Weekend With Ramesh: ಶೋನಲ್ಲಿ ಮಗನ ಬಗ್ಗೆ ಮಾತನಾಡಿಲಿಲ್ಲವೇಕೆ ಪ್ರಭುದೇವ? ಅಂಥಹದ್ದೇನಾಗಿತ್ತು?

|

Updated on: Apr 03, 2023 | 3:53 PM

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಜೀವನದ ಹಲವು ಘಟನೆಗಳನ್ನು ಮೆಲುಕು ಹಾಕಿದ ಪ್ರಭುದೇವ, ಅವರ ಮಗನ ವಿಷಯ ಬರುತ್ತಿದ್ದಂತೆ ಭಾವುಕರಾದರು. ಆದರೆ ಆ ಬಗ್ಗೆ ಮಾತನಾಡಲಿಲ್ಲ, ಏನಾಗಿತ್ತು ಪ್ರಭುದೇವ ಮಗನಿಗೆ...?

Weekend With Ramesh: ಶೋನಲ್ಲಿ ಮಗನ ಬಗ್ಗೆ ಮಾತನಾಡಿಲಿಲ್ಲವೇಕೆ ಪ್ರಭುದೇವ? ಅಂಥಹದ್ದೇನಾಗಿತ್ತು?
ವಿಶಾಲ್ ದೇವ
Follow us on

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ ಪ್ರಾರಂಭವಾಗಿ ಎರಡು ವಾರವಾಗಿದೆ. ಮೊದಲ ಅತಿಥಿಯಾಗಿ ನಟಿ ರಮ್ಯಾ ಬಂದಿದ್ದರೆ ಎರಡನೇ ಅತಿಥಿಯಾಗಿ ನಟ, ನಿರ್ದೇಶಕ, ಅಪ್ರತಿಮ ನೃತ್ಯ ಕಲಾವಿದ ಪ್ರಭುದೇವ (Prabhu Deva) ಬಂದಿದ್ದರು. ರಮ್ಯಾ ಎಪಿಸೋಡ್​ ಚೆನ್ನಾಗಿತ್ತಾದರೂ ಇಂಗ್ಲೀಷ್ ಹೆಚ್ಚಾಗಿ ಬಳಸಿದ್ದಕ್ಕೆ ಟ್ರೋಲ್ ಸಹ ಆಯಿತು. ಆದರೆ ಎರಡನೇ ಅತಿಥಿ ಪ್ರಭುದೇವ ಅವರ ಎಪಿಸೋಡ್ ಅನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಅವರು ಮಾತನಾಡಿದ ಚಾಮರಾಜನಗರ ಕನ್ನಡವಂತೂ ಕನ್ನಡಿಗರ ಹೃದಯ ಗೆದ್ದಿದೆ. ಜೀವನದ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರು ಹಾಕಿ ಮೈಲೇಜ್ ಗಿಟ್ಟಿಸಿಕೊಳ್ಳುವ ಬದಲಿಗೆ ತಮ್ಮ ಬಾಲ್ಯ, ತುಂಟಾಟ, ನೃತ್ಯ ಕಲಿಸಿದ ಗುರುಗಳು, ಅವಕಾಶ ಕೊಟ್ಟ ಮಹನೀಯರು, ಪೋಷಕರು, ಸಂಬಂಧಿಕರು ತೋರಿದ ಪ್ರೀತಿಯನ್ನು ಪ್ರಭು ನೆನಪಿಸಿಕೊಂಡಿದ್ದಾರೆ.

ಸಾಧಕರ ಕುರ್ಚಿ ಮೇಲೆ ಕೂರುವ ಸೆಲೆಬ್ರಿಟಿಗಳ ಬಾಲ್ಯ, ವೃತ್ತಿ ಇತ್ಯಾದಿಗಳ ಬಗ್ಗೆ ಮಾತನಾಡಿದ ಬಳಿಕ ಅವರ ಜೀವನದ ಕಷ್ಟಗಳನ್ನು, ನೋವುಗಳನ್ನು ಕೆದಕುವುದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಫಾರ್ಮ್ಯಾಟ್. ಪ್ರಭುದೇವ ಅವರ ಜೀವನದ ಒಂದು ಕಹಿ ಘಟನೆ ಬಗ್ಗೆಯೂ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಯಿತಾದರೂ ಪ್ರಭುದೇವ ಅದರ ಬಗ್ಗೆ ಏನೂ ಮಾತನಾಡದೆ, ಈ ಟಾಪಿಕ್ ಬೇಡ ಬದಲಾಯಿಸಿ ಎಂದು ಸನ್ನೆ ಮಾಡಿದರು.

