ಜಗದೀಶ್ ಮಾಡಿದ್ದು ತಪ್ಪು, ನೀವು ಮಾಡಿದ್ದು ಸರಿಯಾ? ಚಾಟಿ ಬೀಸಿದ ಸುದೀಪ್

|

Updated on: Oct 19, 2024 | 11:13 PM

Bigg Boss Kannada: ಜಗದೀಶ್ ಹೊರಹಾಕಲ್ಪಟ್ಟ ವಿಷಯದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಅವರು ತಮ್ಮ ಮಾತುಗಳು, ನಡವಳಿಕೆಯಿಂದಾಗಿ ಹೊರಗೆ ಹೋಗಿದ್ದಾರೆ. ಆದರೆ ನೀವೂ ಸಹ ಅವರೊಟ್ಟಿಗೆ ತಪ್ಪು ಮಾಡಿದ್ದೀರಿ ಎಂದು ಎಲ್ಲರ ತಪ್ಪುಗಳನ್ನು ಎತ್ತಿ ತೋರಿಸಿದರು.

ಜಗದೀಶ್ ಮಾಡಿದ್ದು ತಪ್ಪು, ನೀವು ಮಾಡಿದ್ದು ಸರಿಯಾ? ಚಾಟಿ ಬೀಸಿದ ಸುದೀಪ್
Follow us on

ಬಿಗ್​ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಲಾಯರ್ ಜಗದೀಶ್ ಹಾಗೂ ರಂಜಿತ್ ಅವರುಗಳನ್ನು ಮನೆ ಬಿಟ್ಟು ಕಳಿಸಲಾಗಿದೆ. ಲಾಯರ್ ಜಗದೀಶ್ ಮಾಡಿದ ಗಲಾಟೆಗೆ ಮನೆ ಮಂದಿ ಎಲ್ಲ ಹೈರಾಣಾಗಿದ್ದರು. ಆದರೆ ರಂಜಿತ್ ಹೊರಗೆ ಹೋಗಿದ್ದಕ್ಕೆ ಮನೆ ಮಂದಿ ಎಲ್ಲ ತೀವ್ರ ಬೇಸರ ಹೊರ ಹಾಕಿದ್ದರು, ಕಣ್ಣೀರು ಸಹ ಹಾಕಿದ್ದರು. ಹಲವು ಪಿತೂರಿಗಳು, ಜಗಳಗಳು ಈ ವಾರ ನಡೆದಿದ್ದವು ಹಾಗಾಗಿ ಈ ವಾರ ಸುದೀಪ್ ಏನು ಮಾತನಾಡಲಿದ್ದಾರೆ ಎಂಬುದು ಬಹಳ ಕುತೂಹಲ ಕೆರಳಿಸಿತ್ತು. ನಿರೀಕ್ಷಿಸಿದಂತೆಯೇ ಸುದೀಪ್, ಮನೆ ಮಂದಿಯ ತಪ್ಪು ಎತ್ತಿ ತೋರಿಸಿದ್ದು ಮಾತ್ರವೇ ಅಲ್ಲದೆ, ಜಗದೀಶ್​ ಜೊತೆಗೆ ನೀವೂ ತಪ್ಪು ಮಾಡಿದ್ದೀರಿ ಎಂದು ಮನವರಿಕೆ ಮಾಡಿಕೊಟ್ಟರು. ವಿಶೇಷವಾಗಿ ಹಂಸಾ, ಚೈತ್ರಾ, ಮಾನಸಾ ಹಾಗೂ ಮಂಜುನಾಥ್​ಗೆ ಮಾತಿನ ಚಾಟಿ ಬೀಸಿದರು.

ಜಗದೀಶ್, ನಿಯಮ ಬ್ರೇಕ್ ಮಾಡಿದ್ದಕ್ಕೆ ಇಲ್ಲಿಂದ ಹೋಗಿಲ್ಲ ಅವರ ನಡವಳಿಕೆ, ಅವರು ಬಳಸಿದ ಮಾತುಗಳು, ಬೇರೆ ಸ್ಪರ್ಧಿಗಳ ಗೌರವ, ಘನತೆಗೆ ಮಾಡಿದ ಧಕ್ಕೆ, ಶೋ ಬಗ್ಗೆ ಮಾಡಿದ ಅವಹೇಳನ ಇವುಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಅವರನ್ನು ನಿಯಮ ಬ್ರೇಕ್ ಮಾಡಿದ್ದಕ್ಕೆ ಹೊರಗೆ ಕಳಿಸಲಾಗಿಲ್ಲ ಎಂದು ಮೊದಲಿಗೆ ಸ್ಪಷ್ಟಪಡಿಸಿದ ಸುದೀಪ್, ಜಗದೀಶ್ ಹೋಗಿದ್ದಕ್ಕೆ ನಿಮಗೆಲ್ಲರಿಗೂ ಖುಷಿ ಇದೆ. ಅವರು ನಿಯಮ ಮುರಿದಿದ್ದಾರೆ ಎಂದು ಹೊರಗೆ ಹೋಗಿಲ್ಲ, ಅಶಿಸ್ತಿನಿಂದ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಹೊರಗೆ ಕಳಿಸಲಾಗಿದೆ. ಆದರೆ ಮನೆಯಲ್ಲಿರುವವರು ಎಷ್ಟು ಮಂದಿ ಸರಿಯಾಗಿ ಇದ್ದೀರ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.

