ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಪ್ರತೀ ಋತು ಕಾಲದಲ್ಲಿಯೂ ಮನುಷ್ಯರು ಆಯಾ ಕಾಲಕ್ಕೆ ತಕ್ಕಂತೆ ಏನೋ ಒಂಥರಾ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾನೆ. ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಪರಿಹಾರವೂ ಸಿಗುತ್ತದೆ. ಈ ಅನಾರೋಗ್ಯ ಸಮಸ್ಯೆಗಳು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಾಗಿಲ್ಲ, ಮಾನಸಿಕ ಸಮಸ್ಯೆಗಳು ಇವೆ. ಅವುಗಳ ಬಗ್ಗೆ ನಿಮಗೆ ತಿಳಿದಿರಲಿ.
ನಮ್ಮ ಸುತ್ತಲೂ ಇರುವ ವಾತಾವರಣ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವರಲ್ಲಿ ಸೂರ್ಯ ಮುಳುಗಿ ಸಂಜೆಯಾಗುತ್ತಿದ್ದಂತೆ ಅವರ ಮಾನಸಿಕ ಸ್ಥಿತಿಯಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ. ಸೂರ್ಯ ಅಸ್ತಮಿಸುತ್ತಿದ್ದಂತೆ ವಿನಾಕಾರಣ ಭಯಪಡುವವರು ಇದ್ದಾರೆ ಎಂದರೆ ನೀವು ನಂಬಬೇಕು. ಇದನ್ನು ಸನ್ ಡೌನ್ ಸಿಂಡ್ರೋಮ್ ಎಂದು ಕರೆಯುತ್ತಾರೆ ಮಾನಸಿಕ ರೋಗ ತಜ್ಞರು. ಸೂರ್ಯನು ಅಸ್ತಮಿಸುತ್ತಿದ್ದಾನೆ ಅಂದರೆ ಕೆಲವರಲ್ಲಿ ಯಾವುದೋ ಅಜ್ಞಾತ ಆತಂಕ, ಭಯ ಶುರುವಾಗುತ್ತದೆ. ಅಷ್ಟಕ್ಕೂ ಏನು ಆ ರೋಗ? ಅದನ್ನು ಯಾವ ರೀತಿ ತಡೆಗಟ್ಟಬೇಕು ಎಂಬುದನ್ನು ತಿಳಿದುಕೊಳ್ಳೋಣ..
ಸನ್ ಡೌನ್ ಸಿಂಡ್ರೋಮ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುವವರಲ್ಲಿ ಸೂರ್ಯಾಸ್ತಮಯ ಆಗುತ್ತಿದೆ ಎಂದರೆ ಸಾಕು ಅವರ ಮನಸು ಅಸ್ತವ್ಯಸ್ಥಗೊಳ್ಳುತ್ತದೆ, ವಿಪರೀತವಾಗಿ ಯೋಚಿಸುತ್ತಾರೆ. ಇವರಲ್ಲಿ ಸಂಜೆ ಆತಂಕ, ಗಾಬರಿ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಮರೆವು ರೋಗ ಬಂದಂತೆ ಆಡುತ್ತಾರೆ. ಅಶಾಂತಿ, ತೀವ್ರ ಬಾಧೆ, ಕಸಿವಿಸಿ ಹೊಂದುತ್ತಾರೆ. ಗಮನಿಸಿ ಇಂತಹವರು ಇಡೀ ದಿನ ಆರಾಮವಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ ಸಂಜೆಯಾಗುತ್ತಿದ್ದಂತೆ ಈ ಲಕ್ಷಣಗಳು ಕಾಣಿಸಿಕೊಳ್ಲುತ್ತವೆ.
ಚಿತ್ತ ವೈಕಲ್ಯದಲ್ಲಿರುವ ಅವರು ಈ ಮಾನಸಿಕ ರೋಗಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ವೃದ್ಧಾಪ್ಯವು ಹತ್ತಿರಬರುತ್ತಿರುವವರಲ್ಲಿ ಈ ಸಮಸ್ಯೆ ಇದೆ ಎಂದು ಹೇಳಲಾಗುತ್ತದೆ. ಕತ್ತಲೆ ಅಧಿಕವಾಗುತ್ತಿದ್ದಂತೆ ಇಂಥವರಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಸಂಜೆ ಸಮಯದಲ್ಲಿ ಇಂತಹ ಲಕ್ಷಣಗಳು ತಕ್ಷಣವೇ ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
ಸನ್ಡೌನ್ ಸಿಂಡ್ರೋಮ್ ಲಕ್ಷಣಗಳು ಇದ್ದರೆ ಮಾನಸಿಕ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಅಂತಹವರು ತಮ್ಮ ಆಲೋಚನೆ ವಿಧಾನವನ್ನು ಬದಲಾಯಿಸುವುದರ ಬಗ್ಗೆ ಜೊತೆಗೆ ಔಷಧಿಗಳನ್ನು ಬಳಸುವ ಬಗ್ಗೆ ತಜ್ಞರು ಸಮಾಲೋಚನೆ ನಡೆಸಿ (ಕೌನ್ಸಿಲಿಂಗ್) ಸೂಚಿಸುತ್ತಾರೆ. ಇವುಗಳನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವ ಮೂಲಕ ಅಂತಹ ರೋಗ ಲಕ್ಷಣದಿಂದ ಹೊರಬರಲು ತಜ್ಞರು ಹೇಳುತ್ತಾರೆ. ಇನ್ನು ಸದಾ ಮಾನಸಿಕ ಆನಂದದಿಂದ ಇರುವ ಮೂಲಕ ಕೂಡ ಈ ಕಾಯಿಲೆಯಿಂದ ಹೊರಬರಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ವ್ಯಾಪಾರ ವ್ಯವಾಹಾರಗಳಿಂದ ದೂರವಿರುವುದು, ಸಂಜೆಯಾಗುತ್ತಿದ್ದಂತೆ ಧ್ಯಾನಕ್ಕೆ ಕುಳಿತುಕೊಳ್ಲುವುದು ಅಥವಾ ದೇವಸ್ಥಾನಕ್ಕೆ ಹೋಗುವುದರಿಂದ ಅನಗತ್ಯವಾದ ಆಲೋಚನೆಗಳು ಬರುವುದಿಲ್ಲ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.
(ಸೂಚನೆ: ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಒದಗಿಸಿದವು ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಉಪಸ್ಥಿತಿಯಲ್ಲಿ ಅವರ ಸೂಚನೆ ಮೇರೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ)
ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ..