
ಒಂದು ಬಗೆಯಲ್ಲಿ ಮಾನಸಿಕವಾದ ದಣಿವು ಹಾಗೂ ಅದರೊಂದಿಗೆ ಯಾವುದೇ ಮುಖ್ಯ ವಿಚಾರಕ್ಕೆ ಧಾವಂತ ಬೇಡ ಎಂದೆನಿಸಿ, ಸಮಾಧಾನವಾಗಿ ಈ ದಿನ ಕಳೆಯಬೇಕು ಎಂಬ ನಿಮ್ಮ ಉದ್ದೇಶ ಬಹುತೇಕ ಈಡೇರಲಿದೆ. ಯಾವ ವಿಚಾರಕ್ಕೆ ಇಷ್ಟು ಸಮಯ ನಿಮ್ಮ ಶ್ರಮ, ಹಣ ಹಾಕಿ ಕಾಯುತ್ತಿದ್ದಿರೋ ಅದು ಕೈಗೂಡಲಿದೆ ಎಂಬ ಸೂಚನೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಈ ದಿನ ದೇವತಾರಾಧನೆಯನ್ನು ಮಾಡುವ ಯೋಗವಿದೆ. ಪ್ರೀತಿಪಾತ್ರರ ಜತೆಗೆ ಉತ್ತಮ ಸಮಯ ಕಳೆಯುವಂಥ ಯೋಗ ಇದೆ. ಬಹಳ ದಿನದಿಂದ ಬಾಕಿ ಉಳಿದಿದ್ದ ಕೆಲಸಗಳು ಆಗಬೇಕಿದ್ದಲ್ಲಿ ಅದು ಪೂರ್ಣಗೊಳಿಸುವಂಥ ಸಾಧ್ಯತೆಗಳಿವೆ. ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಬಹುದು. ವಿವಾಹಿತ ಸ್ತ್ರೀಯರಿಗೆ ತವರು ಮನೆಗೆ ಭೇಟಿ ನೀಡುವಂಥ ಯೋಗ ಇದ್ದು, ಅಣ್ಣನಿಂದ ಉಡುಗೊರೆಗಳನ್ನು ಪಡೆಯುವಂಥ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಬಹಳ ಸಮಯದಿಂದ ಕಾಡುತ್ತಿದ್ದ ಸಂದೇಹ ಅನುಮಾನಗಳು ಬಗೆಹರಿಯಲಿವೆ.
ನಿಮಗೆ ಮನಸ್ಥಿತಿ ಉತ್ತಮವಾಗಿಯೇ ಇದ್ದಾಗ ಬೇರೆಯವರಿಗೆ ಸಹಾಯ ಮಾಡಬೇಕು ಎಂದುಕೊಳ್ಳುವುದು ತಪ್ಪಲ್ಲ. ಆದರೆ ಅದಕ್ಕೂ ಮುಂಚೆ ಕೆಲವು ಅಂಶಗಳನ್ನು ಸರಿಯಾಗಿ ಗಮನಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ನಿಮಗೆ ಕಡ್ಡಾಯವಾಗಿ ತಿಳಿಯಬೇಕಾದದ್ದು ಏನೆಂದರೆ, ನೀವು ಈ ದಿನ ಇತರರ ಬಗ್ಗೆ ತೋರುವ ಕರುಣೆ, ಅನುಕಂಪ, ಸಹಾನುಭೂತಿಯೇ ಸಮಸ್ಯೆಯಾಗಿ ಪರಿಣಮಿಸಲಿದೆ. ಆದ್ದರಿಂದ ಎದುರಿಗಿರುವ ವ್ಯಕ್ತಿಗೆ ಇರುವ ಅಗತ್ಯವನ್ನು ಅಳೆಯುವುದಕ್ಕೆ ಪ್ರಯತ್ನಿಸಿ. ಸುಖಾಸುಮ್ಮನೆ ಮೈ ಮೇಲೆ ಬಿದ್ದು, ಸಹಾಯ ಮಾಡುವುದಕ್ಕೆ ಹೋಗದಿರಿ. ಭಾವನಾತ್ಮಕ ಸಂಗತಿಯನ್ನು ಸರಿಯಾಗಿ ನಿರ್ವಹಿಸಿ. ಹೊಸದಾಗಿ ನಿಮಗೆ ಪರಿಚಯವಾದವರು, ಸ್ನೇಹಿತರಾದವರು ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಮುಂಜಾಗ್ರತೆ ವಹಿಸಿ. ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ.
