‘ಆಂಧ್ರ ಕಿಂಗ್’ ಆಗಿ ಉಪೇಂದ್ರ: ಅದ್ಧೂರಿ ಟ್ರೈಲರ್ ಬಿಡುಗಡೆ

Upendra as Andhra King: ಕನ್ನಡದಲ್ಲಿ ಇರುವಂತೆ ಉಪೇಂದ್ರ ಅವರಿಗೆ ತೆಲುಗು ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಈ ವರೆಗೆ ಹಲವು ತೆಲುಗು ಸಿನಿಮಾಗಳಲ್ಲಿ ಉಪ್ಪಿ ನಟಿಸಿದ್ದಾರೆ ಮಾತ್ರವಲ್ಲದೆ ಅವರ ಹಲವು ಸಿನಿಮಾಗಳಿಗೆ ತೆಲುಗಿಗೆ ಡಬ್ ಆಗಿ ಸೂಪರ್ ಹಿಟ್ ಆಗಿವೆ. ಇದೀಗ ಉಪೇಂದ್ರ ನಟನೆಯ ಹೊಸ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಮ್ ಪೋತಿನೇನಿ ಸಹ ನಟಿಸಿದ್ದಾರೆ. ಇಲ್ಲಿದೆ ಸಿನಿಮಾ ಬಗ್ಗೆ ಮಾಹಿತಿ...

‘ಆಂಧ್ರ ಕಿಂಗ್’ ಆಗಿ ಉಪೇಂದ್ರ: ಅದ್ಧೂರಿ ಟ್ರೈಲರ್ ಬಿಡುಗಡೆ
Andhra King Taluka

Updated on: Nov 19, 2025 | 2:50 PM

ಸ್ಟಾರ್ ನಟ ಉಪೇಂದ್ರ (Upendra) ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲ್ಲೂಕ’ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ರಾಮ್ ಪೋತಿನೇನಿ ಮತ್ತು ಉಪೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಭಿನ್ನ ಕತೆಯುಳ್ಳ ಸಿನಿಮಾ ಎಂಬುದು ಟ್ರೈಲರ್​​ನಿಂದಲೇ ತಿಳಿದು ಬರುತ್ತಿದೆ. ಸಿನಿಮಾನಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕತೆ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ ಸಿನಿಮಾದ ಕತೆಯ ಬಗ್ಗೆ ಕೆಲ ಗುಟ್ಟುಗಳನ್ನು ಬಿಟ್ಟುಕೊಡುತ್ತಿದೆ. ಉಪೇಂದ್ರ ಸ್ಟಾರ್ ಹೀರೋ ಸೂರ್ಯ ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಆಂಧ್ರ ಕಿಂಗ್ ಎಂದೇ ಹೆಸರುವಾಸಿ. ರಾಮ್ ಪೋತಿನೇನಿ ಸಣ್ಣ ಊರಿನ ಯುವಕ. ಆಂಧ್ರ ಕಿಂಗ್ ಸೂರ್ಯ ಕುಮಾರ್ ಎಂದರೆ ಪಂಚಪ್ರಾಣ, ಆತನ ಸಿನಿಮಾಗಳನ್ನು ನೋಡುವುದು, ಸಿನಿಮಾ ಬಿಡುಗಡೆ ಆದಾಗ ಚಿತ್ರಮಂದಿರವನ್ನು ಸಿಂಗರಿಸುವುದು, ತನ್ನ ಮೆಚ್ಚಿನ ನಟನ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ಮೇಲೆ ಜಗಳ ಮಾಡುವುದು ಇದಷ್ಟೆ ಆತನ ಕೆಲಸ. ಆದರೆ ಆತನಿಗೊಂದು ಆಸೆಯಿದೆ. ತನ್ನ ಮೆಚ್ಚಿನ ನಟನನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂಬುದು.

ಆದರೆ ಸ್ಟಾರ್ ಹೀರೋ ಆಂಧ್ರ ಕಿಂಗ್ ಉಪೇಂದ್ರಗೆ ತನಗೆ ಹೀಗೊಬ್ಬ ಅಭಿಮಾನಿ ಇದ್ದಾನೆ ಎಂಬುದೇ ತಿಳಿಯದು. ಆದರೆ ತನ್ನ ಮೆಚ್ಚಿನ ನಟನ ಭೇಟಿ ಆಗುವ ಪ್ರಯತ್ನದಲ್ಲಿ ಅನುಭವಿಸುವ ಅವಮಾನದಿಂದಾಗಿ ಅಭಿಮಾನಿ ದಿಕ್ಕು ಬದಲಿಸುತ್ತಾನೆ. ಆ ನಂತರ ಏನೇನು ನಡೆಯುತ್ತದೆ. ಸ್ಟಾರ್ ಹೀರೋ ವಿಲನ್ ಆಗಿ, ಅಭಿಮಾನಿಯೇ ಹೀರೋ ಆಗುತ್ತಾನಾ? ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಸಿನಿಮಾ ನೋಡಬೇಕು. ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಶಂಕರ್​ ನಾಗ್ ಬಯೋಪಿಕ್ ಬಗ್ಗೆ ಮಾತನಾಡಿದ ಉಪೇಂದ್ರ; ಸಿಕ್ತು ದೊಡ್ಡ ಅಪ್​ಡೇಟ್

ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಅವರೊಟ್ಟಿಗೆ ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಅವರುಗಳು ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್, ಸಿನಿಮಾದ ಟ್ರೈಲರ್​ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ.

ಉಪೇಂದ್ರ ಅವರಿಗೆ ತೆಲುಗಿನಲ್ಲಿ ಇದು ಒಂಬತ್ತನೇ ಸಿನಿಮಾ. ತೆಲುಗು ಚಿತ್ರಂಗದಲ್ಲಿಯೂ ಸಹ ಉಪ್ಪಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಬಾರಿ ಸ್ಟಾರ್ ಹೀರೋ ಆಗಿಯೇ ಉಪ್ಪಿ ನಟಿಸಿದ್ದು ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Wed, 19 November 25

Follow Us