
ಇತ್ತೀಚಿನ ದಿನಗಳಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳಲು ದುಬಾರಿ ಮಾತ್ರೆಗಳನ್ನು ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದಾವುದರ ಅಗತ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಕಾಯಿಲೆಗಳಿಂದ ದೂರವಿರಲು ಕೇವಲ ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಸೇವನೆ ಮಾಡಬಹುದು. ಈ ರೀತಿಯ ಒಂದು ಅದ್ಭುತ ಔಷಧಗಳಲ್ಲಿ ಬೆಳ್ಳುಳ್ಳಿ ಮತ್ತು ಜೇನುತುಪ್ಪದ (Honey and Garlic) ಮಿಶ್ರಣವೂ ಒಂದು. ಈ ರೀತಿಯ ಆಯುರ್ವೇದ ಸಲಹೆಯನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಈ ಮಿಶ್ರಣ ಯಾಕೆ ಒಳ್ಳೆಯದು? ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಪ್ರಯೋಜನಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎರಡರಲ್ಲೂ ಹೇರಳವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳಿವೆ. ಪ್ರತಿದಿನ ಬೆಳಿಗ್ಗೆ ಅವುಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪರಿಣಾಮವಾಗಿ, ಶೀತ, ಗಂಟಲು ನೋವು ಮತ್ತು ಆಗಾಗ ಜ್ವರ ಬರುವಂತಹ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ.
ಬೆಳ್ಳುಳ್ಳಿ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಜೊತೆಗೆ ಆಹಾರವು ಬೇಗನೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಗ್ಯಾಸ್ ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅಲ್ಲದೆ, ಈ ಮಿಶ್ರಣವು ನೈಸರ್ಗಿಕ ಕಫ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಲೋಳೆಯನ್ನು ಕಡಿಮೆ ಮಾಡಿ, ಸೈನಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಇದಲ್ಲದೆ, ಜೇನುತುಪ್ಪವು ಗಂಟಲು ನೋವನ್ನು ಕೂಡ ನಿವಾರಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತವನ್ನು ತೆಳುವಾಗಿಸಿ, ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಎಲ್ಲಾ ಕಾಲದಲ್ಲೂ ಲಭ್ಯವಿರುವ ಈ ಒಂದು ಹಣ್ಣಿನಲ್ಲಿ ಅದೆಷ್ಟು ಪ್ರಯೋಜನವಿದೆ ನೋಡಿ!
ಜೇನುತುಪ್ಪವು ತ್ವರಿತ ಶಕ್ತಿಯನ್ನು ನೀಡುತ್ತದೆ. ಬೆಳ್ಳುಳ್ಳಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹಕ್ಕೆ ಆಮ್ಲಜನಕವನ್ನು ಪೂರೈಸಲು ನೆರವಾಗುತ್ತದೆ. ಈ ಎರಡರಲ್ಲೂ ಇರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ವಯಸ್ಸಾದ ಪ್ರಕ್ರಿಯೆಯನ್ನು ಕೂಡ ನಿಧಾನಗೊಳಿಸುತ್ತವೆ. ಇದನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಿದಾಗ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ತಾಜಾ ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ಸ್ವಚ್ಛಗೊಳಿಸಿ, ಈ ಎಸಳುಗಳನ್ನು ಸ್ವಚ್ಛವಾದ ಗಾಜಿನ ಜಾರ್ನಲ್ಲಿ ಹಾಕಿಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳುಗಳು ಸಂಪೂರ್ಣವಾಗಿ ಮುಳುಗುವಷ್ಟು ಜೇನುತುಪ್ಪವನ್ನು ಸುರಿಯಿರಿ. ಜಾರ್ ಅನ್ನು ಮುಚ್ಚಿ ಮತ್ತು 7 ರಿಂದ 10 ದಿನಗಳ ವರೆಗೆ ಇರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಒಂದು ಅಥವಾ ಎರಡು ಬೆಳ್ಳುಳ್ಳಿ ಎಸಳುಗಳನ್ನು ಅಗಿದು ತಿನ್ನಬಹುದು. ಆದರೆ ಇದನ್ನು ಮಕ್ಕಳು ಅಥವಾ ಮಧುಮೇಹ ಇರುವವರು ತೆಗೆದುಕೊಳ್ಳಬಾರದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