ಬೆಂಗಳೂರು ಏರ್ಪೋರ್ಟ್ ಬಳಿಯ ಹೋಟೆಲ್ನಲ್ಲಿ ಘೋರ ದುರಂತ: ಇಬ್ಬರು ಮಕ್ಕಳನ್ನ ಕೊಂದ ತಂದೆ
ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಇರುವ ತಾಜ್ ಹೋಟೆಲ್ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ವ್ಯಕ್ತಿಯೋರ್ವ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೋಟೆಲ್ ರೂಮ್ನಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರೆ, ತಂದೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

ಬೆಂಗಳೂರು, (ಆಗಸ್ಟ್ 10): ಕೆಂಪೇಗೌಡ ವಿಮಾಣ ನಿಲ್ದಾಣ (kempegowda international airport) ಬಳಿಕ ತಾಜ್ ಹೋಟೆಲ್ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನ ನೇಣುಹಾಕಿ ಕೊಂದು ಬಳಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇಮ್ರಾನ್ ಎಂಬಾತ ತನ್ನ 5 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನ ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಜ್ ಹೋಟೆಲ್ನ 4ನೇ ಮಹಡಿಯ ರೂಮ್ನಲ್ಲಿ ಘಟನೆ ನಡೆದಿದ್ದು, ಕೊಲೆಯಾದ ಮಕ್ಕಳನ್ನ ಶೇಕ್ ಜೆಹರಾ (5 ವರ್ಷ), ಶೇಕ್ ಜೋಯಾ (10 ವರ್ಷ) ಎಂದು ಗುರುತಿಸಲಾಗಿದೆ.
ಇಮ್ರಾನ್ ಮೂಲತಃ ಬೆಂಗಳೂರಿನ ನಾಗವಾರದ ನಿವಾಸಿಯಾಗಿದ್ದು, Zimmy ಕ್ಯಾಬ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ. ಮಕ್ಕಳನ್ನ ಹತ್ಯೆ ಮಾಡಲು ಹೋಟೆಲ್ನಲ್ಲಿ ಮುಂಚಿತವಾಗಿಯೇ ರೂಂ ಬುಕ್ ಮಾಡಿದ್ದ ಎನ್ನಲಾಗಿದ್ದು, ಮೊದಲು ಇಬ್ಬರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ, ನೋವು ತಾಳಲಾರದೇ ಇಮ್ರಾನ್ ಚೀರಾಡಿದ್ದು, ಇದನ್ನು ಕೇಳಿದ ಹೋಟೆಲ್ ಸಿಬ್ಬಂದಿ ರೂಮ್ ಬಳಿ ಬಂದು ಕೂಡಲೇ ಇಮ್ರಾನ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ದುರಂತ: ಎಸ್ಎಸ್ಎಲ್ಸಿ ವಿದ್ಯಾರ್ಥಿ ನಿಗೂಢ ಸಾವು
ಇಮ್ರಾನ್ನನ್ನ ಸದ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೊಲೆ ಮತ್ತು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ತಿಳಿಯುತ್ತಿದ್ದಂತೆ ಏರ್ಪೋರ್ಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕಾರಣವೇನು ಎಂಬುವುದನ್ನು ತನಿಖೆ ನಡೆಸಿದ್ದಾರೆ.
ಘಟನೆ ಬಗ್ಗೆ ಡಿಸಿಪಿ ಹೇಳಿದ್ದೇನು?
ಇನ್ನು ಈ ಘಟನೆ ಬಗ್ಗೆ ಡಿಸಿಪಿ ಮಿಥುನ್ ಕುಮಾರ್, ಇಮ್ರಾನ್ ಮತ್ತು ಇಬ್ಬರು ಮಕ್ಕಳು ನಿನ್ನೆ (ಆಗಸ್ಟ 09) ಸಂಜೆ ಹೋಟೆಲ್ಗೆ ಬಂದಿದ್ದು, ಕ್ಲೀನಿಂಗ್ಗೆ ಅಂತ ಇಂದು (ಆ.10) ಸಂಜೆ 4ರ ಸುಮಾರಿಗೆ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಆದ್ರೆ, ರೂಮ್ನಿಂದ ಯಾರೂ ಪ್ರತಿಕ್ರಿಯಿಸದಿದ್ದಕ್ಕೆ ಅನುಮಾನ ಬಂದು ಒಳಹೋಗಿದ್ದಾರೆ. ಆಗ ಇಬ್ಬರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ. ಇಮ್ರಾನ್ ಕೂಡ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಮಕ್ಕಳನ್ನು ನಾನೇ ಕೊಂದಿರುವುದಾಗಿ ಪತ್ರದಲ್ಲಿ ಬರೆದಿಟ್ಟಿದ್ದು, ಈ ಸಂಬಂಧ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Mon, 10 August 26