ಮೊದಲಿಗೆ ಹಂಸಾ ಅವರಿಂದ ಪ್ರಾರಂಭ ಮಾಡಿದ ಸುದೀಪ್, ‘ನೀವು ಕ್ಯಾಪ್ಟನ್ ಆಗಲು ಜಗದೀಶ್ ಕಾರಣ, ನಿಮ್ಮನ್ನು ಹಂಸ್ ಎಂದೆಲ್ಲ ಕರೆಯುತ್ತಿದ್ದರು. ನೀವು ಅವರೊಟ್ಟಿಗೆ ಡ್ಯಾನ್ಸ್ ಮಾಡುತ್ತಾ, ತಮಾಷೆ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಿರಿ. ನೀವೇ ಹೇಳಿದಂತೆ ಅವರನ್ನು ಕಂಟ್ರೋಲ್​ನಲ್ಲಿಡಲು ರೊಮ್ಯಾನ್ಸ್ ತಮಾಷೆಯಿಂದ ವರ್ತಿಸುತ್ತಿದ್ದಿರಿ. ಆದರೆ ನಿಮ್ಮ ಕ್ಯಾಪ್ಟನ್ಸಿ ಅವಧಿ ಮುಗಿದ ಮೇಲೆ ಅವರನ್ನು ದೂರ ತಳ್ಳಿದಿರಿ. ಇದರಿಂದಲೇ ಅವರು ಮೊದಲು ರೆಬಲ್ ಆದರು ಅನ್ನಿಸುವುದಿಲ್ಲವೇ? ಎಂದು ಪ್ರಶ್ನೆ ಮಾಡಿದರು. ಸುದೀಪ್ ಹೇಳಿದ್ದು ನಿಜ ಎಂದು ಜಗದೀಶ್​ಗೆ ಆತ್ಮೀಯವಾಗಿದ್ದ ಸುರೇಶ್, ಜಗದೀಶ್, ಹಂಸ ದೂರಾಗಿ ಬೇರೆಯವರ ಜೊತೆ ಇರುವ ಬಗ್ಗೆ ವ್ಯಕ್ತಪಡಿಸಿದ್ದ ಬೇಸರದ ಮಾತುಗಳನ್ನು ಎಲ್ಲರೆದುರು ಹೇಳಿದರು.

ಇದನ್ನೂ ಓದಿ:ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?

ಆ ನಂತರ ಐಶ್ವರ್ಯಾ ಬಳಿ ಮಾತನಾಡಿದ ಸುದೀಪ್, ‘ನೀವು ಮನೆಯಲ್ಲಿ ಯಾರೇ ಜಗಳ ಮಾಡಿದರೂ ಅಲ್ಲಿಗೆ ಬಂದು ಸರಿ-ತಪ್ಪು ನಿರ್ಣಯಕ್ಕೆ ನಿಲ್ಲುತ್ತೀರಿ. ಆದರೆ ಬಿಗ್​ಬಾಸ್ ಬೇಡ ಎಂದಮೇಲೂ ಸಹ ಉಗ್ರಂ ಮಂಜು ಇನ್ನಿತರರು ಜಗದೀಶ್ ಅವರನ್ನು ಗೇಲಿ ಮಾಡಿ ಹಾಡು ಹಾಡುವಾಗ ಅವರೊಟ್ಟಿಗೆ ಕೂತು ತಮಾಷೆ ಮಾಡುತ್ತೀರಿ ಅದು ಸರಿಯೇ?’ ಎಂದು ಪ್ರಶ್ನೆ ಮಾಡಿದರು. ಆಗ ಧನರಾಜ್, ‘ಜಗದೀಶ್, ಐಶ್ವರ್ಯಾ ಅವರನ್ನು ತಮ್ಮ ಮಗಳಂತೆ ಕಾಣುತ್ತಿದ್ದ ಬಗ್ಗೆ, ನನ್ನ ಮಗಳ ಹೆಸರೂ ಸಹ ಐಶ್ವರ್ಯಾ’ ಎಂದೆಲ್ಲ ಭಾವುಕವಾಗಿ ಹೇಳಿಕೊಂಡಿದ್ದರು’ ಎಂದು ಸಹ ಹೇಳಿದರು. ಅನುಷಾಗೂ ಸಹ ಸುದೀಪ್ ಇದೇ ಮಾತು ಕೇಳಿದರು.

‘ನಾನು ಜಗದೀಶ್ ಪರ ವಕಾಲತ್ತು ವಹಿಸುತ್ತಿಲ್ಲ. ಅವರು ಆಡಿದ ಮಾತುಗಳಿಗೆ, ನಡೆದುಕೊಂಡ ರೀತಿಗೆ ಅವರು ಹೊರಗೆ ಹೋಗಿದ್ದಾರೆ. ಆ ವ್ಯಕ್ತಿ ಬಿಗ್​ಬಾಸ್ ಪಾಲಿಗೆ ಮುಗಿದ ಅಧ್ಯಾಯ. ಆದರೆ ಈಗ ನಾನು ಸುಮ್ಮನಿದ್ದರೆ ನೀವುಗಳು ಮಾಡಿದ್ದೆಲ್ಲವೂ ಸರಿ, ಜಗದೀಶ್ ಮಾಡಿದ್ದು ಮಾತ್ರವೇ ತಪ್ಪು ಎಂಬ ಭಾವನೆ ನಿಮಗೆ ಮತ್ತು ಜನರಿಗೆ ಬರುತ್ತದೆ ಆದ್ದರಿಂದ ಈ ವಿಷಯ ಮಾತನಾಡಲೇ ಬೇಕಿದೆ’ ಎಂದರು. ಚೈತ್ರಾ ಕುಂದಾಪುರ, ಮಾನಸ ಹಾಗೂ ಉಗ್ರಂ ಮಂಜು ಅವರೊಟ್ಟಿಗೆ ನಾಳಿನ ಎಪಿಸೋಡ್​ನಲ್ಲಿ ಮಾತನಾಡಲಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