ಪುಂಡಾಟ ಮೆರೆದಿದ್ದ ಲಾಯರ್ ಜಗದೀಶ್​ ಅನ್ನು ಮಾತಿನಲ್ಲೇ ದಾರಿಗೆ ತಂದ ಕಿಚ್ಚ

ನನ್ನನ್ನು ಎದುರುಹಾಕಿಕೊಂಡು ಬಿಗ್​ಬಾಸ್ ನಡೆಸುತ್ತೀರಾ? ಬಿಗ್​ಬಾಸ್ ಬಾಗಿಲು ಒಡೆದು ಹಾಕ್ತೀನಿ, ಬಿಗ್​ಬಾಸ್ ಮನೆ ಮೇಲೆ ಹೆಲಿಕಾಪ್ಟರ್ ಇಳಿಸುತ್ತೀನಿ ಎಂದೆಲ್ಲ ಆವಾಜ್ ಹಾಕಿದ್ದ ಲಾಯರ್ ಜಗದೀಶ್​ ಅನ್ನು ಮಾತಿನ ಮೂಲಕವೇ ಬಗ್ಗಿಸಿದರು ಕಿಚ್ಚ ಸುದೀಪ್.

ಪುಂಡಾಟ ಮೆರೆದಿದ್ದ ಲಾಯರ್ ಜಗದೀಶ್​ ಅನ್ನು ಮಾತಿನಲ್ಲೇ ದಾರಿಗೆ ತಂದ ಕಿಚ್ಚ

Updated on: Oct 05, 2024 | 11:36 PM

ಬಿಗ್​ಬಾಸ್​ ಪ್ರಾರಂಭವಾದಾಗಿನಿಂದಲೂ ಕಿಚ್ಚ ಸುದೀಪ್ ಈ ಶೋನ ನಿರೂಪಕರಾಗಿದ್ದಾರೆ. ಬೇರೆ ಭಾಷೆಗಳಲ್ಲಿ ಬೇರೆ ಬೇರೆ ನಿರೂಪಕರು ಬದಲಾಗಿದ್ದಾರೆ ಆದರೆ ಕನ್ನಡದಲ್ಲಿ ಸುದೀಪ್ ಮಾತ್ರ. ಅವರನ್ನು ಬಿಟ್ಟು ಇನ್ಯಾರಾದರೂ ಬಿಗ್​ಬಾಸ್ ನಿರೂಪಣೆ ಮಾಡುವುದನ್ನೂ ಊಹಿಸಿಕೊಳ್ಳುವುದು ಸಹ ಕನ್ನಡಿಗರಿಗೆ ಕಷ್ಟ. ಅಷ್ಟು ಅದ್ಭುತವಾಗಿ ಅವರು ಶೋನ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಸುದೀಪ್ ತಾವೇಕೆ ಅತ್ಯದ್ಭುತ ಬಿಗ್​ಬಾಸ್ ನಿರೂಪಕ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು. ಬಿಗ್​ಬಾಸ್ ಕನ್ನಡ 11ನೇ ಸೀಸನ್​ನ ಮೊದಲನೇ ವಾರದ ಪಂಚಾಯಿತಿಯಲ್ಲಿ ತಾವೇಕೆ ಬೆಸ್ಟ್ ಎಂಬುದನ್ನು ತೋರಿಸಿಕೊಟ್ಟರು.

