ಬಿಗ್​ಬಾಸ್ ಮನೆಯಲ್ಲಿ ಕರಗಿತು ಮುನಿಸು, ಅಪ್ಪ-ಮಗನ ಭಾವುಕ ಸಮ್ಮಿಲನ

|

Updated on: Dec 28, 2023 | 11:25 PM

Bigg Boss: ಮೂರು ವರ್ಷಗಳ ಮುನಿಸು ಬಿಗ್​ಬಾಸ್ ಮನೆಯಲ್ಲಿ ಅಂತ್ಯವಾಯ್ತು. ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ತಮ್ಮ ತಂದೆಯೊಟ್ಟಿಗೆ ಸೇರಿದರು.

ಬಿಗ್​ಬಾಸ್ ಮನೆಯಲ್ಲಿ ಕರಗಿತು ಮುನಿಸು, ಅಪ್ಪ-ಮಗನ ಭಾವುಕ ಸಮ್ಮಿಲನ
Follow us on

ಡ್ರೋನ್ ಪ್ರತಾಪ್ (Drone Prathap) ಬಿಗ್​ಬಾಸ್ ಮನೆಗೆ ಬರುವ ಮುನ್ನ ವಿಪರೀತ ಟ್ರೋಲ್ ಆಗಿದ್ದರು, ಜನರ ಕೈಯಿಂದ ಸಾಕಷ್ಟು ಟೀಕೆ, ಬೈಗುಳಗಳನ್ನು ಕೇಳಿದ್ದರು. ಅವರೇ ಹೇಳಿಕೊಂಡಂತೆ ಕೆಲವು ಅಧಿಕಾರಿಗಳಿಂದಲೂ ಕಿರುಕುಳ ಅನುಭವಿಸಿದ್ದರು. ಆದರೆ ಬಿಗ್​ಬಾಸ್ ಮನೆಗೆ ಬಂದ ಬಳಿಕ ಅವರ ಇಮೇಜು ಬದಲಾಗಿದೆ. ಅವರು ಈ ಹಿಂದೆ ಮಾಡಿದ ಕೆಲ ತಪ್ಪುಗಳಿಗೆ ಕ್ಷಮೆಯನ್ನೂ ಕೇಳಿದ್ದಾರೆ. ಚೆನ್ನಾಗಿಯೇ ಆಡುತ್ತಿದ್ದ ಪ್ರತಾಪ್​ಗೆ ತಮ್ಮ ಪೋಷಕರನ್ನು ಭೇಟಿ ಆಗಬೇಕೆಂಬ ತೀವ್ರ ಬಯಕೆಯಿತ್ತು, ಅದು ಗುರುವಾರದ ಎಪಿಸೋಡ್​ನಲ್ಲಿ ಪೂರ್ಣಗೊಂಡಿದೆ. ಅಪ್ಪ-ಮಗನ ಸಮ್ಮಿಲನ ಭಾವುಕವಾಗಿತ್ತು.

ಗುರುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಗೆ ಮೊದಲು ತನಿಷಾರ ಪೋಷಕರು ಹಾಗೂ ಸಹೋದರಿ ಬಂದರು. ಆ ಬಳಿಕ ವಿನಯ್​ರ ಮಡದಿ ಹಾಗೂ ಮಗ ಬಂದರು. ದಿನ ಆರಂಭವಾದಾಗಿನಿಂದಲೂ ಪ್ರತಾಪ್ ತನ್ನ ಪೋಷಕರಿಗಾಗಿ ಎದುರು ನೋಡುತ್ತಿದ್ದರು. ಊಟ ಸಹ ಮಾಡದೆ ಪೋಷಕರು ಬರಲೆಂದು ಕಾಯುತ್ತಿದ್ದರು. ಸಂಗೀತಾ ಸೇರಿದಂತೆ ಯಾರು ಕೇಳಿದರೂ ಪ್ರತಾಪ್ ಊಟ ಮಾಡಿರಲಿಲ್ಲ.

