
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 10ರಿಂದ 16ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಒಂದು ವೇಳೆ ನಿಮಗೆ ಹಣಕಾಸಿನ ಅಗತ್ಯ ತೀವ್ರವಾಗಿದೆ ಎಂದಿದ್ದಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆಗಳನ್ನು ಕಾಣಲಿದ್ದೀರಿ. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ನಿಮ್ಮ ತಂದೆ ಅಥವಾ ತಂದೆ ಸಮಾನರಿಂದ ಹಣಕಾಸಿನ ಅನುಕೂಲ ಆಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವಂಥ ಯೋಗ ಇದೆ. ಇದಕ್ಕಾಗಿ ನೀವು ಹೆಚ್ಚಿನ ಓಡಾಟ ನಡೆಸಲಿದ್ದೀರಿ. ಇನ್ನು ವಿವಾಹ ವಯಸ್ಕರಾಗಿದ್ದಲ್ಲಿ ಸಭೆ, ಸಮಾರಂಭ ಮೊದಲಾದ ಕಾರ್ಯಕ್ರಮದಲ್ಲಿ ಭಾಗೀ ಆಗಲು ಬಂದ ವ್ಯಕ್ತಿಯ ಪರಿಚಯವು ಸ್ನೇಹವಾಗಿ, ಅಲ್ಲಿಂದ ಅದು ಪ್ರೀತಿಯಾಗಿ ಮಾರ್ಪಟ್ಟು, ಮದುವೆಯಲ್ಲಿ ಕೊನೆಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಹೂಡಿಕೆ, ವ್ಯವಹಾರ, ವ್ಯಾಪಾರ ಶುರು ಮಾಡಬೇಕು, ವ್ಯಾಪಾರ ವಿಸ್ತರಣೆ ಮಾಡಬೇಕು ಎಂದಿರುವವರಿಗೆ ಹಣಕಾಸು ಹರಿವು ಚೆನ್ನಾಗಿ ಆಗಲಿದೆ.
ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಕೃಷಿಕರು ಇದ್ದಲ್ಲಿ ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲೇರಿರುವ ವ್ಯವಹಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ಇಷ್ಟು ಸಮಯ ನಿಮ್ಮ ಕೈ ಬಿಟ್ಟು ಹೋಗಬಿಡಬಹುದೇನೋ ಎಂದು ಆತಂಕಗೊಂಡಿದ್ದ ಭೂಮಿಯೋ ಅಥವಾ ಹಣವೋ ನಿಮ್ಮ ಕೈ ಸೇರುವಂಥ ಯೋಗ ಇದೆ. ಇದಕ್ಕೆ ನಿಮಗೆ ಸಲಹೆ- ಮಾರ್ಗದರ್ಶನದ ಅಗತ್ಯ ಇದೆ ಎಂದಾದರೆ, ಯಾವುದೇ ಸಂಕೋಚ ಮಾಡದಂತೆ ಪಡೆದುಕೊಳ್ಳಿ. ವೃತ್ತಿನಿರತರಾಗಿದ್ದಲ್ಲಿ ದಿಢೀರನೇ ಹಣಕಾಸು ಲಾಭ ಬರುವಂಥ ಯೋಗ ಇದೆ. ಪಾರ್ಟನರ್ ಷಿಪ್ ವಹಿಸಿಕೊಳ್ಳುವುದಕ್ಕೆ ಕೆಲವರು ಪ್ರಸ್ತಾವವನ್ನು ಮುಂದಿಡಬಹುದು. ಆದರೆ ಇದನ್ನು ಉಳಿಸಿಕೊಳ್ಳುವುದು ಬಹಳ ಸವಾಲಿನ ಸಂಗತಿ ಆಗಿರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಬೇಕು. ವಿದ್ಯಾರ್ಥಿಗಳಾಗಿದ್ದಲ್ಲಿ ನಿಮ್ಮ ಸ್ನೇಹಿತರ ಜತೆಗೆ ಭಿನ್ನಾಭಿಪ್ರಾಯಗಳು ಏರ್ಪಡಲಿವೆ. ಆದರೆ ಇದನ್ನೇ ವಿನಾಕಾರಣ ವಾದ- ವಾಗ್ವಾದ ಮುಂದವರಿಸಬೇಡಿ. ಮಹಿಳೆಯರಿಗೆ ತಂದೆಯ- ತಂದೆ ಸಮಾನರಾದವರ ಆರೋಗ್ಯ, ಅವರ ಆದಾಯ ತೆರಿಗೆ, ಸಾಲ ತೀರಿಸುವ ವಿಚಾರಗಳು ನಿಮಗೆ ಚಿಂತೆ ಉಂಟು ಮಾಡುತ್ತವೆ.
