ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

ನಟ ದಳಪತಿ ವಿಜಯ್ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದ ನಿರ್ಮಾಪಕ ಆರ್​.ಬಿ. ಚೌಧರಿ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅಪಘಾತದ ತೀವ್ರತೆಗೆ ನಜ್ಜುಗುಜ್ಜಾದ ಅವರ ಕಾರಿನ ಫೋಟೋ ವೈರಲ್ ಆಗಿದೆ.

ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ
Car Accident, RB Choudary

Updated on: May 05, 2026 | 9:35 PM

ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ (RB Choudary) (68) ಅವರು ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ನಿಧನರಾಗಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ಉದಯಪುರಕ್ಕೆ ತೆರಳಿದ್ದ ಚೌಧರಿ ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ (Car Accident) ವೇಳೆ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

1. ರಸ್ತೆ ಅಪಘಾತದಲ್ಲಿ ನಿಧನರಾದ ನಿರ್ಮಾಪಕ ಆರ್.ಬಿ. ಚೌಧರಿ.

2. ಹಲವು ಮಂದಿ ಹೊಸಬರಿಗೆ ಅವಕಾಶ ಕೊಟ್ಟಿದ್ದ ನಿರ್ಮಾಪಕ.

3. ‘ಸೂಪರ್ ಗುಡ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯ ಯಶಸ್ಸಿನ ಸಾರಥಿ.

‘ಸೂಪರ್ ಗುಡ್ ಫಿಲ್ಮ್ಸ್’ ಬ್ಯಾನರ್ ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದ ಆರ್.ಬಿ. ಚೌಧರಿ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. 1980ರ ದಶಕದ ಕೊನೆಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು, ಮೂರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಅವರ ಸಿನಿಮಾ ಬದುಕಿನಲ್ಲಿ ಬಹುದೊಡ್ಡ ತಿರುವು ನೀಡಿದ ‘ಪೂವೆ ಉನಕ್ಕಾಗ’ ಚಿತ್ರವನ್ನು ನಿರ್ಮಿಸಿದ್ದು ಇದೇ ಆರ್.ಬಿ. ಚೌಧರಿ. ಅಷ್ಟೇ ಅಲ್ಲದೆ, ವಿಜಯ್ ಅಭಿನಯದ ‘ಜಿಲ್ಲಾ’, ‘ತಿರುಪ್ಪಾಚಿ’, ‘ಶಾಜಹಾನ್’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಶರತ್ ಕುಮಾರ್, ಮಮ್ಮುಟ್ಟಿ ಮುಂತಾದ ಸ್ಟಾರ್ ನಟರ ಸಿನಿಮಾಗಳಿಗೂ ಆರ್.ಬಿ. ಚೌಧರಿ ಬಂಡವಾಳ ಹೂಡಿದ್ದರು.

ನಟ ಚಿರಂಜೀವಿ ಸಂತಾಪ:

ಆರ್.ಬಿ. ಚೌಧರಿ ಅವರು ಕೇವಲ ಸ್ಟಾರ್ ನಟರಿಗಷ್ಟೇ ಅಲ್ಲದೆ, ಹತ್ತಾರು ಹೊಸ ನಿರ್ದೇಶಕರಿಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ನೀಡುವ ಮೂಲಕ ಅವರ ವೃತ್ತಿಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದ್ದರು. ಇವರಿಗೆ ಸುರೇಶ್, ಜೀವನ್, ಜಿತನ್ ರಮೇಶ್ ಮತ್ತು ಜೀವಾ ಎಂಬ ನಾಲ್ವರು ಗಂಡು ಮಕ್ಕಳಿದ್ದಾರೆ. ಜೀವಾ ಅವರು ತಮಿಳು ಚಿತ್ರರಂಗದಲ್ಲಿ ಮುಂಚೂಣಿ ನಟರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು

ಚೌಧರಿ ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us