ಚಂದ್ರದ್ರೋಣ ಪರ್ವತ ಚಾರಣ ದುರಂತದ ಎಫೆಕ್ಟ್: ಇನ್ನೂ ಆರಂಭವಾಗದ ಟ್ರೆಕಿಂಗ್, ಚಾರಣ ಪ್ರಿಯರ ಪರದಾಟ!
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಚಾರಣ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಟ್ರೆಕಿಂಗ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಸುರಕ್ಷತೆಗಾಗಿ ಅರಣ್ಯ ಇಲಾಖೆ ಜಾರಿಗೆ ತಂದಿರುವ ಹೊಸ ಎಸ್ಒಪಿ (SOP) ನಿಯಮಗಳ ಅನುಷ್ಠಾನ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಸ್ಕಂದಗಿರಿ, ಕೈವಾರ ಬೆಟ್ಟ ಸೇರಿದಂತೆ ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಚಾರಣ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಟ್ರೆಕಿಂಗ್ ಪ್ರಿಯರು ಪರದಾಡುವಂತಾಗಿದ್ದು, ಚಾರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು
- ಚಂದ್ರದ್ರೋಣ ಪರ್ವತ ಚಾರಣ ದುರಂತದ ನಂತರ ರಾಜ್ಯಾದ್ಯಂತ ಟ್ರೆಕಿಂಗ್ ನಿಷೇಧ
- ಹೊಸ ಎಸ್ಒಪಿ ನಿಯಮಗಳ ಅನುಷ್ಠಾನ ವಿಳಂಬದಿಂದ ಚಾರಣಿಗರ ತೀವ್ರ ಪರದಾಟ
- ಸ್ಕಂದಗಿರಿ ಹಾಗೂ ಕೈವಾರ ಬೆಟ್ಟಗಳಲ್ಲೂ ಸದ್ಯಕ್ಕೆ ಚಾರಣ ಚಟುವಟಿಕೆಗಳು ಸ್ಥಗಿತ
ಬೆಂಗಳೂರು, ಜುಲೈ 14: ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಡೆದ ಚಾರಣ (Trekking) ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಟ್ರೆಕಿಂಗ್ ಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. ಚಾರಣಿಗರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೆ ತರುವವರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಇಷ್ಟು ದಿನ ಕಳೆದರೂ ಎಸ್ಒಪಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದ ಕಾರಣ ರಾಜ್ಯದ ಹಲವೆಡೆ ಟ್ರೆಕಿಂಗ್ ಇನ್ನೂ ಆರಂಭವಾಗಿಲ್ಲ. ಇದು ಚಾರಣ ಪ್ರಿಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ದುರಂತದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದನಾ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾಗಿದ್ದರು. ಈ ಘೋರ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಹೊಸ ಎಸ್ಒಪಿ ಜಾರಿಗೆ ತಂದಿದೆ. ಆದರೆ, ಇದರ ಅನುಷ್ಠಾನ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಚಂದ್ರದ್ರೋಣ ಪರ್ವತದ ಜೊತೆಗೆ ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳಲ್ಲೂ ಚಾರಣ ಚಟುವಟಿಕೆಗಳು ಇನ್ನೂ ಸ್ಥಗಿತಗೊಂಡಿವೆ.
ಇದನ್ನೂ ಓದಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ
ಹೊಸ ಎಸ್ಒಪಿಯ ಕಠಿಣ ನಿಯಮಗಳೇನು?
ಚಿಕ್ಕಬಳ್ಳಾಪುರ ಡಿಎಫ್ಒ ಗಿರೀಶ್ ಅವರು ನೀಡಿರುವ ಮಾಹಿತಿ ಪ್ರಕಾರ, ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳಲ್ಲಿ ಪ್ರತಿದಿನ ಸುಮಾರು 150 ಜನರಿಗೆ ಚಾರಣಕ್ಕೆ ಅವಕಾಶವಿತ್ತು. ಆದರೆ ಹೊಸ ನಿಯಮಗಳ ಅನುಷ್ಠಾನವಾಗದ ಕಾರಣ ಈಗ ನಿರ್ಬಂಧ ಮುಂದುವರಿದಿದೆ. ನೂತನ ನಿಯಮಗಳು ಈ ಕೆಳಗಿನಂತಿವೆ:
- ಪ್ರತಿ 10 ಮಂದಿ ಚಾರಣಿಗರಿಗೆ ಒಬ್ಬ ಗೈಡ್ ಕಡ್ಡಾಯ ಹಾಗೂ ಗೈಡ್ ಬಳಿ ಫಸ್ಟ್ ಎಯ್ಡ್ ಕಿಟ್, ಟಾರ್ಚ್ ಇರಬೇಕು.
- ಚಾರಣದ ಅವಧಿಯಲ್ಲಿ ಗೈಡ್ ಮತ್ತು ಚಾರಣಿಗರು ಬೇಸ್ ಕ್ಯಾಂಪ್ನೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
- ಟ್ರೆಕಿಂಗ್ ಮಾರ್ಗದ ಕೆಎಂಎಲ್ (KML) ಫೈಲ್ಗಳನ್ನು ಚಾರಣಿಗರ ಮೊಬೈಲ್ನಲ್ಲಿ ಅಪ್ಲೋಡ್ ಮಾಡಬೇಕು.
- ನೆಟ್ವರ್ಕ್ ಇಲ್ಲದ ಬ್ಲ್ಯಾಕ್ ಸ್ಪಾಟ್ಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು.
- 60 ವರ್ಷ ಮೇಲ್ಪಟ್ಟವರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಕಡ್ಡಾಯವಾಗಿದೆ.
ನೂತನ ಎಸ್ಒಪಿಯ ಎಲ್ಲಾ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಬಳಿಕವೇ ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳು ಸೇರಿದಂತೆ ರಾಜ್ಯದ ಹಲವು ಟ್ರೆಕಿಂಗ್ ಸ್ಪಾಟ್ಗಳಲ್ಲಿ ಮತ್ತೆ ಟ್ರೆಕಿಂಗ್ ಚಟುವಟಿಕೆ ಆರಂಭವಾಗಲಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ವಿಳಂಬ ನೀತಿಯಿಂದ ಬೇಸತ್ತಿರುವ ಚಾರಣ ಪ್ರಿಯರು ಶೀಘ್ರವಾಗಿ ಸಿದ್ಧತೆ ಮುಗಿಸಿ ಚಾರಣಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