ಈ ವಾರ ನಿಮ್ಮ ದೇಹ ಸೌಖ್ಯ, ಅಂದರೆ ಆರೋಗ್ಯಕ್ಕೆ ಬೇಕಾದ ಕಾಳಜಿಯನ್ನು ತೆಗೆದುಕೊಳ್ಳಲಿದ್ದೀರಿ. ಅದಕ್ಕೆ ನಿಮ್ಮ ಸುತ್ತಮುತ್ತಲ ಪರಿಸರ ಪ್ರೇರಣೆ ನೀಡುತ್ತವೆ. ಜಿಮ್, ಪ್ರಾಣಾಯಾಮ, ಯೋಗ ಮೊದಲಾದವುಗಳನ್ನು ಸೇರ್ಪಡೆ ಆಗುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇನ್ನು ಆದಾಯದಲ್ಲಿ ವೃದ್ಧಿ ಕಾಣಲಿದ್ದೀರಿ. ಪರ್ಫಾರ್ಮೆನ್ಸ್ ಬೋನಸ್ ದೊರೆಯಬಹುದು. ನೀವು ಮಾಡಿದ ಪ್ರಾಜೆಕ್ಟ್ ಗಳಿಗೆ ಮೆಚ್ಚುಗೆ ಮೂಲಕ ಬಹುಮಾನಗಳು ಬರಬಹುದು. ಟ್ಯಾಕ್ಸ್ ರೀಫಂಡ್ ಗಾಗಿ ಅರ್ಜಿ ಹಾಕಿಕೊಂಡಿದ್ದವರಿಗೆ, ಅಥವಾ ಈಗಾಗಲೇ ಸರ್ಕಾರಿ ಸಂಸ್ಥೆಯೊಂದಕ್ಕೆ ವಸ್ತುಗಳನ್ನು ಸರಬರಾಜು ಮಾಡಿಯಾಗಿದೆ, ಅದರಿಂದ ಹಣ ಬರಬೇಕಾಗಿದೆ ಎಂದಲ್ಲಿ ಅದು ಬರುವ ಅವಕಾಶ ಹೆಚ್ಚಿದೆ. ಸ್ನೇಹಿತರು ಇರುವ ಕಡೆಗೆ, ಮನೆಯಲ್ಲಿ, ಉದ್ಯೋಗ ಸ್ಥಳದಲ್ಲಿ ಸಂತೋಷ ಹೆಚ್ಚಾಗುತ್ತದೆ. ವಕೀಲರಿಗೆ ದೊಡ್ಡ ಮಟ್ಟದ ಜಯ ಸಿಕ್ಕು, ಕೀರ್ತಿ ಹೆಚ್ಚಾಗಬಹುದು. ಅಷ್ಟೇ ಅಲ್ಲ, ಯಾರೆಲ್ಲ ಸಾರ್ವಜನಿಕ ಜೀವನದಲ್ಲಿ ಇರುತ್ತಾರೋ ಮನ್ನಣೆ ಜಾಸ್ತಿ ಆಗುತ್ತದೆ. ಕೃಷಿಕರಾಗಿದ್ದಲ್ಲಿ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಭೂಮಿ ಲಾಭ ಆಗಬಹುದು.
ನೆನಪಿಡಿ, ಒಂದು ವೇಳೆ ತುಂಬ ಕಡಿಮೆ ಮೊತ್ತಕ್ಕೆ ಭೂಮಿ ಭೋಗ್ಯಕ್ಕೆ ಸಿಕ್ಕರೂ ಅದು ಲಾಭವೇ. ವೃತ್ತಿನಿರತರಿಗೆ ಕೆಲವು ದಂಡ ಶುಲ್ಕಗಳು ನಿಮ್ಮ ಮೇಲೆ ಬೀಳಬಹುದು. ಈ ಹಿಂದೆ ನೀವೇನೂ ಹಣ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದ ಕೆಲಸಕ್ಕೆ ಈಗ ಖರ್ಚು ಮಾಡಲೇಬೇಕಾದ ಸನ್ನಿವೇಶ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ವಿನಾಕಾರಣದ ಖರ್ಚು ಜಾಸ್ತಿ ಆಗುತ್ತದೆ. ಸಣ್ಣ ಜ್ವರ ಅಂತ ಡಾಕ್ಟರ್ ಹತ್ತಿರ ತೋರಿಸಿಕೊಳ್ಳುವುದಕ್ಕೆ ಹೋದರೂ ಹತ್ತಾರು ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಬರೆದುಕೊಟ್ಟು, ಅದಕ್ಕೆ ಖರ್ಚುಗಳಾಗಬಹುದು. ಮಹಿಳೆಯರಿಗೆ ಸಾಲ ಬಾಧೆಗಳು ಉಂಟಾಗುತ್ತವೆ. ನಾನಾ ಬಗೆಯ ದುಃಖಗಳನ್ನು ಅನುಭವಿಸುತ್ತೀರಿ. ಇದು ನಿಮ್ಮದೇ ಕಾರಣದ ದುಃಖ ಆಗಬೇಕು ಅಂತಿಲ್ಲ. ಸ್ನೇಹಿತರು, ಸಂಬಂಧಿಕರ ಸಮಸ್ಯೆಗಳೂ ನಿಮಗೆ ದುಃಖ ತರಬಹುದು. ಚರ್ಮದ ವ್ಯಾಧಿಗಳು, ದೈವ ಶಾಪಗಳು ಅನುಭವಕ್ಕೆ ಬರುತ್ತವೆ.
