
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 7ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಫೋನ್ ಕರೆಯನ್ನು ಸ್ವೀಕರಿಸಲಿಲ್ಲ ಅಂತಲೋ ಅಥವಾ ನೀವು ಕಳಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ ಎಂಬ ಕಾರಣಕ್ಕೋ ಗೆಳೆಯರು ಅಥವಾ ತುಂಬ ಆಪ್ತರ ಜತೆಗೆ ಜೋರು ಧ್ವನಿಯ ಮಾತುಕತೆ ನಡೆಸುವಂಥ ಸಾಧ್ಯತೆಗಳಿವೆ. ಸಂದರ್ಭ ಏನಿದೆ ಹಾಗೂ ಯಾಕೆ ಹೀಗಾಯಿತು ಎಂದು ಕೂತು ಮಾತನಾಡುವಷ್ಟು ತಾಳ್ಮೆ- ಸಂಯಮವನ್ನು ಉಳಿಸಿಕೊಳ್ಳುವುದು ಉತ್ತಮ. ನಿಮ್ಮ ಮೇಲಧಿಕಾರಿಗಳ ಜತೆಗೆ ಈ ದಿನ ಭೇಟಿ ಇದೆ ಹಾಗೂ ಅದು ಅನಿವಾರ್ಯ ಅಂತಾದಲ್ಲಿ ನಿಮ್ಮ ಅಭಿಪ್ರಾಯ ಹೇಳುವ ಸಂದರ್ಭಗಳಲ್ಲಿ ಒಂದಕ್ಕೆ ಹತ್ತು ಬಾರಿ ಎಂಬಂತೆ ಆಲೋಚಿಸುವುದು ಕ್ಷೇಮ. ದೇವತಾ ಪೂಜೆಗಾಗಿ ಕೆಲವು ಪಾತ್ರೆ- ವಸ್ತುಗಳನ್ನು ಖರೀದಿಸುವುದಕ್ಕೆ ಮುಂದಾಗಲಿದ್ದೀರಿ. ಹೂವಿನ ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಭಾರೀ ಏರಿಕೆ ಕಂಡುಬರಲಿದೆ. ಈ ಹಿಂದೆ ನಾನಾ ಕಾರಣದಿಂದ ಮುರಿದು ಹೋಗಿದ್ದ ಒಪ್ಪಂದಗಳು ಮತ್ತೆ ಚಾಲನೆಗೆ ಬರುವಂಥ ಸಾಧ್ಯತೆಗಳು ಹೆಚ್ಚಿವೆ.
ದಿನವಿಡೀ ಬಿಡುವಿಲ್ಲದಷ್ಟು ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಆಗುತ್ತದೆ. ನಿಮ್ಮ ಮನಸ್ಸಿನಲ್ಲಿ ಇರುವಂಥ ವಿಚಾರವನ್ನು ಮೊದಲೇ ಹೇಳಿಬಿಟ್ಟಿರುವಂತೆ ಗೆಳೆಯರು- ಸಂಬಂಧಿಕರು ನಡೆದುಕೊಳ್ಳಲಿದ್ದಾರೆ. ರುಚಿಕಟ್ಟಾದ ಭೋಜನವನ್ನು ಸವಿಯುವಂಥ ಯೋಗವಿದ್ದು, ಸ್ನೇಹಿತರು- ಕುಟುಂಬ ಸದಸ್ಯರ ಜತೆಗೂಡಿ ಉತ್ತಮ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆ ಕೂಡ ಮಾಡಿರದಂಥ ಉಡುಗೊರೆಗಳು ದೊರೆಯುವ ಯೋಗ ಇದೆ. ಈ ಹಿಂದೆ ನೀವು ಮಾಡಿದ್ದ ಸಹಾಯವನ್ನು ಸ್ಮರಿಸಿಕೊಂಡು, ಈ ದಿನ ನಿಮಗೆ ಕೃತಜ್ಞತೆಯನ್ನು ಹೇಳುವುದಕ್ಕೆ ಮುಂದಾಗಲಿದ್ದಾರೆ. ಬಲಗೈಗೆ ಸಣ್ಣ- ಪುಟ್ಟ ಪೆಟ್ಟಾಗುವ ಸಾಧ್ಯತೆಗಳಿದ್ದು, ಆ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಭಾರವಾದ ವಸ್ತುಗಳನ್ನು ಎತ್ತುವಾಗ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವಾಗ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸುವುದು ಉತ್ತಮ.
