Akshaya Tritiya 2023: ಅಕ್ಷಯ ತೃತೀಯ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆ

ಅಕ್ಷಯ ತೃತೀಯವು ದೇಶದಾದ್ಯಂತ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರ ಮತ್ತು ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಪ್ರಾರಂಭಗೊಳ್ಳುವ ಯಾವುದೇ ಕಾರ್ಯವು ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ.

Akshaya Tritiya 2023: ಅಕ್ಷಯ ತೃತೀಯ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 19, 2023 | 12:36 PM

ಅಕ್ಷಯ ತೃತೀಯ (Akshaya Tritiya) ಹಬ್ಬವು ಹಿಂದೂಗಳು ಮತ್ತು ಜೈನರು ಆಚರಿಸುವ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಜನರು ತಮ್ಮ ಜೀವನದಲ್ಲಿ ಅದೃಷ್ಟವನ್ನು ಬರ ಮಾಡಿಕೊಳ್ಳುವ ಸಲುವಾಗಿ ಅಕ್ಷಯ ತೃತೀಯವನ್ನು ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಈ ದಿನವನ್ನು ಅದೃಷ್ಟದ ದಿನವೆಂದು ಪರಿಗಣಿಸಲಾಗುತ್ತದೆ. ನಂಬಿಕೆಯ ಪ್ರಕಾರ ಈ ದಿನದಂದು ಯಾವುದೇ ಹೊಸ ಉದ್ಯಮ, ವ್ಯಾಪಾರ ಮತ್ತು ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರೆ ಅದು ಸಮೃದ್ಧವಾಗುತ್ತದೆ ಹಾಗೂ ಈ ದಿನದಂದು ಚಿನ್ನ ಮತ್ತು ಆಸ್ತಿಯನ್ನು ಖರೀದಿಸುವುದು ಭವಿಷ್ಯದಲ್ಲಿ ಸಮೃದ್ಧಿ, ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಜೈನ ಧರ್ಮದಲ್ಲಿ ಈ ಹಬ್ಬವನ್ನು ಅವರ ಮೊದಲ ತೀರ್ಥಂಕರರಾದ ಆದಿನಾಥ ದೇವರ ಸ್ಮರನಾರ್ಥವಾಗಿ ಆಚರಿಸಲಾಗುತ್ತದೆ. ಜೈನ ಧರ್ಮದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ವಾರ್ಸಿ ತಪ ಎಂದು ಕರೆಯಲಾಗುತ್ತದೆ.

ಅಕ್ಷಯ ತೃತೀಯವನ್ನು ಯಾವಾಗ ಆಚರಿಸಲಾಗುತ್ತದೆ?

ಅಕ್ಷಯ ತೃತೀಯವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಶುಕ್ಷ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಇದು ಏಪ್ರಿಲ್-ಮೇ ತಿಂಗಳಲ್ಲಿ ಬರುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ಸ್ಥಿತಿಯಲ್ಲಿರುತ್ತಾರೆ ಎಂದು ನಂಬಲಾಗಿದೆ. ಈ ಬಾರಿ ಏಪ್ರಿಲ್ 22 ಶನಿವಾರದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ.

ಅಕ್ಷಯ ತೃತೀಯ ಇತಿಹಾಸ ಮತ್ತು ಮಹತ್ವ:

ಪುರಾಣ ಮತ್ತು ಪ್ರಾಚೀನ ಇತಿಹಾಸದ ಪ್ರಕಾರ, ಈ ಅಕ್ಷಯ ತೃತೀಯ ದಿನದಂದು ಬಹಳಷ್ಟು ಘಟನೆಗಳು ನಡೆದಿವೆ. ಈ ದಿನದ ಇತಿಹಾಸವನ್ನು ಹೇಳುವುದಾದರೆ, ಒಂದು ದಂತಕಥೆಯ ಪ್ರಕಾರ, ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ.

ಈ ದಿನ ಮಹರ್ಷಿ ವೇದವ್ಯಾಸರು ಗಣೇಶನಿಗೆ ಮಹಾಕಾವ್ಯ ಮಹಾಭಾರತವನ್ನು ನಿರೂಪಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಈ ದಿನ, ಶ್ರೀ ಕೃಷ್ಣನು ತನ್ನ ಸಹಾಯಕ್ಕಾಗಿ ಬಂದ ತನ್ನ ಬಡ ಸ್ನೇಹಿತ ಸುಧಾಮನಿಗೆ ಸಂಪತ್ತು ಮತ್ತು ಹಣದ ಲಾಭವನ್ನು ದಯಪಾಲಿಸಿದ ದಿನವಾಗಿದೆ. ಮಹಾಭಾರತದ ಪ್ರಕಾರ, ಈ ದಿನದಂದು ಶ್ರೀ ಕೃಷ್ಣನು ಪಾಂಡವರಿಗೆ ವನವಾಸದಲ್ಲಿದ್ದಾಗ ಅವರಿಗೆ ಅಕ್ಷಯ ಪಾತ್ರೆಯನ್ನು ಅರ್ಪಿಸಿದನು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯದಂದು ನಿಮ್ಮ ಭಾಗ್ಯದ ಬಾಗಿಲು ತೆರೆಯಲು ಮತ್ತೆ ಬರುತ್ತಿದೆ ಭೀಮಾ ಜ್ಯುವೆಲರ್ಸ್, ಇಲ್ಲಿದೆ ಆಕರ್ಷಕ ಕೊಡುಗೆ

ಅಕ್ಷಯ ತೃತೀಯ ಸಂದರ್ಭದಲ್ಲಿನ ಆಚರಣೆಗಳು:

ಭಗವಾನ್ ವಿಷ್ಣುವಿನ ಭಕ್ತರು ಈ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ದೇವರನ್ನು ಪೂಜಿಸುತ್ತಾರೆ. ನಂತರ ಬಡವರಿಗೆ ಅನ್ನ, ಉಪ್ಪು, ತುಪ್ಪ, ತರಕಾರಿ, ಹಣ್ಣು, ವಸ್ತ್ರವನ್ನು ದಾನ ಮಾಡುತ್ತಾರೆ. ವಿಷ್ಣುವಿನ ಸಂಕೇತವಾಗಿ ತುಳಸಿ ನೀರನ್ನು ಮನೆ ಸುತ್ತಲೂ ಚಿಮುಕಿಸಲಾಗುತ್ತದೆ.

ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಅಲ್ಲದೆ ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಈ ದಿನ ಅನೇಕ ಜನರು ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಚಿನ್ನವು ಅದೃಷ್ಟ ಮತ್ತು ಸಂಪತ್ತಿನ ಸಂಕೇತವಾಗಿರುವುದರಿಂದ, ಈ ದಿನ ಚಿನ್ನವನ್ನು ಖರೀದಿಸುವುದು ಪುಣ್ಯವೆಂದು ಪರಿಗಣಿಸಲಾಗಿದೆ.

Published On - 12:36 pm, Wed, 19 April 23