ಬಿಗ್​ ಬಾಸ್ ಆದೇಶ ಮೀರಿ ನಡೆದುಕೊಂಡ ತುಕಾಲಿ ಸಂತೋಷ್​; ಈ ತಪ್ಪಿನಿಂದ ಎಲ್ಲರಿಗೂ ಶಿಕ್ಷೆ

|

Updated on: Nov 06, 2023 | 10:57 PM

ಬೆಳಗ್ಗೆ ಆರಂಭವಾದ ಟಾಸ್ಕ್​ ಮಧ್ಯಾಹ್ನ 12.40ರ ತನಕ ಮುಂದುವರಿಯಿತು. ಆದರೆ ಇಷ್ಟು ದೀರ್ಘವಾದ ಕಾಲ ಟಾಸ್ಕ್​ನಲ್ಲಿ ಭಾಗಿ ಆಗಲು ತಕಾಲಿ ಸಂತೋಷ್​ ಅವರಿಗೆ ಸಾಧ್ಯವಾಗಲಿಲ್ಲ. ಬಿಗ್​ ಬಾಸ್ ಮನೆಯ ಮೂಲ ನಿಯಮವನ್ನು ಅವರು ಉಲ್ಲಂಘಿಸಿದರು. ಅದರಿಂದಾಗಿ ಕೆಲವು ದಿನಸಿ ವಸ್ತುಗಳನ್ನು ವಾಪಸ್​ ಪಡೆಯಲಾಯಿತು.

ಬಿಗ್​ ಬಾಸ್ ಆದೇಶ ಮೀರಿ ನಡೆದುಕೊಂಡ ತುಕಾಲಿ ಸಂತೋಷ್​; ಈ ತಪ್ಪಿನಿಂದ ಎಲ್ಲರಿಗೂ ಶಿಕ್ಷೆ
ಮೈಕೆಲ್​, ತುಕಾಲಿ ಸಂತೋಷ್​
Follow us on

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. 5ನೇ ವಾರದ ಆಟ ಇನ್ನಷ್ಟು ಕಠಿಣ ಆಗಿದೆ. ಸೋಮವಾರದ (ನವೆಂಬರ್ 06​) ಎಪಿಸೋಡ್​ನ ಆರಂಭದಲ್ಲೇ ಬಿಗ್​ ಬಾಸ್​ (Bigg Boss) ಒಂದು ಟಾಸ್ಕ್​ ನೀಡಿದರು. ಬೆಳಿಗ್ಗೆ ಎದ್ದ ಕೂಡಲೇ ಯಾರೂ ಕೂಡ ಬೆಡ್​ ರೂಂ ಬಿಟ್ಟು ಹೊರಗೆ ಬರಬಾರದು ಎಂದು ಆದೇಶಿಸಿದರು. ಕೆಲವು ನಿಮಿಷಗಳ ಬಳಿಕ ಎಲ್ಲರೂ ಒಂದೇ ಸೋಫಾದ ಮೇಲೆ ಕುಳಿತುಕೊಳ್ಳಬೇಕು. ನೆಲದ ಮೇಲೆ ಯಾರೂ ಕಾಲು ಇಡುವಂತಿಲ್ಲ ಎಂದು ಆದೇಶಿಸಿದರು. ಯಾರಾದರೂ ಕಾಲು ಕೆಳಗೆ ಇಟ್ಟರೆ ಮನೆಯ ದಿನಸಿ ವಸ್ತುಗಳ ಪೈಕಿ ಕೆಲವನ್ನು ವಾಪಸ್​ ಪಡೆಯಲಾಗುವುದು ಎಂದು ನಿಯಮ ಹಾಕಲಾಗಿತ್ತು. ಈ ಟಾಸ್ಕ್​ ವೇಳೆ ತುಕಾಲಿ ಸಂತೋಷ್​ (Tukali Santosh) ಅವರು ಬಿಗ್​ ಬಾಸ್​ ಮನೆಯ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರು. ಅದರಿಂದ ಎಲ್ಲರಿಗೂ ಶಿಕ್ಷೆ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಯಾರೂ ಕೂಡ ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವಂತಿಲ್ಲ. ಅದರಲ್ಲೂ ಟಾಸ್ಕ್​ ವೇಳೆ ಮಲಗಿದರೆ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಬೆಡ್​ ರೂಮ್​ ಒಳಗೆ ಒಂದೇ ಜಾಗದಲ್ಲಿ ಎಲ್ಲರೂ ಇರಬೇಕು ಎಂದು ಬಿಗ್​ ಬಾಸ್​ ಟಾಸ್ಕ್​ ನೀಡಿದ್ದಾಗ ತುಕಾಲಿ ಸಂತೋಷ್​ ಅವರು ಕುಳಿತುಕೊಂಡು ನಿದ್ರೆ ಮಾಡಿದರು. ಇದರಿಂದ ಮನೆಯಲ್ಲಿನ ದಿನಸಿಗಳ ಪೈಕಿ ಹಾಲು ಮತ್ತು ಮೊಟ್ಟೆಯನ್ನು ವಾಪಸ್​ ಪಡೆಯಲಾಯಿತು.

