ಮಂಗಳೂರಿನ ಯುವಕನಿಗೆ ಕಾಸ್ಮೆಟಿಕ್ ಸರ್ಜರಿ ಮಾಡಿದ್ದ ಆಸ್ಪತ್ರೆಗೆ ಬೀಗ ಜಡಿದ ಜಿಲ್ಲಾಡಳಿತ

ಮಂಗಳೂರಿನಲ್ಲಿ ವೈದ್ಯರ ಎಡವಟ್ಟಿಗೆ ಯುವಕನೋರ್ವ ಸಾವನ್ನಪ್ಪಿರುವಂತಹ ಘಟನೆ ನಗರದ ಕಂಕನಾಡಿಯ ಬೆಂದೂರ್ ವೆಲ್​ನಲ್ಲಿ ನಡೆದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಂಇ ಕಾಯ್ದೆ ಸೆಕ್ಷನ್ 15ರ ಪ್ರಕಾರ ಕಾಸ್ಮೆಟಿಕ್ ಸರ್ಜರಿ ಮಾಡಿದ್ದ ಕ್ಲಿನಿಕ್​ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸದ್ಯ ಬೀಗ ಜಡಿದಿದೆ.

ಮಂಗಳೂರಿನ ಯುವಕನಿಗೆ ಕಾಸ್ಮೆಟಿಕ್ ಸರ್ಜರಿ ಮಾಡಿದ್ದ ಆಸ್ಪತ್ರೆಗೆ ಬೀಗ ಜಡಿದ ಜಿಲ್ಲಾಡಳಿತ
ಮಂಗಳೂರಿನ ಯುವಕನಿಗೆ ಕಾಸ್ಮೆಟಿಕ್ ಸರ್ಜರಿ ಮಾಡಿದ್ದ ಆಸ್ಪತ್ರೆಗೆ ಬೀಗ ಜಡಿದ ಜಿಲ್ಲಾಡಳಿತ
Edited By:

Updated on: Sep 26, 2024 | 7:56 PM

ಮಂಗಳೂರು, ಸೆಪ್ಟೆಂಬರ್​ 26: ಕಾಸ್ಮೆಟಿಕ್ ಸರ್ಜರಿ (cosmetic surgery) ವೇಳೆ ಮಂಗಳೂರಿನ ಯುವಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕಿತ್ಸೆ ನೀಡಿದ್ದ ಕ್ಲಿನಿಕ್​​ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಬೀಗ ಜಡಿದಿದೆ. ಮುಂದಿನ ಆದೇಶದವರೆಗೆ ಪರವಾನಿಗೆ ತಡೆ ಹಿಡಿದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಕೆಪಿಎಂಇ (KPME) ಪ್ರಾಧಿಕಾರದ ಅಧ್ಯಕ್ಷ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಬೆಂದೂರ್ ವೆಲ್​​ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್​​ಗೆ ಸದ್ಯ ಬೀಗ ಜಡಿಯಲಾಗಿದೆ. ಆರೋಗ್ಯ ಇಲಾಖೆ ತಂಡ ಸ್ಥಳ ತನಿಖೆ ಸಂದರ್ಭ ಕ್ಲಿನಿಕ್​ನಲ್ಲಿ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಕೆಪಿಎಂಇ ಕಾಯ್ದೆ ಸೆಕ್ಷನ್ 15ರ ಪ್ರಕಾರ ಆದೇಶ ಹೊರಡಿಸಲಾಗಿದೆ. ಪ್ರಕರಣದ ವಿವರವಾದ ತನಿಖೆಗೆ ತಜ್ಞರುಗಳ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ನೀಡುವ ಅಂತಿಮ ವರದಿ ಆಧಾರದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಸಾವು

