ಮಂಗಳಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಲು ದಯಾನಂದ ಸ್ವಾಮೀಜಿ ಆಗ್ರಹ

ನಮ್ಮ ಹೋರಾಟ ಯಾವುದೇ ಧಾರ್ಮಿಕ‌ ಭಾವನೆಗಳ ವಿರುದ್ದವಲ್ಲ. ಧರ್ಮಾಚರಣೆಗಳು ಕಾನೂನಿನ ಚೌಕಟ್ಟಿನಲ್ಲಿ, ಧರ್ಮ ಎನ್ನುವುದು ಸಂವಿಧಾನದ ಚೌಕಟ್ಟಿನಲ್ಲಿ ಇರಬೇಕು ಎಂದು ಹೇಳಿದರು.

ಮಂಗಳಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಲು ದಯಾನಂದ ಸ್ವಾಮೀಜಿ ಆಗ್ರಹ
ಪಶು ಪ್ರಾಣಿಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2022 | 2:51 PM

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಮಂಗಳಾದೇವಿ ಜಾತ್ರೆಯಲ್ಲಿ ಸಾಮೂಹಿಕ ಪ್ರಾಣಿಬಲಿ ತಡೆಯಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಜಾತ್ರೆಯಲ್ಲಿ ಪ್ರಾಣಿಗಳ ಬಲಿ ಕೊಡದೆ ಕುಂಬಳಕಾಯಿ, ತೆಂಗಿನಕಾಯಿ, ಲಿಂಬೆಹಣ್ಣು, ಬಾಳೆಹಣ್ಣು ಬಳಸಿ ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಭಕ್ತರಲ್ಲಿ ಕೋರಿದ್ದಾರೆ. ಪ್ರಾಣಿಬಲಿ ಪ್ರತಿಬಂಧಕ ಅಧಿನಿಯಮವನ್ನು ಕಟ್ಟುನಿಟ್ಟು ಪಾಲನೆಗೆ ಎಲ್ಲರೂ ಗಮನ ಹರಿಸಬೇಕು. ನಮ್ಮ ಹೋರಾಟ ಯಾವುದೇ ಧಾರ್ಮಿಕ‌ ಭಾವನೆಗಳ ವಿರುದ್ದವಲ್ಲ. ಇವತ್ತು ಏನೇ ಹೇಳಿದರೂ ಧರ್ಮದ ವಿಷಯ ಎಳೆದು ತರುತ್ತಾರೆ. ಧರ್ಮಾಚರಣೆಗಳು ಕಾನೂನಿನ ಚೌಕಟ್ಟಿನಲ್ಲಿ, ಧರ್ಮ ಎನ್ನುವುದು ಸಂವಿಧಾನದ ಚೌಕಟ್ಟಿನಲ್ಲಿ ಇರಬೇಕು. ದೇವಾಲಯಗಳು ವಧಾಲಯಗಳು ಆಗಬಾರದು, ದಿವ್ಯಾಲಯಗಳಾಗಬೇಕು. ಜಾತ್ರಾ ಪರಿಸರವೂ ಕಟುಕರ ಕೇರಿಗಳು ಆಗಬಾರದು ಎನ್ನುವದಷ್ಟೇ ನಮ್ಮ ಉದ್ದೇಶ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಹಲಾಲ್, ಜಟ್ಕಾ ವಿವಾದ ಕುರಿತು ಮಾತನಾಡಿದ ಅವರು, ಈ ಹಲಾಲ್, ಜಟ್ಕಾ ನನಗಂತೂ ಅರ್ಥವಾಗದ ಭಾಷೆ. ಸಕಲ ಜೀವಾತ್ಮರಿಗೆ ಲೇಸಾಗಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ದಯವೇ ಧರ್ಮದ ಮೂಲ ಅಂದಿದ್ದಾರೆ. ಧರ್ಮದ ಹೆಸರಿನಲ್ಲೇ ಬಹಳಷ್ಟು ಹಿಂಸೆ ಆಗುತ್ತೆ ಅಂತ ಅವರಿಗೆ ಗೊತ್ತಿತ್ತು. ಕೊಲ್ಲುವುದೇ ತಪ್ಪು ಎಂದು ನಾವು ಹೇಳುತ್ತಿದ್ದೇವೆ. ತತ್ವ ಸಿದ್ದಾಂತ ಬಿಡಿ ಕೊರೊನಾ ಸಮಯದಲ್ಲಿ ಏನಾಯಿತು? ಎಲ್ಲರಿಗೂ ಇದ್ದಿದ್ದು