
ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ವಾರವಾಗಿದೆ. ಕಳೆದ ಭಾನುವಾರ ಶೋ ಪ್ರಾರಂಭವಾಗಿತ್ತು. 19 ಮಂದಿ ಸದಸ್ಯರು ಮನೆ ಸೇರಿದ್ದರು. ಆದರೆ ಶೋ ಶುರುವಾಗಿ 24 ಗಂಟೆಗಳಲ್ಲೇ ಒಬ್ಬರು ಮನೆಯಿಂದ ಎಲಿಮಿನೇಟ್ ಆಗಿಬಿಟ್ಟರು. ಉಡುಪಿಯ ರಕ್ಷಿತಾ ಶೆಟ್ಟಿ ಅವರನ್ನು ಏಕಾ ಏಕಿ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಕನ್ನಡ ಬಿಗ್ಬಾಸ್ ಇತಿಹಾಸದಲ್ಲಿಯೇ ಇಷ್ಟು ತ್ವರಿತವಾಗಿ ಯಾರೂ ಎಲಿಮಿನೇಟ್ ಆಗಿರಲಿಲ್ಲ. ರಕ್ಷಿತಾರ ಆಟವನ್ನು ನೋಡದೆ ಅವರನ್ನು ಹೊರಗೆ ಕಳಿಸಿದರ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಬಿಗ್ಬಾಸ್ ಅನ್ನು ಟೀಕೆ ಸಹ ಮಾಡಲಾಗಿತ್ತು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಬಿಗ್ಬಾಸ್ ಇದೀಗ ರಕ್ಷಿತಾ ಶೆಟ್ಟಿಯವರನ್ನು ಮರಳಿ ಮನೆಗೆ ಕರೆತಂದಿದ್ದಾರೆ.
ಇಂದು ಸಂಜೆ ಬಿಡುಗಡೆ ಆಗಿರುವ ಬಿಗ್ಬಾಸ್ ಪ್ರೋಮೊನಲ್ಲಿ ರಕ್ಷಿತಾ ಶೆಟ್ಟಿ ಅವರು ಬಿಗ್ಬಾಸ್ಗೆ ಮರಳಿರುವ ದೃಶ್ಯಗಳು ಇವೆ. ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮತ್ತೆ ಬಿಗ್ಬಾಸ್ಗೆ ಸ್ವಾಗತಿಸಿದ್ದಾರೆ. ಏನು ಹಠಾತ್ತನೆ ಹೊರಗೆ ಕಳಿಸಿಬಿಟ್ಟರಲ್ಲ ಎಂಬ ಸುದೀಪ್ ಅವರ ಪ್ರಶ್ನೆಗೆ, ಹೌದು ಸರ್, ಎಲ್ಲರೂ ಸೇರಿ ಹೊರಗೆ ಹಾಕಿಬಿಟ್ಟರು. ನಾನು ಹೋಗುವಾಗ ಎಲ್ಲರೂ ಬಂದು ಸಮಾಧಾನ ಮಾಡಿದರು ಆದರೆ ಯಾರೂ ಸಹ ನನ್ನ ಪರವಾಗಿ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಈಗ ಒಳಗೆ ಹೋಗಿ ಕೇಳುತ್ತೀನಿ, ಯಾಕೆ ಹಾಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತೀನಿ, ನನ್ನ ಆಟ ನೋಡದೇ ಏಕೆ ಹೀಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತೀನಿ ಎಂದು ಕೇಳುತ್ತೀನಿ, ಚೆನ್ನಾಗಿ ಆಡುತ್ತೀನಿ’ ಎಂದಿದ್ದಾರೆ.
ಇದನ್ನೂ ಓದಿ:‘ಫ್ಲೂಕಲ್ಲಿ ಫೇಮಸ್ ಆದವರು’ ಎಂಬ ಜಾನ್ವಿ ಮಾತಿಗೆ ರಕ್ಷಿತಾ ಶೆಟ್ಟಿ ಖಡಕ್ ಉತ್ತರ
ಯೂಟ್ಯೂಬರ್ ಆಗಿರುವ ಮುಂಬೈನ ಆದರೆ ಉಡುಪಿ ಮೂಲದ ರಕ್ಷಿತಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಾತುಗಳಿಂದ ಅಡುಗೆ ರೆಸಿಪಿಗಳಿಂದಲೂ ಜನಪ್ರಿಯರು. ಆದರೆ ಅವರ ಆಟವನ್ನು ಸಹ ನೋಡದೆ ಅವರನನ್ನು ಹೊರಗೆ ಹಾಕಿದ್ದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ರಕ್ಷಿತಾ ಸಹ ವಿಡಿಯೋ ಒಂದರಲ್ಲಿ ತಮ್ಮ ಬೇಸರ ಹೊರಹಾಕಿದ್ದರು. ರಕ್ಷಿತಾ ಅವರು ಕೇವಲ ತಮ್ಮ ಮಾತುಗಳಿಂದ ಮಾತ್ರವಲ್ಲ ಅವರು ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಇದೀಗ ನೆಟ್ಟಿಗರ ಒತ್ತಾಯಕ್ಕೆ ಮಣಿದು ಬಿಗ್ಬಾಸ್ ರಕ್ಷಿತಾರಿಗೆ ಮತ್ತೊಂದು ಅವಕಾಶ ನೀಡಿದೆ.
ವಿಶೇಷವೆಂದರೆ ಈ ವಾರ ಬಿಗ್ಬಾಸ್ ಮನೆಯಿಂದ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಇಬ್ಬರ ಎಲಿಮಿನೇಷನ್ನಿಂದ ತೆರವಾಗುವ ಜಾಗಕ್ಕೆ ಈಗ ರಕ್ಷಿತಾ ಶೆಟ್ಟಿ ಹೋಗಿ ಸೇರಲಿದ್ದಾರೆ. ಅಲ್ಲಿಗೆ ಮತ್ತೆ ಮನೆ ಸದಸ್ಯರ ಸಂಖ್ಯೆ ಹದಿನೆಂಟು ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Sat, 4 October 25