ಈ ವಾರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು, ಸ್ವಂತ ವ್ಯವಹಾರ, ವ್ಯಾಪಾರ ಮಾಡುತ್ತಿರುವವರು ಹೀಗೆ ಎಲ್ಲರೂ ಶುಭ ಫಲಗಳನ್ನು ಪಡೆಯಲಿದ್ದೀರಿ. ನಿಮಗೆ ತಿಳಿದಿರುವಂಥ ವಿದ್ಯೆಗೆ ಇರುವ ಪರಿಣತಿಗೆ ಸಿಕ್ಕಾಪಟ್ಟೆ ಬೇಡಿಕೆ ಬರಲಿದೆ. ನೀವೇನಾದರೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂತಾದರೆ, ಅಥವಾ ಮಾತು ಪ್ರಧಾನವಾದ ಕ್ಷೇತ್ರದಲ್ಲಿ ಇದ್ದೀರಿ ಅಂತಾದರೆ ನಿಮ್ಮ ವಾಕ್ಚಾತುರ್ಯದ ಮೂಲಕ ಒಳ್ಳೊಳ್ಳೆ ಕೆಲಸಗಳು ಆಗಲಿವೆ. ಈ ವಾರದಲ್ಲಿ ನಿಮ್ಮ ಹಣಕಾಸಿನ ಆದಾಯ ಹೆಚ್ಚಳವಾಗುತ್ತದೆ. ಶುಭ ವಾರ್ತೆ ಕೇಳಿಬರಲಿದೆ. ವಿದೇಶಗಳಿಗೆ ಟ್ರಾನ್ಸಿಷನ್ ಗಾಗಿ ತೆರಳುವ ಸಾಧ್ಯತೆ ಇದೆ. ಅಂದರೆ ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಅಲ್ಪಾವಧಿಗೆ ತೆರಳಬಹುದು. ಪ್ರಭಾವಿಗಳು ಬೆಂಬಲಕ್ಕೆ ನಿಲ್ಲಲಿದ್ದಾರೆ. ಇನ್ನು ಆಗುವುದಿಲ್ಲ ಎಂದುಕೊಂಡ ಕೆಲಸಗಳು ಸಹ ಸಲೀಸಾಗಿ ಆಗುವುದಕ್ಕೆ ಇತರರ ಸಹಾಯ ದೊರೆಯಲಿದೆ.
ಕೃಷಿಕರಾಗಿದ್ದಲ್ಲಿ ಆಸ್ತಿ ಮಾರಾಟದಿಂದ ಲಾಭ, ಅಥವಾ ಭೂಮಿ ಖರೀದಿ ಮಾಡುವಾಗ ಕಡಿಮೆ ಮೊತ್ತಕ್ಕೆ ಸಿಗಬಹುದು. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಅಸಮಾಧಾನ ಇದ್ದಲ್ಲಿ ಅದನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಲಿದ್ದೀರಿ. ಆದರೆ ಯಾವುದೇ ಕೆಲಸ ಮಾಡುವಾಗ ತಾಳ್ಮೆ- ಸಂಯಮ ಬಹಳ ಮುಖ್ಯ. ವೃತ್ತಿನಿರತರಿದ್ದಲ್ಲಿ ದೃಷ್ಟಿ ದೋಷವುಂಟಾಗಿ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ, ತಾಯಿ ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗುವಂತಾಗುತ್ತದೆ. ಸರ್ಕಾರಕ್ಕೆ ಸಂಬಂಧಿಸಿದಂತೆ ತೆರಿಗೆ, ಶುಲ್ಕ ಲೆಕ್ಕಾಚಾರ ತಪ್ಪಾಗಿದೆ ಎಂದು ನೋಟಿಸ್ ಬರುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ವಿರಸಗಳು ಸೃಷ್ಟಿ ಆಗಬಹುದು. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಕುಗ್ಗಲಿದೆ. ನಿಮಗೆ ಕೆಲವು ನಿರ್ದಿಷ್ಟ ವಿಷಯದಲ್ಲಿ ಏನೂ ಗೊತ್ತಿಲ್ಲ ಎಂದು ಎಲ್ಲರೆದುರು ಅವಮಾನಕ್ಕೆ ಗುರಿ ಆಗುವ ಯೋಗ ಇದೆ. ನೀವು ಬಹಳ ನಂಬಿರುವ ಸ್ನೇಹಿತರು ಸಮಯಕ್ಕೆ ನಿಮ್ಮ ನೆರವಿಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಮಹಿಳೆಯರು ಯಾರದೋ ಮಾತು ಕೇಳಿಕೊಂಡು ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದ್ದು, ಹಣಕಾಸು ನಷ್ಟವನ್ನು ಅನುಭವಿಸಲಿದ್ದೀರಿ.
ಒಂದು ವೇಳೆ ನೀವೇ ಕೆಲಸ ಬಿಟ್ಟಿರಬಹುದು ಅಥವಾ ನೀವು ಕೆಲಸ ಮಾಡುವಂಥ ಸಂಸ್ಥೆಯವರೇ ಕೆಲಸದಿಂದ ತೆಗೆಯುವ ಮುನ್ಸೂಚನೆ ಸಿಕ್ಕಿರಬಹುದು, ಅಂಥವರು ಈ ವಾರ ಹೊಸ ಕೋರ್ಸ್ ಸೇರಬೇಕು ಅಂದುಕೊಂಡಲ್ಲಿ ಸೂಕ್ತ ಮಾರ್ಗದರ್ಶನ ಸಿಗಲಿದೆ. ಒಟ್ಟಿನಲ್ಲಿ ಹೇಳಬೇಕು ಅಂದಲ್ಲಿ ಈ ವರೆಗೆ ಇದ್ದ ನಿಮ್ಮ ವಿಷಯ ಜ್ಞಾನ ವೃದ್ಧಿ ಆಗಲಿದೆ. ನಿಮಗೆ ವಿರುದ್ಧವಾಗಿ ನಡೆಯುವಂಥ ಬೆಳವಣಿಗೆಗಳಿಂದ ವಿಚಲಿತರಾಗಬೇಡಿ. ಆತ್ಮವಿಶ್ವಾಸದಿಂದ ಇರುವುದು ಈ ಸಮಯದಲ್ಲಿ ತುಂಬ ಮುಖ್ಯ. ಇನ್ನು ಈ ಹಿಂದೆ ಕೆಲಸ ಮಾಡಿದ್ದೀನಿ, ಇನ್ನೂ ಆ ಹಣ ಬಂದಿಲ್ಲ ಎಂದು ಅಲೆದಾಟ ಮಾಡುತ್ತಿರುವವರಿಗೆ ಹಣ ಕೈ ಸೇರಲಿದೆ. ಶತ್ರು ಬಾಧೆ ಕಡಿಮೆ ಆಗಲಿದೆ. ಆದರೆ ಅದಕ್ಕೂ ಮುನ್ನ ಶತ್ರುಗಳಿಂದ ನಾನಾ ಬಗೆಯಲ್ಲಿ ಹಿಂಸೆ ಆಗುತ್ತದೆ. ಕೃಷಿಕರಾಗಿದ್ದಲ್ಲಿ ನಿಮ್ಮ ವಿರುದ್ಧ ಸರ್ಕಾರದ ಕಂದಾಯ ಇಲಾಖೆಗೆ ಕೆಲವರು ದೂರುಗಳನ್ನು ನೀಡುವ ಸಾಧ್ಯತೆ ಇದೆ.
