
ಭಾರತದಲ್ಲಿ, ಅದರಲ್ಲಿಯೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸಂಜೆ ಸಮಯದಲ್ಲಿ ರಸ್ತೆ ಬದಿ ಬಿಸಿ ಬಿಸಿ ಚಹಾ, ಕರಿದ ತಿನಿಸುಗಳನ್ನು (Fried Foods) ಮಾರಾಟ ಮಾಡುವುದು ಸಹಜ. ಬಜ್ಜಿ, ವಡೆ, ಬೋಂಡಾ ಹೀಗೆ ವಿವಿಧ ರೀತಿಯ ತಿಂಡಿಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಆದರೆ ಕೆಲವು ಅಂಗಡಿಗಳಲ್ಲಿ ಈ ರೀತಿ ಬಿಸಿ ತಿಂಡಿಗಳನ್ನು ಹಳೆಯ ದಿನ ಪತ್ರಿಕೆಗಳಲ್ಲಿ ಸುತ್ತಿ ಕೊಡುತ್ತಾರೆ. ಇದು ಅಗ್ಗ ಮತ್ತು ಗ್ರಾಹಕರಿಗೆ ಕೊಡುವುದಕ್ಕೆ ಅನುಕೂಲಕರ ಎಂದು ಅನಿಸುತ್ತದೆಯಾದರೂ ಈ ರೀತಿಯ ಅಭ್ಯಾಸ ಗುಪ್ತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಇದರಿಂದ ಬರುವ ಅಪಾಯ ತುಂಬಾ ಗಂಭೀರವಾಗಿರಬಹುದು. ಹಾಗಾದರೆ ಈ ರೀತಿ ದಿನ ಪತ್ರಿಕೆಗಳಲ್ಲಿ ಸುತ್ತಿ ಕೊಡುವಂತಹ ಆಹಾರ ಸೇವನೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಮುದ್ರಣ ಶಾಯಿ, ರಾಸಾಯನಿಕಗಳು, ವರ್ಣದ್ರವ್ಯಗಳು ಸೇರ್ಪಡೆಯಾಗಿರುತ್ತವೆ. ಇವು ಆಹಾರದೊಂದಿಗೆ, ಅದರಲ್ಲಿಯೂ ಕರಿದ ತಿಂಡಿ ಮತ್ತು ವಡೆಯಂತಹ ಬಿಸಿ ಪದಾರ್ಥಗಳೊಂದಿಗೆ ಬೆರೆತಾಗ, ಶಾಯಿ ಅವುಗಳೊಂದಿಗೆ ಬೆರೆಯುತ್ತದೆ. ಈ ರಾಸಾಯನಿಕಗಳು ದೇಹವನ್ನು ಪ್ರವೇಶಿಸಿ ಸಂಗ್ರಹವಾಗುತ್ತವೆ ಮತ್ತು ಜೀರ್ಣಕಾರಿ ಸಮಸ್ಯೆಗಳು, ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿ, ನರಮಂಡಲದ ಅಸ್ವಸ್ಥತೆಗಳು ಉಂಟಾಗಬಹುದು. ಅಷ್ಟು ಮಾತ್ರವಲ್ಲ, ಇದು ರೋಗನಿರೋಧಕ ಶಕ್ತಿಯನ್ನು ಕೂಡ ಕುಂಠಿತಗೊಳಿಸಬಹುದು. ಅದಲ್ಲದೆ ಪತ್ರಿಕೆಗಳಲ್ಲಿ ಬಳಸುವ ಕೆಲವು ವಸ್ತುಗಳು ಕ್ಯಾನ್ಸರ್ ಕಾರಕಗಳಾಗಿವೆ. ಮಕ್ಕಳು, ಯುವಕರು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಇರುವವರು ಸೇವನೆ ಮಾಡುವುದರಿಂದ ಮತ್ತಷ್ಟು ಸಮಸ್ಯೆ ಕಂಡುಬರಬಹುದು.
ಇದನ್ನೂ ಓದಿ: ಬೋಂಡಾ, ಬಜ್ಜಿ, ಕರಿದ ತಿಂಡಿಗಳ ಸವಿಯುವ ಮುನ್ನ ಎಚ್ಚರ: ಬೆಂಗಳೂರಿನ ಬಹುತೇಕ ಕಡೆ ಕಳಪೆ ಅಡುಗೆ ಎಣ್ಣೆ ಬಳಕೆ
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) 2018 ರ ಆರಂಭದಲ್ಲಿಯೇ ಆಹಾರ ಪ್ಯಾಕೇಜಿಂಗ್ಗಾಗಿ ಪತ್ರಿಕೆಗಳ ಬಳಕೆಯನ್ನು ನಿಷೇಧಿಸಿತು. ಆದರೂ ಈ ಪದ್ಧತಿ ಅನೇಕ ಸ್ಥಳಗಳಲ್ಲಿ ಮುಂದುವರೆದಿದೆ. ಹಾಗಾಗಿ ಪತ್ರಿಕೆಗಳಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ತೆಗೆದುಕೊಳ್ಳಬೇಡಿ. ಪಾರ್ಸೆಲ್ ತೆಗೆದುಕೊಳ್ಳುವಾಗ ಮನೆಯಿಂದ ಡಬ್ಬಿಗಳನ್ನು ತೆಗೆದುಕೊಂಡು ಹೋಗಿ. ತಟ್ಟೆಗಳಲ್ಲಿ ಆಹಾರವನ್ನು ಬಡಿಸಿ ಅಥವಾ ಬಾಳೆ ಎಲೆ ಉಪಯೋಗಿಸಿ ಇವು ಆರೋಗ್ಯಕ್ಕೂ ಮತ್ತು ಪರಿಸರಕ್ಕೂ ಪ್ರಯೋಜನಕಾರಿ. ಈ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ, ನಾವು ಮಾತ್ರವಲ್ಲದೆ ನಮ್ಮ ಕುಟುಂಬ ಮತ್ತು ಸಮಾಜವೂ ಆರೋಗ್ಯವಾಗಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