ನಿಮ್ಮ ಓಡಾಟ, ತರಾತುರಿ ಇತರರಿಗೆ ಅಶ್ಚರ್ಯವನ್ನು ತರಲಿದೆ. ಇತರರಿಗೆ ಮಾತು ಕೊಟ್ಟಂಥ ಕಾರಣಕ್ಕೋ ಅಥವಾ ಯಾವುದಾದರೂ ವಸ್ತುವನ್ನು ಖರೀದಿಸುವುದಕ್ಕೋ ಅಥವಾ ಯಾವುದಾದರೂ ಜಾಗಕ್ಕೆ ಅಡ್ವಾನ್ಸ್ ನೀಡುವುದಕ್ಕೋ ಹಣಕಾಸಿನ ಹೊಂದಾಣಿಕೆಯನ್ನು ಸರಿಯಾಗಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಲಿದೆ. ಈ ದಿನ ಪ್ರಯಾಣ ಹೊರಟಿದ್ದೀರಿ ಅಂತಾದಲ್ಲಿ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ. ಕುಟುಂಬ ಸದಸ್ಯರ ಸಲುವಾಗಿ ಒಂದಿಷ್ಟು ಹೆಚ್ಚಿನ ಖರ್ಚಾಗುವಂಥ ಸಾಧ್ಯತೆಗಳಿವೆ. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಜವಾಬ್ದಾರಿಯನ್ನು ಹೊರಬೇಕಾಗಬಹುದು. ಹೊಸದಾಗಿ ಹೂಡಿಕೆ ಮಾಡುವ ಬಗ್ಗೆ ಕುಟುಂಬ ಸದಸ್ಯರು, ಸ್ನೇಹಿತರ ಜತೆಗೆ ಚರ್ಚೆ ನಡೆಸಲಿದ್ದೀರಿ. ಈ ದಿನ ಮನೆಯಿಂದ ಹೊರಡುವಾಗ ಗಣೇಶನ ಸ್ಮರಣೆಯನ್ನು ಮಾಡಿಕೊಂಡು ಹೊರಡಿ.
ವಿದ್ಯಾರ್ಥಿಗಳಾಗಿದ್ದು ಯಾವುದಾದರೂ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿಗಾಗಿ ಪರೀಕ್ಷೆ ಬರೆಯಬೇಕಿದ್ದಲ್ಲಿ ಅಥವಾ ಇಂಟರ್ ವ್ಯೂಗಾಗಿ ಸಿದ್ಧತೆ ನಡೆಸುತ್ತಿದ್ದಲ್ಲಿ ಅಥವಾ ಮದುವೆಗಾಗಿ ಸೂಕ್ತ ಸಂಬಂಧಗಳ ಹುಡುಕಾಟದಲ್ಲಿ ಇದ್ದು, ಅಂಥ ವಿಚಾರಕ್ಕೆ ಆತ್ಮವಿಶ್ವಾಸದಲ್ಲಿ ಕೊರತೆ ಇದ್ದಲ್ಲಿ ಅದನ್ನು ಪಡೆದುಕೊಳ್ಳುವುದಕ್ಕೆ ಗಟ್ಟಿಯಾಗಿ ಪ್ರಯತ್ನಿಸಿ. ಒಂದು ವೇಳೆ ನೀವು ಕೈಗೊಳ್ಳುವ ಕೆಲಸದ ಬಗ್ಗೆ ಅನುಮಾನಗಳಿದ್ದಲ್ಲಿ ಅಥವಾ ಮಾಡಬೇಕೋ ಬೇಡವೋ ಎಂಬ ಗೊಂದಲಗಳಿದ್ದಲ್ಲಿ ಆ ಕೆಲಸವನ್ನು ಮಾಡದಿರುವುದು ಉತ್ತಮ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಸಂಸ್ಥೆಯಲ್ಲಿ, ಉತ್ತಮ ಹುದ್ದೆಯೇ ದೊರೆಯುವಂಥ ಸಾಧ್ಯತೆ ಇದೆ ಎಂಬ ಬಗ್ಗೆ ಇತರರು ತಿಳಿಸಲಿದ್ದಾರೆ. ಸ್ನೇಹಿತರ ಜತೆಗೂಡಿ ಉತ್ತಮವಾದ ಸಮಯ ಕಳೆಯುವುದಕ್ಕೆ ವೇದಿಕೆಯೊಂದು ದೊರೆಯಲಿದೆ.
