
ಸೌರಮಾನ ಯುಗಾದಿಯು ಏಪ್ರಿಲ್ 14ರಂದು ಆಗಲಿದ್ದು ಸಂದರ್ಭದಲ್ಲಿ ಗ್ರಹಗಳ ಸ್ಥಿತಿಗತಿಗಳು ಕೇವಲ ವೈಯಕ್ತಿಕ ಜೀವನದ ಮೇಲಲ್ಲದೆ, ಇಡೀ ಸಮಾಜದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಗ್ಗಲುಗಳ ಮೇಲೆ ಗಾಢವಾದ ಪರಿಣಾಮ ಬೀರಲಿವೆ. ಈ ಸಂಧಿಕಾಲದ ಕುರಿತು ಅವಲೋಕನ ಅಗತ್ಯ.
ಸೌರಮಾನ ಯುಗಾದಿಯ ದಿನದಂದು ಗ್ರಹಗಳ ಸಂಯೋಜನೆಯು ಸಾಮಾಜಿಕವಾದ ಅನೇಕ ಬದಲಾವಣೆಗೆ ಕಾರಣವೂ ಆಗಲಿದೆ. ಈ ಬಾರಿಯ ಯುಗಾದಿಯು ಪರಿವರ್ತನೆಯ ಕಾಲ ಎಂದು ಕರೆಯಲ್ಪಡಲು ಪ್ರಮುಖ ಕಾರಣವೆಂದರೆ ಬೃಹತ್ ಗ್ರಹಗಳಾದ ಶನಿ, ರಾಹು ಮತ್ತು ಗುರುವಿನ ವಿಶಿಷ್ಟ ನಡೆ.
ಕುಂಭದಲ್ಲಿ ರಾಹುವಿನ ಸ್ಥಿತಿಯು ಸಮಾಜದಲ್ಲಿ ಒಂದು ಬಗೆಯ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಲೋಕದಲ್ಲಿ ಅಭೂತಪೂರ್ವ ಬದಲಾವಣೆಗಳು ಕಂಡುಬರುತ್ತವೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಸವಾಲುಗಳನ್ನು ತಂದರೂ, ದೀರ್ಘಕಾಲಿಕವಾಗಿ ಸಮಾಜವನ್ನು ಆಧುನೀಕರಣದತ್ತ ಕೊಂಡೊಯ್ಯುತ್ತದೆ. ಕೆಳವರ್ಗಗಳ ಧ್ವನಿಯು ಬಲವಾಗುವ ಸಾಧ್ಯತೆ ಇದೆ. ಹಳೆಯ ಕಾನೂನುಗಳಲ್ಲಿ ತಿದ್ದುಪಡಿ ಅಥವಾ ಹೊಸ ಸಾಮಾಜಿಕ ನಿಯಮಗಳ ಜಾರಿಗೆ ಈ ಕಾಲ ಪೂರಕವಾಗಿದೆ.
ಬೃಹಸ್ಪತಿಯು ಮಿಥುನ ರಾಶಿಯಲ್ಲಿ ಇರುವುದು ಸಮಾಜದ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿದೆ. ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ. ವಿಶೇಷವಾಗಿ ವೇದ-ಪುರಾಣಗಳಂತಹ ಪ್ರಾಚೀನ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸುವ ಪ್ರಯತ್ನಗಳು ಸಮಾಜದಲ್ಲಿ ಮನ್ನಣೆ ಪಡೆಯುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದ್ದು, ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಒತ್ತು ಸಿಗಲಿದೆ.
ಸೌರಮಾನ ಯುಗಾದಿಯಂದು ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಆಡಳಿತ ಮಂಡಳಿಗಳು ಕಠಿಣ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಶನಿಯ ಪ್ರಭಾವದಿಂದ ಸಾಂಪ್ರದಾಯಿಕ ಕೃಷಿಗಿಂತ ತಾಂತ್ರಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಡಿಕೆ, ತೆಂಗಿನಂತಹ ವಾಣಿಜ್ಯ ಬೆಳೆಗಳ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬಂದರೂ, ವರ್ಷದ ದ್ವಿತೀಯಾರ್ಧದಲ್ಲಿ ಸ್ಥಿರತೆ ಬರಲಿದೆ. ಆರಂಭಿಕ ಹಂತದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಬಹುದು, ಆದರೆ ಜೂನ್ ಅನಂತರ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳಿವೆ.
ರಾಜಕೀಯಯ ಹಳೆಯ ಮೈತ್ರಿಗಳು ಮುರಿದು ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗುತ್ತವೆ. ಆರೋಗ್ಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿ. ಧರ್ಮ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳ; ಸಂಪ್ರದಾಯದ ಪುನರುತ್ಥಾನ. ಪರಿಸರದ ಭೂಮಿಯ ಉಷ್ಣಾಂಶ ಏರಿಕೆಯಿಂದಾಗಿ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಗಂಭೀರ ಚಿಂತನೆ.
ಈ ಕಾಲಘಟ್ಟವು ಕ್ಷೋಭೆ ಮತ್ತು ಸೃಷ್ಟಿ ಎರಡನ್ನೂ ಒಳಗೊಂಡಿದೆ. ಸಮಾಜವು ಹಳೆಯ ಜಡತ್ವವನ್ನು ಬಿಟ್ಟು ಹೊಸ ಆಲೋಚನೆಗಳನ್ನು ಅಪ್ಪಿಕೊಳ್ಳುವ ಪ್ರಕ್ರಿಯೆಯೇ ಈ ಯುಗಾದಿಯ ಫಲ.
ಈ ಗ್ರಹಗತಿಗಳು ಸಮಾಜದಲ್ಲಿ ಸತ್ಯ ಮತ್ತು ಪಾರದರ್ಶಕತೆಯನ್ನು ಬಯಸುತ್ತವೆ. ಯಾರೂ ಎಣಿಸದಂತಹ ಆಕಸ್ಮಿಕ ಬದಲಾವಣೆಗಳು ಈ ಸಂವತ್ಸರದಲ್ಲಿ ಸಂಭವಿಸುವ ಸಾಧ್ಯತೆಗಳಿವೆ.
– ಲೋಹಿತ ಹೆಬ್ಬಾರ್
Published On - 5:32 pm, Wed, 8 April 26