ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ; ಚಿತ್ರರಂಗದ ಕಂಬನಿ

ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನರಾಗಿದ್ದಾರೆ. ಇವರೊಂದಿಗೆ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಭರತ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದವರು ತೀವ್ರ ಸಂತಾಪ ಸೂಚಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ; ಚಿತ್ರರಂಗದ ಕಂಬನಿ
Bharath Kanth

Updated on: May 11, 2026 | 5:49 PM

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Car Accident) ನಿಧನರಾಗಿದ್ದಾರೆ. ಭರತ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಾಯಿ ತ್ರಿಲೋಕ್ ಎಂಬುವವರು ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಿಟ್ ನಂ. 12ರ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಭರತ್ ಕಾಂತ್ (Bharath Kanth), ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಭರತ್ ಕಾಂತ್ ಅವರು ‘ಗ್ರಾಮಂ’ ಮತ್ತು ‘ಟೆನೆಂಟ್’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಕೇವಲ ಸಿನಿಮಾಗಳಲ್ಲದೇ ‘ಗೀತಾಂಜಲಿ’ ಮತ್ತು ‘ಪಾರ್ವತಿ ಪರಮೇಶ್ವರಲು’ ಮುಂತಾದ ಜನಪ್ರಿಯ ವೆಬ್ ಸರಣಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅವರೊಂದಿಗೆ ಮೃತಪಟ್ಟ ಸಾಯಿ ತ್ರಿಲೋಕ್ ಅವರು ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.

ಭರತ್ ಅವರ ಆಪ್ತ ಗೆಳತಿ ಹಾಗೂ ನಟಿ ಆಶು ರೆಡ್ಡಿ ಈ ಸಾವಿನ ಸುದ್ದಿಯಿಂದ ದಿಗ್ಭ್ರಾಂತರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭರತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಇದು ನನಗೆ ವೈಯಕ್ತಿಕ ನಷ್ಟ. ನನ್ನ ಆತ್ಮೀಯ ಗೆಳೆಯ, ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್ ಮತ್ತು ನನ್ನ ಕುಟುಂಬದಂತಿದ್ದ ವ್ಯಕ್ತಿ ಈಗ ನಿಧನರಾಗಿದ್ದಾರೆ. ನೀನು ಹೋದ ಜಾಗಕ್ಕೆ ಈ ಸಂದೇಶ ತಲುಪುವುದಿಲ್ಲ ಎಂದು ಗೊತ್ತಿದ್ದರೂ ಬರೆಯುತ್ತಿದ್ದೇನೆ. ನಿನ್ನ ನಗು ಯಾವಾಗಲೂ ನೆನಪಿರುತ್ತದೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ

ಕಾರು ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರ ದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us