
“ಗುರು ಗ್ರಹದ ಅತಂತ್ರ ಸ್ಥಿತಿ. ಒಮ್ಮೆ ಕರ್ಕ, ಒಮ್ಮೆ ಮಿಥುನ. ಒಮ್ಮೆ ಸಿಂಹ, ಒಮ್ಮೆ ಕರ್ಕ. ಇದರ ಅರ್ಥ ಇಷ್ಟೆ. ಜ್ಞಾನಕಾರಕ ಗುರುವಿಗೇ ಇಂತಹ ಸ್ಥಿತಿ ಬಂದರೆ ಮನುಷ್ಯರ ಸ್ಥಿತಿಯೂ ಹಾಗೆಯೆ. ಕರ್ನಾಟಕದಲ್ಲಿ ಈಗ ಮುಂಚೂಣಿಯಲ್ಲಿ ಇರುವವರೊಬ್ಬರಿಗೆ (ಹೆಸರು ಬೇಡ) ಪೂರ್ಣ ಮುಖ್ಯಮಂತ್ರಿಯಾಗುವ ಯೋಗವಿದೆ. ಹಾಗೆಂದು ಸುಮ್ಮನೆ ಆ ಪೂಜೆ ಈ ಪೂಜೆ, temple run ಮಾಡಿದರೆ ಪ್ರಯೋಜನವೂ ಇರದು. ಆ ಉನ್ನತ ಸ್ಥಿತಿಗೆ ಭಂಗ ತರುವಂತದ್ದೇನಿದೆ ಎಂದು ತಿಳಿದು ಪರಿಹಾರ ಮಾಡಿಕೊಳ್ಳಬೇಕು. ಒಂದು ವೇಳೆ ಪರಿಹಾರವು ಸರಿಯಾಗದಿದ್ದರೆ ಕೇವಲ ಕನಸು ಕಾಣಬಹುದಷ್ಟೆ. ಒಮ್ಮೆ ಆ ಯೋಗ ಕಳೆದುಹೋದರೆ ಮತ್ತೆ ಲಭಿಸೋದು ಕಷ್ಟ.”
– ಹೀಗೊಂದು ಫೇಸ್ ಬುಕ್ ಪೋಸ್ಟ್ ಅನ್ನು ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹಾಕಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನದ ಹಿಂದಷ್ಟೇ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಡಿಸೆಂಬರ್ ನಲ್ಲಿ ಭಾರೀ ಬದಲಾವಣೆ ಆಗಲಿದೆ ಎಂದು ಸಹ ಹೇಳಿದ್ದರು. ನವೆಂಬರ್ ಇಪ್ಪತ್ತೆಂಟನೇ ತಾರೀಕಿನಂದು ಶನಿಯು ವಕ್ರ ತ್ಯಾಗ ಮಾಡಿ, ಮೀನ ರಾಶಿಯ ಫಲವನ್ನೇ ನೀಡುವುದಕ್ಕೆ ಆರಂಭಿಸಿದಾಗ ಹಾಗೂ ಡಿಸೆಂಬರ್ ಐದನೇ ತಾರೀಕಿನಂದು ಗುರು ಗ್ರಹ ಮಿಥುನ ರಾಶಿಗೆ ಮತ್ತೆ ಪ್ರವೇಶ ಮಾಡಿದಾಗ ಇಂಥದ್ದೊಂದು ಬದಲಾವಣೆ ಆಗಲಿದೆ ಎಂಬುದು ಅವರ ಈ ಹಿಂದಿನ ಪೋಸ್ಟ್ ಗಳನ್ನು ಅನುಸರಿಸಿದವರಿಗೆ ಬಹಳ ಸೂಕ್ಷ್ಮವಾಗಿ ತಿಳಿದುಬರುತ್ತದೆ.
ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರ ಫೇಸ್ ಬುಕ್ ಪೋಸ್ಟ್
ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಅವರು ಮುಂಚೂಣಿ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಯೋಗವಿದೆ ಎಂದಷ್ಟೇ ಬರೆದಿದ್ದಾರೆ. ಆದರೆ ಅವರು ಹೆಸರು ಉಲ್ಲೇಖ ಮಾಡದಿರುವ ವ್ಯಕ್ತಿ ಡಿ.ಕೆ. ಶಿವಕುಮಾರ್ ಅವರದೇ ಎಂಬುದನ್ನು ಅಂದಾಜಿಸಬಹುದು. ಅದಕ್ಕೆ ಕಾರಣ ಏನೆಂದರೆ, ಸದ್ಯ ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಅವರದು ವೃಷಭ ರಾಶಿ ಹಾಗೂ ವೃಷಭ ಲಗ್ನ. ರಾಶಿ ಹಾಗೂ ಲಗ್ನ ಎರಡರಿಂದಲೂ ನೋಡುವಾಗ ನವೆಂಬರ್ ಇಪ್ಪತ್ತೆಂಟನೇ ತಾರೀಕಿನ ನಂತರ ಏಕಾದಶ (ಹನ್ನೊಂದನೇ ಮನೆ) ಲಾಭ ಸ್ಥಾನದಲ್ಲಿ ಶನಿ ಸಂಚಾರ, ದ್ವಿತೀಯ ಸ್ಥಾನದಲ್ಲಿ ಗುರು ಗ್ರಹದ ಸಂಚಾರ (ಡಿಸೆಂಬರ್ ಐದನೇ ತಾರೀಕಿನ ನಂತರ). ಇನ್ನು ಇದೇ ಸಮಯದಲ್ಲಿ ಹತ್ತನೇ ಮನೆಯಲ್ಲಿನ ರಾಹು ಸಂಚಾರ. ಈ ಗ್ರಹ ಏಕಕಾಲಕ್ಕೆ ಜನಪ್ರಿಯತೆ- ವಿವಾದ ಎರಡನ್ನೂ ನೀಡುತ್ತಾನೆ. ಚತುರ್ಥ ಸ್ಥಾನದಲ್ಲಿ ಇರುವಂಥ ಕೇತು ಗ್ರಹದಿಂದ ಸರಿ- ತಪ್ಪು, ಧರ್ಮ- ಕರ್ಮದ ಬಗ್ಗೆ ವಿಪರೀತದ ಆಲೋಚನೆ ನೀಡುತ್ತಾನೆ. ಇದರ ಜೊತೆಗೆ ಮಾನಸಿಕ ಖಿನ್ನತೆಯೂ ಆಗುತ್ತದೆ.
ಇದನ್ನು ಓದಿ: ಅಕ್ಟೋಬರ್ ಅಂತ್ಯದಲ್ಲಿ ಗಜಕೇಸರಿ ಯೋಗ; ಈ 5 ರಾಶಿಗೆ ಅದೃಷ್ಟದ ದಿನಗಳು ಶುರು
ಸ್ವತಃ ಡಿ.ಕೆ.ಶಿವಕುಮಾರ್ ಅವರ ಜನ್ಮಜಾತಕದಲ್ಲಿ ಹಲವು ಯೋಗಗಳಿವೆ. ಜನ್ಮ ಜಾತಕದಲ್ಲಿ ಮಕರದಲ್ಲಿ ಶನಿ- ಗುರು ಇವೆ. ದಶಮ ಸ್ಥಾನದಲ್ಲಿ (ಕೇಂದ್ರ) ಶನಿ ಅವನದೇ ರಾಶ್ಯಾಧಿಪತ್ಯದ ಮನೆಯಲ್ಲಿ ಇರುವುದರಿಂದ ಉಂಟಾಗುವಂಥ ಪಂಚ ಮಹಾಪುರುಷಗಳಲ್ಲಿ ಒಂದಾದ ಶಶ ಯೋಗ, ಅದೇ ಮಕರ ರಾಶಿಯಲ್ಲೇ ನೀಚ ಸ್ಥಾನದಲ್ಲಿ ಗುರು ಇದ್ದು, ಜತೆಯಲ್ಲಿ ಶನಿಯೂ ಇರುವುದರಿಂದ ಉಂಟಾಗಿರುವಂಥ ನೀಚಭಂಗ ರಾಜಯೋಗ, ಜೊತೆಗೆ ನಿಪುಣ ಯೋಗ ಸಹ ಈ ಜಾತಕದಲ್ಲಿ ಇದೆ. ಕರ್ಮ ಸ್ಥಾನದಲ್ಲಿ (ಹತ್ತನೇ ಮನೆ) ಕುಜ ಮೊದಲಾಗಿ ಪಂಚಗ್ರಹರಿದ್ದರೆ ಅದನ್ನು ಅಮಲಾ ಯೋಗ ಎನ್ನುತ್ತಾರೆ. ಇವರಿಗೆ ಕರ್ಮಸ್ಥಾನದಲ್ಲಿ ಶನಿ- ಗುರುಗಳು ಇರುವುದರಿಂದ ಹೆಸರು ಮಾಡುವ (ಅಮಲಾ ಯೋಗ) ಯೋಗವೂ ಇದೆ.