ಮೂಕರ್ಜಿಗಳನ್ನು ಸಲ್ಲಿಸಬಹುದು, ಇದರಿಂದ ನಿಮ್ಮ ನೆಮ್ಮದಿ ಹಾಳಾಗಲಿದೆ. ವೃತ್ತಿನಿರತರಾಗಿದ್ದಲ್ಲಿ ಈ ಹಿಂದೆ ನೀವು ನೀಡಿದ್ದ ಮಾತು, ತೆಗೆದುಕೊಂಡಿದ್ದ ಜವಾಬ್ದಾರಿ, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಗಳು ಈಗ ಕೈ ಕೊಡಲು ಆರಂಭ ಆಗುತ್ತದೆ. ಕಚೇರಿಯಲ್ಲಿ ಅಥವಾ ನೀವು ಇರುವಂಥ ಸ್ಥಳದಲ್ಲಿ ಅಗ್ನಿ ಅವಘಡಗಳು ಸಂಭವಿಸಬಹುದು. ಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳಿಗೆ ನಿಮ್ಮ ಸುತ್ತಲೂ ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡಲಿದೆ. ನಿಮಗೆ ದೊರೆಯಬೇಕಾದ ಮನ್ನಣೆ, ಪುರಸ್ಕಾರ, ಸನ್ಮಾನಗಳು ಇತರರ ಪಾಲಾಗಬಹುದು. ಮಹಿಳೆಯರಿಗೆ ಸಂಗಾತಿ ನಡವಳಿಕೆ ಬಗ್ಗೆ ಅನುಮಾನ, ಅದರಲ್ಲೂ ಅವರಿಗೆ ಏನಾದರೂ ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ಆಗಿದೆಯೋ ಎಂಬ ಅನುಮಾನ ಮೂಡಲಿದೆ. ಈ ವಾರ ಮನಸ್ಸಿನ ನಿಯಂತ್ರಣ ತುಂಬ ಮುಖ್ಯವಾಗುತ್ತದೆ. ಏನಾದರೂ ನಿರ್ಧಾರಗಳನ್ನು ಮಾಡುವಾಗ ಸಾವಿರ ಸಲ ಯೋಚನೆ ಮಾಡಿ. ಏಕೆಂದರೆ ತಪ್ಪಾದ ನಿರ್ಧಾರಗಳು ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
ಈ ವಾರ ನಿಮ್ಮ ನಿರೀಕ್ಷೆಗೂ ಮೀರಿದಂಥ ಧನ ಲಾಭ ಆಗಲಿದೆ. ನಿಮ್ಮಲ್ಲಿ ಕೆಲವರು ಈಗಿರುವಂಥ ಸಾಲವನ್ನು ತೀರಿಸಿಕೊಳ್ಳುವುದಕ್ಕೆ ಆಲೋಚನೆಯನ್ನು ಮಾಡುವಿರಿ. ಬುದ್ಧಿ ಉಪಯೋಗಿಸಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ನಿಮಗೆ ಬರಬೇಕಾದ ಹಣಕ್ಕೆ ಗಟ್ಟಿಯಾದ ಪ್ರಯತ್ನ ಹಾಕಬೇಕು. ನೆನಪಿರಲಿ, ಮೊದಲೇ ಹೇಳಿದಂತೆ ತುಂಬ ಗಟ್ಟಿಯಾದ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಸೋದರ- ಸೋದರಿಯರ ಮೂಲಕ ಹಣಕಾಸಿನ ಹರಿವಿಗೆ ಮಾರ್ಗ ಕಂಡುಬರುತ್ತದೆ. ಷೇರು ವ್ಯವಹಾರ ಮಾಡುತ್ತಿರುವವರಿಗೆ ವಾರದ ಮೊದಲಾರ್ಧದಲ್ಲಿ ಲಾಭ ಆಗಲಿದೆ. ಬಹು ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಪ್ರಿಯವಾದ ವಾರ್ತೆಯನ್ನು ಕೇಳಲಿದ್ದೀರಿ. ಕೃಷಿಕರಾಗಿದ್ದಲ್ಲಿ ನಿಮ್ಮ ಜತೆಗೆ ಒಡನಾಟ ಇರುವಂಥ ವ್ಯಕ್ತಿಯೊಬ್ಬರು (ಪುರುಷರಾದರೆ ಸ್ತ್ರೀ, ಸ್ತ್ರೀಯರಾದರೆ ಪುರುಷರು) ಹತ್ತಿರ ಆಗಬಹುದು. ಆದರೆ ಸ್ನೇಹವನ್ನು, ಪ್ರೀತಿಗೆ, ಆ ನಂತರ ಮುಂದಿನ ಹಂತಕ್ಕೆ ಒಯ್ಯಲು ಸ್ವಲ್ಪ ಸಮಯವನ್ನು ನೀಡಿ, ಆತುರ ಮಾಡಬೇಡಿ. ನಿಮ್ಮ ಮಾತು, ನಡವಳಿಕೆಯಲ್ಲಿ ಎಚ್ಚರಿಕೆಯಿಂದ ಇರಬೇಕು.
