ಸಾರ್ವಜನಿಕರ ವಿರೋಧದ ನಡುವೆಯೂ ಬಳ್ಳಾರಿ ಏರ್ ಪೋರ್ಟ್ ಕಾಮಗಾರಿಗೆ ಚಾಲನೆ; ಕೃಷ್ಣದೇವರಾಯ ವಿಮಾನ ನಿಲ್ದಾಣ ಎಂದು ನಾಮಕರಣ!

| Updated By: ಆಯೇಷಾ ಬಾನು

Updated on: Apr 11, 2021 | 7:57 AM

ನೀರಾವರಿ ಪ್ರದೇಶದ ಭೂಮಿಯನ್ನು ವಿಮಾನ ನಿಲ್ದಾಣ ಕಾಮಗಾರಿಗೆ ಬಳಸಿಕೊಳ್ಳುತ್ತಿರುವುದರಿಂದ ಈ ಹಿಂದಿನಿಂದಲೂ ಕೆಲ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಕೋರ್ಟ್ ಮೋರೆ ಹೋಗಿರುವ ರೈತರಿಗೆ. ಕೋರ್ಟ್ ಕೂಡ ಮಧ್ಯಂತರ ಆದೇಶ ನೀಡಿದೆ. ಇದರ ಬೆನ್ನಲ್ಲೆ ಸರ್ಕಾರ ಏರ್ ಪೋರ್ಟ್ ಕಾಮಗಾರಿ ಆರಂಭ ಮಾಡಿದೆ.

ಸಾರ್ವಜನಿಕರ ವಿರೋಧದ ನಡುವೆಯೂ ಬಳ್ಳಾರಿ ಏರ್ ಪೋರ್ಟ್ ಕಾಮಗಾರಿಗೆ ಚಾಲನೆ; ಕೃಷ್ಣದೇವರಾಯ ವಿಮಾನ ನಿಲ್ದಾಣ ಎಂದು ನಾಮಕರಣ!
ಬಳ್ಳಾರಿ ಎರ್​ ಪೋರ್ಟ್ ಕಾಮಗಾರಿಗೆ ಚಾಲನೆ
Follow us on

ಬಳ್ಳಾರಿ: ಜಿಲ್ಲೆಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಬೇಕು ಎನ್ನುವುದು ಮಾಜಿ ಸಚಿವ ಜನಾರ್ಧನರೆಡ್ಡಿಯವರ ಕನಸಿನ ಕೂಸಾಗಿತ್ತು. ಏರ್ ಪೋರ್ಟ್ ನಿರ್ಮಾಣಕ್ಕಾಗಿ ರೈತರಿಂದ ನೂರಾರು ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಕೆಲ ರೈತರ ಪ್ರಬಲ ವಿರೋಧದಿಂದ ಏರ್ ಪೋರ್ಟ್ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿತ್ತು. ಆದರೆ ಈಗ ಏರ್ ಪೋರ್ಟ್ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಶ್ರೀಕೃಷ್ಣದೇವರಾಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.

ಗಣಿನಾಡು ಬಳ್ಳಾರಿ ತಾಲೂಕಿನ ಚಾಗನೂರು-ಸಿರವಾರ ಗ್ರಾಮಗಳ ರೈತರ ಭೂಮಿಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶದಿಂದ ಕಳೆದ ಬಿಜೆಪಿ ಸರ್ಕಾರ 2009ರಲ್ಲಿ 900 ಎಕರೆ ಕೃಷಿ ಭೂಮಿಯನ್ನ ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿತ್ತು. ಆದ್ರೆ ಕೃಷಿ ನೀರಾವರಿ ಭೂಮಿಯನ್ನ ನೀಡಲು ಒಪ್ಪದ ಕೆಲ ರೈತರು ಹೋರಾಟ ಸಮಿತಿ ಕಟ್ಟಿಕೊಂಡು ಅಂದಿನ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು.

ಈ ರೈತರ ಹೋರಾಟ ಈಡೀ ದೇಶದ ಗಮನ ಸೆಳೆದಿತ್ತು. ಅದರಲ್ಲೂ ರೈತರ ಹೋರಾಟದ ನಡುವೆ ಸರ್ಕಾರ ಬಲವಂತವಾಗಿ 780 ಎಕರೆ ಭೂಮಿಯನ್ನ ವಶಪಡಿಸಿಕೊಂಡಿತ್ತು. ಆದರೆ ಛಲಬಿಡದ ರೈತ ಹೋರಾಟಗಾರರು ಹೈಕೋರ್ಟ್ ಮೊರೆ ಹೋಗಿದ್ದರು. ಕೊನೆಗೂ ನ್ಯಾಯಾಲಯದ ತೀರ್ಪು ಕೂಡ ರೈತಪರವಾಗಿಯೇ ಬಂತು. 26 ರೈತರ 80 ಎಕರೆ ಭೂಮಿಯ ನೋಟಿಫಿಕೇಷನ್ ರದ್ದಾಗಿತ್ತು. ಈಗ ಮತ್ತೆ ನೋಟಿಫಿಕೇಷನ್ ರದ್ದಾಗಿರುವ ಭೂಮಿಯನ್ನ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು.ಇದಕ್ಕೂ ಕೂಡ ರೈತರ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರ ಈ ಪ್ರದೇಶದಲ್ಲಿ ಏರ್ ಪೋರ್ಟ್ ನಿರ್ಮಾಣಕ್ಕೆ ಮುಂದಾಗಿದ್ದು, ಏರ್ ಪೋರ್ಟ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಕಾಮಗಾರಿ ಆರಂಭ ಮಾಡಿದೆ. ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ಮೂಲಕ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಮುಂದಾಗಿ ಜಿಲ್ಲೆಯ ಸಾರ್ವಜನಿಕರ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗಿತ್ತು. ಅದನ್ನ ಸರಿದೂಗಿಸಲು ಚಾಗನೂರು- ಸಿರವಾರ ಬಳಿ ಏರ್ ಪೋರ್ಟ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವ ಸರ್ಕಾರ ವಿಮಾನ ನಿಲ್ದಾಣಕ್ಕೆ ಶ್ರೀ ಕೃಷ್ಣದೇವರಾಯರ ಹೆಸರನ್ನ ನಾಮಕರಣ ಮಾಡಿದೆ.

