ಭ್ರಮೆಯಲ್ಲಿದ್ದ ರಜತ್​ಗೆ ಬಿಸಿ ಮುಟ್ಟಿಸಿದ ಕಿಚ್ಚ ಸುದೀಪ್

Bigg Boss Kannada: ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮನೆಯ ಸ್ಟ್ರಾಂಗ್ ಸ್ಪರ್ಧಿ ಎಂಬಂತೆ ಬಿಂಬಿತವಾಗುತ್ತಿದ್ದಾರೆ. ಆದರೆ ಸುದೀಪ್ ನಿನ್ನೆಯ ಎಪಿಸೋಡ್​ನಲ್ಲಿ ರಜತ್​ಗೆ ಸಣ್ಣಗೆ ಶಾಕ್ ನೀಡಿದ್ದಾರೆ.

ಭ್ರಮೆಯಲ್ಲಿದ್ದ ರಜತ್​ಗೆ ಬಿಸಿ ಮುಟ್ಟಿಸಿದ ಕಿಚ್ಚ ಸುದೀಪ್

Updated on: Dec 01, 2024 | 7:54 AM

ಬಿಗ್​ಬಾಸ್ ಕನ್ನಡ ಶನಿವಾರದ ವೀಕೆಂಡ್ ಎಪಿಸೋಡ್ ನಿನ್ನೆ (ನವೆಂಬರ್ 30) ನಡೆದಿದೆ. ಈ ವಾರ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆದಿದ್ದು, ಹಲವರು ನಿಯಮ ಮುರಿದಿದ್ದಾರೆ. ನೈತಿಕತೆ ಎಲ್ಲೆ ಮೀರಿ ಟಾಸ್ಕ್ ಆಡಿದ್ದಾರೆ. ಟಾಸ್ಕ್​ಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಇಡೀ ವಾರದ ಆಟವನ್ನೇ ಹಾಳು ಮಾಡಿದ್ದಾರೆ. ಎಲ್ಲವನ್ನೂ ಗಮನಿಸಿದ್ದ ಕಿಚ್ಚ ಸುದೀಪ್, ಟಾಸ್ಕ್ ಹಾಳಾಗಲು ಕಾರಣರಾದವರನ್ನು ಶನಿವಾರದ ಎಪಿಸೋಡ್​ನಲ್ಲಿ ತರಾಟೆಗೆ ತೆಗೆದುಕೊಂಡರು.

ಉಗ್ರಂ ಮಂಜು ಅವರಿಗೆ ಮಹಾರಾಜ ಪಾತ್ರವನ್ನು ಬಿಗ್​ಬಾಸ್ ನೀಡಿದ್ದರು. ಆರಂಭದಲ್ಲಿ ಅದನ್ನು ಬಹಳ ಚೆನ್ನಾಗಿ ನಿಭಾಯಿಸಿದ ಮಂಜು, ಮೋಕ್ಷಿತಾ ಮಹಾರಾಣಿ ಆದ ಬಳಿಕ ವೈಯಕ್ತಿಕ ಆಟಕ್ಕೆ ಇಳಿದರು. ಮೋಕ್ಷಿತಾ ಸಹ ಮಂಜು ಹಾಗೂ ಗೌತಮಿ ವಿರುದ್ಧ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲೆಂದೇ ಆಟ ಆಡಿದಂತಿತ್ತು. ಇದೇ ವಿಷಯದ ಚರ್ಚೆ ಶನಿವಾರದ ಎಪಿಸೋಡ್​ನಲ್ಲಿ ನಡೆಯುತ್ತಿದ್ದಾಗ, ಉಗ್ರಂ ಮಂಜು ಮತ್ತು ರಜತ್ ನಡುವೆ ಮಾತಿನ ಚಕಮಕಿ ಎದುರಾಯ್ತು.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್, ಮನೆಗೆ ಬಂದಾಗಿನಿಂದಲೂ ತಾನು ಅದ್ಭುತ ಆಟಗಾರನೆಂದು, ಮನೆಯ ಇತರೆ ಸದಸ್ಯರ್ಯಾರಿಗೂ ಬಿಗ್​ಬಾಸ್ ಆಟ ಆಡಲು ಬರುವುದೇ ಇಲ್ಲವೆಂದು ಹೇಳುತ್ತಲೇ ಬಂದಿದ್ದಾರೆ. ಅಲ್ಲದೆ, ನೇರವಾಗಿ ಹೇಳದೇ ಇದ್ದರೂ ಸಹ ತಾನು ಮನೆಯ ಅತ್ಯಂತ ಶಕ್ತಿಶಾಲಿ ಸ್ಪರ್ಧಿ ಎಂದು ಸಹ ಹೇಳುತ್ತಾ ಬರುತ್ತಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಮುಂದೆ, ಉಗ್ರಂ ಮಂಜು ಬಗ್ಗೆ ರಜತ್ ದೂರು ಹೇಳಿದಾಗ, ಉಗ್ರಂ ಮಂಜು ಸಹ ರಜತ್ ಆಡುವ ಮಾತುಗಳ ಬಗ್ಗೆ ಆಕ್ಷೇಪ ಎತ್ತಿದರು.

