ಬಳ್ಳಾರಿ: ದಶಕಗಳ ರೈತರ ಹೋರಾಟಕ್ಕೆ ಕೊನೆಗೂ ದೊರೆತ ನ್ಯಾಯ, ಎಕರೆ ಭೂಮಿಗೆ 30 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ ಸುಪ್ರೀಂಕೋರ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 27, 2023 | 7:51 AM

ಜಿಲ್ಲೆಯ ಸಂಡೂರು ತಾಲೂಕಿನ ಸುತ್ತಲಿನ 13 ಸಾವಿರ ಎಕರೆ ಭೂಮಿಯನ್ನ ಸರ್ಕಾರ ಕೆಐಎಡಿಬಿ(KIADB) ಮೂಲಕ ವಶಪಡಿಸಿಕೊಂಡಿದ್ದು, ಸೂಕ್ತ ಬೆಲೆ ನೀಡದೇ ರೈತರನ್ನ ಕಂಗಾಲಾಗುವಂತೆ ಮಾಡಿತ್ತು. ಆದರೀಗ ದಶಕಗಳ ರೈತರ ಹೋರಾಟಕ್ಕೆ ಸುಪ್ರೀಕೋರ್ಟ್ ನ್ಯಾಯ ಒದಗಿಸಿ, ಸೂಕ್ತ ಬೆಲೆ ನಿಗದಿ ಮಾಡಿದೆ.

ಬಳ್ಳಾರಿ: ದಶಕಗಳ ರೈತರ ಹೋರಾಟಕ್ಕೆ ಕೊನೆಗೂ ದೊರೆತ ನ್ಯಾಯ, ಎಕರೆ ಭೂಮಿಗೆ 30 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್​, ರೈತರ ಸಾಂದರ್ಭಿಕ ಚಿತ್ರ
Follow us on

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್, ಯರಂಗಳ್ಳಿ, ಜಾನೇಕುಂಟೆ, ಸಿದ್ದಮನಹಳ್ಳಿ ಸೇರಿ ಸುತ್ತಲಿನ 13 ಸಾವಿರ ಎಕರೆ ಭೂಮಿಯನ್ನ ಸರ್ಕಾರ ಕೆಐಎಡಿಬಿ(KIADB) ಮೂಲಕ ವಶಪಡಿಸಿಕೊಂಡಿತ್ತು. ಅದು ಚಿನ್ನದಂತಹ ಭೂಮಿ, ಬಂಗಾರದ ಬೆಳೆ ಬೆಳೆಯುತ್ತಿದ್ದ ಆ ಭೂಮಿಯನ್ನ ರೈತರ ವಿರೋಧದ ಮಧ್ಯೆ ಕೈಗಾರಿಕೆ ಸ್ಪಾಪನೆಗೆ ವಶಪಡಿಸಿಕೊಂಡು, ಸರ್ಕಾರ ಬೇಕಾಬಿಟ್ಟಿಯಾಗಿ ಪರಿಹಾರ ವಿತರಣೆ ಮಾಡಿತ್ತು. ಬಂಗಾರ ಬೆಳೆ ಬೆಳೆಯುತ್ತಿದ್ದ ರೈತರು ಸೂಕ್ತ ಬೆಲೆ ಸಿಗದೇ ಹೋರಾಟಕ್ಕೆ ಇಳಿದ ನಂತರ ಇದೀಗ ರೈತರಿಗೆ ಸುಪ್ರೀಕೋರ್ಟ್​ನಲ್ಲಿ ನ್ಯಾಯ ದೊರೆತಿದೆ. 13 ವರ್ಷಗಳ ಕಾಲ ಸತತವಾಗಿ ಹೋರಾಟ ನಡೆಸಿದ ರೈತರಿಗೀಗ ಕೋಟಿ ಕೋಟಿ ರೂಪಾಯಿ ಪರಿಹಾರ ದೊರೆಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