ಪ್ರತಾಪ್ ಹೊರಗೆ ಕೂತಿದ್ದಾಗ ಒಮ್ಮೆಲೆ ಬಿಗ್​ಬಾಸ್ ಮನೆಯ ಕಾಂಪೌಂಡ್​ ಮೇಲೆ ಡ್ರೋನ್ ಒಂದು ಹಾರುತ್ತಾ ಬಂತು. ಅದನ್ನು ನೋಡಿದ ಪ್ರತಾಪ್ ಖುಷಿಗೆ ಪಾರವೇ ಇರಲಿಲ್ಲ. ಮನೆಯವರೆಲ್ಲರನ್ನೂ ಕರೆದು ತಮ್ಮ ಡ್ರೋನ್ ತೋರಿಸಿದರು. ಡ್ರೋನ್​ ಅನ್ನು ಲ್ಯಾಂಡ್ ಮಾಡಲಿಲ್ಲ. ಪ್ರತಾಪ್​ರ ಡ್ರೋನ್ ಅನ್ನು ನೋಡಿ ಮನೆಯ ಸದಸ್ಯರು ಖುಷಿ ಪಟ್ಟರು.

ಇದನ್ನೂ ಓದಿ:‘ಸಿಂಪತಿಯಿಂದಲೇ ಇಲ್ಲಿಯವರೆಗೆ ಬಂದಿದ್ದಾನೆ’; ಡ್ರೋನ್ ಪ್ರತಾಪ್ ಬಗ್ಗೆ ಮೈಕಲ್ ಆರೋಪ

ಬಳಿಕ ಪ್ರತಾಪ್​ರ ತಂದೆ-ತಾಯಿ ವಿಡಿಯೋ ಮೂಲಕ ಮಗನೊಟ್ಟಿಗೆ ಮಾತನಾಡಿದರು. ಅದಾದ ಬಳಿಕ ಡ್ರೋನ್ ಪ್ರತಾಪ್​ರ ನಿರೀಕ್ಷೆ ಇನ್ನಷ್ಟು ಹೆಚ್ಚಾಯ್ತು. ಅಪ್ಪ-ಅಮ್ಮನಿಗಾಗಿ ಪ್ರತಾಪ್ ಹುಡುಕುತ್ತಿದ್ದಾಗಲೇ ಅವರ ಪೋಷಕರು ಮುಖ್ಯ ದ್ವಾರದಿಂದ ಒಳಗೆ ಬಂದರು. ಪೋಷಕರ ಕಂಡೊಡನೆ ಪ್ರತಾಪ್​ರ ದುಃಖದ ಕಟ್ಟೆ ಒಡೆಯಿತು. ಮೂರು ವರ್ಷಗಳ ಬಳಿಕ ಪೋಷಕರನ್ನು ಭೇಟಿ ಆಗಿದ್ದರು ಪ್ರತಾಪ್. ಬಿಗ್​ಬಾಸ್ ಆದೇಶಕ್ಕೂ ಕಾಯದೆ ಪೋಷಕರನ್ನು ಅಪ್ಪಿ ಮುದ್ದಾಡಿದರು.

ಪ್ರತಾಪ್​ರ ತಂದೆ-ತಾಯಿಗಳಿಬ್ಬರಿಗೂ ಅಳು ತಡೆಯಲು ಸಾಧ್ಯವಾಗಲಿಲ್ಲ. ಕಣ್ಣೀರು ಸುರಿಸುತ್ತಲೇ ಮಗನಿಗೆ ಅಳಬೇಡವೆಂದು ಸಮಾಧಾನ ಮಾಡಿದರು. ಅವರ ತಾಯಿಯವರದ್ದೂ ಅದೇ ಸ್ಥಿತಿ. ಮನೆಯ ಸದಸ್ಯರೆಲ್ಲರೂ ಪ್ರತಾಪ್​ರ ಪೋಷಕರನ್ನು ಭೇಟಿ ಮಾಡಿ ಮಾತನಾಡಿದರು. ಬೆಳಿಗಿನಿಂದ ಹಸಿದಿದ್ದ ಮಗನಿಗೆ ತಾವೇ ಕೈಯ್ಯಾರೆ ಹಣ್ಣುಗಳನ್ನು ತಿನ್ನಿಸಿದರು ಪ್ರತಾಪ್​ರ ತಂದೆ. ಪ್ರತಾಪ್ ಸಹ ಪೋಷಕರಿಗೆ ಹಣ್ಣು ತಿನ್ನಿಸಿದರು.

