ಟಾಪ್​ 5 ಸ್ಥಾನದಿಂದ ಹೊರ ನಡೆದ ಅಕ್ಕ-ತಂಗಿ ಕಥೆ; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?

Kannada Serials TRP: ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕಳೆದ ಕೆಲ ದಿನಗಳಿಂದ ಒಳ್ಳೆಯ ಟಿಆರ್​ಪಿ ಪಡೆಯುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ.

ಟಾಪ್​ 5 ಸ್ಥಾನದಿಂದ ಹೊರ ನಡೆದ ಅಕ್ಕ-ತಂಗಿ ಕಥೆ; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಕನ್ನಡ ಧಾರಾವಾಹಿಗಳು

Updated on: Jul 13, 2023 | 12:30 PM

ಒಳ್ಳೆಯ ಟಿಆರ್​ಪಿ (TRP Serial) ಪಡೆಯಬೇಕು ಎನ್ನುವ ಉದ್ದೇಶದಿಂದ ಎಲ್ಲಾ ವಾಹಿನಿಗಳು ರೇಸ್​ಗೆ ಇಳಿದಿವೆ. ಬೇಡಿಕೆ ಇರುವ ಧಾರಾವಾಹಿಯ ಕಥೆಯಲ್ಲಿ ಕೊಂಚ ವ್ಯತ್ಯಾಸ ಆದರೂ ವೀಕ್ಷಕರಿಗೆ ಇಷ್ಟವಾಗದೇ ಇರಬಹುದು. ಆ ಸಂದರ್ಭದಲ್ಲಿ ಟಿಆರ್​ಪಿ ಕಡಿಮೆ ಆಗುತ್ತದೆ. ಸದ್ಯ ಕನ್ನಡ ಕಿರುತೆರೆಯಲ್ಲಿ (Kannada Serials) ಸ್ಪರ್ಧೆ ಜೋರಾಗಿದೆ. ಹೊಸಹೊಸ ಧಾರಾವಾಹಿಗಳ ಜೊತೆ ಈ ಮೊದಲು ಪ್ರಸಾರ ಆರಂಭಿಸಿದ ಧಾರಾವಾಹಿಗಳು ರೇಸ್​ಗೆ ಇಳಿದಿವೆ. ಕಳೆದ ವಾರದ (ಜೂನ್​ 30-ಜುಲೈ 6) ಟಿಆರ್​ಪಿ ರೇಟಿಂಗ್ ರಿವೀಲ್ ಆಗಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕಳೆದ ಕೆಲ ದಿನಗಳಿಂದ ಒಳ್ಳೆಯ ಟಿಆರ್​ಪಿ ಪಡೆಯುತ್ತಿದೆ. ಪುಟ್ಟಕ್ಕನ ಮಗಳ ಮದುವೆ ವಿಚಾರ ಹೈಲೈಟ್​ ಆಗುತ್ತಿದೆ. ಈ ಕಾರಣಕ್ಕೆ ಹೆಚ್ಚಿನ ವೀಕ್ಷಕರು ಈ ಧಾರಾವಾಹಿಯನ್ನು ನೋಡೋಕೆ ಆರಂಭಿಸಿದ್ದರು. ಇದರಿಂದ ಸಹಜವಾಗಿಯೇ ಟಿಆರ್​ಪಿ ಹೆಚ್ಚಿದೆ. ಈ ಕಾರಣಕ್ಕೆ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಕಳೆದ ಹಲವು ವಾರಗಳಿಂದ ಈ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ.

ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್​ ಅವರು ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿಗೆ ಟಿಆರ್​ಪಿ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದೆ. ಕಳೆದ ವಾರ ಮೂರನೇ ಸ್ಥಾನದಲ್ಲಿದ್ದ ‘ಅಮೃತಧಾರೆ’ ಧಾರಾವಾಹಿ, ಈ ವಾರವೂ ಅದೇ ಸ್ಥಾನ ಕಾಯ್ದುಕೊಂಡಿದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಗುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ ‘ಗಟ್ಟಿಮೇಳ’; ಇಲ್ಲಿದೆ ಟಾಪ್ 3 ಸೀರಿಯಲ್ಸ್

ನಾಲ್ಕನೇ ಸ್ಥಾನದಲ್ಲಿ ಈ ವಾರ ಎರಡು ಧಾರಾವಾಹಿಗಳು ಇವೆ. ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಹಾಗೂ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಗಳು ಇವೆ. ಎರಡೂ ಧಾರಾವಾಹಿಗೆ ಒಂದೇ ರೀತಿಯ ರೇಟಿಂಗ್ ಸಿಕ್ಕಿದೆ. ಐದನೇ ಸ್ಥಾನದಲ್ಲಿ ‘ನಮ್ಮ ಲಚ್ಚಿ’ಧಾರಾವಾಹಿ ಇದೆ. ಈ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಈ ವಾರ ಟಾಪ್​ ಐದರಲ್ಲಿ ಸುವರ್ಣ ವಾಹಿನಿಯ ಎರಡು ಧಾರಾವಾಹಿಗಳು ಇರೋದು ವಿಶೇಷ.

ಆರು ಹಾಗೂ ಏಳನೇ ಸ್ಥಾನದಲ್ಲಿ ಅನುಕ್ರಮವಾಗಿ ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗಳು ಇವೆ. ದಿನ ಕಳೆದಂತೆ ಅಕ್ಕ-ತಂಗಿ ಕಥೆಯ ಧಾರಾವಾಹಿಗಳಿಗೆ ಹಿನ್ನಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us