ಕೃಷ್ಣದೇವರಾಯ ವಿಮಾನ ನಿಲ್ದಾಣ ಎಂದು ನಾಮಕರಣ

ದಶಕದ ಬಳಿಕ ಏರ್ ಪೋರ್ಟ್ ಕನಸು ನನಸಾಗುತ್ತಿರುವುದಕ್ಕೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದು, ಏರ್ ಪೋರ್ಟ್ ನಿರ್ಮಾಣ ಜನಾರ್ಧನರೆಡ್ಡಿಯವರ ಕನಸಾಗಿದ್ದು, ಏರ್ ಪೋರ್ಟ್ ನಿರ್ಮಾಣದಿಂದ ಈ ಭಾಗಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಸರ್ವೇ ಕಾರ್ಯ ನಡೆಸಿ ವಿಮಾನ ನಿಲ್ದಾಣ ನಿರ್ಮಾಣ ಹೊಣೆ ಹೊತ್ತ ಚೈನೈ ಮೂಲದ ಮಾರ್ಕ್ ಕಂಪನಿ ಸೈಟ್, ಲೇಬರ್ ಆಫೀಸ್, ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಮಾರ್ಕ್ ಮಾಡಿ ಕಾಮಗಾರಿ ಆರಂಭಿಸಿದೆ. ಈ ಕಾಮಗಾರಿಗೆ ಈಗಾಗಲೇ 150 ಕೋಟಿ ಅನುದಾನವನ್ನ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವುದರಿಂದ ಉದ್ದೇಶಿತ ಜಾಗದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದೆ. ಆದರೆ ಕೆಲ ರೈತರ ವಿರೋಧದ ನಡುವೆಯೂ ಏರ್ ಪೋರ್ಟ್ ಕಾಮಗಾರಿ ಆರಂಭವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಾವರಿ ಪ್ರದೇಶದ ಭೂಮಿಯನ್ನು ವಿಮಾನ ನಿಲ್ದಾಣ ಕಾಮಗಾರಿಗೆ ಬಳಸಿಕೊಳ್ಳುತ್ತಿರುವುದರಿಂದ ಈ ಹಿಂದಿನಿಂದಲೂ ಕೆಲ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಕೋರ್ಟ್ ಮೋರೆ ಹೋಗಿರುವ ರೈತರಿಗೆ. ಕೋರ್ಟ್ ಕೂಡ ಮಧ್ಯಂತರ ಆದೇಶ ನೀಡಿದೆ. ಇದರ ಬೆನ್ನಲ್ಲೆ ಸರ್ಕಾರ ಏರ್ ಪೋರ್ಟ್ ಕಾಮಗಾರಿ ಆರಂಭ ಮಾಡಿದೆ. ಉದ್ದೇಶಿತ ಕಾಮಗಾರಿಯಲ್ಲಿ ನಮ್ಮ ಭೂಮಿ ಬಿಟ್ಟು, ಅವರು ಕೆಲಸ ನಿರ್ವಹಿಸಬೇಕು, ಅದನ್ನು ಬಿಟ್ಟು ನಮ್ಮ ನೀರಾವರಿ ಭೂಮಿಯ ತಂಟೆಗೆ ಬಂದರೇ ನಾವು ಮತ್ತೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಚಾಗನೂರು-ಸಿರವಾರ ನೀರಾವರಿ ಭೂ ಸಂರಕ್ಷಣಾ ಹೋರಾಟ ಸಮಿತಿಯ ಸಂಚಾಲಕ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಭೂಮಿ ಸ್ವಾಧೀನಗೊಂಡು 10-11 ವರ್ಷಗಳು ಕಳೆದರೂ ರೈತರ ವಿರೋಧದಿಂದಾಗಿ ಈ ಪ್ರದೇಶದಲ್ಲಿ ಏರ್ ಪೋರ್ಟ್ ಕಾಮಗಾರಿ ಆರಂಭವಾಗಿರಲಿಲ್ಲ. ಆದರೆ ಈಗಲೂ ಕೆಲ ರೈತರು ಏರ್ ಪೋರ್ಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಈ ವಿವಾದ ನ್ಯಾಯಾಲಯದಲ್ಲಿ ಇನ್ನೂ ಜೀವಂತವಾಗಿ ಇದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಏರ್ ಪೋರ್ಟ್ ನಿರ್ಮಾಣಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದು ಕಾಮಗಾರಿ ಆರಂಭಗೊಂಡಿದೆ. ಆದರೆ ಚಾಗನೂರು-ಸಿರವಾರ ನೀರಾವರಿ ಭೂ ಸಂರಕ್ಷಣಾ ಹೋರಾಟ ಸಮಿತಿ ಏರ್ ಪೋರ್ಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಏರ್​ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ

( Ballari Renamed as Krishnadevaraya Airport and developmental works starts amid oppose from local people)