AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್ರೀರಾಮನ ಪಾತ್ರ ಮಾಡಲು ಭಯ, ಅನುಮಾನ ಇತ್ತು’: ವಿವರಿಸಿದ ರಣಬೀರ್ ಕಪೂರ್

ಈ ವರ್ಷ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲು ಸಜ್ಜಾಗಿರುವ ‘ರಾಮಾಯಣ’ ಸಿನಿಮಾವನ್ನು ವಿಶ್ವಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್​ದಾರೆ. ರಾಮನ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದರ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಾರೆ.

‘ಶ್ರೀರಾಮನ ಪಾತ್ರ ಮಾಡಲು ಭಯ, ಅನುಮಾನ ಇತ್ತು’: ವಿವರಿಸಿದ ರಣಬೀರ್ ಕಪೂರ್
Ranbir Kapoor
ಮದನ್​ ಕುಮಾರ್​
|

Updated on: Jul 24, 2026 | 10:16 PM

Share

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ನಿರ್ದೇಶಕ ನಿತೀಶ್ ತಿವಾರಿ, ನಟರಾದ ಯಶ್, ರಣಬೀರ್ ಕಪೂರ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (San Diego Comic-Con) ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಶ್ರೀರಾಮನ ಪಾತ್ರ ನಿರ್ವಹಿಸುವ ಬಗ್ಗೆ ಮಾತನಾಡಿದ ರಣಬೀರ್ ಕಪೂರ್ (Ranbir Kapoor), ಮೊದಲ ಬಾರಿಗೆ ಈ ಅವಕಾಶ ಬಂದಾಗ ತಮ್ಮಲ್ಲಿ ಮೂಡಿದ್ದ ಭಯ ಮತ್ತು ಅನುಮಾನಗಳನ್ನು ಹಂಚಿಕೊಂಡಿದ್ದಾರೆ.

‘ಬಹಳಷ್ಟು ಭಯ ಮತ್ತು ಗೊಂದಲಗಳಿದ್ದವು’

‘ಈ ಸಿನಿಮಾದ ಆಫರ್ ನನ್ನ ಬಳಿ ಬಂದಾಗ ನನಗೆ ತುಂಬಾ ಭಯ ಮತ್ತು ಅನುಮಾನಗಳಿದ್ದವು. ನನ್ನಿಂದ ಇದು ಸಾಧ್ಯವೇ? ನಾನು ಈ ಪಾತ್ರಕ್ಕೆ ಅರ್ಹನೇ ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ಆದರೆ, ಆ ಅನುಮಾನಗಳು ಶೀಘ್ರದಲ್ಲೇ ಧನ್ಯತಾ ಭಾವವಾಗಿ ಬದಲಾದವು. ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ, ಆಶೀರ್ವಾದ ಹಾಗೂ ನೈತಿಕ ಜವಾಬ್ದಾರಿ ಎಂದು ಭಾವಿಸಿದೆ. ರಾಮಾಯಣವು ನಮ್ಮ ಪ್ರಜ್ಞೆಯಲ್ಲೇ ಬೆರೆತುಹೋಗಿದೆ. 4000ಕ್ಕೂ ಹೆಚ್ಚು ವರ್ಷಗಳಿಂದ ಲಕ್ಷಾಂತರ ಜನರ ಧರ್ಮ ಮತ್ತು ಧೈರ್ಯದ ಸಂಕೇತವಾಗಿರುವ ಶ್ರೀರಾಮನ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಪ್ರತಿನಿಧಿಸುವುದು ಅತ್ಯಂತ ಸವಾಲಿನ ಕೆಲಸ’ ಎಂದು ರಣಬೀರ್ ಹೇಳಿದ್ದಾರೆ.

ಶ್ರೀರಾಮನ ಪಾತ್ರವನ್ನು ಪೂರ್ಣಗೊಳಿಸಲು ಪರಿಪೂರ್ಣತೆಗಿಂತ ಹೆಚ್ಚಾಗಿ ಪ್ರಾಮಾಣಿಕತೆ ಮತ್ತು ನಂಬಿಕೆ ಮುಖ್ಯ ಎಂಬುದನ್ನು ತಾವು ಅರ್ಥಮಾಡಿಕೊಂಡಿರುವುದಾಗಿ ರಣಬೀರ್ ತಿಳಿಸಿದರು. ತೆರೆಮೇಲೆ ಈ ಪಾತ್ರವನ್ನು ನೋಡಲು ರಣಬೀರ್ ಕಪೂರ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ರಣಬೀರ್ ಬಗ್ಗೆ ನಟ ಯಶ್ ಹೇಳಿದ್ದೇನು?

ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಅವರು ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಅವರ ಆಯ್ಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ನಾನು ಶುದ್ಧವಾಗಿದ್ದೆ’: ಸಾಯಿ ಪಲ್ಲವಿ

‘ಈ ಪ್ರಪಂಚದಲ್ಲಿ ಯಾರೂ ಬಂದು ನನ್ನಲ್ಲಿ ಶ್ರೀರಾಮನ ಪಾತ್ರ ಮಾಡಲು ಬೇಕಾದ ಎಲ್ಲಾ ಸದ್ಗುಣಗಳಿವೆ ಎಂದು ಹೇಳಲು ಸಾಧ್ಯವಿಲ್ಲ. ರಣಬೀರ್ ಕೂಡ ಅದೇ ಮಾತು ಹೇಳಿರುವುದು ಅವರ ವಿನಮ್ರತೆಯನ್ನು ತೋರಿಸುತ್ತದೆ. ಅವರು ಅದ್ಭುತ ನಟ. ಶ್ರೀರಾಮನ ಪಾತ್ರ ಮಾಡುವುದು ಸುಲಭದ ಮಾತಲ್ಲ. ಅವರು ಈ ಪಾತ್ರಕ್ಕಾಗಿ ಪಟ್ಟಿರುವ ಶ್ರಮಕ್ಕೆ ನನ್ನ ಕಡೆಯಿಂದ ದೊಡ್ಡ ಗೌರವವಿದೆ’ ಎಂದು ಯಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us