ನೀವು ನಿರೀಕ್ಷೆ ಕೂಡ ಮಾಡದಂಥವುಗಳ ಕಡೆಗೆ ಏಕಾಏಕಿ ಹಲವು ಬಗೆಯಲ್ಲಿ ಯೋಚನೆಗಳು ಮೂಡುವುದಕ್ಕೆ ಶುರುವಾಗುತ್ತದೆ. ನಿಮಗೆ ಸಂಬಂಧಪಟ್ಟ ವ್ಯಕ್ತಿಗಳು, ವಿಚಾರಗಳು ಹಾಗೂ ವಿಷಯಗಳ ಕಡೆಗೆ ತಕ್ಷಣವೇ ಗಮನ ಹರಿಸಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಒಂದು ವೇಳೆ ನೀವೇನಾದರೂ ವ್ಯಾಪಾರಿಗಳಾಗಿದ್ದಲ್ಲಿ ನಿಮಗೆ ವ್ಯಾಪಾರದ ಸ್ಥಳದಲ್ಲಿ ವಿಪರೀತ ಕೆಲಸದ ಒತ್ತಡ ಅನುಭವಕ್ಕೆ ಬರಲಿದೆ. ನಿಮ್ಮಲ್ಲಿ ಕೆಲವರು ಈಗಿರುವ ಕೆಲಸವನ್ನೇ ಬಿಟ್ಟು, ಆ ನಂತರ ಬೇರೆಯದನ್ನು ಹುಡುಕಿಕೊಳ್ಳೋಣ ಎಂದು ಆಲೋಚಿಸುವ ಸಾಧ್ಯತೆಗಳಿವೆ. ನಿಮ್ಮ ಕೈಯಲ್ಲಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಯಾವುದಾದರೂ ಪ್ಲಾನಿಂಗ್ ಮಾಡಿಕೊಳ್ಳುವುದು ಉತ್ತಮ. ಅವರಿವರು ದುಡ್ಡು ಕೊಡುತ್ತಾರೆ ಎಂದು ನೆಚ್ಚಿಕೊಂಡು ದೊಡ್ಡದಕ್ಕೆ ಕೈ ಹಾಕಿದಲ್ಲಿ ಭ್ರಮನಿರಸನ ಆಗುತ್ತದೆ. ಜತೆಗೆ ಅವಮಾನದ ಪಾಲಾಗುತ್ತೀರಿ.
ಈ ದಿನ ನಿಮ್ಮ ಪಾಲಿಗೆ ಅದೃಷ್ಟ ಹಾಗೂ ಸಮಯಪ್ರಜ್ಞೆ ಹೇಗಿರುತ್ತದೆ ಎಂಬುದರ ಆಧಾರದಲ್ಲಿ ಹಲವು ವಿಚಾರಗಳು ನಿರ್ಧಾರ ಆಗಲಿವೆ. ಅವಕಾಶಗಳು ನಿಮ್ಮ ಎದುರಿಗೆ ತೆರೆದುಕೊಳ್ಳಲಿವೆ. ಆದರೆ ಅವುಗಳನ್ನು ನೀವು ಹೇಗೆ ನೋಡುತ್ತೀರಿ ಹಾಗೂ ಅವುಗಳನ್ನು ಹೇಗೆ ಬಳಸಿಕೊಳ್ಳುವುದಕ್ಕೆ ತೀರ್ಮಾನಿಸುತ್ತೀರಿ ಎಂಬುದರ ಆಧಾರದ ಮೇಲೆ ಹಲವು ಸಂಗತಿಗಳು ನಿರ್ಧಾರ ಆಗುತ್ತವೆ. ಅಂದರೆ ಇಂದಿನ ನಿಮ್ಮ ಯಶಸ್ಸು ಧೈರ್ಯದ ಮೇಲೆ ನಿರ್ಧಾರವಾಗುತ್ತದೆ. ಸ್ವಲ್ಪ ಮಟ್ಟಿಗೆ ರಿಸ್ಕ್ ಇದೆ ಎಂದಾದರೂ ಹೆದರದೆ ಮುಂದುವರಿದಲ್ಲಿ ಗೆಲುವು ನಿಮ್ಮದಾಗಲಿದೆ. ರಾಜಕಾರಣದಲ್ಲಿ ಇರುವವರಿಗೆ ಪ್ರಾತಿನಿಧ್ಯ ದೊರೆಯಲಿದೆ. ಸೂಕ್ತ ಸ್ಥಾನ- ಮಾನಗಳು ಸಹ ನಿರೀಕ್ಷೆ ಮಾಡಬಹುದು. ಹಿಮ್ಮಡಿಯ ನೋವು ಅಥವಾ ಹಿಡಿದುಕೊಂಡಂತಾಗುವುದು ಈ ರೀತಿಯ ಸಮಸ್ಯೆಗಳನ್ನು ಅನುಭವಿಸಲಿದ್ದೀರಿ. ದೇಹದ ತೂಕದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದೆನಿಸಿದಲ್ಲಿ ತಕ್ಷಣವೇ ಮುಂಜಾಗ್ರತೆಯನ್ನು ತೆಗೆದುಕೊಳ್ಳಿ.