13 ವರ್ಷಗಳ ಹಿಂದೆ ರೈತರು ಬಂಗಾರದಂತಹ ಬೆಳೆ ಬೆಳೆಯುತ್ತಿದ್ದ ಭೂಮಿಯನ್ನ ವಶಪಡಿಸಿಕೊಂಡ ಸರ್ಕಾರ ಕೈಗಾರಿಕೆ ಸ್ಪಾಪನೆಗಾಗಿ ಕಾರ್ಖಾನೆಗಳಿಗೆ ಹಸ್ತಾಂತರ ಮಾಡಿತ್ತು. ಆಗ ರೈತರು ಕೈಗಾರಿಕೆಯಲ್ಲಿನ ಉದ್ಯೋಗದ ಆಸೆಗಾಗಿ ಸೂಕ್ತ ಬೆಲೆಯ ತಕರಾರು ತಗೆಯದೇ ಭೂಮಿ ನೀಡಿದ್ರು. ಆದರೆ ಭೂಮಿ ನೀಡಿದ ರೈತರಿಗೆ ಉತ್ತಮ ಪರಿಹಾರ ನೀಡದೇ ಇತ್ತ ಉದ್ಯೋಗವನ್ನು ಕೊಡದೇ ಅನ್ಯಾಯ ಮಾಡಲಾಗಿತ್ತು. ಭೂ ಬೆಲೆ ನಿಗದಿ ವೇಳೆ ರೈತರ ಜಮೀನುಗಳಿಗೆ 8 ರಿಂದ 12 ಲಕ್ಷ ಹಾಗೂ ಕೃಷಿಯೇತರ ಜಮೀನುಗಳಿಗೆ 16 ಲಕ್ಷ ರೂಪಾಯಿಯಂತೆ ಭೂಮಿ ವಶಪಡಿಸಿಕೊಂಡ ಸರ್ಕಾರ, ಬೆಲೆ ಬಾಳುವ ಭೂಮಿಯನ್ನ ಕವಡೆ ಕಾಸಿನ ಕಿಮ್ಮತ್ತಿಗೆ ಖರೀದಿ ಮಾಡಿತ್ತು. ಪರಿಣಾಮ ರೈತರು ಹೋರಾಟಕ್ಕೆ ಇಳಿದಿದ್ದರು. ಸೂಕ್ತ ಬೆಲೆಗಾಗಿ 2010 ರಿಂದ ಹೋರಾಟಕ್ಕೆ ಇಳಿದಿದ್ದ ರೈತರಿಗೆ ಕೊನೆಗೂ ನ್ಯಾಯಾಲಯದಿಂದ ನ್ಯಾಯ ದೊರೆತಿದೆ.

ಇದನ್ನೂ ಓದಿ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಹೋರಾಟ ಮುಂದುವರಿಕೆ: ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಮಾಹಿತಿ

ಆರ್ಸೆಲರ್ ಮಿತ್ತಲ್, ಎನ್ಎಂಡಿಸಿ, ಉತ್ತಮ ಗಾಲ್ವಾ ಕಂಪನಿಗಳ ಕಾರ್ಖಾನೆ ಸ್ಥಾಪನೆಗಾಗಿ ಸರ್ಕಾರ ರೈತರ ಭೂಮಿ ವಶಪಡಿಸಿಕೊಂಡು ಕೈಗಾರಿಕೋದ್ಯಮಿಗಳಿಗೆ ನೀಡಿತ್ತು. ಆದ್ರೆ ಕೈಗಾರಿಕೋದ್ಯಮಿಗಳು ಹರಾಜಿನಲ್ಲಿ ಅದಿರು ಸಿಗ್ತಿಲ್ಲ. ಕೈಗಾರಿಕೆ ಸ್ಪಾಪನೆ ನಂತರ ಬೇಕಾದ ನೀರು ದೊರೆಯುತ್ತಿಲ್ಲವೆಂದು ಇದೂವರೆಗೂ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಜೊತೆಗೆ ಕೈಗಾರಿಕೆ ಬದಲಾಗಿ ಸೋಲಾರ್ ಪ್ಲ್ಯಾಂಟ್ ಸ್ಥಾಪನೆ ಮಾಡಲು ಕೈಗಾರಿಕೋದ್ಯಮಿಗಳು ಮುಂದಾಗಿದ್ರು. ಹೀಗಾಗಿ ರೈತರ ಭೂಮಿಗೆ ಸೂಕ್ತ ಬೆಲೆ ಹಾಗೂ ಉದ್ಯೋಗ ನೀಡದೇ ವಂಚಿಸಿದಕ್ಕೆ ರೈತರು ಪ್ರತಿ ಎಕರೆ ಭೂಮಿಗೆ 70 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯದಲ್ಲಿ ಹೋರಾಟ ಇಳಿದಿದ್ರು.

