
ಧಾರಾವಾಹಿಗಳಿಗೆ ‘ಸನ್ ಉದಯ’ (Sun Udaya) ವಾಹಿನಿ ಮೊದಲಿನಿಂದಲೂ ಫೇಮಸ್. ಇತ್ತೀಚೆಗಷ್ಟೇ ‘ಮೂಗುತಿ ಮಲ್ಲಿ’, ‘ಮಹಾಲಕ್ಷ್ಮೀ ಮದುವೆ’ ರೀತಿಯ ವಿನೂತನ ಧಾರಾವಾಹಿಯನ್ನು ನೀಡಿ ನೋಡುಗರಿಂದ ಮೆಚ್ಚುಗೆ ಪಡೆದ ಈ ವಾಹಿನಿಯು ಈಗ ‘ಭಾಗ್ಯವಂತರು’ (Bhagyavantaru) ಶೀರ್ಷಿಕೆಯಲ್ಲಿ ಹೊಸ ಸೀರಿಯಲ್ ಆರಂಭಿಸುತ್ತಿದೆ. ಪವರ್ಫುಲ್ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಈ ಧಾರಾವಾಹಿ (Kannada Serial) ಜುಲೈ 6ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ.
ಎ.ಎಸ್.ಎಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಆಗುತ್ತಿರುವ ‘ಭಾಗ್ಯವಂತರು’ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ರಮಣ ಬಂಗಾರು ಅವರು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಭ್ರ ಪುತ್ರಕಳ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ. ಸುಮಾ ಶಿಂಗ್ನಳ್ಳಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಛಾಯಾಗ್ರಾಹಕರಾಗಿ ಗೌತಮ್ ಕೃಷ್ಣನ್ ಕೆಲಸ ಮಾಡುತ್ತಿದ್ದಾರೆ.
ಈ ಧಾರಾವಾಹಿಯ ಕಥೆಯ ಕೇಂದ್ರಬಿಂದು ಆಗಿರುವುದು ಜನನಿ. ಅಪ್ಪನ ಮುದ್ದಿನ ಮಗಳು ಈಕೆ. ತನ್ನ ತಂದೆ ಶ್ಯಾಮಸುಂದರ್ ಅವರ ಕನಸನ್ನು ನನಸಾಗಿಸಲು ಶಿಕ್ಷಣವನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವ ಜನನಿ, ಭವಿಷ್ಯದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಕನಸು ಕಾಣುತ್ತಾಳೆ. ತಂದೆಯ ಆಶಯದಂತೆ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಒತ್ತು ನೀಡಿದ ಜನನಿಯನ್ನು, ಉತ್ತಮ ಭವಿಷ್ಯಕ್ಕಾಗಿ ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿ ನಾಯಕ್ ಅವರೊಂದಿಗೆ ವಿವಾಹ ಮಾಡಲಾಗುತ್ತದೆ.
ಸಾಕಷ್ಟು ಸಂಪತ್ತನ್ನು ಗಳಿಸಿರುವ ಗುಣಶೇಖರ್ ನಾಯಕ್ ಅವರ ಕೊನೆಯ ಸಹೋದರ ಶಕ್ತಿ ನಾಯಕ್. ಗುಣಶೇಖರನ ಮನೆಯಲ್ಲಿ ಈಗಾಗಲೇ ಡಬಲ್ ಡಿಗ್ರಿ ಮಾಡಿರುವ ಮೂವರು ಸೊಸೆಯಂದಿರಿದ್ದು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುತ್ತಾರೆ. ಇವರ ಜೊತೆಗೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಈ ಮನೆಗೆ ಕಾಲಿಡುತ್ತಾಳೆ ಜನನಿ. ಆದರೆ ಗಂಡನ ಮನೆ ಮತ್ತು ತಾನು ಮಾಡುವ ಕೆಲಸವನ್ನು ಸರಿಯಾಗಿ ಮುನ್ನಡೆಸುವುದು ಜನನಿಗೆ ಒಂದು ಸವಾಲ್. ಈ ಸವಾಲಿನಲ್ಲಿ ಜನನಿ ಯಾವ ರೀತಿ ಯಶಸ್ವಿಯಾಗುತ್ತಾಳೆ ಎಂಬುದು ಈ ಧಾರಾವಾಹಿಯ ಕಥಾ ಹಂದರ.
ಇದನ್ನೂ ಓದಿ: ‘ಸನ್ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’
ಈ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ತನ್ವಿ ರಾವ್ ನಟಿಸುತ್ತಿದ್ದಾರೆ. ನಾಯಕನಾಗಿ ವಿಕಾಸ್ ಅವರು ನಟಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಸುಚೇಂದ್ರ ಪ್ರಸಾದ್, ಆರ್.ಕೆ. ಚಂದನ್, ಶೋಭರಾಜ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಸುರೇಶ್ ರೈ, ಶಾಲನಿ, ಧನ್ಯಾ, ಸಮೀಕ್ಷಾ, ವರ್ಷಾ, ಮಧುಸಾಗರ, ಲಕ್ಷ್ಮೀ ಹೆಗ್ಡೆ, ಶ್ರೀವಾಯು, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್, ಜಯಲಕ್ಷ್ಮೀ ಪಟೇಲ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.