ನಿಮ್ಮ ಉತ್ಸಾಹ- ಹುಮ್ಮಸ್ಸು ತಗ್ಗುವಂಥ ಕೆಲವು ಬೆಳವಣಿಗೆಗಳು ಆಗಬಹುದು. ಎಲ್ಲಿಯೋ ದೂರದಲ್ಲಿ ಆಗುವಂಥ ಬದಲಾವಣೆಯಿಂದ ನಿಮಗೆ ಬಂಡವಾಳ ನೀಡುವುದಾಗಿ ಮಾತು ನೀಡಿದ್ದ ವ್ಯಕ್ತಿಯು ಈಗ ತನ್ನಿಂದ ಆಗಲ್ಲ ಎಂದುಬಿಡಬಹುದು. ನಿಮ್ಮದೇ ಕೆಲವು ಅತಿ ಬುದ್ಧಿವಂತಿಕೆ ನಡೆಯಿಂದ ಒಳ್ಳೆಯ ಪ್ರಾಜೆಕ್ಟ್ ಕೈ ತಪ್ಪಿ ಹೋಗಬಹದು. ಅಥವಾ ನಿಮ್ಮನ್ನು ಮಾತ್ರ ಹೊರಗಿಟ್ಟು ಆ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು. ನಿಮಗೆ ಅನಿಸಿದ್ದೆಲ್ಲವೂ ನಿಜವಾಗಿರಲೇಬೇಕು ಎಂಬ ಆಲೋಚನೆಯಿಂದ ಈ ದಿನ ಹೊರಬರಬೇಕು. ನೀವಾಡುವ ಮಾತು, ಬಳಸುವ ಪದಗಳು ಎದುರಿಗೆ ಇರುವವರಲ್ಲಿ ಎಂಥ ಭಾವನೆ ಮೂಡಿಸಬಹುದು ಎಂಬ ಬಗ್ಗೆ ಕ್ಷಣ ಮಾತ್ರ ಆಲೋಚಿಸಿದರೂ ಕೆಲವು ಅನಾಹುತಗಳನ್ನು ತಪ್ಪಿಸಬಹುದು. ಹೆಚ್ಚೆಚ್ಚು ಪದಗಳನ್ನು ಬಳಸಿ ಹೇಳುವಂಥ ಸಂಗತಿಗಳು ಅಂತ ನೀವು ಅಂದುಕೊಳ್ಳುವುದನ್ನು ಸರಳವಾಗಿ ದಾಟಿಸುವುದಕ್ಕೆ ಪ್ರಯತ್ನಿಸಿ, ನೆಮ್ಮದಿಯನ್ನು ಕಾಣಬಹುದು.
ಈ ದಿನ ಯಾರಿಗೂ ಸರ್ ಪ್ರೈಸ್ ಕೊಡುವ ಪ್ರಯತ್ನವನ್ನು ಮಾಡುವುದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ನೆಮ್ಮದಿ ಹಾಳಾಗಬಹುದು, ಎಚ್ಚರ. ಮುಖ್ಯವಾದ ಕೆಲಸ- ಕಾರ್ಯಗಳಿಗೆ ತೆರಳುವಾಗ ಕೊನೆ ಕ್ಷಣದ ಆತುರದಿಂದಾಗಿ ಅಲ್ಲಿಗೆ ತೆಗೆದುಕೊಂಡು ಹೋಗಲೇಬೇಕಾಗಿದ್ದ ಕೆಲವು ವಸ್ತುಗಳನ್ನು ಮರೆತು ಹೋಗುವ ಸಾಧ್ಯತೆಗಳು ಸಹ ಇವೆ. ಯಾವ ಕೆಲಸ ಆದ ಮೇಲೆ ಯಾವುದು ಎಂಬ ಬಗ್ಗೆ ಒಂದು ವೇಳಾಪಟ್ಟಿ ಮಾಡಿಟ್ಟುಕೊಳ್ಳುವುದು ಉತ್ತಮ. ಸಾವಯುವ ಕೃಷಿ ಮಾಡುವಂಥ ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವ ಅವಕಾಶಗಳು ದೊರೆಯಲಿವೆ. ಈ ಹಿಂದೆ ಅರ್ಧಕ್ಕೆ ನಿಂತಿದ್ದ ಮಾತುಕತೆ- ಒಪ್ಪಂದ ಮತ್ತೆ ಚಾಲನೆ ಪಡೆದುಕೊಳ್ಳುವ ಅವಕಾಶಗಳಿವೆ. ಕುಟುಂಬ ಸದಸ್ಯರ ಪೈಕಿ ಒಬ್ಬರಿಗೆ ಹಣಕಾಸಿನ ತೀವ್ರ ಅಗತ್ಯ ಕಂಡುಬರಲಿದ್ದು, ಅದಕ್ಕೆ ಬೇಕಾದ ಹೊಂದಾಣಿಕೆ ಮಾಡುವುದಕ್ಕೆ ಹೆಚ್ಚಿನ ಓಡಾಟ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ.
