ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ: ಸಿಎಂ ಸಿದ್ದರಾಮಯ್ಯಗೆ ಖರ್ಗೆ ಪತ್ರ, ಖಡಕ್ ಸೂಚನೆ
ಕರ್ನಾಟಕದ ಎಸ್ಸಿ ಎಸ್ಟಿ ನೌಕರರ ಮುಂಬಡ್ತಿಯಲ್ಲಿ ರೋಸ್ಟರ್ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕೆಲವು ಇಲಾಖೆಗಳು ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಖರ್ಗೆ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಮತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು, ಜುಲೈ 15: ತಾವು ಎಸ್ಸಿ ಎಸ್ಟಿ (SC ST) ಪರ, ಹಿಂದುಳಿದ ವರ್ಗಗಳ ಹಿತ ಕಾಯುವುದೇ ಆದ್ಯತೆ ಹಾಗೂ ಸಂವಿಧಾನಾತ್ಮಕಾಗಿಯೇ ಆಡಳಿತ ನಡೆಸುವುದು ಎಂದೇ ಸದಾ ಬಿಂಬಿಸಿಕೊಂಡು ಬಂದಿರುವ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿಯೇ ಹಿಂದುಳಿದ ವರ್ಗಗಳ ನೌಕರರಿಗೆ ಸಮಸ್ಯೆಯಾಗುತ್ತಿದೆಯೇ? ಇಂಥದ್ದೊಂದು ಪ್ರಶ್ನೆಗೆ ಈಗ ನಡೆದಿರುವ ಬೆಳವಣಿಗೆ ಕಾರಣವಾಗಿದೆ. ಎಸ್ಸಿ ಎಸ್ಟಿ ನೌಕರರ ಮುಂಬಡ್ತಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಈ ಕುರಿತು ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಬರೆದ ಪತ್ರದಲ್ಲೇನಿದೆ?
ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ./ಎಸ್.ಟಿ. ನೌಕರರ ಸಂಘದವರು ಎಸ್.ಸಿ.ಎಸ್.ಟಿ ನೌಕರರಿಗೆ ಮುಂಬಡ್ತಿಯನ್ನು ನೀಡುವಲ್ಲಿ ರೋಸ್ಟರ್ ಬಿಂದುವನ್ನು ಸರ್ಕಾರದ ಆದೇಶದ ಪ್ರಕಾರ ನಗದಿಪಡಿಸಿದ್ದರೂ, ಅದನ್ನು ಕಟುನಿಟ್ಟಾಗಿ ಪಾಲನೆ ಮಾಡಬೇಕೆಂಬ ನಿರ್ದೇಶನವಿದ್ದರೂ ಕೆಲವು ಇಲಾಖೆಗಳ ಅಧಿಕಾರಿಗಳು ಪಾಲನೆ ಮಾಡದಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ಕೆಲವು ಪ್ರಮುಖ ಅಂಶಗಳ ಜೊತೆಗೆ ಈ ವಿಚಾರವಾಗಿ ನಿಮಗೂ ಕೂಡ ಬರೆದಿರುವ ಪತ್ರದ ಪ್ರತಿಯನ್ನು ಸಂಘದ ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದಾರೆ. ಇದರ ಜೊತೆ ಲಗತ್ತಿಸಿರುವ ಪತ್ರಿಕೆಯಲ್ಲಿ ಬಂದಿರುವ ವಿವರಗಳನ್ನು ಹಾಗೂ ಸಂಘದವರು ನಿಮಗೆ ಈಗಾಗಲೇ ನೀಡಿರುವ ಪತ್ರವನ್ನು ಸ್ವತಃ ಅವಲೋಕಿಸುವುದರ ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಸರ್ಕಾರವೇ ಹೊರಡಿಸಿರುವ ಅದೇಶ ಹಾಗೂ ಸುತ್ತೋಲೆಗಳಲ್ಲಿ ತಿಳಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸ್ಪಷ್ಟ ಆದೇಶವನ್ನು ನೀಡುವುದು ಸೂಕ್ತ. ಇಲ್ಲದಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಅಸಮಧಾನ ಉಂಟಾಗಿ ಸರ್ಕಾರದ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಲು ಕಷ್ಟವಾಗುತ್ತದೆ ಎಂದು ಖರ್ಗೆ ಅವರು ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗದಲ್ಲಿ ಎಸ್ಸಿ ಎಸ್ಟಿ ಒಳಮೀಸಲಾತಿಗೆ ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂ ಕೋರ್ಟ್
ಈ ವಿಚಾರದ ಬಗ್ಗೆ ಕೂಡಲೇ ಗಮನ ಹರಿಸಿ ಬಂದಿರುವ ತೊಡಕುಗಳನ್ನು ನಿವಾರಣೆ ಮಾಡುವುದರತ್ತ ಗಮನ ಹರಿಸಬೇಕೆಂದು ಸೂಚಿಸಬಯಸುತ್ತೇನೆ ಎಂದು ಖರ್ಗೆ ಸೂಚನೆ ನೀಡಿದ್ದಾರೆ.

ಖರ್ಗೆ ಬರೆದಿರುವ ಪತ್ರದ ಪ್ರತಿ
ಪಕ್ಷದ ಮತ್ತು ಸರ್ಕಾರದ ಆಂತರಿಕ ವಿಚಾರಗಳನ್ನು ಆಂತರಿಕ ವೇದಿಕೆಗಳಲ್ಲೇ ಚರ್ಚಿಸಬೇಕೆಂದು ಎಐಸಿಸಿ ಅಧ್ಯಕ್ಷರು ಈಗಾಗಲೇ ಸಚಿವರು ಮತ್ತು ಶಾಸಕರಿಗೆ ಖಡಕ್ ಸೂಚನೆ ನೀಡಿದ್ದರು. ಅಂಥದ್ದರಲ್ಲಿ ಇದೀಗ ಅವರೇ ಮುಖ್ಯಮಂತ್ರಿಗಳಿಗೆ ಸೂಕ್ಷ್ಮ ವಿಚಾರವೊಂದಕ್ಕೆ ಸಂಬಂಧಿಸಿ ಬರೆದ ಪತ್ರ ಬಹಿರಂಗವಾಗಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Tue, 15 July 25








