ರೆಡ್ಡಿ, ಡಿಕೆಶಿ​ ಮಧ್ಯೆ ಕಾಳಗವಾಗಿ ಬದಲಾಯ್ತಾ ಬ್ಯಾನರ್ ಗಲಾಟೆ? ಭದ್ರತೆ ವಿಚಾರವಾಗಿ ಡಿಸಿಎಂ ವಿರುದ್ಧ ಟೀಕೆ

ಬಳ್ಳಾರಿ ಬ್ಯಾನರ್ ವಿವಾದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ರೆಡ್ಡಿ ಹೇಳಿಕೆಗೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಬ್ಯಾನರ್ ಗಲಾಟೆ ವಿಚಾರವಾಗಿ ರಾಜಕೀಯ ಜಿದ್ದಾಜಿದ್ದಿ ಮುಂದುವರೆದಿದೆ.

ರೆಡ್ಡಿ, ಡಿಕೆಶಿ​ ಮಧ್ಯೆ ಕಾಳಗವಾಗಿ ಬದಲಾಯ್ತಾ ಬ್ಯಾನರ್ ಗಲಾಟೆ? ಭದ್ರತೆ ವಿಚಾರವಾಗಿ ಡಿಸಿಎಂ ವಿರುದ್ಧ ಟೀಕೆ
ಶಾಸಕ ಜನಾರ್ದನ ರೆಡ್ಡಿ, ಡಿಕೆ ಶಿವಕುಮಾರ್​

Updated on: Jan 18, 2026 | 3:52 PM

ಬೆಂಗಳೂರು, ಜನವರಿ 18: ‘ನೀನು ಏನು ಕಿಸಿಯೋದಕ್ಕೆ ಇವತ್ತು ರಾಜ್ಯದ ಉಪಮುಖ್ಯಮಂತ್ರಿಯಾಗಿ ಇಲ್ಲಿದ್ದೀಯಾ? ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಶನಿವಾರ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ಮಾಡಿದ್ದರು. ಇದೇ ವಾಗ್ದಾಳಿ ಈಗ ಕಾಂಗ್ರೆಸ್ ನಾಯಕರನ್ನ ಕೆರಳಿಸಿದೆ. ರೆಡ್ಡಿ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬ್ಯಾನರ್ ಗಲಾಟೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಳ್ಳಾರಿ ಗಲಾಟೆ ವಿಚಾರಾಗಿಯೇ ಡಿಕೆ ಶಿವಕುಮಾರ್​​ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರ್​ಸ್ವಾಮಿ​ ಮಧ್ಯೆ ವಾಗ್ಯುದ್ಧ ನಡೆದಿತ್ತು. ಇದೀಗ ಇದೇ ಮಾತಿನ ಯುದ್ಧ ಡಿಕೆ ಶಿವಕುಮಾರ್​ ವರ್ಸಸ್ ಜನಾರ್ದನ ರೆಡ್ಡಿ ಕಡೆಗೆ ತಿರುಗಿದೆ.

ಇದನ್ನೂ ಓದಿ: ಡಿಕೆಶಿಗೆ ನಿಂದನೆ ಆರೋಪ: ‘ಕೈ’ ಕಾರ್ಯಕರ್ತರಿಂದ ಜನಾರ್ದನ ರೆಡ್ಡಿ ಮನೆಗೆ ಮುತ್ತಿಗೆ ಯತ್ನ

ಜನವರಿ 17ರಂದು ಬಳ್ಳಾರಿಯಲ್ಲಿ ಕೇಸರಿ ಪಡೆ ನಾಯಕರು ಗರ್ಜಿಸಿದ್ದರು. ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಸಮಾವೇಶದಲ್ಲಿ ಮಾತನಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಗುಡುಗಿದ್ದರು. ರೆಡ್ಡಿಗೆ ಭದ್ರತೆ ನೀಡೋ ವಿಚಾರವಾಗಿ ಮಾತನಾಡಿದ್ದ ಡಿಕೆ ಶಿವಕುಮಾರ್​​ ಅಮೆರಿಕದಿಂದ ಬೇಕಾದ್ರೂ ಭದ್ರತೆ ತೆಗೆದುಕೊಳ್ಳಲಿ ಎಂದಿದ್ದರು. ಇದಕ್ಕೆ ನಿನ್ನೆ ತಿರುಗೇಟು ಕೊಟ್ಟಿದ್ದ ಜನಾರ್ದನ ರೆಡ್ಡಿ, ನೀನು ಏನ್ ಕಿಸಿಯೋಕೆ ಇದ್ಯಾ ಅಂತಾ ಪ್ರಶ್ನಿಸಿದ್ದಾರೆ.

ಸದ್ಯ ಶಾಸಕ ಜನಾರ್ದನ ರೆಡ್ಡಿ ಆಡಿದ ಮಾತು ಕಾಂಗ್ರೆಸ್ ಕಾರ್ಯಕರ್ತರನ್ನ ಕೆರಳಿಸಿದೆ. ಬೆಂಗಳೂರಿನಲ್ಲಿರುವ ರೆಡ್ಡಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದು. ದೊಡ್ಡ ಹಂಗಾಮವೇ ನಡೆದಿದೆ. ಇನ್ನೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ ಮನೋಹರ್ ರೆಡ್ಡಿ ನನ್ನ ಮುಂದೆ ಬರಲಿ ಅಂತಾ ಸವಾಲ್ ಹಾಕಿದ್ದಾರೆ.

ರೆಡ್ಡಿ ವರ್ಸಸ್ ಸಿಎಂ ಮಧ್ಯೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ವಾರ್! 

ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ವಾಗ್ದಾಳಿ ನಡೆಸುತ್ತಿದ್ದ ಕೈ ನಾಯಕರಿಗೆ ತಿರುಗೇಟು ಕೊಟ್ಟಿರುವ ಜನಾರ್ದನ ರೆಡ್ಡಿ, ಇಡೀ ಕರ್ನಾಟಕವನ್ನೇ ಕಾಂಗ್ರೆಸ್ ರಿಪಬ್ಲಿಕ್ ಮಾಡಿದೆ ಅಂತಾ ಗುಡುಗಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತರೇ ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ಬರೆದಿದ್ದಾರೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಸರ್ಕಾರದ ವಿರುದ್ಧ ಗುಡುಗಿದ ಕೇಸರಿ ಪಡೆ

ಬ್ಯಾನರ್ ಗಲಾಟೆ ವಿಚಾರವಾಗಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದ್ದರೆ, ಮತ್ತೊಂದ್ಕಡೆ ಮೂವರು ಗನ್‌ಮ್ಯಾನ್‌ಗಳನ್ನ ಬಂಧಿಸಿರುವ ಸಿಐಡಿ, ತನಿಖೆ ಚುರುಕುಗೊಳಿಸಿದೆ. ರಾಜಶೇಖರ್ ಗುರಿಯಾಗಿಸಿ ಫೈರಿಂಗ್ ಮಾಡಿಲ್ಲವೆಂದು ಬಂಧಿತರ ಹೇಳಿಕೆ ನೀಡಿದ್ದಾರೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.