ಇದನ್ನೂ ಓದಿ:ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್

ಆಗ ಮಾತನಾಡಿದ ಸುದೀಪ್, ಇಬ್ಬರೂ ಸಹ ಇನ್ನೊಬ್ಬರು ಆಡುವ ಮಾತುಗಳಿಗೆ ಏಕೆ ತಲೆ ಕಡೆಸಿಕೊಳ್ಳುತ್ತೀರಿ. ಇಬ್ಬರೂ ಸಹ ಸುಳ್ಳುಗಳನ್ನೇ ಹೇಳುತ್ತಿದ್ದೀರಿ ಎಂದರು. ಭಾರಿ ಆತ್ಮವಿಶ್ವಾಸದಿಂದ ತಾನು ಮಾಡಿದ್ದು, ತಾನು ಆಡಿದ ಮಾತು ಸರಿ ಎಂದು ವಾದಿಸುತ್ತಿದ್ದ ರಜತ್​ಗೆ ಟಾಂಗ್ ಕೊಟ್ಟ ಸುದೀಪ್, ‘ನೀವ್ಯಾರು ಚೆನ್ನಾಗಿ ಆಡುತ್ತಿಲ್ಲ ಎಂದು ಬಿಗ್​ಬಾಸ್ ನನ್ನನ್ನು ಕಳಿಸಿದ್ದಾರೆ’ ಎಂದು ಮಾತಿಗೆ ಮುಂಚೆ ನೀವು ಹೇಳುತ್ತೀರಿ. ಬಿಗ್​ಬಾಸ್​ ನಿಮಗೆ ಇದನ್ನು ಹೇಳಿದ್ದಾರಾ? ಯಾರೂ ಚೆನ್ನಾಗಿ ಆಡುತ್ತಿಲ್ಲ ಎಂದು ನಿಮ್ಮನ್ನು ಕಳಿಸಿರುವುದಾ? ಯಾವ ನನ್ ಮಗ ನಿಮ್ಮನ್ನು ಒಳಗೆ ಕಳಿಸಬೇಕಾದರೆ ಆ ಮಾತು ಹೇಳಿದ ಹೇಳಿ’ ಎಂದು ಪ್ರಶ್ನೆ ಮಾಡಿದರು. ಸುದೀಪ್ ಪ್ರಶ್ನೆಗೆ ರಜತ್ ಸುಮ್ಮನಾಗಿಬಿಟ್ಟರು.

ಅದೇ ಚರ್ಚೆಯಲ್ಲಿ ಮಂಜುಗೂ ಬುದ್ಧಿವಾದ ಹೇಳಿದ ಸುದೀಪ್, ಯಾರು ಏನೋ ಹೇಳುತ್ತಾರೆಂದರೆ ಅದನ್ನು ಪರ್ಸನಲ್ ಆಗಿ ತೆಗೆದುಕೊಳ್ಳುವ ಅಗತ್ಯತೆ ಇಲ್ಲ. ರಜತ್ ಹೇಳಿದ್ದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ, ನೀವು ಹೇಳುವುದನ್ನು ರಜತ್ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us