ಆಗಿದ್ದಿಷ್ಟು, ಪ್ರಭುದೇವ ಅವರ ಬಗ್ಗೆ ಹಲವು ಸೆಲೆಬ್ರಿಟಿಗಳು ವಿಡಿಯೋ ಮೂಲಕ ಮಾತನಾಡಿ ಶುಭ ಕೋರಿದರು. ನಟ ಪ್ರಕಾಶ್ ರೈ ಸಹ ತಮ್ಮ ಹಾಗೂ ಪ್ರಭುದೇವ ಅವರ ಗೆಳೆತನದ ಬಗ್ಗೆ ಮಾತನಾಡುತ್ತಾ, ಅವರ ಪುತ್ರ ಕಾಲವಾದಾಗ ನಾನು ಅವರೊಟ್ಟಿಗೆ ಇದ್ದೆ ಎಂದು ನೆನಪು ಮಾಡಿಕೊಂಡರು. ಆಗ ವೇದಿಕೆ ಮೇಲೆ ಪ್ರಭುದೇವ ಅವರ ಮಗನ ಚಿತ್ರವನ್ನು ಪ್ರದರ್ಶಿಸಲಾಯಿತು. ಅದನ್ನು ಕಂಡು ಪ್ರಭುದೇವ ಭಾವುಕರಾದರು. ಆಗ ನಿರೂಪಕ ರಮೇಶ್ ಅವರು, ಹೇಳಿ ಪ್ರಭುದೇವ ಅವರೇ ಏನಾಯಿತು ಮಗನಿಗೆ? ಎಂದಾಗ ಪ್ರಭುದೇವ ಅವರಿಗೆ ಮಾತೇ ಹೊರಡಲಿಲ್ಲ. ನಿಮಗೆ ಹಂಚಿಕೊಳ್ಳಲು ಸೂಕ್ತ ಎನಿಸಿದರಷ್ಟೆ ಮಾತನಾಡಿ ಇಲ್ಲವಾದರೆ ಪರವಾಗಿಲ್ಲ ಎಂದರು, ಆಗಲೂ ಕ್ಷಣ ಕಾಲ ಸುಮ್ಮನೇ ಇದ್ದ ಪ್ರಭುದೇವ, ಸನ್ನೆ ಮೂಲಕ ಇದನ್ನು ಸ್ಕಿಪ್ ಮಾಡಿ ಬೇರೆ ಟಾಪಿಕ್ ಮಾತನಾಡೋಣ ಎಂದರು. ಅಂತೆಯೇ ರಮೇಶ್ ಸಹ ಆ ವಿಷಯ ಕೆದಕದೆ ಬೇರೆ ವಿಷಯವನ್ನು ಮುನ್ನೆಲೆಗೆ ತಂದರು.

ಆದರೆ ಪ್ರಭುದೇವ ಅವರ ಮಗನಿಗೆ ಏನಾಯಿತು, ಸಣ್ಣ ವಯಸ್ಸಿನಲ್ಲಿಯೇ ಅವರ ಪುತ್ರ ನಿಧನ ಹೊಂದಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಶೋನಲ್ಲಿ ಉತ್ತರ ಸಿಗಲಿಲ್ಲ. ಪ್ರಭುದೇವ ಮೊದಲಿಗೆ ಲತಾ ಎಂಬುವರನ್ನು ವಿವಾಹವಾದರು. ಅವರಿಗೆ ಮೂರು ಮಂದಿ ಮಕ್ಕಳು. ವಿಶಾಲ್ ದೇವ, ರಿಶಿ ರಾಘವೇಂದ್ರ ದೇವ ಹಾಗೂ ಅದಿತಿ ದೇವ. ಅವರ ಮೊದಲ ಮಗ ವಿಶಾಲ್ ದೇವಗೆ ಬಹಳ ಸಣ್ಣ ವಯಸ್ಸಿನಲ್ಲಿಯೇ ಕ್ಯಾನ್ಸರ್​ ತಗುಲಿತು. ಕೆಲ ಕಾಲ ಸಾವು-ಬದುಕಿನೊಟ್ಟಿಗೆ ಹೋರಾಡಿದ ವಿಶಾಲ್ ತನ್ನ 13ನೇ ವಯಸ್ಸಿನಲ್ಲಿ 2008 ರಲ್ಲಿ ನಿಧನ ಹೊಂದಿದರು. ಇದು ಪ್ರಭುದೇವ ಜೀವನದ ಅತ್ಯಂತ ನೋವಿನ ಘಟನೆ. ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ವಿಶಾಲ್ ಚಿತ್ರವನ್ನು ಪ್ರದರ್ಶಿಸಿದಾಗ ಪ್ರಭುದೇವ ಭಾವುಕರಾಗಿಬಿಟ್ಟರು, ಅವರ ಬಾಯಿಂದ ಮಾತು ಸಹ ಹೊರಡಲಿಲ್ಲ.

ಇದನ್ನೂ ಓದಿ: Weekend With Ramesh: ಪ್ರಭುದೇವಗೆ ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್, ಅವರ ಭವಿಷ್ಯ ಬದಲಾಯಿಸಿತು

ಲತಾ ಅವರೊಟ್ಟಿಗೆ ಮದುವೆಯಾಗಿದ್ದ ಪ್ರಭುದೇವ 2010 ರ ಸಮಯದಲ್ಲಿ ನಯನತಾರಾ ಅವರೊಟ್ಟಿಗೆ ಲಿವಿನ್ ರಿಲೇಶನ್​ಶಿಪ್ ಪ್ರಾರಂಭಿಸಿದರು. ಆದರೆ ಇದಕ್ಕೆ ಅವರ ಪತ್ನಿ ಲತಾ ಅವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕೆಲವು ಮಹಿಳಾ ಸಂಘಟನೆಗಳು ನಯನತಾರಾ ವಿರುದ್ಧ ಪ್ರತಿಭಟನೆ ಸಹ ನಡೆಸಿದವು. ಬಳಿಕ 2011 ರಲ್ಲಿ ಪ್ರಭುದೇವ ಹಾಗೂ ಲತಾ ವಿಚ್ಚೇದನ ಪಡೆದುಕೊಂಡರು. ನಯನತಾರಾ ಸಹ 2012 ರಲ್ಲ ಪ್ರಭುದೇವ ಅವರಿಂದ ದೂರವಾದರು. ಎರಡು ವರ್ಷದ ಹಿಂದೆ ಮುಂಬೈನ ಮನೋವೈದ್ಯೆ ಹಿಮಾನಿಯವರನ್ನು ಮದುವೆಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:52 pm, Mon, 3 April 23