Tv9 Impact: ಟಿವಿ9 ವರದಿ ಬಳಿಕ ಚಿತ್ರಮಂದಿರದಲ್ಲಿ ನಡೆಯುತ್ತಿದ್ದ ವಸತಿ ಶಾಲೆಗೆ ಅಧಿಕಾರಿಗಳ ಭೇಟಿ

| Updated By: ಆಯೇಷಾ ಬಾನು

Updated on: Dec 21, 2023 | 10:23 AM

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ (Shashidhar Kosambe) ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಳ್ಳಾರಿಯ ಕುರುಗೋಡು ಪಟ್ಟಣದ ಸಿನಿಮಾ ಟಾಕೀಸ್'ನಲ್ಲಿ ನಡೆಯುತ್ತಿರುವ ಗಾಂಧಿತತ್ವ ಆಧಾರಿತ ವಸತಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಈ ವೇಳೆ ವಸತಿ ಶಾಲೆಯ ಮೂಲಭೂತ ಸಮಸ್ಯೆ ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

Tv9 Impact: ಟಿವಿ9 ವರದಿ ಬಳಿಕ ಚಿತ್ರಮಂದಿರದಲ್ಲಿ ನಡೆಯುತ್ತಿದ್ದ ವಸತಿ ಶಾಲೆಗೆ ಅಧಿಕಾರಿಗಳ ಭೇಟಿ
ವಸತಿ ಶಾಲೆಗೆ ಅಧಿಕಾರಿಗಳ ಭೇಟಿ
Follow us on

ಬಳ್ಳಾರಿ, ಡಿ.21: ಸಿನಿಮಾ ಟಾಕೀಸ್‌ನಲ್ಲಿ ವಸತಿ ಶಾಲೆ ನಡೆಯುತ್ತಿರುವ ಬಗ್ಗೆ Tv9 ಕನ್ನಡ ವಿಸ್ತೃತ ವರದಿ ಬಿತ್ತಾರ ಮಾಡಿತ್ತು. Tv9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು, ವಸತಿ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ (Tv9 Impact). ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ (Shashidhar Kosambe) ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಳ್ಳಾರಿಯ ಕುರುಗೋಡು ಪಟ್ಟಣದ ಸಿನಿಮಾ ಟಾಕೀಸ್’ನಲ್ಲಿ ನಡೆಯುತ್ತಿರುವ ಗಾಂಧಿತತ್ವ ಆಧಾರಿತ ವಸತಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಕೋಸಂಬೆ ಅವರ ಜೊತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎ.ಕೆ ಜಲಾಲಪ್ಪ ಅವರು ಸಾಥ್ ನೀಡಿದರು.

ಇನ್ನು ವಸತಿ ಶಾಲೆಯ ಮೂಲಭೂತ ಸಮಸ್ಯೆ ಕಂಡು ಗರಂ ಆದರು. ಮಕ್ಕಳಿಗೆ ಯೋಗ್ಯವಲ್ಲದ ಕಟ್ಟಡದಲ್ಲಿ ವಸತಿ ಶಾಲೆ ನಡೆಸಿರುವ ಅಧಿಕಾರಿಗಳಿಗೆ ಶಶಿಧರ್ ಕೋಸಂಬೆ ಅವರು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳೊಂದಿಗೆ ವಸತಿ ಶಾಲೆಯ ಊಟ ಸವಿದು ಪರಿಶೀಲನೆ ನಡೆಸಿದರು. ಹಾಘೂ ತರಗತಿ ಕೊಠಡಿ, ಶಾಲೆಯ ಆವರಣ ಪರಿಶೀಲಿಸಿದರು. ತುರ್ತಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಕೋಸಂಬೆ ಅಧಿಕಾರಿಗೆ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ

ಇದನ್ನೂ ಓದಿ: ಸರ್ಕಾರದ ನಿರ್ಲಕ್ಷ್ಯ: ಬಳ್ಳಾರಿಯಲ್ಲಿನ ಒಂದು ಕಾಲದ ಚಿತ್ರಮಂದಿರ ಈಗ ಬಾಲಕಿಯರ ಸರ್ಕಾರಿ ವಸತಿ ಶಾಲೆ

ವರದಿ ಹಿನ್ನೆಲೆ

ಬಳ್ಳಾರಿ ಜಿಲ್ಲೆ ಕುರಗೋಡು ಪಟ್ಟಣದ ಗಾಂಧಿ ತತ್ವ ಆಧಾರಿತ ವಿಧ್ಯಾರ್ಥಿನಿಯರ ವಸತಿ ಶಾಲೆಯನ್ನು ಹಳೆಯ ಸಿನಿಮಾ ಟಾಕೀಸ್​ನಲ್ಲಿ ನಡೆಸಲಾಗುತ್ತಿತ್ತು. 13 ವರ್ಷಗಳಿಂದ ಸ್ವಂತ ಕಟ್ಟಡದ ವ್ಯವಸ್ಥೆ ಇಲ್ಲದೆ ಮಕ್ಕಳು ಬಾಡಿಗೆ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇತ್ತು. ಮೊದಲು ಹತ್ತು ವರ್ಷ ಮಠದ ಕಟ್ಟಡದಲ್ಲಿ ಈ ವಸತಿ ಶಾಲೆಯನ್ನ ನಡೆಸಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಪಾಳು ಬಿದ್ದಿದ್ದ ಸುಮಾರು 40 ವರ್ಷ ಹಳೆಯದಾದ ಬಸವೇಶ್ವರ ಚಿತ್ರಮಂದಿರದಲ್ಲಿ ವಸತಿ ಶಾಲೆಯನ್ನ ನಡೆಸಲಾಗುತ್ತಿದೆ. ಈ ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿ ವರಗೆ ಸುಮಾರು ‌225 ವಿದ್ಯಾರ್ಥಿಗಳು ಇದ್ಸದಾರೆ. ವಸತಿ ಶಾಲೆಯಾಗಿದ್ದರಿಂದ ಎಲ್ಲ ಮಕ್ಕಳು ಅಲ್ಲಿಯೇ ಮಲಗುತ್ತಾರೆ. ಆದರೆ ಸೂಕ್ತ ಕೊಠಡಿಗಳಿಲ್ಲದೆ ನೆಲದ ಮೇಲೆ ಕಡಿಮೆ ಸ್ಥಳದಲ್ಲಿ ಮಲಗುವ ಪರಿಸ್ಥಿತಿ ಇದೆ. ಸುತ್ತಲೂ ಕಟಂಜರಿ ವ್ಯವಸ್ಥೆ ಇಲ್ಲ. ಅಲ್ಲೆ ಕಾರಿಡಾರ್‌ನಲ್ಲಿ ಮಲಗಬೇಕು, ಅಲ್ಲೆ ಓದಬೇಕು. ಇಂತಹ ಪರಿಸ್ಥಿತಿಯನ್ನ ಎದುರಿಸುತ್ತಿದ್ದ ಗಾಂಧಿ ತತ್ವ ಆಧಾರಿತ ವಿಧ್ಯಾರ್ಥಿನಿಯರ ವಸತಿ ಶಾಲೆ ಬಗ್ಗೆ ಟಿವಿ9 ವರದಿ ಬಿತ್ತರಿಸಿತ್ತು. ಸದ್ಯ ಈಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಆದಷ್ಟು ಬೇಗ ಹೊಸ ಕಟ್ಟಡ ಸಿಗುವ ನಿರೀಕ್ಷೆಯಲ್ಲಿ ಮಕ್ಕಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:22 am, Thu, 21 December 23