
ಅಪಸ್ಮಾರ ಅಥವಾ ಮೂರ್ಛೆ ರೋಗ ಎಂಬುದು ಮೆದುಳಿಗೆ ಸಂಬಂಧಪಟ್ಟ ನರವೈಜ್ಞಾನಿಕ ಕಾಯಿಲೆಯಾಗಿದೆ. ಈ ರೋಗಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ 50 ಮಿಲಿಯನ್ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರಂತೆ. ಆದರೆ ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರದಂದು ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನು (International Epilepsy Day) ಆಚರಣೆ ಮಾಡಲಾಗುತ್ತದೆ.
ಅಪಸ್ಮಾರದಿಂದ ಬಳಲುತ್ತಿರುವ ಜನರಿಗೆ ಆ ಕಾಯಿಲೆಯ ಬಗ್ಗೆ ಅರಿವು ಮೂಡಿಸಲು, ಬೆಂಬಲ ನೀಡಲು ಮತ್ತು ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಬೇಕು ಎನ್ನುವ ಉದ್ದೇಶದಿಂದ 2015 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನು ಆಚರಿಸಲಾಯಿತು. ಇದೊಂದು ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದ್ದು, ಅಂದಿನಿಂದ ಪ್ರತಿವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರದಂದು ಈ ವಿಶೇಷ ಜಾಗೃತಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಪಸ್ಮಾರ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಸುಧಾರಿತ ಆರೋಗ್ಯ ಸೇವೆ, ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುವಲ್ಲಿ ಈ ಆಚರಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ದಿನ ಅಪಸ್ಮಾರ ಕಾಯಿಲೆ, ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಜೊತೆಗೆ ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
ಅಪಸ್ಮಾರ ಅಥವಾ ಎಪಿಲೆಪ್ಸಿ ದೀರ್ಘಕಾಲದ ಮೆದುಳಿನ ಅಸ್ವಸ್ಥತೆಯಾಗಿದೆ. ನರಕೋಶಗಳು ಅಥವಾ ಮೆದುಳಿನ ಕೋಶಗಳಲ್ಲಿ ಉಂಟಾಗುವ ಹಠಾತ್ ಬದಲಾವಣೆಯಿಂದ ಅಪಸ್ಮಾರ ಸಂಭವಿಸುತ್ತದೆ. ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಈ ಮೂರ್ಛೆರೋಗ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯೇ ಹೊರತು ಮಾನಸಿಕ ಅಸ್ವಸ್ಥತೆಯಲ್ಲ ಹಾಗೂ ಸಾಂಕ್ರಾಮಿಕ ರೋಗವಲ್ಲ. ಇದನ್ನೇ ಅಪಸ್ಮಾರ, ಮೂರ್ಛೆ ರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಈ ಮೂರ್ಛೆ ರೋಗ ಪದೇ ಪದೇ ಮರುಕಳಿಸುವುದರಿಂದ ಫೀಟ್ಸ್ಗೂ ಕಾರಣವಾಗುತ್ತದೆ.
ಮೆದುಳಿಗೆ ಹಾನಿ ಉಂಟುಮಾಡುವಂತಹ ಹಲವಾರು ಅಂಶಗಳಿಂದಾಗಿ ಮೂರ್ಛೆ ರೋಗ ಉಂಟಾಗಬಹುದು. ಮೂರ್ಛೆ ರೋಗಕ್ಕೆ ನಿರ್ದಿಷ್ಟ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅನುವಂಶೀಯ ತೊಂದರೆ ಮತ್ತು ಮೆದುಳಿಗೆ ಉಂಟಾಗುವಂತಹ ಹಾನಿಯಿಂದ ಈ ಕಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ. ತಲೆಗೆ ಬಲವಾಗಿ ಪೆಟ್ಟು ಬಿದ್ದರೆ, ಪಾರ್ಶ್ವವಾಯು, ಮೆದುಳುಗಡ್ಡೆ, ಮೆದುಳಿನಲ್ಲಿ ರಕ್ತಸ್ರಾವ, ಮೆದುಳಿನ ರಕ್ತನಾಳಗಳ ದೋಷಪೂರ್ಣ ರಚನೆ, ಜನನದ ವೇಳೆ ಆಗುವ ಗಾಯ ಮತ್ತು ಇನ್ನಿತರೆ ಕೆಲವು ಸೋಂಕುಗಳಿಂದ ಮೂರ್ಛೆ ರೋಗ ಉಂಟಾಗಬಹುದು.
ಇದನ್ನೂ ಓದಿ: ಪರೀಕ್ಷೆಯ ಭಯ ಮತ್ತು ಮಕ್ಕಳ ಮಾನಸಿಕ ಆರೋಗ್ಯ; ಮನೋವೈದ್ಯರು ನೀಡಿರುವ ಸಲಹೆ ಇಲ್ಲಿದೆ
ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಣಾಮಕಾರಿ ಔಷಧಿಗಳನ್ನು ನೀಡುವುದರಿಂದ ಮೂರ್ಛೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಈ ಸಮಸ್ಯೆಗೆ ತುತ್ತಾದವರು ನಿಗದಿತ ಅವಧಿಯವರೆಗೆ ಕ್ರಮಬದ್ಧವಾಗಿ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಮೂರ್ಛೆರೋಗವನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸುವುದರಿಂದ ಮೆದುಳಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಬಹುದು. ಇದಲ್ಲದೆ ಸಾಕಷ್ಟು ನಿದ್ದೆ ಮಾಡುವ ಮೂಲಕ, ಕೆಫೀನ್, ಎನರ್ಜಿ ಡ್ರಿಂಕ್ ಇತ್ಯಾದಿ ಆಹಾರಗಳನ್ನು ತಪ್ಪಿಸುವ ಮೂಲಕ, ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವ ಮೂಲಕ ಮೂರ್ಛೆ ರೋಗವನ್ನು ತಡೆಗಟ್ಟಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