ಬಳ್ಳಾರಿ: ಕರೆಂಟ್ ಕಂಬವೇರಿದ್ದ ಯುವಕ ವಿದ್ಯುತ್​ ತಗುಲಿ ಧಾರುಣ ಅಂತ್ಯ; ಮುಗಿಲು ಮಟ್ಟಿದ ಕುಟುಂಬಸ್ಥರ ಅಕ್ರಂದನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 31, 2023 | 8:04 PM

ಆತ ತಾನಾಯ್ತು ತನ್ನ ಕೆಲಸವಾಯ್ತು ಎಂದು ಗ್ರಾಮದಲ್ಲಿ ವ್ಯವಸಾಯದ ಜೊತೆ ಸಣ್ಣಪುಟ್ಟ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಆದರೆ, ಇವತ್ತು ಬೆಳ್ಳಂಬೆಳಿಗ್ಗೆ ವಿದ್ಯುತ್ ಲೈನ್ ಚೇಂಜ್ ಮಾಡಲು ಕಂಬ ಏರಿದ್ದೇ ತಪ್ಪಾಗಿ ಹೋಗಿದ್ದು, ಕರೆಂಟ್​ ಶಾಕ್​ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಸುಟ್ಟು ರುಂಡ ಮುಂಡ ಬೇರೆಯಾಗಿ ಹೋಗಿರುವ ದಾರುಣ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ: ಕರೆಂಟ್ ಕಂಬವೇರಿದ್ದ ಯುವಕ ವಿದ್ಯುತ್​ ತಗುಲಿ ಧಾರುಣ ಅಂತ್ಯ; ಮುಗಿಲು ಮಟ್ಟಿದ ಕುಟುಂಬಸ್ಥರ ಅಕ್ರಂದನ
ಬಳ್ಳಾರಿ ವಿದ್ಯುತ್​ ತಗುಲಿ ಯುವಕ ಧಾರುಣ ಅಂತ್ಯ
Follow us on

ಬಳ್ಳಾರಿ, ಆ.31: ಸುಟ್ಟು ಕರಕಲಾಗಿರುವ ಮೃತದೇಹದ ಎದುರು ಕುಟುಂಬಸ್ಥರ ಗೋಳಾಟ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ರೈತರು. ನಿರಂತರವಾಗಿ ವಿದ್ಯುತ್ (Current) ಪಡೆಯಲು ಹೋಗಿ ಜೀವ ಕಳೆದುಕೊಂಡ ಎಲೆಕ್ಟ್ರೀಷಿಯನ್. ಹೌದು, ಬೆಳ್ಳಂಬೆಳಿಗ್ಗೆ ಕುರುಗೋಡು (Kurugodu) ತಾಲೂಕಿನ ದಮ್ಮೂರು ಗ್ರಾಮದ ಜನರು ಕಣ್ಣು ಬಿಡುತ್ತಿದ್ದಂತೆ ಕರೆಂಟ್​ ಕಂಬದ ತಂತಿಯ ಮೇಲೆ ಮೃತ ದೇಹವೊಂದು ತೇಲಾಡುತ್ತಿತ್ತು. ಏನಾಯ್ತು ಅನ್ನುವಷ್ಟರಲ್ಲಿ ಪ್ರಾಣ ಪಕ್ಷ ಹಾರಿ ಹೋಗಿತ್ತು. ಭದ್ರ(33) ಮೃತ ವ್ಯಕ್ತಿ.

ಮೃತ ಭದ್ರ ದಮ್ಮೂರು ಗ್ರಾಮದಲ್ಲಿ ವ್ಯವಸಾಯದ ಜೊತೆಗೆ ಎಲೆಕ್ಟ್ರೀಷಿಯನ್ ಕೆಲಸವನ್ನು ಮಾಡಿಕೊಂಡಿದ್ದನು. ಹೊಲಗಳಿಗೆ ಕೇವಲ ಒಂಭತ್ತು ತಾಸು ಮಾತ್ರ ಸರ್ಕಾರ ವಿದ್ಯುತ್ ನೀಡುತ್ತದೆ. ನಂತರ ಆ ಲೈನ್ ಬಂದಾಗುತ್ತದೆ. ಇನ್ನೊಂದು ಲೈನ್​ನಲ್ಲಿ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಕೆಲವು ರೈತರು ಹೊಲಗಳಿಗೆ ನೀರು ಹರಿಸಲು ನಿರಂತರವಾಗಿ ಕರೆಂಟ್ ಇರುವ ಲೈನಿನ ವೈರ್​ಗೆ ಕನೆಕ್ಷನ್ ಕೊಡಲು ಭದ್ರನಿಗೆ ಹೇಳಿದ್ದಾರೆ. ಆ ಕೆಲಸ ಮಾಡಲು ಭದ್ರ ಕಂಬವೇರೆದ್ದನು. ಆದರೆ, ದಿಢೀರನೇ ಬಂದಾಗಿದ್ದ ಲೈನ್​ನಲ್ಲಿ ವಿದ್ಯುತ್ ಹರಿದ ಪರಿಣಾಮ ಭದ್ರ ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದಾನೆ. ಜೊತೆಗೆ ಆತನ ರುಂಡ ಮುಂಡ ಬೇರೆಯಾಗಿ ಕೆಳಗೆ ಬಿದ್ದಿದೆ.

ಇದನ್ನೂ ಓದಿ:ಬೆಂಗಳೂರು: ರಸ್ತೆಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ತಲೆ ಮೇಲೆ ವಿದ್ಯುತ್​ ತಂತಿ ಬಿದ್ದು ಗಾಯ; ಆಸ್ಪತ್ರೆಗೆ ದಾಖಲು

ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುರುಗೋಡು ಪೊಲೀಸರು ತೆರಳಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೇಲ್ನೋಟಕ್ಕೆ ಹೆಚ್ಚುವರಿ ವಿದ್ಯುತ್​ಗಾಗಿ ಲೈನ್ ಬದಲಾಣೆ ಮಾಡಲು ಹೋಗಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಮೃತ 33 ವರ್ಷದ ಭದ್ರನಿಗೆ ಪತ್ನಿ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಇವರಿಗೆ ಯಾರು ದಿಕ್ಕು ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ. ಅನಧಿಕೃತವಾಗಿ ಕಂಬ ಹತ್ತಿರುವುದು ಭದ್ರ ಅವರ ತಪ್ಪೇ ಅಥವಾ ಅವರನ್ನು ಕಂಬಕ್ಕೆ ಹತ್ತುವಂತೆ ಮಾಡಿದವರ ತಪ್ಪೋ ಗೊತ್ತಿಲ್ಲ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುರುಗೋಡು ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