ಐಸಿಯು ಇನ್ಫೆಕ್ಷನ್ ಎಂದರೇನು? ಈ ರೀತಿ ಆಗುವುದಕ್ಕೆ ನಿಜವಾದ ಕಾರಣವೇನು? ಇಲ್ಲಿದೆ ಡಾ. ಕಾರ್ತಿಕ್ ನೀಡಿರುವ ಸಲಹೆ
ಮೈಸೂರಿನ ಜಯದೇವ ಆಸಪತ್ರೆಯ ಐಸಿಯುನಲ್ಲಿ 11 ಜನ ಸಾವನ್ನಪ್ಪಿರುವ ಘಟನೆ ತಿಳಿದಿರಬಹುದು. ಈ ರೀತಿ ಐಸಿಯು ಇನ್ಫೆಕ್ಷನ್ ನಿಂದ ಜನ ಸಾಯುವುದಕ್ಕೆ ಕಾರಣವೇನು, ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಯಶವಂತಪುರ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ನ ಹಿರಿಯ ಸಲಹೆಗಾರರಾಗಿರುವ ಡಾ. ಕಾರ್ತಿಕ್ ಎನ್. ರಾವ್ ಅವರು ನೀಡಿದ್ದು ಐಸಿಯುನಲ್ಲಿ ಸೋಂಕು ತಡೆಗಟ್ಟುವುದು ಹೇಗೆ, ಐಸಿಯು ಸೋಂಕುಗಳ ಬಗ್ಗೆ ಸಾಮಾನ್ಯ ಮಿಥ್ಯೆಗಳು ಮತ್ತು ಸತ್ಯಗಳು ಯಾವವು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಇತ್ತೀಚಿಗೆ ಮೈಸೂರಿನ ಜಯದೇವ ಆಸಪತ್ರೆಯ ಐಸಿಯುನಲ್ಲಿ 11 ಜನ ಸಾವನ್ನಪ್ಪಿರುವ ಘಟನೆ ನಿಮಗೆಲ್ಲರಿಗೂ ತಿಳಿದಿದೆ. ಆದರೆ ಈ ರೀತಿಯಾಗುತ್ತಿರುವುದು ಹೊಸದಲ್ಲ, ಹಿಂದೆಯೂ ಬೇರೆ ಬೇರೆ ಆಸ್ಪತ್ರೆಯ ಐಸಿಯುಗಳಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಹಾಗಾಗಿ ಈ ರೀತಿ ಐಸಿಯು ಇನ್ಫೆಕ್ಷನ್ ನಿಂದ ಜನ ಸಾಯುವುದಕ್ಕೆ ಕಾರಣವೇನು, ಎಂಬುದರ ಬಗ್ಗೆ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ಯಶವಂತಪುರ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ನ ಹಿರಿಯ ಸಲಹೆಗಾರರಾಗಿರುವ ಡಾ. ಕಾರ್ತಿಕ್ ಎನ್. ರಾವ್ ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ವೆಂಟಿಲೇಟರ್ಗಳು (Ventilators), ಕ್ಯಾತಿಟರ್ಗಳು (Catheters) ಮತ್ತು ಐವಿ ಲೈನ್ಗಳಂತಹ (IV lines) ಜೀವರಕ್ಷಕ ಉಪಕರಣಗಳ ಬಳಕೆಯಿಂದ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದರಿಂದ ಹೆಚ್ಚಿನ ಐಸಿಯು ಸೋಂಕುಗಳನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು ಎಂದು ಅವರು ಹೇಳಿದ್ದಾರೆ. ಹಾಗಾದರೆ ಐಸಿಯುನಲ್ಲಿ ಸೋಂಕು ತಡೆಗಟ್ಟುವುದು ಹೇಗೆ, ಐಸಿಯು ಸೋಂಕುಗಳ ಬಗ್ಗೆ ಸಾಮಾನ್ಯ ಮಿಥ್ಯೆಗಳು ಮತ್ತು ಸತ್ಯಗಳು ಯಾವವು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಐಸಿಯುನಲ್ಲಿ ಸೋಂಕು ತಡೆಗಟ್ಟುವಿಕೆ
