ಬಳ್ಳಾರಿ: ಅನಿಯಮಿತ ಲೋಡ್ ಶೆಡ್ಡಿಂಗ್​ನಿಂದಾಗ ಹೈರಾಣದ ಕಾರ್ಮಿಕರು; ಜೀನ್ಸ್ ಉದ್ಯಮ ತತ್ತರ

ಜೀನ್ಸ್ ಹಬ್ ಎಂದು ಪ್ರಖ್ಯಾತಿಯನ್ನು ಪಡೆದಿರುವ ಬಳ್ಳಾರಿಯಲ್ಲಿನ ಜೀನ್ಸ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಕಚ್ಚಾ ವಸ್ತುಗಳ ದರ, ಇಂಪೋರ್ಟ್ ಮತ್ತು ಎಕ್ಸ್ ಪೋರ್ಟ್ ದರ ಹೆಚ್ಚಾದ ಬೆನ್ನಲ್ಲೇ ಇದೀಗ ವಿದ್ಯುತ್ ಕಣ್ಣಾಮುಚ್ಚಾಲೇ, ಉದ್ಯಮದಾರರಷ್ಟೆ ಅಲ್ಲದೇ ಕಾರ್ಮಿಕರ ಬದುಕನ್ನು ಕೂಡ ಸಂಕಷ್ಟಕ್ಕೀಡು ಮಾಡಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಣಾಮ ದಿನಕ್ಕೆ ಮೂನ್ನೂರು ರೂಪಾಯಿ ದುಡಿಯುವ ಕಾರ್ಮಿಕ ವರ್ಗದ ಆದಾಯಕ್ಕೂ ಖೋತಾ ಬಿದ್ದಿರುವ ಹಿನ್ನೆಲೆ ಜೀನ್ಸ್ ಕಾರ್ಮಿಕರು ಪರದಾಡುತ್ತಿದ್ದಾರೆ.

ಬಳ್ಳಾರಿ: ಅನಿಯಮಿತ ಲೋಡ್ ಶೆಡ್ಡಿಂಗ್​ನಿಂದಾಗ ಹೈರಾಣದ ಕಾರ್ಮಿಕರು; ಜೀನ್ಸ್ ಉದ್ಯಮ ತತ್ತರ
ಬಳ್ಳಾರಿ ಜೀನ್ಸ್​ ಉದ್ಯಮ
Edited By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 9:58 PM

ಬಳ್ಳಾರಿ, ಅ.18: ಅನಿಯಮಿತ ಲೋಡ್ ಶೆಡ್ಡಿಂಗ್​ನಿಂದಾಗಿ ಗ್ರಾಹಕರಷ್ಟೇ ಅಲ್ಲದೇ ಉದ್ಯಮದಾರರು ಹೈರಾಣಾಗುತ್ತಿದ್ದಾರೆ. ರಾಜ್ಯದಲ್ಲಿ ಅನಿಯಮಿತ ಲೋಡ್​ ಶೆಡ್ಡಿಂಗ್​ನಿಂದಾಗಿ ರೈತರು ಮಾತ್ರ ಸಂಕಷ್ಟ ಅನುಭವಿಸುತಿಲ್ಲ. ಸಣ್ಣ ಸಣ್ಣ ಕೈಗಾರಿಕೆಯ ಮೇಲೂ ಲೋಡ್ ಶೆಡ್ಡಿಂಗ್​ ಪ್ರಭಾವ ಬೀರುತ್ತಿದೆ. ಹೌದು, ಹೀಗೆ ಕರೆಂಟ್ ಕಣ್ಣಾಮುಚ್ಚಾಲೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಯೊಬ್ಬರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಬಳ್ಳಾರಿ (Ballari) ಯಲ್ಲಿ ಜೀನ್ಸ್ ಉದ್ಯಮ(Jeans Industry)ವನ್ನು ನಂಬಿಕೊಂಡು 60 ರಿಂದ 80 ಸಾವಿರ ಕುಟುಂಬಗಳು ಜೀವನ ಮಾಡುತ್ತವೆ. ಜೀನ್ಸ್ ಉದ್ಯಮದ ವಿವಿಧ ವಿಭಾಗಗಳಲ್ಲಿ ಪ್ರತಿನಿತ್ಯ ಸಾವಿರಾರು ಜನರು ಕೆಲಸ ಮಾಡುತ್ತಿದ್ಧಾರೆ. ಆದರೆ, ಲೋಡ್ ಶೆಡ್ಡಿಂಗ್​ನಿಂದಾಗಿ ಇದೀಗ ಅವರಿಗೆ ಕೆಲಸವೇ ಇಲ್ಲದಂತಾಗಿದೆ.