ಸುಮಾರು 300 ಎಕರೆ ಭೂಮಿಯ 100 ಕ್ಕೂ ಹೆಚ್ಚು ಅಧಿಕ ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ರು. ಜಿಲ್ಲಾ ನ್ಯಾಯಾಲಯ ಪ್ರತಿ ಎಕರೆಗೆ 30 ಲಕ್ಷ ರೂಪಾಯಿ ನಿಗದಿ ಮಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇಕಡಾ 10ರಷ್ಟು ಬೆಲೆ ಹೆಚ್ಚಳ ಮಾಡಿ ಬಡ್ಡಿ ಸಮೇತ ಹಣ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಬಳಿಕ ಹೈಕೋರ್ಟ್,​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ರೂ ಸುಪ್ರೀಂಕೋರ್ಟ್​ ಜಿಲ್ಲಾ ನ್ಯಾಯಾಲಯದ ಆದೇಶವನ್ನ ಎತ್ತಿ ಹಿಡಿದು ರೈತರಿಗೆ ಕೊನೆಗೂ ನ್ಯಾಯ ದೊರಕಿಸಿಕೊಟ್ಟಿದೆ. ಹೀಗಾಗಿ ರೈತರಿಗೆ ಸಧ್ಯ ಪ್ರತಿ ಎಕರೆಗೆ ಮೂಲ ಬೆಲೆ ಹಾಗೂ ಬಡ್ಡಿ ಸಮೇತವಾಗಿ ಕೋಟಿ ರೂಪಾಯಿಗೂ ಅಧಿಕ ಬೆಲೆ ದೊರೆಯುತ್ತಿರುವುದು ರೈತರಿಗೆ ಸಂತಸ ಮೂಡಿಸಿದೆ.

ಇದನ್ನೂ ಓದಿ:ರೈತ ಹೋರಾಟಕ್ಕಾಗಿ ಒಂದು ಬೆಳೆ ತ್ಯಾಗ ಮಾಡಲು ಸಿದ್ಧರಾಗಿ; ರೈತ ನಾಯಕ ರಾಕೇಶ್ ಟಿಕಾಯತ್ ಕರೆ

13 ವರ್ಷಗಳ ಕಾಲ ಸತತವಾಗಿ ಸಂಡೂರು ತಾಲೂಕಿನ ರೈತರು ಹೋರಾಟ ನಡೆಸಿದ ನಂತರ ಕೊನೆಗೂ ನ್ಯಾಯ ದೊರೆತಿದೆ. ಇನ್ನಾದರೂ ಸರ್ಕಾರ ಕೈಗಾರಿಕೋದ್ಯಮಿಗಳು ಸುಪ್ರೀಕೋರ್ಟ್ ಆದೇಶದ ಪ್ರಕಾರ ರೈತರಿಗೆ ಸೂಕ್ತ ಪರಿಹಾರ ನೀಡಿ ಕೈಗಾರಿಕೆಗಳನ್ನ ಸ್ಥಾಪನೆ ಮಾಡಬೇಕಿದೆ. ಇಲ್ಲದಿದ್ದರೇ ಅತ್ತ ಕೈಗಾರಿಕೆಯೂ ಇಲ್ಲ. ಇತ್ತ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗವೂ ಸಿಗದೇ ಮತ್ತೆ ಉಗ್ರ ಹೋರಾಟ ನಡೆಯುವುದು ಶತಸಿದ್ಧವಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