ಬಾಗಲಕೋಟೆಯಲ್ಲೊಂದು ವಿಶಿಷ್ಟ ಜಾತ್ರಾ ಮಹೋತ್ಸವ; ಪಲಕ್ಕಿಗೆ ತೆಂಗಿನಕಾಯಿ ಎಸೆಯುವುದರ ಹಿಂದಿನ ಕಾರಣ ಏನು ಗೊತ್ತಾ?
ಅಕ್ಕಪಕ್ಕದ ಎಲ್ಲಾ ಜನರು ಮೇಲೆ ಕಾಯಿ ತೂರುತ್ತಿದ್ದರೆ ಕೆಳಗೆ ಜನರು ಕಾಯಿ ತೆಗೆದುಕೊಳ್ಳುವುದಕ್ಕೆ ಸಾಹಸ ಮಾಡುತ್ತಾರೆ. ತಮ್ಮ ಹರಕೆಯಂತೆ ಕಾಯಿ ತೂರಿ, ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕಾಯಿ ಎಸೆಯುವುದು ನಡೆಯುತ್ತದೆ.

ಬಾಗಲಕೋಟೆ: ಜಾತ್ರೆ ಅಂದರೆ ಅಲ್ಲಿ ಸಾಮಾನ್ಯವಾಗಿ ತೇರು ಇಲ್ಲವೇ ಪಲ್ಲಕ್ಕಿಗೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಹೂ, ಎಸೆಯುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಬಾಗಲಕೋಟೆಯಲ್ಲಿ ನಡೆಯುವ ಜಾತ್ರೆಯೇ ವಿಶೇಷ. ಇದಕ್ಕೆ ಕಾರಣ ಇಲ್ಲಿ ಭಕ್ತರು ತೆಂಗಿನಕಾಯಿಗಳನ್ನು ಎಸೆಯುತ್ತಾರೆ. ಒಬ್ಬರು, ಇಬ್ಬರು ಅಲ್ಲ, ಬದಲಿಗೆ ಸಾವಿರಾರು ಜನರು ತೆಂಗಿನಕಾಯಿ ಎಸೆಯುತ್ತಾರೆ. ತೆಂಗಿನಕಾಯಿ (Coconut) ಎಸೆಯುವುದೇ ಈ ಜಾತ್ರೆಯ ವಿಶೇಷ. ಆಗಸದೆತ್ತರಕ್ಕೆ ಭಕ್ತರು ತೆಂಗಿನಕಾಯಿ ಎಸೆಯುತ್ತಾರೆ ಮತ್ತೊಂದು ಕಡೆ ಎಸೆದಿರುವ ಕೆಲ ಭಕ್ತರು ತೆಂಗಿನಕಾಯಿ ಪ್ರಸಾದವಾಗಿ ತೆಗೆದುಕೊಳ್ಳುತ್ತಾರೆ. ಇದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಮಾರುತೇಶ್ವರ ಜಾತ್ರೆಯ ವೈಶಿಷ್ಟ್ಯ.
ಸೂಳಿಕೇರಿ ಗ್ರಾಮದ ಮಾರುತೇಶ್ವರ ದೇವರ ಜಾತ್ರಾ ಮಹೋತ್ಸವ ಸಮಯದಲ್ಲಿ ಉತ್ತತ್ತಿ, ಹೂ, ಹಣ್ಣು ಎಸೆಯುವುದಿಲ್ಲ. ಬದಲಾಗಿ ತೆಂಗಿನಕಾಯಿ ಎಸೆಯಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸ ಹುಣ್ಣಿಮೆ ದಿನದಂದು ಇಲ್ಲಿನ ಜಾತ್ರೆ ನಡೆಯುತ್ತದೆ. ನೂರಾರು ವರ್ಷಗಳ ಇತಿಹಾಸ ಇರುವ ಈ ಮಾರುತೇಶ್ವರ ದೇವಾಲಯಕ್ಕೆ ತೆಂಗಿನಕಾಯಿ ಎಸೆಯುವುದು ವಿಶೇಷವಾಗಿದ್ದು, ರಾಜ್ಯದಲ್ಲಿಯೇ ಇಂತಹ ಜಾತ್ರೆ ಎಲ್ಲಿಯೂ ನಡೆಯುವುದಿಲ್ಲ.
ಇನ್ನು ಜಾತ್ರೆಯ ನಿಮಿತ್ಯ ಮಾರುತೇಶ್ವರ ದೇವರಿಗೆ ವಿಶೇಷ ಪೂಜೆ ಪುರಸ್ಕಾರ ನಡೆಯುತ್ತದೆ. ಸಂಜೆ ಸಮಯದಲ್ಲಿ ಜಾತ್ರೆ ನಡೆಯುತ್ತದೆ. ಗೋಧೋಳಿ ಸಮಯದಲ್ಲಿ ನಡೆಯುವ ಜಾತ್ರೆಯ ಮುಂಚೆ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾ ದೇವಾಲಯಕ್ಕೆ ಪಲ್ಲಕ್ಕಿ ಕರೆತರಲಾಗುತ್ತದೆ. ನಂತರ ಐದು ಸುತ್ತು ದೇವಾಲಯ ಪ್ರದರ್ಶನ ಹಾಕಿದ ಬಳಿಕ ಭಕ್ತರು, ತೆಂಗಿನಕಾಯಿ ಎಸೆಯುವುದಕ್ಕೆ ಪ್ರಾರಂಭಿಸುತ್ತಾರೆ.