ಆಸ್ಪತ್ರೆಗಳಲ್ಲಿ ಕೈಗಳ ಸ್ವಚ್ಛತೆ, ಶುಚಿಗೊಳಿಸುವಿಕೆ ಮತ್ತು ಸೋಂಕುನಿವಾರಣೆ, ಕ್ರಿಮಿನಾಶಕೀಕರಣ, ಸೋಂಕಿನ ಮೇಲೆ ನಿಗಾ ಮತ್ತು ಸೂಕ್ತವಾದ ಆ್ಯಂಟಿಬಯೋಟಿಕ್ (Antibiotic) ಚಿಕಿತ್ಸೆಯಂತಹ ಸೋಂಕು ನಿಯಂತ್ರಣ ವಿಧಾನಗಳು ಐಸಿಯು ರೋಗಿಗಳನ್ನು ಸೋಂಕಿನಿಂದ ರಕ್ಷಿಸುತ್ತವೆ. ಇಂತಹ ಕ್ರಮಗಳು ಸಂಭಾವ್ಯ ತೊಡಕುಗಳನ್ನು ತಡೆಯಲು, ಅಂಗಾಂಗ ವೈಫಲ್ಯದ ಸಾಧ್ಯತೆಯನ್ನು ಕಡಿಮೆ ಮಾಡಲು, ಆಸ್ಪತ್ರೆ ಅಥವಾ ಐಸಿಯುನಲ್ಲಿ ಉಳಿಯುವ ಅವಧಿಯನ್ನು ತಗ್ಗಿಸಲು, ರೋಗಿಗಳ ಬದುಕುಳಿಯುವ ಪ್ರಮಾಣವನ್ನು ಹೆಚ್ಚಿಸಲು ಮತ್ತು ಆ್ಯಂಟಿಬಯೋಟಿಕ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ರೋಗಿಯು ಹಾನಿಕಾರಕ ರೋಗಕಾರಕಗಳಿಗೆ (Pathogens) ಒಡ್ಡಿಕೊಳ್ಳದಂತೆ ನೋಡಿಕೊಳ್ಳುವ ಮೂಲಕ ಸ್ವಚ್ಛತೆಯು ಚೇತರಿಕೆಯ ಪ್ರಕ್ರಿಯೆಗೆ ಸಹಕಾರಿಯಾಗಿದೆ.
ದೈನಂದಿನ ಮುನ್ನೆಚ್ಚರಿಕೆಗಳು ಮತ್ತು ಕುಟುಂಬದ ಬೆಂಬಲ
ಐಸಿಯುನಲ್ಲಿ, ರೋಗಿಯನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಸ್ವಚ್ಛಗೊಳಿಸುವುದು, ಸುತ್ತಮುತ್ತಲಿನ ಪರಿಸರವನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಕ್ಯಾತಿಟರ್ ಮತ್ತು ಐವಿ ಲೈನ್ಗಳ ಕ್ರಿಮಿರಹಿತ ಆರೈಕೆ, ನ್ಯುಮೋನಿಯಾ (Pneumonia) ತಡೆಗಟ್ಟಲು ವೆಂಟಿಲೇಟರ್ ಆರೈಕೆಯ ಕ್ರಮಗಳು ಮತ್ತು ಅನಗತ್ಯ ಟ್ಯೂಬ್ಗಳು ಹಾಗೂ ಲೈನ್ಗಳನ್ನು ತೆಗೆದುಹಾಕಲು ನಿಯಮಿತ ಮೌಲ್ಯಮಾಪನ ಮಾಡುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಕುಟುಂಬದ ಸದಸ್ಯರು ಭೇಟಿಗೆ ಮೊದಲು ಮತ್ತು ನಂತರ ಕೈಗಳನ್ನು ತೊಳೆಯುವುದು ಅಥವಾ ಸ್ಯಾನಿಟೈಸ್ ಮಾಡುವುದು, ಅನಾರೋಗ್ಯವಿದ್ದಾಗ ಭೇಟಿ ನೀಡದಿರುವುದು, ಭೇಟಿಯ ನಿಯಮಗಳನ್ನು ಪಾಲಿಸುವುದು, ವೈದ್ಯಕೀಯ ಉಪಕರಣಗಳನ್ನು ಅನಗತ್ಯವಾಗಿ ಮುಟ್ಟದಿರುವುದು ಮತ್ತು ರೋಗಿಯ ಚೇತರಿಕೆಗೆ ಬೆಂಬಲ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸುತ್ತಾರೆ.
