ರಾಯಚೂರು: ಶ್ರೀಶೈಲ ಪಾದಯಾತ್ರೆ ವೇಳೆ ಹೃದಯಾಘಾತಕ್ಕೆ ಯುವಕ ಸಾವು

| Updated By: ಆಯೇಷಾ ಬಾನು

Updated on: Mar 31, 2024 | 11:33 AM

ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಮೂಲದ ಯುವಕ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಬಳಿ ವಿಶ್ರಾಂತಿ ಪಡೆಯುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮತ್ತೊಂದೆಡೆ ಮಂಗಳೂರಿನ ಅಡ್ಯಾರ್​​ ಡ್ಯಾಂ ಬಳಿಯ ನೇತ್ರಾವತಿ ನದಿಗೆ ಹಾರಿ ಅಡ್ಯಾರ್ ಪದವು ನಿವಾಸಿ ಚೈತ್ರಾ, ಮಗು ದಿಯಾಂಶ್ ಮೃತಪಟ್ಟಿದ್ದಾರೆ.

ರಾಯಚೂರು: ಶ್ರೀಶೈಲ ಪಾದಯಾತ್ರೆ ವೇಳೆ ಹೃದಯಾಘಾತಕ್ಕೆ ಯುವಕ ಸಾವು
ಶ್ರೀಶೈಲ ದಡುತಿ
Follow us on

ರಾಯಚೂರು, ಮಾರ್ಚ್​.31: ಬಿರು ಬಿಸಿಲಿನಲ್ಲಿ‌ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ಹೃದಯಾಘಾತಕ್ಕೆ (Heart Attack) ಮೃತಪಟ್ಟ ಘಟನೆ ನಡೆದಿದೆ. ಯಾತ್ರಿಗಳ ಜೊತೆಗೆ ಶ್ರೀಶೈಲಕ್ಕೆ ಪಾದಯಾತ್ರೆ (Srisailam Padayatra) ಮಾಡುವ ವೇಳೆ ಮಾರ್ಗ ಮಧ್ಯೆ ಹೃದಯಾಘಾತದಿಂದ ಯುವಕ ಮೃತಪಟ್ಟಿದ್ದಾನೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಬಳಿ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಮೂಲದ ಶ್ರೀಶೈಲ ದಡುತಿ ಎಂಬ ಯುವಕ ನಿನ್ನೆ ಬಿಸಿಲಿನ ತಾಪಕ್ಕೆ ದಣಿದಿದ್ದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತವಾಗಿದೆ.

ಮಗುವಿನೊಂದಿಗೆ ನದಿಗೆ ಹಾರಿದ ತಾಯಿ

ಮಗು ಜೊತೆ ನೇತ್ರಾವತಿ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳೂರಿನ ಅಡ್ಯಾರ್​​ ಡ್ಯಾಂ ಬಳಿಯ ನೇತ್ರಾವತಿ ನದಿಗೆ ಹಾರಿ ಅಡ್ಯಾರ್ ಪದವು ನಿವಾಸಿ ಚೈತ್ರಾ, ಮಗು ದಿಯಾಂಶ್ ಮೃತಪಟ್ಟಿದ್ದಾರೆ. ಹರೇಕಳ-ಅಡ್ಯಾರ ಸೇತುವೆ ಬಳಿ ತಾಯಿ, ಮಗುವಿನ ಶವ ಪತ್ತೆಯಾಗಿದೆ. ಗುರುವಾರವಷ್ಟೇ ಮಗುವಿನ ಹುಟ್ಟುಹಬ್ಬ ದೇರಳಕಟ್ಟೆಯ ಸೇವಾಶ್ರಮದಲ್ಲಿ ಆಚರಿಸಿದ್ದ ಚೈತ್ರಾ, ನಿನ್ನೆ ನಾಪತ್ತೆಯಾಗಿದ್ದರು.

ಚಾಕುವಿನಿಂದ ಇರಿದು ಮಹಿಳೆಯ ಕೊಲೆ

ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಮಹಿಳೆಯ ಕೊಲೆ ಮಾಡಲಾಗಿದೆ. ಜಯನಗರದ ಶಾಲಿನಿ ಗ್ರೌಂಡ್‌ನಲ್ಲಿ ಘಟನೆ ನಡೆದಿದ್ದು, ಕೋಲ್ಕತ್ತಾ ಮೂಲದ ಫರೀದಾ ಖಾನ್ ಬರ್ಬರವಾಗಿ ಕೊಲೆಯಾಗಿದ್ದಾಳೆ. ಆರೋಪಿ ಗಿರೀಶ್​ ಹತ್ಯೆಗೈದು ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಆದ್ರೆ ಫರೀದಾ ಖಾನ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಅಕ್ರಮ ಚಟುವಟಿಕೆ: ​ಡಿಸಿಪಿ ರೋಹನ್ ಜಗದೀಶ್ ದಿಢೀರ್​ ಭೇಟಿ

ವಿದ್ಯುತ್​ ತಂತಿ ಸ್ಪರ್ಶಿಸಿ ಮನೆ, ಮೇವು ಭಸ್ಮ

ಮಳೆ ಗಾಳಿಯಿಂದ ವಿದ್ಯುತ್ ತಂತಿ ಸ್ಪರ್ಶವಾಗಿ ಮನೆ ಮತ್ತು ಮೇವಿನ ಬಣವೆಗೆ ಬೆಂಕಿ ಹೊತ್ತಿ ಧಗಧಗಿಸಿ ಹೋಗಿವೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಜಕುಮಾರ್ ಗುಣಕಿ ಎಂಬುವ ರೈತರಿಗೆ ಸೇರಿದ ಮನೆ, ಹಾಗೂ ಮೇವಿನ ಬಣವೆ ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಿಂದ ಹೊರಗೆ ಓಡಿ ಬಂದು ಕುಟುಂಬದವರು ಪಾರಾಗಿದ್ದಾರೆ.

ಮರದಿಂದ ಬಿದ್ದು BMTC ಚಾಲಕ ಸಾವು

ಹಲಸಿನಹಣ್ಣು ಕೀಳಲು ಹೋಗಿ ಮರದಿಂದ ಬಿದ್ದು BMTCಚಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಮಂಜುನಾಥ್ ಮೃತಪಟ್ಟಿದ್ದಾರೆ. ಕಳೆದ 15ವರ್ಷದಿಂದ ಪೀಣ್ಯಾ 9ನೇ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