
ವಿಜಯ್ ಸೇತುಪತಿ, ಬಿಗ್ಬಾಸ್ ತಮಿಳು ನಿರೂಪಣೆ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಅವರೇ ಬಿಗ್ಬಾಸ್ನ ನಿರೂಪಕರಾಗಿದ್ದು ಅವರ ನಿರೂಪಣೆ ಪ್ರೇಕ್ಷಕರಿಗೆ ಸಹ ಹಿಡಿಸಿದೆ. ತಮಿಳು ಬಿಗ್ಬಾಸ್ನ 10ನೇ ಸೀಸನ್ ಚಾಲ್ತಿಯಲ್ಲಿದ್ದು, ಈ ಬಾರಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಬಿಗ್ಬಾಸ್ ಸೀಸನ್ ಒಟ್ಟಿಗೆ ಶುರುವಾಗಿದೆ. ಕಳೆದ ವಾರ ಬಿಗ್ಬಾಸ್ ನಿರೂಪಣೆ ಮಾಡುವಾಗ ವಿಜಯ್ ಸೇತುಪತಿ ಅವರು ಹೇಳಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು, ಆದರೆ ಇದೀಗ ಆ ಬಗ್ಗೆ ವಿಜಯ್ ಸೇತುಪತಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಾರ ಮನೆಯ ಸದಸ್ಯರ ಬಗ್ಗೆ ಮಾತನಾಡಿದ್ದ ವಿಜಯ್ ಸೇತುಪತಿ, ‘ನಾಯಕತ್ವ ಎಂದರೇನು ಎಂದು ತಿಳಿಯದೆ, ನಾಯಕತ್ವ ಎಂದರೇನು ಎಂದು ಅರ್ಥಮಾಡಿಕೊಳ್ಳದೆ ಭರವಸೆಗಳನ್ನು ನೀಡಿ, ನಂತರ ಸಮಸ್ಯೆಗಳು ಮತ್ತು ಜವಾಬ್ದಾರಿಗಳು ಬಂದಾಗ ಎದುರಾಳಿಯನ್ನು ದೂಷಿಸಿ ಓಡಿಹೋಗುವುದು ನಾಯಕನ ಗುಣವಲ್ಲ. ಅದು ವಂಚನೆ’ ಎಂದು ವಿಜಯ್ ಸೇತುಪತಿ ಕಳೆದ ವಾರ ಬಿಗ್ಬಾಸ್ ವೇದಿಕೆ ಮೇಲೆ ಹೇಳಿದ್ದರು. ವಿಜಯ್ ಸೇತುಪತಿ ಅವರ ಈ ಹೇಳಿಕೆಯನ್ನು ಎಲ್ಲರೂ ಸಿಎಂ ವಿಜಯ್ಗೆ ಲಿಂಕ್ ಮಾಡಿದ್ದರು.
ಸಿಎಂ ವಿಜಯ್ ಕುರಿತಾಗಿ ವಿಜಯ್ ಸೇತುಪತಿ ಅವರು ಪರೋಕ್ಷವಾಗಿ ಈ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿತ್ತು. ವಿಜಯ್ ಸೇತುಪತಿ ಅವರ ಆ ಹೇಳಿಕೆ ಬಳಿಕ ಸಿಎಂ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟ್ರೋಲಿಂಗ್ ನಡೆಸಿದ್ದರು, ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ವಿಜಯ್ ಸೇತುಪತಿ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಬಿಗ್ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಆದರೆ ಈ ವಾರ ವಿಜಯ್ ಸೇತುಪತಿ ಅವರು ತಮ್ಮ ಹಿಂದಿನ ಹೇಳಿಕೆ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ‘ಈ ವೇದಿಕೆಯ ಮೇಲೆ (ಬಿಗ್ಬಾಸ್ ವೇದಿಕೆಯ ಮೇಲೆ) ಆಡುವ ಪ್ರತಿಯೊಂದು ಮಾತು, ಮಾಡುವ ಟೀಕೆ, ವಿಮರ್ಶೆಗಳೆಲ್ಲವೂ ಕೇವಲ ಬಿಗ್ಬಾಸ್ ಸ್ಪರ್ಧಿಗಳ ಕುರಿತಾಗಿ ಆಗಿರುತ್ತದೆಯೇ ಹೊರತು, ಹೊರಗಿನವರ ಬಗ್ಗೆ ಆಗಿರುವುದಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಇದನ್ನು ನಾನು ಹೇಳಿಯೇ ತಿಳಿಯಬೇಕು ಎಂದಿಲ್ಲ, ಜನರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದೆಣೆಸಿದ್ದೆ ಆದರೆ, ಹೇಳುವ ಪರಿಸ್ಥಿತಿ ಬಂದಿದೆ ಹಾಗಾಗಿ ಈಗ ಹೇಳುತ್ತಿದ್ದೇನೆ’ ಎಂದಿದ್ದಾರೆ ವಿಜಯ್ ಸೇತುಪತಿ.
Vijaysethupathi said SORRY for TVK controversy in bigboss show ! pic.twitter.com/MNWu1bxJnB
— ʲᵈᴀʟᴇxᴀɴᴅᴇʀᵗʷᵉᵉᵗˢ (@JDALEXtweets) September 19, 2026
ವಿಜಯ್ ಸೇತುಪತಿ ಅವರು, ಸಿಎಂ ವಿಜಯ್ ಕುರಿತಾಗಿ ಬಿಗ್ಬಾಸ್ ವೇದಿಕೆ ಮೇಲೆ ವಿಮರ್ಶೆ ಮಾಡಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿಯೇ ಕೇಳಿ ಬಂದಿದ್ದವು. ಕೆಲವರು ಈ ಬಗ್ಗೆ ವಿಜಯ್ ಸೇತುಪತಿ ಅವರನ್ನು ನಿಂದನೆ ಸಹ ಮಾಡಿದ್ದರು. ಆದರೆ ಈಗ ವಿಜಯ್ ಸೇತುಪತಿ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:45 pm, Sat, 19 September 26