ಇದನ್ನೂ ಓದಿ: ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು: ಆಗಿದ್ದೇನು? ಸ್ಪಷ್ಟನೆ ನೀಡಿದ ನಿರ್ದೇಶಕ
ಶೀಘ್ರ ಪತ್ತೆ ಮತ್ತು ಸಮಯೋಚಿತ ಚಿಕಿತ್ಸೆ
ತೀವ್ರ ಅಸ್ವಸ್ಥರಾಗಿರುವ ವ್ಯಕ್ತಿಗಳಲ್ಲಿ ಸೋಂಕುಗಳು ಅತಿ ವೇಗವಾಗಿ ಉಲ್ಬಣಗೊಳ್ಳುತ್ತವೆ. ಆರಂಭಿಕ ಹಂತದಲ್ಲೇ ಸೋಂಕನ್ನು ಪತ್ತೆಹಚ್ಚುವುದರಿಂದ ಅದು ಸೆಪ್ಸಿಸ್ (Sepsis) ಹಂತಕ್ಕೆ ತಲುಪುವುದನ್ನು ತಡೆಯಬಹುದು, ಅಂಗಾಂಗಗಳಿಗೆ ಹಾನಿಯಾಗುವ ಮೊದಲೇ ಚಿಕಿತ್ಸೆ ನೀಡಬಹುದು ಮತ್ತು ಚೇತರಿಕೆಯ ಪ್ರಮಾಣವನ್ನು ಹೆಚ್ಚಿಸಬಹುದು. ಸಮಯೋಚಿತ ಚಿಕಿತ್ಸೆಯು ಸೋಂಕು ಹರಡುವುದನ್ನು ನಿಯಂತ್ರಿಸಲು, ತೊಡಕುಗಳನ್ನು ಮತ್ತು ಐಸಿಯುನಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಲು, ಆ್ಯಂಟಿಬಯೋಟಿಕ್ ಮತ್ತು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಸುಧಾರಿಸಲು ಹಾಗೂ ಬದುಕುಳಿಯುವ ಮತ್ತು ಚೇತರಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಐಸಿಯುನಿಂದ ಡಿಸ್ಚಾರ್ಜ್ ಆದ ನಂತರದ ಚೇತರಿಕೆ
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಚೇತರಿಕೆಯ ಪ್ರಕ್ರಿಯೆ ಮುಂದುವರಿಯುತ್ತದೆ. ರೋಗಿಗಳು ತಮ್ಮ ಔಷಧಿಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಕು, ಸರಿಯಾದ ಪೋಷಣೆ ಮತ್ತು ದ್ರವಾಹಾರ ಸೇವಿಸಬೇಕು, ಸಲಹೆ ಮಾಡಿದಂತೆ ಪುನಶ್ಚೇತನ (Rehabilitation) ಮತ್ತು ವ್ಯಾಯಾಮಗಳನ್ನು ಪಾಲಿಸಬೇಕು, ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಬೇಕು, ಫಾಲೋ-ಅಪ್ ಅಪಾಯಿಂಟ್ಮೆಂಟ್ಗಳನ್ನು ತಪ್ಪಿಸಬಾರದು ಮತ್ತು ಮನೆಯಲ್ಲಿಯೂ ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
ಐಸಿಯು ಸೋಂಕುಗಳ ಬಗ್ಗೆ ಸಾಮಾನ್ಯ ಮಿಥ್ಯೆಗಳು ಮತ್ತು ಸತ್ಯಗಳು
ಮಿಥ್ಯೆ: ಎಲ್ಲಾ ಐಸಿಯು ಸೋಂಕುಗಳು ಅನಿವಾರ್ಯ. ಸತ್ಯ: ಹೆಚ್ಚಿನ ಐಸಿಯು ಸೋಂಕುಗಳನ್ನು ತಡೆಗಟ್ಟಬಹುದು.
ಮಿಥ್ಯೆ: ಹೆಚ್ಚು ಶಕ್ತಿಯುತ ಆ್ಯಂಟಿಬಯೋಟಿಕ್ಗಳು ಯಾವಾಗಲೂ ಉತ್ತಮ. ಸತ್ಯ: ರೋಗಿಯ ಸ್ಥಿತಿಯನ್ನು ಆಧರಿಸಿ ಆ್ಯಂಟಿಬಯೋಟಿಕ್ಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು.
ಮಿಥ್ಯೆ: ಜ್ವರ ಬಂದಾಗಲೆಲ್ಲಾ ಸೋಂಕು ತಗುಲಿದೆ ಎಂದರ್ಥ. ಸತ್ಯ: ಜ್ವರವು ಹಲವಾರು ಕಾರಣಗಳಿಂದ ಬರಬಹುದು ಮತ್ತು ಅದಕ್ಕೆ ಸರಿಯಾದ ಮೌಲ್ಯಮಾಪನ ಬೇಕು.
ಮಿಥ್ಯೆ: ಸೋಂಕಿಗೆ ಚಿಕಿತ್ಸೆ ನೀಡಿದ ತಕ್ಷಣ ಚೇತರಿಕೆ ಪೂರ್ಣಗೊಂಡಂತೆ. ಸತ್ಯ: ಡಿಸ್ಚಾರ್ಜ್ ಆದ ನಂತರವೂ ಚೇತರಿಕೆಯ ಪ್ರಕ್ರಿಯೆ ಮುಂದುವರಿಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