ಇದನ್ನೂ ಓದಿ: BBK 10: ವೀಕೆಂಡ್ ಬಂದರೆ ಸಾಕು ಅಮಾಯಕನಂತೆ ವರ್ತಿಸುತ್ತಾರೆ ತುಕಾಲಿ ಸಂತೋಷ್; ಬಣ್ಣ ಬಯಲು ಮಾಡಿದ ಸುದೀಪ್

ಈ ಘಟನೆ ಆಗುವುದಕ್ಕಿಂತ ಕೆಲವೇ ನಿಮಿಷಗಳ ಮುಂಚೆ ಮೊಟ್ಟೆ ಮತ್ತು ಹಾಲಿನ ಸಲುವಾಗಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಅವರವರ ಪಾಲಿನ ಮೊಟ್ಟೆಯನ್ನು ಮೊದಲೇ ಹಂಚಿಕೆ ಮಾಡಬೇಕು ಎಂದು ಕೆಲವರು ವಾದಿಸಿದ್ದರು. ಹಾಗೆ ಮಾಡಬಾರದು ಎಂದು ಇನ್ನೂ ಕೆಲವರು ಹೇಳಿದ್ದರು. ಇಷ್ಟೆಲ್ಲ ಚರ್ಚೆ ನಡೆದ ಮರುಕ್ಷಣವೇ ತುಕಾಲಿ ಸಂತೋಷ್​ ಅವರು ನಿದ್ರೆ ಮಾಡಿದ್ದರಿಂದ ಇಡೀ ಬಿಗ್​ ಬಾಸ್​ ಮನೆಯ ಸದಸ್ಯರು ಮೊಟ್ಟೆ ಮತ್ತು ಹಾಲನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ಇಡೀ ವಾರ ಪೂರ್ತಿ ಮನೆ ಮಂದಿ ಕಷ್ಟಪಡುವಂತಾಗಿದೆ.

ಇದನ್ನೂ ಓದಿ: ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

ಬೆಳಗ್ಗೆ ಆರಂಭವಾದ ಟಾಸ್ಕ್​ ಮಧ್ಯಾಹ್ನ 12.40ರ ತನಕ ಮುಂದುವರಿಯಿತು. ಆದರೆ ಇಷ್ಟು ದೀರ್ಘ ಕಾಲ ಟಾಸ್ಕ್​ನಲ್ಲಿ ಭಾಗಿ ಆಗಲು ತಕಾಲಿ ಸಂತೋಷ್​ ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಅವರು ಅನಿವಾರ್ಯವಾಗಿ ವಾಶ್​ರೂಮ್​ಗೆ ಹೋಗಲೇಬೇಕು ಎಂಬ ಪರಿಸ್ಥಿತಿ ಬಂತು. ಆ ಕಾರಣದಿಂದಲೂ ಮನೆಯಲ್ಲಿನ ದಿನಸಿಗಳ ಪೈಕಿ ಎರಡು ಬಾಸ್ಕೆಟ್​ಗಳನ್ನು ವಾಪಸ್ ಪಡೆಯಲಾಯಿತು. ಒಟ್ಟಿನಲ್ಲಿ ತುಕಾಲಿ ಸಂತೋಷ್​ ಅವರು ಮಾಡಿದ ಈ ಎರಡು ತಪ್ಪಿನಿಂದಾಗಿ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಊಟದ ವಿಚಾರದಲ್ಲಿ ಕೊರತೆ ಆಗಲಿದೆ. ಜಿಯೋ ಸಿನಿಮಾದಲ್ಲಿ ಈ ಶೋ ಉಚಿತವಾಗಿ ನೋಡಬಹುದು. ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡದಲ್ಲಿ ಎಪಿಸೋಡ್​ ಪ್ರಸಾರ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.