ಗೋಚಾರದಲ್ಲಿನ ಗ್ರಹಗಳ ಶುಭ ಸ್ಥಿತಿ ಹಾಗೂ ಜನ್ಮ ಜಾತಕದಲ್ಲಿ ಇರುವಂಥ ಹಲವು ಯೋಗಗಳು ಈಗ ಫಲ ನೀಡುವಂಥ ಸಮಯ ಎಂಬುದನ್ನು ಸೂಚಿಸುತ್ತಾ ಇದೆ ಎಂಬ ಅಂಶ ಈ ಹಿಂದೆ ನಿರಂತರವಾಗಿ ಪ್ರಕಾಶ್ ಅಮ್ಮಣ್ಣಾಯ ಅವರ ಲೇಖನಗಳನ್ನು ಓದುತ್ತಾ ಬಂದವರಿಗೆ ಹಾಗೂ ಜ್ಯೋತಿಷ್ಯದ ಬಗ್ಗೆ ಪ್ರಾಥಮಿಕ ಜ್ಞಾನ ಇರುವವರಿಗೆ ಅಂದಾಜು ಮಾಡುವುದು ಸುಲಭ ಆಗುತ್ತದೆ. ಇನ್ನು ಉನ್ನತ ಸ್ಥಿತಿಗೆ ಭಂಗ ತರುವ ತಡೆಗಳಿಗೆ ಪರಿಹಾರ ಮಾಡಿಕೊಳ್ಳಬೇಕು ಎಂಬ ಅಂಶದ ಉಲ್ಲೇಖ ಮಾಡಿದ್ದಾರೆ. ಇನ್ನು ಶಿವಕುಮಾರ್ ಅವರ ಜನ್ಮ ಜಾತಕಕ್ಕೆ ಸಂಬಂಧಿಸಿದಂತೆ, ಯಾವ ಕರ್ಮ ಸ್ಥಾನದಲ್ಲಿ ಶನಿ ಗ್ರಹ ಇದೆಯೋ ಆ ಕರ್ಮಸ್ಥಾನವೇ ನೀಗಡ ದ್ರೇಕ್ಕಾಣವೂ ಹೌದು. ಅದರ ಅಧಿಪತಿಯಾದ ಶನಿಯೂ 10° (ಡಿಗ್ರಿ) ಒಳಗೇ ಇರುವುದರಿಂದ ಈ ಜಾತಕರು ಕೆಲಸ ಮಾಡುವಾಗ ಎಚ್ಚರದಿಂದ ಇರಬೇಕು ಎಂಬ ಅಂಶವನ್ನು ಸಹ ಶಿವಕುಮಾರ್ ಅವರ ಜಾತಕದ ವಿಶ್ಲೇಷಣೆ ವೇಳೆ ಅಮ್ಮಣ್ಣಾಯ ಅವರು ಪ್ರಸ್ತಾವ ಮಾಡಿದ್ದರು. ಆದ್ದರಿಂದ ಅದಕ್ಕೆ ಸಂಬಂಧಿಸಿದ ಪರಿಹಾರ, ಅದರಲ್ಲೂ ಸೂಕ್ತ ಪರಿಹಾರ ಮಾಡಿಕೊಳ್ಳುವ ಬಗ್ಗೆ ಸೂಚಿಸಿರುವಂತೆ ಸುಳಿವು ದೊರೆಯುತ್ತದೆ.
