
ಮಧುಮೇಹ (Diabetes) ಅಥವಾ ಅಧಿಕ ರಕ್ತದೊತ್ತಡ (High BP) ಇದ್ದರೆ, ಹೃದಯ, ಮೂತ್ರಪಿಂಡ ಮತ್ತು ಕಣ್ಣಿಗೆ ಸಂಬಂಧ ಪಟ್ಟ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದು ಹಿಯರಿಂಗ್ ಲಾಸ್ ಗೆ ಕಾರಣವಾಗುತ್ತದೆಯೇ ಅಥವಾ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವರಿಗಿರುವ ಗೊಂದಲ. ಅದರಲ್ಲಿಯೂ ಈ ರೀತಿಯ ಸಮಸ್ಯೆ ವಯಸ್ಸಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ನಿಜವೇ ಎಂಬ ಅನುಮಾನ ಮೂಡುತ್ತದೆ. ಅದಕ್ಕಾಗಿಯೇ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್ಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ರವಿ ಮೆಹರ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.
ಈ ಎರಡು ಕಾಯಿಲೆಗಳು ಅಂದರೆ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಕೆಲವು ಸಂದರ್ಭಗಳಲ್ಲಿ ಶ್ರವಣ ಸಾಮರ್ಥ್ಯಕ್ಕೆ ಹಾನಿ ಮಾಡುತ್ತದೆ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಶಬ್ದಗಳನ್ನು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದೀರ್ಘಕಾಲದ ವರೆಗೆ ಸಕ್ಕರೆ ಮಟ್ಟ ಹೆಚ್ಚಿರುವ ಮಧುಮೇಹ ರೋಗಿಗಳ ದೇಹದಲ್ಲಿ ನರಗಳಿಗೆ ಹಾನಿಯಾಗುತ್ತದೆ. ಜೊತೆಗೆ ಕಿವಿಯೊಳಗಿನ ಶ್ರವಣೇಂದ್ರಿಯ ನರಗಳ ಮೇಲೂ ಪರಿಣಾಮ ಬೀರಬಹುದು. ಹೆಚ್ಚಿನ ಸಕ್ಕರೆ ಮಟ್ಟವು ಕೂಡ ಕಿವಿಯಲ್ಲಿರುವ ನರಗಳಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಆದರೆ ಈ ಸಮಸ್ಯೆ ಪ್ರತಿಯೊಬ್ಬ ಮಧುಮೇಹ ರೋಗಿಯಲ್ಲೂ ಕಂಡುಬರುವುದಿಲ್ಲ. ಇದು ಮುಖ್ಯವಾಗಿ ವಯಸ್ಸಾದವರಲ್ಲಿ ಮತ್ತು ದೀರ್ಘಕಾಲದವರೆಗೆ ಹೆಚ್ಚಿನ ಸಕ್ಕರೆ ಮಟ್ಟ ಹೊಂದಿರುವವರಲ್ಲಿ ಕಂಡುಬರುತ್ತದೆ.
ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದಲ್ಲಿ ಅಪಾಯ ಕಡಿಮೆ ಇರುತ್ತದೆ, ಆದರೆ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅಥವಾ ಇದ್ದಕ್ಕಿದ್ದಂತೆ ಏರಿದರೆ, ಅದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಇದನ್ನು ಹಠಾತ್ ಶ್ರವಣ ನಷ್ಟ ಎಂದು ಕರೆಯಲಾಗುತ್ತದೆ, ಆದರೂ ಅಂತಹ ಪ್ರಕರಣಗಳು ಕಂಡುಬರುವುದು ಬಹಳ ಅಪರೂಪ. ಆದರೆ ಒಬ್ಬ ವ್ಯಕ್ತಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎರಡು ಕೂಡ ಇದ್ದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು
ಈ ಎಲ್ಲಾ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ, ಇಎನ್ಟಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ನಿಮ್ಮ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ ಎಂದು ಕಂಡುಹಿಡಿಯಲು ವೈದ್ಯರು ನಿಮ್ಮ ಕಿವಿಗಳನ್ನು ಪರೀಕ್ಷಿಸಬಹುದು. ಈ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಗಮನ ನೀಡಿದರೆ, ಹಾನಿಯನ್ನು ತಡೆಯಬಹುದು. ಆರಂಭಿಕ ಹಂತಗಳಲ್ಲಿ, ಔಷಧಿ ಮತ್ತು ಚಿಕಿತ್ಸೆಯಿಂದ ಸುಧಾರಣೆ ಕಂಡುಬರಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