ಮಂಗಳೂರು ಹೊರವಲಯದ ಉಳ್ಳಾಲದ ಅಕ್ಕರಕೆರೆಯ ನಿವಾಸಿ ಮಹಮ್ಮದ್ ಮಾಝೀನ್​​ (32) ಎಂಬ ಯುವಕ ಆರೋಗ್ಯವಂತನಾಗಿದ್ದ. ಆದರೆ ತನ್ನ ಎದೆಯ ಗಾತ್ರ ದೊಡ್ಡದಿರುವುದೇ ಬಹಳ ಸಮಸ್ಯೆಯನ್ನುಂಟು ಮಾಡಿತ್ತು. ಹೊರಗೆ ತಿರುಗಾಡುವುದಕ್ಕೂ ಅಂಜಿಕೆ ಪಡುವಂತಾಗಿತ್ತು‌. ಇದಕ್ಕೊಂದು ಸಂಪೂರ್ಣ ಪರಿಹಾರ ಕಂಡುಕೊಳ್ಳಬೇಕೆಂದು ಮಾಝೀನ್ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಫ್ಲಾಂಟ್ ಮತ್ತು ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್‌ಗೆ ಭೇಟಿ ನೀಡಿದ್ದರು.

ವೈದ್ಯರು ಮಾಝೀನ್‌ಗೆ ಗೈನೋಕೋಮಾಸ್ಟಿಯಾ ಎಂಬ ಡಿಸೀಸ್ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಸಮಸ್ಯೆಯನ್ನು ಸಣ್ಣ ಸರ್ಜರಿಯಿಂದ ಸರಿ ಮಾಡಬಹುದೆಂದು ಭರವಸೆಯನ್ನೂ ನೀಡಿದ್ದರು. ವೈದ್ಯರ ಸೂಚನೆಯ ಪ್ರಕಾರ ಮಾಝೀನ್ ಸೆಪ್ಟೆಂಬರ್ 21ರಂದು ತನ್ನ ತಾಯಿ ಮತ್ತು ಮಡದಿಯ ಜೊತೆಗೆ ಕ್ಲಿನಿಕ್​ಗೆ ಬಂದಿದ್ದ.

ವೈದ್ಯರು ಇದು ಕೇವಲ ಅರ್ಧ ಗಂಟೆಯ ಸರ್ಜರಿ ಅಂತಾ ಹೇಳಿದ್ದರಿಂದ ಈ ಸಮಸ್ಯೆಯಿಂದ ಬೇಗ ಮುಕ್ತಿಹೊಂದುವ ಭರವಸೆಯನ್ನೂ ಕುಟುಂಬ ಹೊಂದಿತ್ತು. ಆದರೆ ವೈದ್ಯರ ಎಡವಟ್ಟಿನಿಂದ ಮಾಝೀನ್‌ ಮೃತಪಟ್ಟಿದ್ದ.

ಇದನ್ನೂ ಓದಿ: ಮಂಗಳೂರು ವೈದ್ಯರ ಎಡವಟ್ಟು: ಸರ್ಜರಿ ವೇಳೆ ಯುವಕ ಸಾವು, ಪೋಷಕರ ಆಕ್ರೋಶ

ಸರ್ಜರಿ ಮಾಡುವ ಮುನ್ನ ವೈದ್ಯರು ಅರಿವಳಿಕೆ ಚುಚ್ಚು ಮದ್ದು ನೀಡಿದ್ದು, ಮಾಝೀನ್ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಅರ್ಧ ಗಂಟೆಯಲ್ಲಿ ಮುಗಿಯಬೇಕಾದ ಸರ್ಜರಿ ನಾಲ್ಕೂವರೆ ಗಂಟೆ ನಡೆದಿತ್ತು. ಕ್ಲಿನಿಕ್‌ನ ವೈದ್ಯ ಸತೀಶ್ಚಂದ್ರ ಮತ್ತು ಸಿಬ್ಬಂದಿ ಮಾಝೀನ್‌ಗೆ ಪ್ರಜ್ಞೆ ತರಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಕೊನೆಗೆ ಸ್ಥಳೀಯ ಆಸ್ಪತ್ರೆಗೆ ಮಾಝೀನ್‌ನ್ನು ಕೊಂಡುಹೋದರೂ ಅಷ್ಟರಲ್ಲಿ ಮಾಝೀನ್ ಕೊನೆಯುಸಿರೆಳೆದಿದ್ದ.

ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈಗಾಗಲೇ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ತಂಡ ಸ್ಥಳ ತನಿಖೆ ನಡೆಸಿ ಪರಿಶೀಲನೆ ನಡೆಸಿದೆ. ಕದ್ರಿ‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Follow Us