ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ : ನಳೀನ್​​ ಕುಮಾರ್​ ಕಟೀಲ್​

| Updated By: ವಿವೇಕ ಬಿರಾದಾರ

Updated on: Sep 26, 2022 | 4:54 PM

ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ ಎಂದು ಇಳಕಲ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ : ನಳೀನ್​​ ಕುಮಾರ್​ ಕಟೀಲ್​
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್
Follow us on

ಬಾಗಲಕೋಟೆ: ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ (Siddaramaiah) ಜೈಲು ಸೇರುತ್ತಾರೆ ಎಂದು ಇಳಕಲ್​ನಲ್ಲಿ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ. ಅರ್ಕಾವತಿ ರೀ-ಡೂ ಕೇಸ್​ನಲ್ಲಿ ಇರುವವರೆಲ್ಲರೂ ಜೈಲಿಗೆ ಹೋಗುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಅರ್ಕಾವತಿ ಮಾತ್ರವಲ್ಲ, ಹಾಸಿಗೆ ದಿಂಬು ಖರೀದಿಯಲ್ಲೂ ಅಕ್ರಮ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ತನಿಖೆ ಯಾಕೆ ಮಾಡಿಲ್ಲ ಎಂಬ ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಅವಧಿಯ ಹಗರಣಗಳ ಬಗ್ಗೆ ದಾಖಲೆಗಳನ್ನು ಮುಚ್ಚಿಟ್ಟಿದ್ದಾರೆ. ದಾಖಲೆಗಳನ್ನು ಹುಡುಕಲು ನಮಗೆ ತುಂಬಾ ಕಷ್ಟವಾಗಿದೆ ಎಂದು ತಿಳಿಸಿದರು.

ಅರ್ಕಾವತಿ ಹಗರಣದ ತನಿಖೆಯನ್ನ ನಾವು ಪೂರ್ಣಗೊಳಿಸುತ್ತೇವೆ. ಲೋಕಾಯುಕ್ತದ ಮೂಲಕ 52 ಪ್ರಕರಣಗಳು ಹೊರಗೆ ಬರುತ್ತವೆ. ಅರ್ಕಾವತಿಯ ಹಗರಣದ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಎಲ್ಲ ತನಿಖೆಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ PFI, SDPI ನಿಷೇಧಿಸಲು ದಾಖಲೆ ಸಂಗ್ರಹಿಸಲಾಗುತ್ತಿದೆ. ಒಂದು ರಾಜ್ಯದಲ್ಲಿ ನಿಷೇಧಿಸಿದರೆ ತಕ್ಷಣ ಕೋರ್ಟ್​ಗೆ ಹೋಗುತ್ತಾರೆ. ಹಾಗಾಗಿ PFI, SDPI ನಿಷೇಧಿಸಲು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಭಯೋತ್ಪಾದನಾ ಚಟುವಟಿಕೆ ವಿಚಾರ ಇಟ್ಟುಕೊಂಡು ನಿಷೇಧಿಸಬೇಕಿದೆ. ಅದು ರಾಜಕೀಯ ಪಾರ್ಟಿ ಹೌದು, ಚುನಾವಣಾ ಆಯೋಗ ಸಹ ಅದನ್ನು ಗಮನಿಸುತ್ತಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ 1 ರೂ.ಗೆ 15 ಡಾಲರ್ ಆಗುತ್ತೆ ಎಂದು ತಾವು ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ 60 ವರ್ಷ ಆಳ್ವಿಕೆ ಮಾಡಿ ಭಿಕ್ಷುಕ ರಾಷ್ಟ್ರ ಮಾಡಿದ್ದರು. ಭಾರತವನ್ನು ಸಾಲಗಾರರ ದೇಶ, ಹಾವಾಡಿಗರ ದೇಶ ಮಾಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಭಾರತ ಮಾಡುತ್ತಿದ್ದಾರೆ. ಇವತ್ತು ಶ್ರೀಲಂಕಾ ಹಾಗೂ ಪಾಕಿಸ್ತಾನದ ಪರಿಸ್ಥಿತಿ ಏನಾಗಿದೆ ?ಅದರ ಮಧ್ಯೆಯೂ ಭಾರತ ಪುಟಿದೇಳುತ್ತಿದೆ. ಇನ್ನೂ 10 ವರ್ಷ ಕಾದು ನೋಡಿ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:54 pm, Mon, 26 September 22