ಸಾಂಸಾರಿಕ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಉದ್ಯೋಗದ ಬದಲಾವಣೆಗಾಗಿ ಯಾರು ಪ್ರಯತ್ನವನ್ನು ಮಾಡುತ್ತಿರುವಿರೋ ಅಂಥವರಿಗೆ ಒಳ್ಳೆ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿವೆ. ಕೆಲ ಸಮಯದ ಹಿಂದೆ ಖರೀದಿಸಿ ತಂದಿದ್ದ ಗ್ಯಾಜೆಟ್ ಗಳನ್ನು ಎಕ್ಸ್ ಚೇಂಜ್ ಮಾಡಬೇಕು ಅಥವಾ ಅಪ್ ಗ್ರೇಡ್ ಮಾಡಿಕೊಳ್ಳಬೇಕು ಎಂಬ ಆಲೋಚನೆ ಮೂಡಲಿದೆ. ವಿದೇಶಕ್ಕೆ ಪ್ರಯಾಣ ಮಾಡಬೇಕು ಎಂದು ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿರುವವರಿಗೆ ಈ ವರೆಗೆ ಆಗುತ್ತಿದ್ದ ಅಡೆತಡೆಗಳು ಬಗೆಹರಿಯುವ ಮಾರ್ಗೋಪಾಯ ಗೋಚರ ಆಗಲಿದೆ. ಮನೆಯಲ್ಲಿ ಲೈಬ್ರರಿಗೆ ಬೇಕಾದಂಥ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಾ ಇರುವವರಿಗೆ ನೆರವೇರುವ ಅವಕಾಶಗಳಿವೆ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಅನುಕೂಲದ ದಿನ. ನಿಮ್ಮದಲ್ಲದ ವ್ಯವಹಾರದ ಬಗ್ಗೆ ವಿಪರೀತ ಆಸಕ್ತಿ ತೋರುವುದಕ್ಕೆ ಹೋಗದಿರಿ.