ಜೀವಭಯ. ಒಟ್ಟು ನಾನು ಬದುಕಬೇಕು ಎನ್ನುವುದು ಮುಖ್ಯವಾಗಿತ್ತು. ಅದಕ್ಕಾಗಿ ಎಲ್ಲವನ್ನೂ ಬಿಟ್ಟಿದ್ದೆವು. ಬದುಕುವ ಆಸೆ ನಮಗೆ ಹೇಗೆ ಇರುತ್ತದೆಯೋ ಅದೇ ರೀತಿ ಪ್ರಾಣಿಗಳಿಗೂ ಇರುತ್ತದೆ. ಹಲಾಲ್ ಅಥವಾ ಜಟ್ಕಾ ವಿಧಾನದ ಬಗ್ಗೆ ನಾನು ಏನೂ ಹೇಳುವುದಿಲ್ಲ. ನೋವಿಲ್ಲದೆ ಕೊಲ್ಲುವ ವಿಧಾನವನ್ನೂ ಒಪ್ಪುವುದಿಲ್ಲ. ಯಾವ ವಿಧಾನದಲ್ಲಿ ಕೊಂದರೂ ಪ್ರಾಣಿಗಳ ಬದುಕುವ ಹಕ್ಕು ನಾಶವಾಗುತ್ತದೆ. ಇವೆಲ್ಲವನ್ನೂ ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪರಿಸ್ಥಿತಿ ಅತಿರೇಕಕ್ಕೆ ಹೋಗುತ್ತಿದೆ. ಧರ್ಮ ಹುಟ್ಟಿರುವುದೇ ವಿಶ್ವದಲ್ಲಿ ಶಾಂತಿ, ಸೌಹಾರ್ದದ ಸ್ಥಾಪನೆಗಾಗಿ. ಆದರೆ, ನಾವು ಧರ್ಮವನ್ನು ಹಿಂಸೆಗಾಗಿ, ಸಮಾಜ, ದೇಶ, ವಿಶ್ವವನ್ನು ಒಡೆಯಲು ಬಳಸುತ್ತಿದ್ದೇವೆ. ಇದಕ್ಕಿಂತ ಘೋರ ದುರಂತ ಮತ್ತೊಂದಿಲ್ಲ. ಈಗ ಭಾರತದಲ್ಲಿ ಇರುವ ಮುಸ್ಲಿಮರು ಯಾವ ಊರಿನವರು? ಅವರೇನು ಅರಬ್ ರಾಷ್ಟ್ರದಿಂದ ಬಂದಿದ್ದಾರೆಯೇ? ಈ ದೇಶದಲ್ಲಿರುವ ಎಲ್ಲ ಮುಸ್ಲಿಮರದ್ದು ಭಾರತದ ರಕ್ತವೇ. ಯಾವುದೋ ಸಂದರ್ಭದಲ್ಲಿ ಮತಾಂತರವಾಗಿದ್ದಾರೆ. ಆವತ್ತಿನ ದಾಸಪ್ಪ ಇವತ್ತು ಜೋಸೆಫ್ ಆಗಿದ್ದರೆ, ಮರಿಯಮ್ಮ ಮೇರಿ ಆಗಿದ್ದಾಳೆ. ಹೀಗಾಗಿ ಈ ದೇಶದಲ್ಲಿ ಇರುವ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ನಮ್ಮವರೇ. ನಮ್ಮೆಲ್ಲರ ಮೂಲ ರಕ್ತ ಒಂದೇ. ಒಬ್ಬರನ್ನು ಒಬ್ಬರು ಪ್ರೀತಿಸಿ, ನಮ್ಮಲ್ಲಿಯ ಲೋಪ ಕಳೆದುಕೊಂಡು ಬದುಕಬೇಕು. ಈಗಾಗಲೇ ಕೋಮು, ಜಾತಿ ಆಧಾರದ ವಿಭಜನೆಯಿಂದ ಸಾಕಷ್ಟು ಅನುಭವಿಸಿದ್ದೇವೆ. ಇಡೀ ಜಗತ್ತು ನೋವು ಉಂಡಿದೆ. ಮನುಷ್ಯರಿಗೆ ಶಾಂತಿ ಬೇಕಾಗಿದೆ. ಕೊರೊನಾ, ಬಡತನ, ಜಾತಿಯತೆ, ಅಸ್ಪೃಶ್ಯತೆ, ಸಂಕಷ್ಟಗಳ ವಿರುದ್ಧ ಹೋರಾಟ ಮಾಡೋಣ. ಮಾನವಿಯ ನೆಲೆಗಟ್ಟಿನ ಮೇಲೆ ಸುಂದರ ವಿಶ್ವವನ್ನು ಕಟ್ಟೋಣ ಎಂದು ಕರೆ ನೀಡಿದರು.

ಇದನ್ನೂ ಓದಿ: ಶಾಲಾ ಸಮವಸ್ತ್ರದಂತೆ ಆಹಾರದಲ್ಲಿಯೂ ಏಕತೆ ಬೇಕು, ಸಸ್ಯಾಹಾರ ಇರಲಿ -ಮೊಟ್ಟೆ ಬೇಡ: ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟ ಆಶಯ

ಇದನ್ನೂ ಓದಿ: ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ -ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