ವೃತ್ತಿನಿರತರಾಗಿದ್ದಲ್ಲಿ ನಿಮ್ಮ ವರ್ತನೆ, ನಡವಳಿಕೆ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹೇಳಿ, ಹೆಸರಿಗೆ ಮಸಿ ಬಳಿಯುವಂಥ ಕೆಲಸ ಆಗಬಹುದು. ಇನ್ನು ಕಣ್ಣು, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿದೆ. ಸಂಸಾರದಲ್ಲಿ ಗೊಂದಲ, ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುವಾಗ ಹಿನ್ನಡೆ, ವಿದೇಶ ಪ್ರಯಾಣ, ವ್ಯವಹಾರಗಳಲ್ಲಿ ಅಂದುಕೊಂಡಂತೆ ಬೆಳವಣಿಗೆಗಳು ಆಗದಿರುವುದು ಚಿಂತೆಗೆ ಕಾರಣ ಆಗುತ್ತದೆ. ವಿದ್ಯಾರ್ಥಿಗಳು ನಿಮ್ಮ ಕೋಪದಿಂದಾಗಿ ಆಗಬೇಕಾದ ಕೆಲಸ ಆಗದಂತೆ ಮಾಡಿಕೊಳ್ಳುತ್ತೀರಿ. ನಿಮಗೆ ಸಿಗಬೇಕಾದ ಪ್ರಾಶಸ್ತ್ಯ ಸಿಗದಂತಾಗುತ್ತದೆ. ಒಂದು ವೇಳೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಗೋ ಅಥವಾ ಪ್ರವೇಶಕ್ಕಾಗಿಯೋ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಅದರಲ್ಲಿ ಹಿನ್ನಡೆ ಆಗುವ ಅವಕಾಶಗಳು ಹೆಚ್ಚಿವೆ. ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳ ಇತ್ಯಾದಿ ಶುಭ ಫಲಗಳನ್ನು ಕಾಣಲಿದ್ದೀರಿ.
ನಿಮಗೆ ಈಗ ಮಾಡುತ್ತಿರುವ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಈ ವಾರ ಬಲವಾಗಿ ಅನಿಸಲಿದೆ. ಇದೇ ವೇಳೆ ಅದೃಷ್ಟಕ್ಕೆ ಎಂಬಂತೆ ಸಾಫ್ಟ್ ವೇರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳುವುದಕ್ಕೆ, ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶ ಸಿಗಲಿದೆ. ನಿಮ್ಮ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡಲಿದೆ. ವಿವಿಧ ಆದಾಯ ಮೂಲಗಳಿಂದ ಆದಾಯ ಹರಿದು ಬರುವುದಕ್ಕೆ ಶುರುವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಆದಾಯ ಬರುವುದಕ್ಕೆ ದಾರಿಗಳು ಗೋಚರಿಸತೊಡಗುತ್ತವೆ. ನಿಮ್ಮ ಶತ್ರುಗಳೇ ನಿಮಗೆ ಪ್ರಚಾರ ನೀಡಲಿದ್ದಾರೆ. ಬೇರೆಯವರು ಎಸೆಯುವ ಕಲ್ಲಲ್ಲಿ ಮನೆ ಕಟ್ಟಿಕೊಳ್ಳುವವರು ಅಂತಾರಲ್ಲ, ಹಾಗೆ ಅದನ್ನೇ ನಿಮ್ಮ ಆದಾಯಕ್ಕೆ ಬಳಸಿಕೊಳ್ಳಲಿದ್ದೀರಿ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲಿಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದ ಅಸಮಾಧಾನಕ್ಕೆ ಕಾರಣ ಆಗುತ್ತದೆ.