ಲಾಯರ್ ಜಗದೀಶ್, ಹೊರಗೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ, ರಾಜಕಾರಣಿಗಳಿಗೆ ಏಕವಚನದಲ್ಲಿ ಮಾತನಾಡುತ್ತಾ, ಬೆದರಿಕೆ ರೀತಿಯ ಮಾತುಗಳನ್ನಾಡುತ್ತಲೇ ಜನಪ್ರಿಯರಾಗಿದ್ದರು. ಇದೀಗ ಬಿಗ್​ಬಾಸ್​ಗೆ ಹೋದಾಗಲೂ ಸಹ ಅದನ್ನೇ ಮುಂದುವರೆಸಿ ಬಿಗ್​ಬಾಸ್​ಗೆ ಬೆದರಿಕೆ ಹಾಕಿದ್ದರು, ‘ನನ್ನನ್ನು ಎದುರು ಹಾಕಿಕೊಂಡು ಬಿಗ್​ಬಾಸ್ ನಡೆಸುತ್ತೀರಾ?’, ‘ಬಿಗ್​ಬಾಸ್ ಡೋರ್ ಒಡೆದು ಹಾಕುತ್ತೀನಿ’, ‘ಬಿಗ್​ಬಾಸ್ ಮೇಲೆ ಕೇಸ್ ಹಾಕುತ್ತೀನಿ’ ಎಂದೆಲ್ಲ ಬೆದರಿಕೆ ಹಾಕಿದ್ದರು, ಶೋ ನಡೆಸಲು ಬರೊಲ್ಲ ಎಂದೆಲ್ಲ ಹೇಳಿದ್ದರು. ಸುದೀಪ್ ಬಂದಾಗ ಅವರ ಎದುರು ಸಹ ಇದೇ ಪುಂಢಾಟವನ್ನು ಸುದೀಪ್ ಮುಂದುವರೆಸುತ್ತಾರೆ ಸುದೀಪ್, ಜಗದೀಶ್ ಅನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ ಎಂಬ ಕುತೂಹಲ ಇತ್ತು. ಆದರೆ ಸುದೀಪ್ ನೀರು ಕುಡಿದಂತೆ ಜಗದೀಶ್ ಅನ್ನು ‘ಹ್ಯಾಂಡಲ್’ ಮಾಡಿದರು ಮಾತ್ರವಲ್ಲದೆ ಅವರಿಂದ ‘ನಾನು ತಪ್ಪು ಮಾಡಿದ್ದೀನಿ, ಕ್ಷಮಿಸಿ’ ಎಂದು ಕೇಳುವಂತೆ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

ಮೊದಲಿಗೆ ಇತರೆ ಸ್ಪರ್ಧಿಗಳಿಗೆ ಜಗದೀಶ್ ಬಗ್ಗೆ ಇರುವ ದೂರುಗಳನ್ನು ಕೇಳಿದ ಸುದೀಪ್, ಎಲ್ಲರೂ ತಮಗೆ ಇರುವ ದೂರುಗಳನ್ನು ಹೇಳಿದರು. ಬಳಿಕ ಜಗದೀಶ್​ಗೆ ಆ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಳಿದರು. ಆಗ ಮಾತನಾಡಿದ ಜಗದೀಶ್, ‘ನನ್ನನ್ನು ಮನೆಯ ಸ್ಪರ್ಧಿಗಳು ಮೂಲೆಗುಂಪು ಮಾಡಲು ಯತ್ನಿಸಿದರು. ನನ್ನನ್ನು ಗುಂಪಿನಿಂದ ಹೊರಗಿಟ್ಟು ನೋಡಲು ಪ್ರಯತ್ನಿಸಿದರು. ಇನ್ನು ಕೆಲವರು ನಾನು ಅವರಿಗೆ ಕಠಿಣ ಪ್ರತಿಸ್ಪರ್ಧಿ ಎಂದು ಅರಿತು ನನ್ನನ್ನು ತುಳಿಯಲು ಯತ್ನಿಸುತ್ತಿದ್ದಾರೆ. ಅವರನ್ನು ಎದುರು ಹಾಕಿಕೊಳ್ಳಲು, ಅವರಿಗಿಂತಲೂ ನಾನು ಶಕ್ತಿಶಾಲಿ ಎಂದು ತೋರಿಸುವ ಪ್ರಯತ್ನ ನಾನು ಮಾಡಿದೆ’ ಎಂದರು.