ಕೆಲಸದ ವೇಳೆ ಕರೆಂಟ್ ಯಾವಾಗ ಹೋಗುತ್ತೆ, ಯಾವಾಗ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಕೆಲಸಕ್ಕೆ ಬಂದ ಕಾರ್ಮಿಕರು ದಿನದ ಬಹುತೇಕ ಅವಧಿಯಲ್ಲಿ ಕೆಲಸ ವಿಲ್ಲದೇ ಖಾಲಿ ಕುಳಿತಿರುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಜೊತೆಯಲ್ಲಿ ನಿಗದಿತ ಸಂಬಳವಿರುವುದಿಲ್ಲ. ಒಂದು ಪ್ಯಾಂಟ್ ಹೊಲಿದರೇ ಇಂತಿಷ್ಟು ಹಣವೆಂದು ಇರುತ್ತದೆ. ದಿನಕ್ಕೆ ಎಷ್ಟು ಪ್ಯಾಂಟ್ ಹೊಲಿಯುತ್ತಾರೋ ಅಷ್ಟು ಹಣ ಬರುತ್ತದೆ. ಹೆಚ್ಚು ಕಡಿಮೆ ದಿನಕ್ಕೆ ಮೂನ್ನೂರರಿಂದ ನಾಲ್ಕು ನೂರರವರೆಗೂ ದುಡಿಯುತ್ತಾರೆ. ಆದರೆ, ಕರೆಂಟ್ ಇಲ್ಲದ ಹಿನ್ನೆಲೆ ಎರಡರಿಂದ ಮೂನ್ನೂರು ಬಂದರೆ ಹೆಚ್ಚು ಎನ್ನುತ್ತಿದ್ಧಾರೆ ಇಲ್ಲಿಯ ಉದ್ಯಮಿಗಳು.

ಇದನ್ನೂ ಓದಿ:ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ, ಸಂಕಷ್ಟದಲ್ಲಿ ರೈತ; ಲೋಡ್ ಶೆಡ್ಡಿಂಗ್​ಗೆ ಕಾರಣ ಬಿಚ್ಚಿಟ್ಟ ಹೆಸ್ಕಾಂ ಅಧಿಕಾರಿ

ಗಣಿನಾಡು ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಇದೀಗ ಕರೆಂಟ್ ಕೈಕೊಡುತ್ತಿರುವ ಹಿನ್ನೆಲೆ ಅದನ್ನು ನೆಚ್ಚಿಕೊಂಡ ಮಾಲೀಕರು, ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ದಿನಕ್ಕೆ ಸುಮಾರು ಐದಾರು ಗಂಟೆಗಳ ಕಾಲ್ ಕರೆಂಟ್ ಕಡಿತಗೊಳಿಸುತ್ತಿರುವ ಹಿನ್ನೆಲೆ ಜೀವನ ನಿರ್ವಹಣೆಗೆ ಬೇಕಾದಷ್ಟು ಹಣವನ್ನು ದುಡಿಯಲಾಗದೇ ಪರದಾಡುತ್ತಿದ್ದಾರೆ. ಅಲ್ಲದೇ ವಿದ್ಯುತ್ ಸ್ಥಗಿತಗೊಳಿಸಲು ಸಮಯ ನಿಗದಿ ಮಾಡಬೇಕು, ಅದರ ಬದಲು ಬಿಟ್ಟಿಯಾಗಿ ಕರೆಂಟ್ ಕಟ್ ಮಾಡಿದರೆ, ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ಧಾರೆ. ಇನ್ನು ಸರ್ಕಾರ ಮುಂದಿನ ಬಜೆಟ್​ನಲ್ಲಿ ಬಳ್ಳಾರಿಯಲ್ಲಿ 5 ಸಾವಿರ ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಮಾಡಲು ಚಿಂತನೆ ಮಾಡುತ್ತಿದೆ. ಇದ್ಯಾವುದು ನಮಗೆ ಬೇಡ, ಮೊದಲು ಕರೆಂಟ್ ಕೊಡಿ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

ಗ್ಯಾರಂಟಿ ನೀಡುವ ಭರದಲ್ಲಿ ಸರ್ಕಾರ ವಿದ್ಯುತ್ ನಿರ್ವಹಣೆ ಮಾಡುವಲ್ಲಿ ಎಡವುತ್ತಿದೆ. ಕರೆಂಟ್ ಕಣ್ಣಾಮುಚ್ಚಾಲೇ ಕೇವಲ ರೈತರಿಗೆ ಮಾತ್ರವಲ್ಲದೇ ಇದೀಗ ಸಣ್ಣ ಸಣ್ಣ ಉದ್ಯಮದಾರರಿಗೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸುವ ಮೂಲಕ ರೈತರ ಜೊತೆ ಉದ್ಯಮದಾರರನ್ನು ಕಾಪಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:55 pm, Wed, 18 October 23

Web contact

TV9 Kannada

Read More
Follow Us