ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತರಿಗೆ ಸ್ಕಾಟ್ಲೆಂಡ್‌ನಲ್ಲಿ ಗೌರವ; ರಾಯಲ್ ಕಾಲೇಜ್‌ನಲ್ಲಿ ಪ್ರತಿಮೆ ಅನಾವರಣ

ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾ ಸಂಸ್ಥೆಯಲ್ಲಿ, ಶಸ್ತ್ರಚಿಕಿತ್ಸೆಯ ಪಿತಾಮಹ, ಪ್ರಾಚೀನ ಭಾರತದ ಶ್ರೇಷ್ಠ ವೈದ್ಯ ಮತ್ತು ಶಸ್ತ್ರಚಿಕಿತ್ಸಕ ಆಚಾರ್ಯ ಸುಶ್ರುತ ಅವರ ಪ್ರತಿಮೆ ಅನಾವರಣಗೊಳಿಸುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ. ಈ ಪ್ರತಿಮೆ ಅನಾವರಣವು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಸುಶ್ರುತರು ನೀಡಿದ ಅಪಾರ ಕೊಡುಗೆಯನ್ನು ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಸ್ಮರಿಸುವ ಮಹತ್ವದ ಕ್ಷಣವಾಗಿದೆ.

ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತರಿಗೆ ಸ್ಕಾಟ್ಲೆಂಡ್‌ನಲ್ಲಿ ಗೌರವ; ರಾಯಲ್ ಕಾಲೇಜ್‌ನಲ್ಲಿ ಪ್ರತಿಮೆ ಅನಾವರಣ
Father Of Surgery Sushruta Honoured In Scotland
Image Credit source: News Algebra X account

Updated on: Jun 23, 2026 | 6:22 PM

ಆಚಾರ್ಯ ಸುಶ್ರುತರು ಪ್ರಾಚೀನ ಭಾರತದ ಶ್ರೇಷ್ಠ ವೈದ್ಯ ಮತ್ತು ಶಸ್ತ್ರಚಿಕಿತ್ಸಕರು. ಇವರನ್ನು ಪ್ರಪಂಚದ “ಶಸ್ತ್ರಚಿಕಿತ್ಸೆಯ ಪಿತಾಮಹ” (Father of Surgery) ಮತ್ತು “ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ” ಎಂದು ಕರೆಯಲಾಗುತ್ತದೆ. ಈಗ ಸುಶ್ರುತ ಅವರಿಗೆ ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾ ಸಂಸ್ಥೆಯಲ್ಲಿ 90 ಕೆಜಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ. ಅಷ್ಟೇಅಲ್ಲ, ಪ್ರತಿಮೆ ಅನಾವರಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪ್ರತಿಮೆ ಅನಾವರಣವು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಸುಶ್ರುತರು ನೀಡಿದ ಅಪಾರ ಕೊಡುಗೆಯನ್ನು ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಸ್ಮರಿಸುವ ಮಹತ್ವದ ಕ್ಷಣವಾಗಿದೆ.

ಸುಶ್ರುತ ಯಾರು?