ಮನಸ್ಸು ಒಂದು ಕಡೆ ಲಗತ್ತಾಗಿ ನೆಟ್ಟು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದಷ್ಟು ಗೊಂದಲ ಏಕಾಗ್ರತೆಗೆ ಭಂಗ ಆಗುವಂಥ ಸನ್ನಿವೇಶಗಳು ಸೃಷ್ಟಿ ಆಗುತ್ತವೆ. ಈ ಹಿಂದೆ ಯಾವಾಗಲೋ ಮಾಡಿದ್ದ ಕೆಲಸಕ್ಕೆ ಸಂಬಂಧಿಸಿದಂತೆ ಈಗ ಒತ್ತಡ ಎನಿಸುವಷ್ಟರ ಮಟ್ಟಿಗೆ ಮಾತುಗಳು- ಪ್ರಶ್ನೆಗಳನ್ನು ಕೇಳಿಸಿಕೊಳ್ಳಬೇಕಾದೀತು. ಸ್ವಂತ ಮನೆ ಖರೀದಿ ಮಾಡಬೇಕು ಎಂದು ಆಲೋಚಿಸುತ್ತಾ ಇರುವವರಿಗೆ ಮನಸ್ಸಿಗೆ ಸಮಾಧಾನ ಆಗುವ ಬೆಳವಣಿಗೆ ಆಗಲಿದೆ. ಮಕ್ಕಳಿಗಾಗಿ ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್ ಇಂಥವುಗಳನ್ನು ಖರೀದಿಸಬೇಕು ಎಂದಿರುವವರು ನಿರ್ಧಾರವನ್ನು ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ಅಂದುಕೊಳ್ಳದ ರೀತಿಯಲ್ಲಿ ಕೆಲವು ಖರ್ಚುಗಳು ಉದ್ಭವಿಸುವುದರಿಂದ ಸ್ನೇಹಿತರೋ ಅಥವಾ ಸಂಬಂಧಿಗಳ ಬಳಿಯೋ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ನಿಧಾನವಾಗಿ ಆಲೋಚಿಸಿದ ನಂತರವಷ್ಟೇ ತೀರ್ಮಾನ ಕೈಗೊಳ್ಳಿ.
ಯಾವ ವಿಚಾರಕ್ಕೆ ಎಷ್ಟು ಪ್ರಾಧಾನ್ಯ ನೀಡಬೇಕು ಎಂಬ ವಿಚಾರದಲ್ಲಿ ವಿಪರೀತ ಗೊಂದಲ ಏರ್ಪಡಲಿದೆ. ಅದರಲ್ಲೂ ಇನ್ ಸ್ಟಲೇಷನ್- ಯಾವುದೇ ರೀತಿಯದ್ದಾದರೂ ಇರಬಹುದು, ಇನ್ ಸ್ಟಲೇಷನ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಲ್ಲಿ ಬೇರೆಯವರು ಒಪ್ಪಿಕೊಂಡ ಅಥವಾ ಮಾಡಬೇಕಾದ ಕೆಲಸವನ್ನೂ ನೀವೇ ಮಾಡಿ ಮುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಜೊತೆಗೆ ಇರುವಂಥವರ ಆರ್ಥಿಕ ಒತ್ತಡವು ನಿಮ್ಮ ಮನಸ್ಸನ್ನು ಅಧೀರಗೊಳಿಸಲಿವೆ. ಇನ್ನು ಮುಂದೆ ಆಪತ್ಕಾಲಕ್ಕೆ ಅಂತಲೇ ಉಳಿತಾಯವೋ ಹೂಡಿಕೆಯನ್ನೋ ಮಾಡಲೇಬೇಕು ಎಂದು ಗಟ್ಟಿ ನಿರ್ಧಾರಕ್ಕೆ ಬಂದು ಬಿಡಲಿದ್ದೀರಿ. ಬೇರೆಯವರ ಸಲುವಾಗಿ ನೀವು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಲಿದೆ. ನಾನಾಯಿತು ನನ್ನ ಪಾಡಾಯಿತು ಎಂದು ಸುಮ್ಮನಿದ್ದರೂ ಅಲೆದಾಟ ತಪ್ಪುವುದಿಲ್ಲ. ನಿಮ್ಮ ಆತ್ಮ ಗೌರವಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೆಲವರಿಂದ ಕೇಳಿಸಿಕೊಳ್ಳ ಬೇಕಾಗುತ್ತದೆ.