ತೆಂಗಿನಕಾಯಿ ತರುವುದೇ ಹರಕೆ ಇಲ್ಲಿ ಭಕ್ತರು ತೆಂಗಿನಕಾಯಿ ತೂರೋದಕ್ಕೆ ಪ್ರಮುಖ ಕಾರಣ ಬೇಡಿಕೊಂಡ ಹರಕೆ. ಭಕ್ತರು ತಮ್ಮ ಕೌಟುಂಬಿಕ ವೈಯಕ್ತಿಕ ಸಮಸ್ಯೆ ತೊಂದರೆ ನಿವಾರಣೆ ಆಗಲಿ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆದರೆ ಐವತ್ತು, ನೂರು, ಸಾವಿರ ತೆಂಗಿನಕಾಯಿ ತೂರುತ್ತೇನೆ ಎಂದು ಹರಕೆ ಹೊತ್ತಿರುತ್ತಾರೆ. ಆ ಪ್ರಕಾರ ಹರಕೆ ತೀರಿಸಲು ತೆಂಗಿನಕಾಯಿ ಎಸೆಯುತ್ತಾರೆ. ತಮ್ಮ ಹರಕೆಯಂತೆ ಎಷ್ಟು ಕಾಯಿ ಎಸೆಯಲು ಬೇಡಿಕೊಂಡಿರುತ್ತಾರೋ ಅಷ್ಟು ಕಾಯಿಯನ್ನು ಗೋಪುರ ಮೇಲೆ ಎಸೆಯುತ್ತಾರೆ.
ಅಕ್ಕಪಕ್ಕದ ಎಲ್ಲಾ ಜನರು ಮೇಲೆ ಕಾಯಿ ತೂರುತ್ತಿದ್ದರೆ ಕೆಳಗೆ ಜನರು ಕಾಯಿ ತೆಗೆದುಕೊಳ್ಳುವುದಕ್ಕೆ ಸಾಹಸ ಮಾಡುತ್ತಾರೆ. ತಮ್ಮ ಹರಕೆಯಂತೆ ಕಾಯಿ ತೂರಿ, ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕಾಯಿ ಎಸೆಯುವುದು ನಡೆಯುತ್ತದೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಕಾಯಿ ಬಿದ್ದು, ತಲೆಗೆ ಪೆಟ್ಟು ಆದ ಬಗ್ಗೆ ವರದಿಯಾಗಿಲ್ಲ ಎಂಬುವುದೇ ದೇವರ ಶಕ್ತಿ ಎನ್ನುವುದು ಭಕ್ತರ ಅಚಲ ನಂಬಿಕೆ.
ತಲ ತಲಾಂತರಗಳಿಂದ ಹಿರಿಕರು ನಡೆಸಿಕೊಂಡ ಬಂದಿರುವ ಸಂಪ್ರದಾಯ ಈ ಕಾಯಿ ಎಸೆಯುವುದು. ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದ್ದೇವೆ. ಈ ತೆಂಗಿನಕಾಯಿ ಎಸೆಯುವ ಪದ್ಧತಿ ಹರಕೆ ಅಂತ ಶುರುವಾಗಿದೆ. ಭಕ್ತಿಯಿಂದ ಬೇಡಿಕೊಂಡ ಭಕ್ತರ ಬೇಡಿಕೆ ಈಡೇರುವುದು ಪಕ್ಕಾ ಎಂದು ಸ್ಥಳೀಯದಾದ ಬಿಕೆ ಪಾಟಿಲ್ ಹೇಳಿದ್ದಾರೆ.
ವರದಿ: ರವಿ ಮೂಕಿ
ಇದನ್ನೂ ಓದಿ: ಜಾತ್ರೆಯಲ್ಲೂ ಅಪ್ಪು ಅಭಿಮಾನದ ಹೊಳೆ; ‘ಮತ್ತೆ ಹುಟ್ಟಿ ಬನ್ನಿ’ ಎಂದು ವಿಶೇಷವಾಗಿ ಪ್ರಾರ್ಥಿಸಿದ ಫ್ಯಾನ್ಸ್
ಇಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಜಾತ್ರೆ ಮುಗಿಯುತ್ತೆ, ಚರ್ಮ ಸಮಸ್ಯೆ ಇರುವವರು ದರ್ಶನ ಮಾಡದೆ ಹೋಗಲ್ಲ