ಸುಶ್ರುತರು ಕ್ರಿ.ಪೂ. 6ನೇ ಶತಮಾನದ ಅವಧಿಯಲ್ಲಿ ಬದುಕಿದ್ದರೆಂದು ಇತಿಹಾಸಕಾರರು ನಂಬುತ್ತಾರೆ. ಅವರು ರಚಿಸಿದ “ಸುಶ್ರುತ ಸಂಹಿತೆ” ವಿಶ್ವದ ಅತ್ಯಂತ ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಒಂದಾಗಿದೆ. ಈ ಗ್ರಂಥದಲ್ಲಿ 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ವಿಧಾನಗಳು, 120ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ಉಪಕರಣಗಳ ವಿವರಣೆ ಹಾಗೂ ದೇಹದ ರಚನೆ ಬಗ್ಗೆ ವಿವರವಾದ ಮಾಹಿತಿಯನ್ನು ದಾಖಲಿಸಲಾಗಿದೆ. ಅಲ್ಲದೆ ಇವರು ರಚಿಸಿದ ವಿಶ್ವಪ್ರಸಿದ್ಧ ವೈದ್ಯಕೀಯ ಗ್ರಂಥ. ಆಯುರ್ವೇದದ ಪ್ರಮುಖ ಮೂರು ಗ್ರಂಥಗಳಲ್ಲಿ (ಬೃಹತ್-ತ್ರಯಿ) ಇದೂ ಒಂದಾಗಿದ್ದು, ಶಸ್ತ್ರಚಿಕಿತ್ಸೆಯ ಬಗ್ಗೆ ಇರುವ ಅತ್ಯಂತ ಹಳೆಯ ಮತ್ತು ಅಧಿಕೃತ ಪಠ್ಯವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮಾನವನ ದೇಹರಚನೆಯನ್ನು ಕಲಿಯಲು ಶವಗಳನ್ನು ಪರೀಕ್ಷಿಸಬೇಕು (Dissection) ಎಂದು ಪ್ರಪಂಚದಲ್ಲಿಯೇ ಮೊದಲು ಪ್ರತಿಪಾದಿಸಿದವರಲ್ಲಿ ಇವರು ಪ್ರಮುಖರು.

ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾದಲ್ಲಿ ಸುಶ್ರುತರ ಪ್ರತಿಮೆ ಅನಾವರಣಗೊಂಡ ದೃಶ್ಯಗಳು.

ಯಾಕೆ ಪ್ರತಿಮೆ ಅನಾವರಣ ಮಾಡಲಾಗಿದೆ?

ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾ ಸಂಸ್ಥೆಯು ಸುಶ್ರುತರನ್ನು ಗೌರವಿಸುವ ಮೂಲಕ ಆಧುನಿಕ ಶಸ್ತ್ರಚಿಕಿತ್ಸೆಯ ಬೆಳವಣಿಗೆಯಲ್ಲಿ ಅವರ ಐತಿಹಾಸಿಕ ಪಾತ್ರವನ್ನು ಗುರುತಿಸಿದೆ. ವೈದ್ಯಕೀಯ ಇತಿಹಾಸದಲ್ಲಿ ಸುಶ್ರುತರ ಕೊಡುಗೆ ವಿಶ್ವವ್ಯಾಪಿ ಮಾನ್ಯತೆ ಪಡೆದಿದ್ದು, ವಿಶೇಷವಾಗಿ ರೈನೋಪ್ಲ್ಯಾಸ್ಟಿ ಅಂದರೆ ಮೂಗಿನ ಪ್ಲಾಸ್ಟಿಕ್ ಸರ್ಜರಿ (Rhinoplasty) ಸೇರಿದಂತೆ ಹಲವು ಶಸ್ತ್ರಚಿಕಿತ್ಸಾ ತಂತ್ರಗಳು ಇಂದಿನ ವೈದ್ಯಕೀಯ ವಿಜ್ಞಾನಕ್ಕೂ ಪ್ರೇರಣೆಯಾಗಿವೆ.

ಭಾರತದ ವೈದ್ಯಕೀಯ ಪರಂಪರೆಗೆ ಜಾಗತಿಕ ಗೌರವ

ಸುಶ್ರುತನ ಪ್ರತಿಮೆ ಅನಾವರಣವು ಕೇವಲ ಒಬ್ಬ ವೈದ್ಯರಿಗೆ ಸಲ್ಲಿಸಿದ ಗೌರವವಲ್ಲ; ಇದು ಭಾರತದ ಸಾವಿರಾರು ವರ್ಷಗಳ ವೈದ್ಯಕೀಯ ಪರಂಪರೆ ಮತ್ತು ವೈಜ್ಞಾನಿಕ ಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ. ಈ ಬೆಳವಣಿಗೆ ಭಾರತೀಯ ವೈದ್ಯಕೀಯ ಇತಿಹಾಸದ ಮಹತ್ವವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಎತ್ತಿಹಿಡಿದಿದ್ದು, ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಎಷ್ಟು ಆಳವಾಗಿದೆ ಎಂಬುದನ್ನು ಸ್ಮರಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us