ಯಾರದೋ ಮೇಲಿನ ಸಿಟ್ಟು, ಇನ್ಯಾರ ಬಗ್ಗೆಯೋ ಇರುವಂಥ ಆಕ್ಷೇಪದ ಕಾರಣಕ್ಕೆ ಬೆಳಗ್ಗೆಯಿಂದಲೇ ಒಂದು ಬಗೆಯ ಆಲಸ್ಯ ನಿಮ್ಮನ್ನು ಕಾಡಬಹುದು. ಅದರಲ್ಲೂ ನಿಮಗೆ ಈ ಹಿಂದಿನ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಈಗಾಗಲೇ ಮುಂಗಡವನ್ನು ಕೊಟ್ಟಿದ್ದೇನೆ ಬಹಳ ದಿನದಿಂದ ಕೆಲಸ ಆಗದೆ ಹಾಗೇ ಉಳಿದಿದೆ ಎಂಬಂಥದ್ದಕ್ಕೆ ಚಾಲನೆ ದೊರೆಯಲಿದೆ.ಇಷ್ಟು ಸಮಯ ನಿಮ್ಮ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬಗ್ಗೆ ಅನುಮಾನ ಇರುವಂಥವರೇ ನೆರವು ಕೇಳಿಕೊಂಡು ಬರಲಿದ್ದಾರೆ. ಸಂಗಾತಿಯ ಭಾವನಾತ್ಮಕ ಅಗತ್ಯಗಳನ್ನು ತಿಳಿದುಕೊಂಡು, ಅದಕ್ಕೆ ಸ್ಪಂದಿಸುವ ಬಗ್ಗೆ ಗಮನ ಹರಿಸಿ. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸುವ ಸಂಬಂಧಿಕರು ಅಥವಾ ಸ್ನೇಹಿತರ ವಿಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಕೈಲಿರುವ ಹಣದ ಸರಿಯಾದ ಉಪಯೋಗ ಹೇಗೆ ಮಾಡಬೇಕು ಎಂದು ಆಲೋಚಿಸಿ.