ಅವರ ವಾದವನ್ನು ಸಂಪೂರ್ಣವಾಗಿ ನಿರಾಕರಿಸದ ಸುದೀಪ್, ‘ನೀವು ನರಕವಾಸಿಗಳಿಗೆ ಮಾನವೀಯತೆಯಿಂದ ಸಹಾಯ ಮಾಡಿದಿರಿ ಆದರೆ ಅದರಿಂದ ಸ್ವರ್ಗವಾಸಿಗೆ ತೊಂದರೆ ಆಯಿತು, ಮಾನವೀಯತೆ ಎಂಬುದು ಸಮಾನವಾಗಿರಬೇಕು ಅಲ್ಲವೆ ಎಂದು ಪ್ರಶ್ನಿಸಿದರು. ನೀವು ನಿಯಮ ಪಾಲಿಸುತ್ತೀನಿ ಎಂದು ಹೇಳಿದ್ದಿರಿ, ಆದರೆ ನೀವು ಹಲವು ಬಾರಿ ನಿಯಮ ಮುರಿದಿರಿ, ಕಷ್ಟದಲ್ಲಿರುವ ನರಕವಾಸಿಗಳಿಗಾಗಿ ನಿಯಮ ಮುರಿದೆ ಎನ್ನುತ್ತೀರಿ, ಆದರೆ ನಿಯಮ ಮುರಿಯುವುದನ್ನು ನೀವು ಎಂಜಾಯ್ ಮಾಡಿದಿರಿ. ಅಸಲಿಗೆ ನಿಮಗೆ ಎಲ್ಲರೂ ಗೌರವ ನೀಡುತ್ತಿದ್ದರು, ಆದರೆ ಯಾವುದೋ ಒಂದು ಸಂದರ್ಭದಲ್ಲಿ ಅದು ತುಸು ತಾಳ ತಪ್ಪಿತು, ಅದನ್ನು ನೀವು ಸರಿಯಾಗಿ ಹ್ಯಾಂಡಲ್ ಮಾಡಲಿಲ್ಲ ಹಾಗಾಗಿ ಅವರೆಲ್ಲ ಒಂದು, ನೀವು ಸಪ್ರೆಟ್ ಎನ್ನುವ ಪರಿಸ್ಥಿತಿ ನಿರ್ಮಾಣವಾಯ್ತು’ ಎಂದು ವಿಶ್ಲೇಷಣೆ ಮಾಡಿದರು ಸುದೀಪ್.

ಜಗದೀಶ್ ಅವರು ಬಿಗ್​ಬಾಸ್​ಗೆ ಬೆದರಿಕೆ ಹಾಕಿದ ವಿಷಯದ ಬಗ್ಗೆ ಮಾತನಾಡಿದ ಸುದೀಪ್, ‘ನೀವು ಬೆದರಿಕೆ ಹಾಕಿದರೆ ಅದು ವಿಶೇಷ ಅನ್ನಿಸಲಿಲ್ಲ, ಬಿಗ್​ಬಾಸ್ ಮನೆಯಲ್ಲಿ ಸಾಕಷ್ಟು ತಮಾಷೆ ನಡೆಯುತ್ತಿರುತ್ತದೆ. ನೀವು ಬೆದರಿಕೆ ಹಾಕಿದ್ದು ಸಹ ಜೋಕ್ ಮಾತ್ರ. ಆ ದೃಶ್ಯವನ್ನು ನಾನು ನೋಡಿದಾಗ ನಾನು ಬಿದ್ದು ಬಿದ್ದು ನಕ್ಕೆ’ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು ಸುದೀಪ್, ಮಾತು ಮುಂದುವರೆಸಿ, ‘ಬಿಗ್​ಬಾಸ್ ಶೋ ಅದ್ಭುತವಾದ ಶೋ, ಒಳ್ಳೆಯ ವೇದಿಕೆ, ಈ ವೇದಿಕೆಯಿಂದ ಸಾಕಷ್ಟು ಜನರ ಜೀವನ ಬದಲಾಗಿದೆ. ಆದರೆ ಇದನ್ನು ಮಣ್ಣು ಮಾಡಿಬಿಡುತ್ತೀನಿ ಎಂದರೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ’ ಎಂದು ಖಡಕ್​ ಆಗಿ ಹೇಳಿದರು ಕಿಚ್ಚ.

ವಾರದ ಮಧ್ಯದಲ್ಲಿ ಅಷ್ಟೆಲ್ಲ ಅಬ್ಬರಿಸಿದ್ದ ಜಗದೀಶ್ ಅವರು, ಕಿಚ್ಚ ಪ್ರತಿ ಮಾತನ್ನು ಸಾವಧಾನದಿಂದ ಕೇಳಿಸಿಕೊಂಡರು ಮಾತ್ರವಲ್ಲದೆ ಕಿಚ್ಚನ ಮಾತಿಗೆ ಸ್ವತಃ ಅವರೇ ಚಪ್ಪಾಳೆ ಹೊಡೆದರು. ಬಳಿಕ ‘ಹೌದು, ನಾನು ಮಾಡಿದ್ದು ತಪ್ಪು, ನಾನು ಹಾಗೆ ಮಾಡಬಾರದಿತ್ತು, ನನ್ನನ್ನು ಕ್ಷಮಿಸಿ’ ಎಂದು ಕ್ಷಮೆ ಸಹ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us