ಕೃಷಿಕರಾದವರಿಗೆ ನಿಮ್ಮ ತಂದೆಯವರು ಅಥವಾ ಪಿತೃ ಸಮಾನರಾದವರ ಜತೆಗೆ ಸಿಟ್ಟಿನಿಂದ ಮಾತುಕತೆ ಆಡುತ್ತೀರಿ. ಅಥವಾ ಅವರು ನಿಮಗೆ ಕೊಡುತ್ತೇನೆ ಎಂದಿದ್ದನ್ನು ಕೊಡದೇ ಹೋಗಬಹದು. ಅದು ಭೂಮಿ, ಹಣ ಯಾವುದಾದರೂ ಆಗಿರಬಹುದು. ಕೆಲ ಸಮಯವಾದರೂ ನೀವಿರುವ ಸ್ಥಳದಿಂದ ಬೇರೆ ಕಡೆಗೆ ಇರಬೇಕಾದಂಥ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ವೃತ್ತಿನಿರತರಿಗೆ ನಿಮ್ಮ ವಿರುದ್ಧ ಕೆಲವರು ಬೇಕೆಂತಲಾದರೂ ಅಪಪ್ರಚಾರ ಮಾಡಲಿದ್ದಾರೆ. ನೀವು ಮಾಡಿರದ ಕೆಲಸಗಳನ್ನು ನೀವೇ ಮಾಡಿದ್ದೀರಿ ಎಂದು ಹೇಳಿಕೊಂಡು ಬರುವ ಮೂಲಕ ವಿಶ್ವಾಸಾರ್ಹತೆ ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ವಿದ್ಯಾರ್ಥಿಗಳಿಗೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ ಪರಿಸ್ಥಿತಿ. ನೀವು ಈ ತನಕ ಶ್ರಮ ವಹಿಸಿ ಮಾಡಿದ ಪ್ರಯತ್ನಗಳಿಗೆ ಎಷ್ಟು ರಿಟರ್ನ್ ಬರುತ್ತದೆ ಎಂದು ಅಂದಾಜು ಮಾಡಿರುತ್ತೀರೋ ಅಷ್ಟು ಬರುವುದಿಲ್ಲ. ಮಹಿಳೆಯರಾಗಿದ್ದಲ್ಲಿ ನೀವು ಯಾರಿಂದಾದರೂ ಹೂಡಿಕೆ ಮಾಡಿಸಿದ್ದಲ್ಲಿ ಅವರಿಂದ ಮೂದಲಿಕೆ, ಬೈಗುಳ ಕೇಳಬೇಕಾಗುತ್ತದೆ. ನಿಮ್ಮಿಂದಲೇ ಹಣ ಕಳೆದುಕೊಳ್ಳುವಂತಾಯಿತು, ಅದನ್ನು ನೀವು ಕಟ್ಟಿಕೊಡಿ ಅಂತ ಒತ್ತಡ ಹಾಕುವ ಸಾಧ್ಯತೆಗಳಿವೆ.
ನಿಮ್ಮ ಆತ್ಮಸ್ಥೈರ್ಯ, ವಿಶ್ವಾಸ ಈ ವಾರ ಕೈ ಹಿಡಿಯಲಿದೆ. ಪ್ರತಿಸ್ಪರ್ಧಿಗಳು, ಶತ್ರುಗಳು ಮಾಡುವ ತಪ್ಪಿನಿಂದ ಹಣಕಾಸು ಆದಾಯಕ್ಕೆ ದಾರಿ ಆಗುತ್ತದೆ. ನಿಮಗೇನೋ ಸಮಸ್ಯೆ ಮಾಡುತ್ತೇವೆ ಎಂದು ಶತ್ರುಗಳು ಮಾಡುವ ಪ್ರಯತ್ನಗಳು ನಿಮಗೆ ಆದಾಯಕ್ಕೆ ಮೂಲ ಆಗುತ್ತವೆ. ಈಗಿರುವ ಸ್ಥಳಗಳಿಂದ ಬೇರೆಡೆ ಸ್ಥಳಾಂತರ ಆಗುವ ಸಾಧ್ಯತೆ ಇದೆ. ಇದನ್ನು ನಿಮ್ಮ ಅನುಕೂಲವಾಗಿ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇರುತ್ತದೆ. ಇನ್ನು ಶುಭ ವಾರ್ತೆಗಳನ್ನು ಕೇಳಲಿದ್ದೀರಿ, ವಿವಾಹಕ್ಕೆ ಪ್ರಸ್ತಾವ ಇಟ್ಟಿದ್ದು, ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದವರು ಇದ್ದಲ್ಲಿ ಮಾತುಕತೆಯಲ್ಲಿ ಪ್ರಗತಿ ಇದೆ. ವಿದೇಶಗಳಿಗೆ ಯಾವುದಾದರೂ ಪ್ರಾಜೆಕ್ಟ್ ಗಾಗಿ ಅಲ್ಪಕಾಲಕ್ಕೆ ತೆರಳಬೇಕಾಗಬಹುದು. ಕೃಷಿಕರಾಗಿದ್ದು ಪಿತ್ರಾರ್ಜಿತವಾದ ಆಸ್ತಿ ನಿರೀಕ್ಷೆಯಲ್ಲಿ ಇರುವವರಿಗೆ ಈ ವಿಚಾರದಲ್ಲಿ ಬೆಳವಣಿಗೆ ಕಾಣಬಹುದು. ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ ಸಿಗುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ಭೂಮಿ ಮೂಲಕವಾಗಿ ಲಾಭವನ್ನಂತೂ ಕಾಣುವ ಯೋಗ ಇದೆ.