ನೀವು ಪ್ರಯತ್ನ ಮಾಡುತ್ತಿದ್ದ ಹಣಕಾಸು ಹೊಂದಾಣಿಕೆ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳ ಬಗ್ಗೆ ಸುಳಿವು ದೊರೆಯಲಿವೆ. ವಿದೇಶಗಳಲ್ಲಿ ಉದ್ಯೋಗ- ವ್ಯಾಸಂಗಕ್ಕಾಗಿ ಪ್ರಯತ್ನಿಸುತ್ತಿದ್ದು, ವೀಸಾ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅಡೆತಡೆಗಳು ಎದುರಾಗಿದ್ದಲ್ಲಿ ಅದನ್ನು ನಿವಾರಿಸಿಕೊಡುವುದಾಗಿ ಕೆಲವರು ನಿಮಗೆ ಭರವಸೆ ನೀಡಲಿದ್ದಾರೆ. ಇನ್ನು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ನಿಮ್ಮ ಮನಸ್ಸಲ್ಲಿ ಇರುವ ಗುರಿಯನ್ನು ತಲುಪುವುದಕ್ಕೆ ಜತೆಯಲ್ಲಿ ಇರುವವರು ಸೂಕ್ತ ಸಹಕಾರ ನೀಡುತ್ತಿಲ್ಲ ಎಂಬುದು ಆಕ್ಷೇಪಕ್ಕೆ ಕಾರಣ ಆಗಲಿದೆ. ಮನೆಯಲ್ಲಿ ಇರುವಂಥ ಕೆಲವು ಪೀಠೋಪಕರಣಗಳನ್ನು ಮಾರಾಟ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಮನೆಯಲ್ಲಿನ ಕಾರ್ಯಕ್ರಮಕ್ಕೆ ನೀವು ಓಡಾಟ ನಡೆಸುವಂತೆ ಕೇಳಿಕೊಳ್ಳಲಿದ್ದಾರೆ. ಹಣಕಾಸಿನ ನೆರವನ್ನು ಸಹ ನೀಡ ಬೇಕಾಗಬಹುದು ಎಂದು ನಿಮಗೇ ಅನಿಸಲಿದೆ.
ಚಿನ್ನ ಅಥವಾ ಪ್ಲಾಟಿನಂ ಆಭರಣದ ಖರೀದಿಯನ್ನು ಮಾಡುವುದಕ್ಕೆ ಸಣ್ಣ ಮೊತ್ತವಾದರೂ ಅಡ್ವಾನ್ಸ್ ನೀಡುವಂಥ ಯೋಗ ಇದೆ. ತಾಯಿ ಮನೆ ಕಡೆಯ ಸಂಬಂಧಿಕರು ಈ ದಿನ ಸಹಾಯ ಕೇಳಿಕೊಂಡು ಬರಬಹುದು. ಇನ್ನು ನೀವೇನಾದರೂ ಸೈಟ್, ಕಟ್ಟಿರುವಂಥ ಮನೆ ಅಥವಾ ಜಮೀನಿಗಾಗಿ ಯಾರಿಗಾದರೂ ಹೇಳಿಟ್ಟಿದ್ದೀರಿ ಅಂತಾದರೆ, ಅಂಥವರ ಪೈಕಿ ಯಾರಾದರೂ ನಿಮ್ಮ ಮನಸ್ಸಿಗೆ ಒಪ್ಪುವಂತಹ ಪ್ರಸ್ತಾವವನ್ನು ತರುವಂಥ ಯೋಗ ಇದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರು, ಕಾಂಡಿಮೆಂಟ್ಸ್ ನಡೆಸುವಂಥವರಿಗೆ ದೊಡ್ಡ ಆರ್ಡರ್ ಗಳು ಬರಲಿವೆ ಹಾಗೂ ಆದಾಯದ ಪ್ರಮಾಣ ಮತ್ತು ಮೂಲ ಎರಡರಲ್ಲೂ ಏರಿಕೆಯನ್ನು ಕಾಣಲಿದ್ದೀರಿ. ಸಂಬಂಧದಲ್ಲಿಯೇ ವಧು ಅಥವಾ ವರಾನ್ವೇಷಣೆ ನಡೆದಿದ್ದಲ್ಲಿ ಸಕಾರಾತ್ಮಕವಾದ ಸ್ಪಂದನೆ ದೊರೆಯುವ ಸೂಚನೆಗಳು ದೊರೆಯಲಿವೆ. ಬಾಲ್ಯದ ಗೆಳೆಯ/ಗೆಳತಿಯರ ಭೇಟಿಯಿಂದ ಮನಸ್ಸಿಗೆ ಸಂತೋಷ ಹಾಗೂ ಅವರ ಜೊತೆಗಿನ ಮಾತುಕತೆಯಿಂದ ಸಮಾಧಾನ ದೊರೆಯಲಿದೆ.
ಲೇಖನ- ಎನ್.ಕೆ.ಸ್ವಾತಿ