ಬೆಳಗ್ಗೆ ಎದ್ದ ಕ್ಷಣದಿಂದಲೂ ನಿಮಗೆ ಏನೋ ಒಳ್ಳೆಯದು ಸಂಭವಿಸಲಿದೆ ಎಂದು ಅನಿಸುವುದಕ್ಕೆ ಶುರುವಾಗಲಿದೆ. ಈ ಭಾವವನ್ನು ಇಡೀ ದಿನ ಚೈತನ್ಯವಾಗಿ ಉಳಿಸಿಕೊಳ್ಳಲು ಪ್ರಯತ್ನಿಸಿ. ಸಂಗಾತಿಯ ಕಡೆಯಿಂದ ಶುಭ ಸುದ್ದಿಯನ್ನು ಕೇಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮಲ್ಲಿ ಕೆಲವರಿಗೆ ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಅದು ಬಗೆಹರಿಸಿಕೊಳ್ಳುವಂಥ ಮಾರ್ಗೋಪಾಯಗಳು ಗೋಚರ ಆಗಲಿದೆ. ಒಂದು ವೇಳೆ ಯಾವುದಾದರೂ ಕೆಲಸವೊಂದಕ್ಕೆ ಸಂಬಂಧಿಸಿದಂತೆ ಅಥವಾ ಇದು ಏನೂ ಉಪಯೋಗ ಆಗಲಾರದು, ಹಣವನ್ನು ಸಹ ನಿರೀಕ್ಷೆ ಮಾಡುವಂತಿಲ್ಲ ಎಂದು ಆಸೆಯನ್ನೇ ಕೈ ಬಿಟ್ಟಿದ್ದ ಪ್ರಾಜೆಕ್ಟ್ ವೊಂದರಿಂದ ಅನಿರೀಕ್ಷಿತವಾಗಿ ಧನಾಗಮ ಆಗಲಿದೆ. ನೀವು ದಿಢೀರ್ ಪ್ರಯಾಣ ಮಾಡಬೇಕಾಗಬಹುದು. ಹೋದರೆ ಕೆಲಸ ಆದೀತೋ ಇಲ್ಲವೋ ಎಂದು ಹಿಂಜರಿಕೆ ಮಾಡಬೇಡಿ. ಕೆಲಸ ಮಾಡಿಕೊಂಡೇ ಬರುತ್ತೀನಿ ಎಂಬ ಸಂಕಲ್ಪವನ್ನು ಮಾಡಿ, ಪ್ರಯತ್ನಿಸಿ ಆಗ ಯಶಸ್ಸು ನಿಮ್ಮ ಪಾಲಿಗೆ ಹುಡುಕಿಕೊಂಡು ಬರಲಿದೆ.
ಈ ಹಿಂದೆ ಯಾವಾಗಲೋ ಆದ ಕೆಟ್ಟ ಅನುಭವಗಳ ಆಧಾರದಲ್ಲಿ ಯಾವ ರೀತಿಯ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಲು ಹೋಗಬೇಡಿ. ಅದರಲ್ಲೂ ಈ ದಿನ ನಿಮ್ಮ ಬಳಿ ಸಹಾಯ ಕೇಳಿಕೊಂಡು ಬಂದಲ್ಲಿ, ಒಂದು ವೇಳೆ ಅದನ್ನು ಮಾಡುವುದಕ್ಕೆ ನಿಮ್ಮಿಂದಲೂ ಸಾಧ್ಯ ಅಂತಾದರೆ ಖಂಡಿತಾ ನೆರವನ್ನು ನೀಡಿ. ಏಕೆಂದರೆ ದೇವತಾರಾಧನೆಗಾಗಿ ನಿಮ್ಮ ಹಣ, ಸಮಯ, ವಸ್ತುಗಳು, ಸ್ಥಳ ಸದ್ವಿನಿಯೋಗ ಆಗುವಂಥ ಯೋಗ ಇದೆ. ನೀವಾಯಿತು ನಿಮ್ಮ ಕೆಲಸ ಆಯಿತು ಎಂಬಂತೆಯೇ ಇದ್ದರೂ ಹೆಸರು ಗಳಿಸುವಂಥ ಯೋಗ ಇದೆ. ಸ್ವಭಾವತಃ ತುಂಬ ಸಾಧುವಾಗಿರುವವರು ಸಹ ಈ ದಿನ ಸ್ವಲ್ಪ ಮಟ್ಟಿಗಾದರೂ ಧ್ವನಿ ಎತ್ತರಿಸಿ ಮಾತನಾಡಬೇಕಾದೀತು. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸನ್ಮಾನ- ಕೀರ್ತಿ ಪಡೆಯುವಂಥ ಯೋಗ ಇದೆ. ಸೈಟು- ಕೃಷಿ ಜಮೀನು ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ತಾತ್ಕಾಲಿಕವಾಗಿ ಈ ಹುಡುಕಾಟವನ್ನು ನಿಲ್ಲಿಸಬೇಕು ಎಂದು ತೀರ್ಮಾನಿಸುವಂಥ ಸಾಧ್ಯತೆಗಳಿವೆ. ಅಥವಾ ಅಂಥ ಸನ್ನಿವೇಶ ಸೃಷ್ಟಿ ಆಗುತ್ತದೆ.
ಲೇಖನ- ಎನ್.ಕೆ.ಸ್ವಾತಿ