ವೃತ್ತಿನಿರತರಾಗಿದ್ದಲ್ಲಿ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರಗಳನ್ನು ಮಾಡುತ್ತಿರುವವರ ಮಧ್ಯೆ ಮನಸ್ತಾಪ, ವಿರಸಗಳು ಉದ್ಭವಿಸಿ, ಇಷ್ಟು ಸಮಯ ಆಪ್ತರಾಗಿದ್ದವರೇ ದೂರ ಆಗುವ ಸಾಧ್ಯತೆ ಇದೆ. ದೈಹಿಕ ಆಯಾಸ ಜಾಸ್ತಿ ಆಗುತ್ತದೆ. ಇಷ್ಟು ಸಮಯ ತುಂಬ ಚಟುವಟಿಕೆಯಿಂದ ಇದ್ದೆ. ಈಗ ಸ್ವಲ್ಪ ಹೊತ್ತು ಕೆಲಸ ಮಾಡಿದರೂ ಸುಸ್ತಾಗುತ್ತಿದೆ ಎಂದೆನಿಸುತ್ತದೆ, ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳಾಗಿದ್ದಲ್ಲಿ ಇಷ್ಟು ಸಮಯ ನಿಮಗೆ ಗೌರವ ನೀಡುತ್ತಿದ್ದವರಿಂದಲೇ ಅವಮಾನಗಳು, ತಿರಸ್ಕಾರ ಆಗುವಂತೆ ಮಾಡಿಸುತ್ತದೆ. ತಾಯಿಯೊಂದಿಗೆ ಮನಸ್ತಾಪ, ವಾಹನಗಳು ಪದೇ ಪದೇ ರಿಪೇರಿ ಇತ್ಯಾದಿ ಫಲಗಳನ್ನು ಕಾಣಲಿದ್ದೀರಿ. ಮಹಿಳೆಯರಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಮೇಲಧಿಕಾರಿಗಳ ಜತೆಗೆ ಅಭಿಪ್ರಾಯ ಭೇದಗಳು ಉಂಟಾಗುತ್ತದೆ. ಅವರು ನಿಮ್ಮ ಬೆನ್ನ ಹಿಂದೆ ಸಮಸ್ಯೆಗಳನ್ನು ಮಾಡಬಹುದು. ಆಪ್ತರು ನಿಮ್ಮಿಂದ ದೂರ ಆಗುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ.
ನಿಮ್ಮ ತಾಯಿಯವರು ಅಥವಾ ತಾಯಿ ಸಮಾನರಾದವರು ತಮ್ಮ ಒಡವೆಯನ್ನೇ ನೀಡಿ, ಅದನ್ನು ಮಾರಿ ಹಣ ಪಡೆಯುವಂತೆ ಹೇಳಬಹುದು ಅಥವಾ ನಿಮಗೆ ಹಣ ನೀಡಿ, ಏನನ್ನಾದರೂ ಖರೀದಿಸು ಅಂತ ಹೇಳಬಹುದು. ಅಥವಾ ಅದನ್ನು ನಿಮ್ಮ ಖಾತೆಯಲ್ಲಿ ಎಫ್ ಡಿ ಮಾಡಿಕೊಳ್ಳುವಂತೆ ತಿಳಿಸಬಹುದು. ಅಥವಾ ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಹಣಕಾಸು ಹರಿವು ಹೆಚ್ಚಾಗಬಹುದು. ಮನೆಗಳನ್ನು ಕಟ್ಟುತ್ತಿರುವವರಿಗೆ ಹಣಕಾಸಿನ ಹರಿವು ಸರಾಗವಾಗಿ ಇರುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ್ದ ಹೂಡಿಕೆಗೆ ಈಗ ಉತ್ತಮ ಬೆಲೆ ಬರುತ್ತದೆ. ನಿಮ್ಮ ಬುದ್ಧಿ ಚಾತುರ್ಯದಿಂದ ಅನುಕೂಲ ಪಡೆದುಕೊಳ್ಳಲಿದ್ದೀರಿ. ಅಂದರೆ ಸವಾಲುಗಳನ್ನೇ ನಿಮಗೆ ಅನುಕೂಲವಾಗಿ ಬದಲಾಯಿಸಿಕೊಳ್ಳಲಿದ್ದೀರಿ. ಸಂಗಾತಿ ಜತೆಗೆ ಮಾತನಾಡುವಾಗ ಜಾಗ್ರತೆ ಇರಬೇಕು. ಈಗೋ ಕ್ಲಾಶ್ ಆಗಿ, ದಿನಗಟ್ಟಲೆ ಮಾತು ಬಿಡುವಂತಾಗಬಹುದು. ಸಿಟ್ಟು ಮಾಡಿಕೊಂಡು, ನಿರೀಕ್ಷೆ ಮಾಡಿರದಂಥ ಕಠಿಣ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.
ಕೃಷಿಕರಿಗೆ ತಮ್ಮ ಪ್ರಭಾವಿ ವ್ಯಕ್ತಿಗಳ ಸಹಾಯದಿಂದಾಗಿ ಸರ್ಕಾರದಿಂದ ಹಲವು ಯೋಜನೆಗಳ ಪ್ರಯೋಜನ ಪಡೆಯುವಂಥ ಸಾಧ್ಯತೆ ಇದೆ. ವೃತ್ತಿನಿರತರು ನಿಮಗೆ ವಹಿಸಿದ ಜವಾಬ್ದಾರಿಗಳು, ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸದೆ, ಅಂದರೆ ಡೆಡ್ ಲೈನ್ ನಲ್ಲಿ ಮುಗಿಸದೆ ನೀವು ಹಣ ಕಟ್ಟಿಕೊಡುವಂತೆ ಆಗಬಹುದು ಅಥವಾ ಬರಬೇಕಾದ ಹಣ ಬಾರದಂತೆ ಆಗಬಹುದು. ಭೂಮಿ ವ್ಯವಹಾರದಲ್ಲಿ ನಷ್ಟ ಕಾಣಲಿದ್ದೀರಿ. ಆದ್ದರಿಂದ ಆಸ್ತಿ ವ್ಯವಹಾರ ಮಾಡುವಾಗ ಆತುರ ಮಾಡಬೇಡಿ. ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಈ ಹಿಂದೆ ನಿಮ್ಮ ನಿರ್ಲಕ್ಷ್ಯದಿಂದ ನಷ್ಟ ಆಯಿತು ಎಂದು ಪರಿಹಾರ ಕೇಳಿಕೊಂಡು ಬರಬಹುದು. ವಿದ್ಯಾರ್ಥಿಗಳಾಗಿದ್ದಲ್ಲಿ ತಂದೆಯವರಿಗೆ ಈಗಾಗಲೇ ಇರುವ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ನಿಮ್ಮ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರುವ ಎಲ್ಲ ಸಾಧ್ಯತೆ ಇದೆ. ಮಹಿಳೆಯರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಹೆಚ್ಚಾಗಲಿದೆ. ಜಾಹೀರಾತು ಏಜೆನ್ಸಿಗಳಲ್ಲಿ ಕೆಲಸ ಮಾಡುವಂಥವರಿಗೆ ಆದಾಯ ಹೆಚ್ಚಳ ಆಗುವ ಯೋಗ ಇದೆ.
ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ವೇತನ ಹೆಚ್ಚಳ ಆಗುವ ಸಾಧ್ಯತೆ ಇದೆ, ಪರ್ಫಾರ್ಮೆನ್ಸ್ ಲಿಂಕ್ಡ್ ಬೋನಸ್ ಬರುವಂಥ ಕೆಲಸ ಮಾಡುವಂಥವರಿಗೆ ಒಳ್ಳೆ ಬೋನಸ್, ಕಮಿಷನ್ ಬರಬಹುದು. ಇನ್ನು ಸರ್ಕಾರದಿಂದ ಬರಬೇಕಾದ ಹಣ ಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗ ಇದೆ. ಇದರ ಜತೆಗೆ ಪುಷ್ಕಳವಾದ ಭೋಜನವನ್ನು ಸವಿಯುವ ಯೋಗ ಇದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಉದ್ಯಮಗಳು, ವ್ಯಾಪಾರಸ್ಥರಿಗೆ ಬರಬೇಕಾದ ಲಾಭ ಪ್ರಮಾಣ, ಹಣ ಬರುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ಬಾರದಿರಬಹುದು ಅಥವಾ ನೀವು ಅಂದುಕೊಂಡ ಸಮಯದಲ್ಲಿ ದೊರೆಯದಿರಬಹುದು. ಆದರೆ ನೀವಾಗಿಯೇ ಮಾತಿಗೆ ಮಾತು ಕೊಟ್ಟು, ನಷ್ಟವನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ತಂದೆಯೊಂದಿಗೆ ಮನಸ್ತಾಪ ಮಾಡಿಕೊಂಡು ನಿಮಗೆ ಬರಬೇಕಾದ್ದು ಸಿಗದಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಉದ್ಯೋಗ ಬಿಡುವಂಥ ನಿರ್ಧಾರ ಮಾಡದಿರಿ.
ಕೃಷಿಕರಾಗಿದ್ದಲ್ಲಿ ನಿಮ್ಮ ಹುಂಬತನದ ಕಾರಣಕ್ಕೆ ಖರ್ಚು- ವೆಚ್ಚದಲ್ಲಿ ಭಾರೀ ಏರುಪೇರುಗಳಾಗುತ್ತವೆ. ವೃಥಾ ಖರ್ಚು ಮಾಡಿಕೊಳ್ಳುತ್ತೀರಿ. ಆ ನಂತರ ಪರಿತಪಿಸುವಂತಾಗುತ್ತದೆ. ವೃತ್ತಿನಿರತರಾಗಿದ್ದಲ್ಲಿ ಯಾವುದಾದರೂ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದು, ಸುಮ್ಮನೆ ಹೇಗಿದೆ ಅಂತ ನೋಡೋಣ ಅಂತ ಟ್ರೈ ಮಾಡಿ, ಹಾಗೇ ದುಡ್ಡು ಕಟ್ ಆಗಿಬಿಡಬಹುದು. ಗೂಗಲ್ ಪೇ, ಫೋನ್ ಪೇ ಇಂಥ ವ್ಯಾಲೆಟ್ ಗಳಿಂದ ಹಣ ಕಳಿಸುವಾಗ ಸಂಖ್ಯೆ ಹೆಚ್ಚಾಗಿ, ಅದರಿಂದ ಪರಿಚಯವೇ ಇಲ್ಲದ ವ್ಯಕ್ತಿ ಖಾತೆಗೆ ಹಣ ಹೋಗಿ, ಬಾರದಂತೆ ಆಗಬಹುದು. ಒಟ್ಟಿನಲ್ಲಿ ಸೈಬರ್ ಕ್ರಿಮಿನಲ್ ಗಳಿಂದ ವಂಚನೆ ಆಗಬಹುದು, ಜಾಗ್ರತೆಯಿಂದ ಇರಿ. ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ವಾರ ಇದು. ಭವಿಷ್ಯದಲ್ಲಿ ಆಗುವ ಅತಿ ದೊಡ್ಡ ಅನುಕೂಲದ ಬಗ್ಗೆ ಮುನ್ಸೂಚನೆ ದೊರೆಯಲಿದೆ. ಮಹಿಳೆಯರಿಗೆ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಎಲ್ಲಿ ಯಾವ ಮಾತನ್ನು ಆಡಬಾರದೋ ಆ ಮಾತನ್ನು ಆಡಿ, ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತೀರಿ. ಯಾರ ಜತೆಗೆ ಸ್ನೇಹ ಮಾಡುತ್ತಿದ್ದೀರಿ ಎಂಬ ಬಗ್ಗೆ ಜಾಗ್ರತೆ ಇರಲಿ. ಅಲರ್ಜಿ ಸಮಸ್ಯೆಗಳು ಕಾಡಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