ಬಳ್ಳಾರಿ: ಬಾಲಕಿಯರ ಸರ್ಕಾರಿ ವಸತಿ ಶಾಲೆಗಿಲ್ಲ ಕಟ್ಟಡ, ಹಳೆಯ ಚಿತ್ರ ಮಂದಿರವೇ ಆಸರೆ

ಚಿತ್ರಮಂದಿರದ ಮಾಲೀಕರಿಗೆ ಸರಕಾರ ವರ್ಷಕ್ಕೆ 1.20 ಲಕ್ಷ ರೂ. ಬಾಡಿಗೆ ನೀಡುತ್ತಿದೆ. 2-3 ತರಗತಿಗಳು ಏಕಕಾಲಕ್ಕೆ ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತಿದೆ. ಶಾಲೆಯಲ್ಲಿ ಆಟದ ಮೈದಾನವಿಲ್ಲ, ಮುಖ್ಯರಸ್ತೆಯ ಬಳಿ ವಿದ್ಯಾರ್ಥಿಗಳು ಆಟವಾಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರಿದ್ದಾರೆ.

ಬಳ್ಳಾರಿ: ಬಾಲಕಿಯರ ಸರ್ಕಾರಿ ವಸತಿ ಶಾಲೆಗಿಲ್ಲ ಕಟ್ಟಡ, ಹಳೆಯ ಚಿತ್ರ ಮಂದಿರವೇ ಆಸರೆ
ಸಾಂದರ್ಭಿಕ ಚಿತ್ರ

Updated on: Dec 07, 2023 | 5:42 PM

ಬಳ್ಳಾರಿ, ಡಿಸೆಂಬರ್ 7: ಹಿಂದೆ ಚಲನಚಿತ್ರ ಮಂದಿರವಾಗಿದ್ದ (Film Theater) ಕಟ್ಟಡ ಈಗ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಬಾಲಕಿಯರ ಸರ್ಕಾರಿ ವಸತಿ (Girls Residential School) ಶಾಲೆಯಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೂರು ವರ್ಷಗಳ ಹಿಂದೆ 6 ರಿಂದ 10 ನೇ ತರಗತಿಯ ವಸತಿ ಶಾಲೆಯನ್ನು ಪ್ರಾರಂಭಿಸಿದ್ದು, ವಸತಿ ಶಾಲೆಯಲ್ಲಿ 226 ಬಾಲಕಿಯರಿದ್ದಾರೆ.

ಮೊದಲು ಚಿಕ್ಕ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಶಾಲಾ ಆಡಳಿತ ಸಮಿತಿ ದೊಡ್ಡ ಕಟ್ಟಡ ಹುಡುಕತೊಡಗಿತು. ಕೊನೆಗೆ ಐದು ವರ್ಷಗಳ ಹಿಂದೆ ಮುಚ್ಚಿದ್ದ ಚಿತ್ರಮಂದಿರವನ್ನು ಖಾಲಿ ಮಾಡಿಸಿ ಅದನ್ನೇ ಶಾಲೆಗೆ ಬಳಸಿಕೊಳ್ಳಲು ಆಡಳಿತ ಮಂಡಳಿ ಸದಸ್ಯರು ಸಮ್ಮತಿಸಿದ್ದಾರೆ.

ಸಮಿತಿಯು ಶಾಲಾ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಿದ್ದರೂ ಸರಕಾರದಿಂದ ಯಾವುದೇ ನೆರವು ಬಂದಿಲ್ಲ ಎಂದು ಶಾಲೆಯ ಕೆಲ ಶಿಕ್ಷಕರು ಆರೋಪಿಸಿದ್ದಾರೆ.

ಮಕ್ಕಳು ಹಳೆ ಚಿತ್ರಮಂದಿರದಲ್ಲಿ ವಾಸ ಮತ್ತು ಓದುವ ಅನಿವಾರ್ಯತೆ ಎದುರಾಗಿದೆ ಎಂದು ಕುರುಗೋಡು ನಿವಾಸಿ, ಸಾಮಾಜಿಕ ಕಾರ್ಯಕರ್ತ ಬಸವರಾಜ ಎಂ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಹಿಂದೆ ಹಳೆಯದಾದ ಚಿಕ್ಕ ಕಟ್ಟಡವೊಂದರಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದಾಗ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸಮಿತಿ ಸದಸ್ಯರು ಹೊಸ ಕಟ್ಟಡಕ್ಕೆ ತೆರಳದೆ ಹಳೆಯ ಚಿತ್ರ ಮಂದಿರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಚಿತ್ರಮಂದಿರದ ಮಾಲೀಕರಿಗೆ ಸರಕಾರ ವರ್ಷಕ್ಕೆ 1.20 ಲಕ್ಷ ರೂ. ಬಾಡಿಗೆ ನೀಡುತ್ತಿದೆ. 2-3 ತರಗತಿಗಳು ಏಕಕಾಲಕ್ಕೆ ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತಿದೆ. ಶಾಲೆಯಲ್ಲಿ ಆಟದ ಮೈದಾನವಿಲ್ಲ, ಮುಖ್ಯರಸ್ತೆಯ ಬಳಿ ವಿದ್ಯಾರ್ಥಿಗಳು ಆಟವಾಡುತ್ತಾರೆ ಎಂದು ಬಸವರಾಜ ಅವರು ದೂರಿದ್ದಾರೆ.

‘ನಾವು ಹಲವು ಬಾರಿ ಜ್ಞಾಪಕ ಪತ್ರ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯನ್ನು ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿಲ್ಲ. ಪರಿಣಾಮವಾಗಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿಯೊಂದಿಗೆ ಕುಣಿದ ಮಾಜಿ ಸಚಿವ ಬಿ ಶ್ರೀರಾಮುಲು

ಕುರುಗೋಡು ಪಟ್ಟಣದ ಹೊರವಲಯದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ನಾಲ್ಕು ಎಕರೆ ಜಾಗ ಮಂಜೂರಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ರೆಸಿಡೆನ್ಶಿಯಲ್ ಎಜುಕೇಶನಲ್ ಇನ್‌ಸ್ಟಿಟ್ಯೂಶನಲ್ ಸೊಸೈಟಿಯ (ಕೆಆರ್‌ಇಐಎಸ್) ಅಧಿಕಾರಿಯೊಬ್ಬರು ಶಾಲೆಯು ಶೀಘ್ರದಲ್ಲೇ ನೂತನ ಕಟ್ಟಡವನ್ನು ಹೊಂದಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us