನ್ನು ನೋಡಿದೆ. ಯಾರು ಹೇಗೆ ಎಂಬುದು ಗೊತ್ತಾಯ್ತು. ಬಹುಷಃ ನನ್ನ ಒಳ್ಳೆ ತನವೇ ನನಗೆ ಮುಳುವಾಯ್ತು ಅನಿಸುತ್ತದೆ. ಯಾರ ಮನಸ್ಸು ನೋಯಿಸಬಾರದು ಎಂದುಕೊಂಡು ವರ್ತಿಸಿದೆ. ಅದರ ಬದಲಿಗೆ ಖಡಕ್ ಆಗಿ ಇದ್ದಿದ್ದರೆ ಇನ್ನೂ ಸ್ವಲ್ಪ ದಿನ ಇರ್ತಿದ್ದೆ ಅನ್ನಿಸುತ್ತದೆ. ಸ್ಪರ್ಧೆಯಲ್ಲಿ ಕರುಣೆ ತೋರಿಸಬಾರದಾಗಿತ್ತು ಎಂಬುದು ಗೊತ್ತಾಯ್ತು. ಸಮರ್ಥನಾಗಿದ್ದ ನನ್ನನ್ನು ನನ್ನ ಅಭಿಪ್ರಾಯ ಸಹ ಕೇಳದೆ ಎಲ್ಲರೂ ಸೇರಿ ಅಸಮರ್ಥ ತಂಡಕ್ಕೆ ಕಳಿಸಿಬಿಟ್ಟರು. ಎಲ್ಲರೂ ಸೇರಿ ಟಾರ್ಗೆಟ್ ಮಾಡಿದರು. 10 ಜನರು ಮಾಡಿದ ತಪ್ಪನ್ನು ನನ್ನೊಬ್ಬನ ಮೇಲೆ ಹಾಕಿದರು. ನಾನು ಅದನ್ನು ಪ್ರಶ್ನಿಸಬೇಕಿತ್ತು. ಆದರೆ ಪ್ರಶ್ನಿಸಲಿಲ್ಲ. ಅದೇ ನನ್ನ ತಪ್ಪು” ಎಂದಿದ್ದಾರೆ ಸ್ನೇಕ್ ಶ್ಯಾಮ್.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಹೀರೋ ಯಾರು? ವಿಲನ್ ಯಾರು? ಸ್ಪರ್ಧಿಗಳು ಆರಿಸಿದ್ದು ಯಾರನ್ನು?

ಮನುಷ್ಯನಿಗೂ ಪ್ರಾಣಿಗಳಿಗೂ ಹೋಲಿಸುವಂತಿಲ್ಲ. ಮನುಷ್ಯ ಹಾಗೂ ಪ್ರಾಣಿಗಳನ್ನು ಕಂಪೇರ್ ಮಾಡಲಾಗಲ್ಲ. ಪ್ರಾಣಿಗಳಿಗೆ ಇರುವ ನಿಯತ್ತು ಮನುಷ್ಯರಿಗೆ ಇಲ್ಲ. ಮನುಷ್ಯ ಬಳಸಿಕೊಂಡು ಬಿಟ್ಟುಬಿಡುತ್ತಾನೆ. ಪ್ರಾಣಿಗಳಿಗೂ ಮನುಷ್ಯರಿಗೂ ಹೋಲಿಕೆಯೇ ಇಲ್ಲ ಎಂದ ಸ್ನೇಕ್ ಶ್ಯಾಮ್, ಡ್ರೋನ್ ಪ್ರತಾಪ್ ಚೆನ್ನಾಗಿ ಆಡುತ್ತಿದ್ದಾನೆ. ಅವನು ಬಹಳ ಮುಗ್ಧ ಜೊತೆಗೆ ಬಹಳ ಬುದ್ಧಿವಂತ ಸಹ. ತುಕಾಲಿ ಸಂತೋಶ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಹಳ್ಳಿಕಾರ್ ಸಂತೋಶ್, ಡ್ರೋನ್ ಪ್ರತಾಪ್ ಇವರೆಲ್ಲ ಟಾಪ್ ಐದು ಸ್ಪರ್ಧಿಗಳು. ಡ್ರೋನ್ ಪ್ರತಾಪ್ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದಿದ್ದಾರೆ ಸ್ನೇಕ್ ಶ್ಯಾಮ್.

ಬಿಗ್​ಬಾಸ್ ಮನೆಯಿಂದ ಹೊರಬಂದ ಮೇಲೆ ಏನು ಮಿಸ್ ಮಾಡಿಕೊಳ್ಳುತ್ತೇನೆ ಎಂಬುದರ ಬಗ್ಗೆ ಮಾತನಾಡಿ, ”ನಾನು ಅಸಮರ್ಥನಾಗಿದ್ದೇ ಚೆನ್ನಾಗಿತ್ತು, ಸಮರ್ಥನಾಗಿದ್ದು ಬೋರಿಂಗ್ ಕೆಲಸ. ಸಮರ್ಥನಾಗಿದ್ದಾಗ ಏನೂ ಕೆಲಸ ಇರಲಿಲ್ಲ. ಅಸಮರ್ಥರ ತಂಡದ ಜೊತೆಗೆ ಇದ್ದಿದ್ದು ಖುಷಿಯಾಯಿತು. ಅಸಮರ್ಥರ ತಂಡ ಸೇರಿದ ಮೇಲೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ ನನಗೆ ಟಾಸ್ಕ್ ಆಡಲು ಸಿಗಲಿಲ್ಲ ಅದು ಸಮಸ್ಯೆ ಆಯಿತು ಎಂದ ಸ್ನೇಕ್ ಶ್ಯಾಮ್, ಮುಂದಿನ ವಾರ ಮೈಖಲ್ ಅಥವಾ ಇಶಾನಿ ಇಬ್ಬರಲ್ಲಿ ಒಬ್ಬರು ಹೊರಗೆ ಹೋಗಬಹುದು. ಬಿಗ್​ಬಾಸ್ ಮನೆಯಿಂದ ಸಾಕಷ್ಟು ಅನುಭವ ತೆಗೆದುಕೊಂಡು ಹೋಗುತ್ತಿದ್ದೀನಿ. ಪ್ರತಿನಿತ್ಯ ಎದ್ದು ಡ್ಯಾನ್ಸ್ ಮಾಡುವುದು, ಪೂಜೆ ಮಾಡುವುದು, ಹಗ್ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದರು ಸ್ನೇಕ್ ಶ್ಯಾಮ್. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Mon, 16 October 23

Web contact

TV9 Kannada

Read More
Follow Us