ಅಪ್ಪ-ಅಮ್ಮನನ್ನು ಪ್ರತ್ಯೇಕವಾಗಿ ಗಾರ್ಡನ್ ಏರಿಯಾಗೆ ಕರೆತಂದು ಕೂರಿಸಿಕೊಂಡ ಪ್ರತಾಪ್, ಊರಿನ ಸಮಾಚಾರ, ತಂಗಿಯ ಸಮಾಚಾರವನ್ನು ಕೇಳಿ ತಿಳಿದುಕೊಂಡರು. ಸಾಲ ಮಾಡಿದ್ದೀಯ? ಎಷ್ಟು ಸಾಲ ಮಾಡಿದ್ದೀಯ? ಹಣಕ್ಕೆ ಏನು ಮಾಡುತ್ತಿದ್ದೀಯ? ಎಂದೆಲ್ಲ ವಿಚಾರಿಸಿದರು. ‘ದುಡಿತಾ ಇದ್ದೀನಿ, ರೇಷ್ಮೆ ಬೆಳೀತಾ ಇದ್ದೀನಿ, ನಿಮ್ಮನ್ನೆಲ್ಲ ಸಾಕಿ, ಓದಿಸಿಲ್ಲವಾ? ಹಣಕ್ಕೆ ಏನೂ ಸಮಸ್ಯೆ ಇಲ್ಲ ಮಾಡ್ತಾ ಇದ್ದೀನಿ, ನೀನು ತಲೆ ಕೆಡಿಸಿಕೊಳ್ಳಬೇಡ’ ಎಂದರು. ಅಪ್ಪನ ಮಾತು ಕೇಳಿ ಪ್ರತಾಪ್ ಮತ್ತೆ ಅತ್ತುಬಿಟ್ಟರು. ಮಗನನ್ನು ಸಮಾಧಾನ ಮಾಡಿದ ಅಪ್ಪ, ‘ಊರಿಗೆ ಬಾ, ಯಾರೂ ಏನೂ ಅನ್ನುವುದಿಲ್ಲ, ಅಂದರೂ ಸಹ ಏನು ಅದು ನಮ್ಮ ಮನೆ, ಯಾರು ನಿನ್ನೊಂದಿಗೆ ಇಲ್ಲವೆಂದರೂ ನಾವು ಇರ್ತೀವಿ ಮನೆಗೆ ಬಾ’ ಎಂದು ಧೈರ್ಯ ತುಂಬಿದರು.

ಬಳಿಕ ಮತ್ತೆ ಮನೆಯ ಸದಸ್ಯರ ಬಳಿ ಮಾತಿಗೆ ಕೂತ ಪ್ರತಾಪ್​ರ ತಂದೆ ಎಲ್ಲರನ್ನೂ ಬಲು ಪ್ರೀತಿಯಿಂದ, ಮುಗ್ಧತೆಯಿಂದ ಮಾತನಾಡಿಸಿದರು. ಮಾತು ಮಾತಿನಲ್ಲಿ ಅವರು ಪಟ್ಟ ಕಷ್ಟಗಳು ಹೊರಬಂದವು, ಮನೆ ಕಟ್ಟಲು ಮಾಡಿದ ಹತ್ತು ಲಕ್ಷ ಸಾಲ, ತಮ್ಮ ಮಗಳು ದುಡಿದು ಮಾಡುತ್ತಿರುವ ಸಹಾಯ ಎಲ್ಲವನ್ನೂ ಹೇಳುತ್ತಾ ಕಣ್ಣೀರಾದರು. ಮನೆಯ ಸದಸ್ಯರು ಅಪ್ಪನಿಗೆ ಧೈರ್ಯ ತುಂಬಿ ಮಗನಿದ್ದಾನೆ ಸುಮ್ಮನಿರಿ ಎಂದರು. ಬಳಿಕ ತಾವು ತಂದಿದ್ದ ಮುದ್ದೆ, ಉಪ್ಪೆಸರನ್ನು ಬಾಳೆ ಎಲೆಯಲ್ಲಿ ಎಲ್ಲರಿಗೂ ಅವರೇ ಬಡಿಸಿ ಊಟ ಮಾಡಿಸಿದರು. ಒಟ್ಟಾರೆ ಬಿಗ್​ಬಾಸ್​ ಮನೆಯಲ್ಲಿ ಅಪ್ಪ-ಮಗನ ನಡುವಿದ್ದ ಮುನಿಸು ಕರಿಗಿಬಿಟ್ಟಿತು. ಅಪ್ಪ-ಮಗನ ಭಾವುಕ ಸಮ್ಮಿಲನಕ್ಕೆ ಮನೆ ಸಾಕ್ಷಿಯಾಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 pm, Thu, 28 December 23