ಗುರು ಗ್ರಹದ ಸಂಚಾರ ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ. ಆದರೆ ಈ ವರ್ಷ ಮೇ ಹದಿನೈದರಂದು ಮಿಥುನ ರಾಶಿ ಪ್ರವೇಶಿಸಿದ್ದ ಬೃಹಸ್ಪತಿಯು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ಕರ್ಕಾಟಕ ಪ್ರವೇಶಿಸಿ ಆಗಿದೆ. ಇನ್ನು ಡಿಸೆಂಬರ್ ಐದನೇ ತಾರೀಕಿನಂದು ಮತ್ತೆ ಮಿಥುನಕ್ಕೆ ಹೋಗುತ್ತದೆ. ಆ ನಂತರ ಮುಂದಿನ ವರ್ಷದ ಜೂನ್ ಒಂದನೇ ತಾರೀಕು ಕರ್ಕಾಟಕ ರಾಶಿಗೆ ಮತ್ತೆ ಪ್ರವೇಶಿಸುವ ಗುರು ಗ್ರಹ ನವೆಂಬರ್ ಗೆ ಮತ್ತೆ ಸಿಂಹರಾಶಿಗೆ, ಅದಾಗಿ ಎರಡು ತಿಂಗಳಿಗೆ ಮತ್ತೆ ಕರ್ಕಾಟಕ ರಾಶಿಗೆ ಹೋಗುತ್ತದೆ. ಹೀಗೆ ಅತಿಚಾರ ಸಂಚಾರದ ಗುರು ಗ್ರಹದ ಫಲವನ್ನು ಹಾಗೂ ಅದರ ಪರಿಣಾಮವನ್ನು ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನನ ಕಾಲದಲ್ಲಿ ಸಿಂಹ ರಾಶಿಯಲ್ಲಿ ಶನಿ ಗ್ರಹ ಸ್ಥಿತವಾಗಿತ್ತು. ಜನ್ಮ ರಾಶಿಯಿಂದ ನೋಡಿದರೆ, ಅವರಿಗೆ ಪಂಚಮ ಶನಿ ಹಾಗೂ ಜನ್ಮಕಾಲದಲ್ಲಿ ಶನಿಯ ಸ್ಥಿತಿ ನೋಡಿದರೆ ಶನಿ ಗ್ರಹ ಇದ್ದ ಸ್ಥಿತಿಯಿಂದ ಎಂಟನೇ ಮನೆ ಆಗುತ್ತದೆ. ಅದೇ ಸಮಯಕ್ಕೆ ಮಿಥುನ ರಾಶಿಯ ಗುರು ಗ್ರಹವು ಅಷ್ಟಮ ಸ್ಥಾನವಾಗುತ್ತದೆ. ಆದ್ದರಿಂದ ಯಾವ ಗ್ರಹದ ಬಲ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜನ್ಮಜಾತಕ ಹಾಗೂ ಗೋಚಾರದಿಂದಲೂ ಬಲಿಷ್ಠ ಗ್ರಹ ಸ್ಥಿತಿ ಇರುವ ಡಿ.ಕೆ. ಶಿವಕುಮಾರ್ ಹಾಗೂ ಸದ್ಯದ ರಾಜಕೀಯ ಪರಿಸ್ಥಿತಿ ವಿಶ್ಲೇಷಣೆ ಮಾಡಿದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕೂರುವ ಅವಕಾಶ ಡಿ.ಕೆ. ಶಿವಕುಮಾರ್ ಅವರಿಗೆ ಇದೆ ಎಂಬುದನ್ನು ಸೂಚ್ಯವಾಗಿ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಸೂಚಿಸಿದಂತೆ ಕಾಣುತ್ತದೆ.
ಫೇಸ್ ಬುಕ್ ಪೋಸ್ಟ್ ವಿಚಾರವಾಗಿ ಮಾತನಾಡಿಸುವುದಕ್ಕೆ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಸಂಪರ್ಕಿಸುವುದಕ್ಕೆ “ಟಿವಿ9 ಕನ್ನಡ” ವೆಬ್ ಸೈಟ್ ನಿಂದ ಪ್ರಯತ್ನಿಸಲಾಯಿತು. ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಈ ಸಂಬಂಧವಾಗಿ ಅವರು ಯಾವುದೇ ಸ್ಪಷ್ಟನೆ ನೀಡಿದರೂ ಅದನ್ನು ಇದೇ ಲೇಖನದಲ್ಲಿ ಅಪ್ ಡೇಟ್ ಮಾಡಲಾಗುತ್ತದೆ.
ಮಾಹಿತಿ ಮೂಲ: ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಫೇಸ್ ಬುಕ್ ಪೋಸ್ಟ್
ಲೇಖನ: ಸ್ವಾತಿ ಎನ್.ಕೆ.
(ಈ ಲೇಖನವನ್ನು ಜ್ಯೋತಿಷ್ಯದ ಆಧಾರದಲ್ಲಿ ಬರೆಯಲಾಗಿದ್ದು, ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಸಂಪೂರ್ಣ ಲೇಖಕರದ್ದಾಗಿದೆ. ಇದನ್ನು “ಟಿವಿ9 ಕನ್ನಡ” ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಯಾಗಲೀ ಅನುಮೋದಿಸುವುದಿಲ್ಲ ಹಾಗೂ ಈ ಲೇಖನದಲ್ಲಿರುವ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿ ಅಲ್ಲ- ಸಂಪಾದಕರು)
Published On - 5:18 pm, Thu, 30 October 25