ಮೊಟ್ಟೆ ಖರೀದಿಸಲು ಬಿಡುಗಡೆಯಾಗದ ಅನುದಾನ: ಸಾಲದ ಸುಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು

|

Updated on: Jun 03, 2023 | 2:11 PM

ಗರ್ಭಿಣಿಯರು, ಬಾಣಂತಿಯರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರಕಾರದಿಂದ ಅನುದಾನ ಬಿಡುಗಡೆಯಾಗದೆ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆಗಾಗಿ ನಾಲ್ಕು ತಿಂಗಳಿಂದ ಸಾಲದ ಹೊರೆ ಹೊತ್ತಿದ್ದಾರೆ.

ಮೊಟ್ಟೆ ಖರೀದಿಸಲು ಬಿಡುಗಡೆಯಾಗದ ಅನುದಾನ: ಸಾಲದ ಸುಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು
ಅಂಗನವಾಡಿ ಕಾರ್ಯಕರ್ತೆಯರು
Follow us on

ಬೆಂಗಳೂರು: ಗರ್ಭಿಣಿಯರು, ಬಾಣಂತಿಯರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರಕಾರದಿಂದ (Karnataka Government) ಅನುದಾನ ಬಿಡುಗಡೆಯಾಗದೆ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಮೊಟ್ಟೆಗಾಗಿ (Egg) ನಾಲ್ಕು ತಿಂಗಳಿಂದ ಸಾಲದ ಹೊರೆ ಹೊತ್ತಿದ್ದಾರೆ. ಇದಷ್ಟೇ ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಮೊಟ್ಟೆ ನೀಡುವಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 65,911 ಅಂಗನವಾಡಿ ಕೇಂದ್ರಗಳಿವೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ ನೀಡಲಾಗುತ್ತಿದೆ. ಸುಮಾರು 6 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರು ಮತ್ತು ಸುಮಾರು 40 ಲಕ್ಷ ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಾರದಲ್ಲಿ ಆರು ದಿನ ಮೊಟ್ಟೆಗಳು, ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ ಐದು ದಿನ ಮತ್ತು ಸಾಮಾನ್ಯ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ.

ಇದನ್ನೂ ಓದಿ: ಡ್ರೋನ್ ಮೂಲಕ ಭೂಮಾಪನ, ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ: ಡಾ ವೀರೇಂದ್ರ ಹೆಗ್ಗಡೆ

ಸರ್ಕಾರಿ ನಿಯಮಗಳ ಪ್ರಕಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಂಗನವಾಡಿಗಳಿಗೆ ಮೊಟ್ಟೆಗಳನ್ನು ಪೂರೈಸಲು ಟೆಂಡರ್ ಕರೆದು ಕಾರ್ಯಾದೇಶವನ್ನು ನೀಡಬೇಕು. ಆದರೆ, 2022-23ರ ಆರ್ಥಿಕ ವರ್ಷಕ್ಕೆ ಶೇ.80ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿಗಳ ಬಾಲ ವಿಕಾಸ ಸಮಿತಿಗಳ ಜಂಟಿ ಖಾತೆಗೆ ಅನುದಾನವನ್ನು ಜಮಾ ಮಾಡುತ್ತಿದೆ. ಕೆಲವೊಮ್ಮೆ ಮುಂಗಡವಾಗಿಯೂ ಹಣ ಜಮಾ ಮಾಡಿದೆ. ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆ ಮತ್ತು ಇತರ ಕಾರಣಗಳಿಂದಾಗಿ ಫೆಬ್ರವರಿಯಿಂದ ಕೆಲವು ಜಿಲ್ಲೆಗಳು ಮತ್ತು ಏಪ್ರಿಲ್‌ನಿಂದ ಕೆಲವು ಜಿಲ್ಲೆಗಳು ಅನುದಾನವನ್ನು ಪಡೆದಿಲ್ಲ.

“ನಾವು ಕಿರಾಣಿ ಅಂಗಡಿಗಳಿಂದ ಸಾಲದ ರೂಪದಲ್ಲಿ ಮೊಟ್ಟೆಗಳನ್ನು ಖರೀದಿಸಿದ್ದೇವೆ. ನಾಲ್ಕು ತಿಂಗಳಿಂದ ನಮಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಅಂಗಡಿಕಾರರು ಹಣ ಕೇಳುತ್ತಿದ್ದಾರೆ. ಆದರೆ, ಸರಕಾರದಿಂದ ಸಕಾಲಕ್ಕೆ ಅನುದಾನ ಸಿಗದೇ ಸಮಸ್ಯೆ ಎದುರಾಗಿದೆ. ಎರಡು ತಿಂಗಳಿಂದ ನಮಗೆ ಸಂಭಾವನೆ ಬಂದಿರಲಿಲ್ಲ. ಹೀಗಾಗಿ ಫಲಾನುಭವಿಗಳಿಗೆ ನಿಯಮಿತವಾಗಿ ಮೊಟ್ಟೆ ನೀಡದೆ ಅಸಹಾಯಕರಾಗಿದ್ದೇವೆ ಎಂದು ಮಂಡ್ಯದ ಅಂಗನವಾಡಿ ಕಾರ್ಯಕರ್ತೆ ಹೇಳಿದರು.

ಈ ಬಗ್ಗೆ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಲವು ಬಾರಿ ಪರಿಶೀಲನಾ ಸಭೆ ನಡೆಸಿದ್ದಾರೆ ಎಂದು ತಾಂತ್ರಿಕ ಹಾಗೂ ಇತರೆ ಸಮಸ್ಯೆಗಳಿಂದ ಮೊಟ್ಟೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿಲ್ಲ. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಶೀಘ್ರವೇ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಕೆ.ಎನ್ ಅನುರಾಧ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ಇದು ನಿತ್ಯದ ಸಮಸ್ಯೆಯಾಗಿದೆ. ಅಧಿಕಾರಿಗಳು ನಿಧಿಯನ್ನು ಸರಿಯಾಗಿ ಬಿಡುಗಡೆ ಮಾಡಲು ಎಂದಿಗೂ ಯೋಜಿಸುವುದಿಲ್ಲ. 2022-23ನೇ ಹಣಕಾಸು ವರ್ಷ ಮುಕ್ತಾಯವಾಗಿರುವುದರಿಂದ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಅನುದಾನವನ್ನು ಹಿಡಿದಿಟ್ಟುಕೊಂಡಿದೆ. ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಸಾಲದ ಹೊರೆ ಎದುರಿಸುತ್ತಿದ್ದಾರೆ. ಸರಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